೪೮. ಖರದೂಷಣ ವಧೆ


ಖರ ತನ್ನ ೧೪ ಮಂದಿ ಸೈನ್ಯಾಧಿಕಾರಿಗಳನ್ನು ಕರೆದು, “ನೀವು ತಕ್ಷಣ ಶೂರ್ಪಣಖಿಯ ಜೊತೆ ಹೋಗಿ. ಅವಳು ಒಂದು ಆಶ್ರಮವನ್ನು ತೋರಿಸುತ್ತಾಳೆ. ಅಲ್ಲಿರುವ ರಾಮ ಲಕ್ಷ್ಮಣರನ್ನು ಕೊಂದು ಇಲ್ಲಿ ತನ್ನಿ. ನನ್ನ ತಂಗಿ ಅವರ ರಕ್ತಕುಡಿಯುತ್ತಾಳೆ” ಎಂದು ಆಜ್ಞಾಪಿಸಿದ.

ರಾಮಲಕ್ಷ್ಮಣರನ್ನು ಕೊಲ್ಲುವುದು ತುಂಬಾ ಸುಲಭವೆಂದುಕೊಂಡು ಆ ೧೪ ಮಂದಿ, ಜೋರಾಗಿ ಕೇಕೆ ಹಾಕುತ್ತಾ ಶೂರ್ಪಣಖಿ ತೋರಿಸಿದ ಆಶ್ರಮಕ್ಕೆ ಹೋದರು. ರಾಮಲಕ್ಷ್ಮಣರನ್ನು ನೋಡಿದ ತಕ್ಷಣ ತಮ್ಮ ಶೂಲ, ಕತ್ತಿ, ಪರಿಘ ಮೊದಲಾದ ಆಯುಧಗಳನ್ನು ತೆಗೆದುಕೊಂಡು ರಾಮಲಕ್ಷ್ಮಣರ ಬಳಿ ಓಡಿದರು. ರಾಮ ಲಕ್ಷ್ಮಣನಿಗೆ, “ನೀನು ಸೀತೆಯ ಪಕ್ಕದಲ್ಲಿರು. ನಾನು ಇವರಿಗೆ ಒಂದು ಗತಿ ಕಾಣಿಸುತ್ತೇನೆ” ಎಂದು ಹೇಳಿ, ಇಂದ್ರನು ತನ್ನ ವಜ್ರಾಯುಧವನ್ನು ಎಸೆದಂತೆ ತನ್ನ ಬಿಲ್ಲಿಗೆ ಬಾಣಗಳನ್ನು ಹೂಡಿ ಬಿಟ್ಟ. ಆ ಬಾಣಗಳು ಅವರ ಕವಚಗಳನ್ನು ಸೀಳಿ, ಎದೆಯನ್ನು ಬಗೆದು, ಭೂಮಿಗೆ ನಾಟಿದವು. ಆ ೧೪ ಜನರೂ ಜೋರಾಗಿ ಕೂಗುತ್ತಾ ರಕ್ತಕಾರುತ್ತಾ ನೆಲದ ಮೇಲೆ ಬಿದ್ದು ಸತ್ತರು.

ಇದನ್ನು ನೋಡಿ ಶೂರ್ಪಣಖಿ ಮತ್ತೆ ಖರನ ಬಳಿ ಬಂದಳು. ಆಗ ತಾನೆ ೧೪ ಜನರನ್ನು ಕಳಿಸಿದ್ದ ಅವನು, ಅಷ್ಟು ಬೇಗ ಶೂರ್ಪಣಖಿ ಬಂದದ್ದನ್ನು ನೋಡಿ ಆಶ್ಚರ್ಯಗೊಂಡು ಅವಳನ್ನು ವಿಚಾರಿಸಿದಾಗ ಶೂರ್ಪಣಖಿ, “ನೀನು ಕಳಿಸಿದ ಆ ೧೪ ಜನರನ್ನು ರಾಮ ಒಂದು ಕ್ಷಣದಲ್ಲಿ ಕೊಂದ. ರಾಮ ಮಹಾವೀರ. ನಿಜವಾಗಿ ನಿನಗೆ ರಾಮನನ್ನು ಕೊಲ್ಲುವ ಶಕ್ತಿಯಿದ್ದರೆ ನಿನ್ನ ಜೊತೆ ಇರುವವರನ್ನು ಕಳಿಸುವ ಬದಲು ಸ್ವಯಂ ನೀನೇ ಹೋಗಿ ದಂಡಕಾರಣ್ಯದಲ್ಲಿ ರಾಕ್ಷಸರಿಗೆ ಕಂಟಕವಾಗಿರುವ ರಾಮನನ್ನು ಕೊಲ್ಲು. ನಿನಗೆ ಸಾಧ್ಯವಾಗದಿದ್ದರೆ ನಾನು ನನ್ನ ಪ್ರಾಣ ಬಿಟ್ಟುಬಿಡುತ್ತೇನೆ. ಸುಮ್ಮನೆ ನನ್ನ ಬಳಿ ಬಂದು ಅವರನ್ನು ಕೊಂದೆ, ಇವರನ್ನು ಕೊಂದೆ ಅನ್ನುವುದಲ್ಲ. ನೀನು ಶೂರನೇ ಅಲ್ಲ. ರಾಮ ವೀರ. ಎಲ್ಲಾದರೂ ಓಡಿಹೋಗಿ ನಿನ್ನ ಪ್ರಾಣ ಕಾಪಾಡಿಕೊ” ಎಂದು ಮೂದಲಿಸಿದಳು.

ಶೂರ್ಪಣಖಿಯ ಮಾತನ್ನು ಕೇಳಿ ಖರನಿಗೆ ಎಲ್ಲಿಲ್ಲದ ಕೋಪ ಬಂದು, “ನನ್ನ ಎದುರಿನ ಯುದ್ಧದಲ್ಲಿ ದೇವೇಂದ್ರನು ಬಂದರೂ ಸೋಲಿಸಲಾರ. ಮೃತ್ಯುವಿಗೇ ಮೃತ್ಯು ನಾನು. ನಾನು ಯುದ್ಧಕ್ಕೆ ಹೋದರೆ ನನ್ನ ಎದುರಿಗೆ ನಿಲ್ಲುವವನು ಯಾರೂ ಇಲ್ಲ” ಎಂದು ಹೇಳಿ ೧೪ ಸಾವಿರ ಜನರ ಸೈನ್ಯದೊಂದಿಗೆ ರಾಮ ಲಕ್ಷ್ಮಣರ ಮೇಲೆ ಯುದ್ಧಕ್ಕೆ ಹೋದ.

ಖರ ಬಂಗಾರದ ರಥವನ್ನು ಹತ್ತಿ ಹೊರಟಾಗ ಕಪ್ಪು ಮೋಡಗಳು ಆಕಾಶದಲ್ಲಿ ಕೆಂಪು ಬಣ್ಣದ ಮಳೆಗರೆದವು. ಭೂಮಿ ಕಂಪಿಸಿತು. ರಥದ ಕುದುರೆಗಳು ಭೂಮಿ ಸಮತಲವಾಗಿದ್ದರೂ ಎದ್ದು ಬಿದ್ದು ಓಡುತ್ತಿದ್ದವು. ಆಕಾಶದಲ್ಲಿ ಸೂರ್ಯನ ಸುತ್ತ ಕಪ್ಪು-ಬಿಳುಪು ಬಣ್ಣಗಳ ವಲಯ ಏರ್ಪಟ್ಟಿತು. ಒಂದು ಹದ್ದು ಧ್ವಜದ ಮೇಲೆ ಹಾರಿಹೋಯಿತು. ಎಲ್ಲ ದಿಕ್ಕುಗಳುಲ್ಲಿ ವಿನಾಕಾರಣವಾಗಿ ಕತ್ತಲಾಗಿತ್ತು. ನರಿಗಳು ಬಾಯಿಯಿಂದ ಬೆಂಕಿ ಕಾರುತ್ತಾ ರಥದ ಎದುರಿಗೆ ಬಂದು ಬಿತ್ತು. ಇಷ್ಟಲ್ಲ ಅಪಶಕುನಗಳಾದರೂ ಖರ ಅವನ್ನು ಲೆಕ್ಕಿಸದಂತೆ ಮುಂದೆ ಹೋದ. ಅವನ ಸುತ್ತ ೧೨ ಮಂದಿ ರಾಕ್ಷಸ ಸೇನಾನಿಗಳು, ಅವರ ಜೊತೆ ದೂಷಣ, ತ್ರಿಶಿರಸ್ಕ, ಪ್ರಮಥ, ಸ್ಥೂಲಾಕ್ಷ, ಮಹಾಕಪಾಲ ಮುಂತಾದ ರಾಕ್ಷಸರೂ ಹೊರಟರು.

ಇತ್ತ ರಾಮನ ಆಶ್ರಮದಲ್ಲಿ ಅವನ ಧನಸ್ಸು ಕದಿಲಿತು. ಬಾಣದ ಸುತ್ತ ಧೂಳು ಆವರಿಸಿತು. ಪಕ್ಷಿಗಳು ವಿಚಿತ್ರವಾಗಿ ಕೂಗುತ್ತಿದ್ದವು. ರಾಮ ಲಕ್ಷ್ಮಣನನ್ನು ಕರೆದು, “ಲಕ್ಷ್ಮಣಾ! ಪರ್ಣಶಾಲೆಯಲ್ಲಿನ ಬಿಲ್ಲು ನಿಷ್ಕಾರಣವಾಗಿ ಕದಲುತ್ತಿದೆ. ಇಲ್ಲೆಲ್ಲಾ ಧೂಳು ಆವರಿಸುತ್ತಿದೆ. ದೊಡ್ಡ ಯುದ್ಧವಾಗುತ್ತದೆಂದು ಬಾಣಬಿಲ್ಲುಗಳು ಆನಂದಿಸುತ್ತಿರುವಂತಿದೆ. ದೂರದಲ್ಲಿ ಪಕ್ಷಿ ಕೊಗುತ್ತಿದೆ. ಅಂದರೆ ಈ ಯುದ್ಧದಲ್ಲಿ ಜಯಾಪಜಯಗಳು ದೈವ ನಿರ್ಣಯ. ನನ್ನ ಎಡ ಭುಜ ಅದುರುತ್ತಿದೆ. ಈ ಯುದ್ಧದಲ್ಲಿ ನಮ್ಮ ಜಯ ಖಚಿತ.
ತಸ್ಮಾತ್ ಗೃಹಿತ್ವಾ ವೈದೇಹೀಂ ಶರ ಪಾಣಿಃ ಧನು್ ಧರಃ
ಗುಹಾಂ ಆಶ್ರಯ ಶೈಲಸ್ಯ ದುರ್ಗಾಂ ಪಾದಪ ಸಂಕುಲಾಂ
ನೀನು ತಕ್ಷಣ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಸೀತೆಯ ಜೊತೆ ಯಾರಿಗೂ ಕಾಣಿಸದಷ್ಟು ದೂರದಲ್ಲಿ ಪೊದೆಗಳು ಮುಚ್ಚಿರುವ ಗುಹೆಯೊಳಗೆ ಹೋಗು. ನಾನು ಯುದ್ಧ ಮಾಡುತ್ತೇನೆ. ಸೀತೆಯನ್ನು ಕರೆದುಕೊಂಡು ಹೋಗಲು ನನಗೆ ಹೇಳಬೇಡ. ನಿನಗೆ ಯುದ್ಧ ಮಾಡಲಿಕ್ಕಾಗುವುದಿಲ್ಲವೆಂದಲ್ಲ. ಆದರೆ ನನಗೆ ಯುದ್ಧ ಮಾಡಬೇಕೆಂದಿದೆ. ನೀನು ಬೇಗ ಸೀತೆಯನ್ನು ಕರೆದುಕೊಂಡು ಹೋಗು” ಎಂದ. ತಕ್ಷಣವೇ ಲಕ್ಷ್ಮಣ ಸೀತೆಯನ್ನು ಕರೆದುಕೊಂಡು ಗುಹೆಯೊಳಕ್ಕೆ ಹೋದ.

ಪಿನಾಕಿಯನ್ನು (ಧನಸ್ಸು) ಹಿಡಿದು ದಕ್ಷ ಯಜ್ಞವನ್ನು ಧ್ವಂಸ ಮಾಡಲು ನಿಂತಿದ್ದ ರುದ್ರನಂತಿದ್ದ ರಾಮನ ಸುತ್ತ ಖರ ತನ್ನ ಸೈನ್ಯವನ್ನು ನಿಲ್ಲಿಸಿದ. ಮಧ್ಯದಲ್ಲಿ ರಾಮನೊಬ್ಬ. ಸುತ್ತ ೧೪ ಸಾವಿರ ಮಂದಿ ರಾಕ್ಷಸರು. ಅವರೆಲ್ಲ ಒಮ್ಮೆಲೇ ರಾಮನ ಮೇಲೆ ಬಾಣ, ಶೂಲ, ಗದೆ ಮುಂತಾದ ಆಯುಧಗಳನ್ನು ಎಸೆದರು. ಅವುಗಳ ಏಟಿನಿಂದ ರಾಮನ ಮೈಯೆಲ್ಲಾ ರಕ್ತವಾಯಿತು. ನದಿಪ್ರವಾಹ ಬಂದಾಗ ಸಂತೋಷವಾಗಿರುವ ಸಮುದ್ರದಂತೆ, ಜೋರಾಗಿ ಮಳೆ ಬಂದಾಗ ಎತ್ತರದ ಪ್ರದೇಶಕ್ಕೆ ಹೋಗಿ ನಿಲ್ಲುವ ಗೂಳಿಯಂತೆ ನಿಂತು ರಾಮ ತನ್ನ ಮೇಲೆ ಬೀಳುತ್ತಿದ್ದ ಬಾಣಗಳ ಮಳೆಗೆ ಎದೆಯೊಡ್ಡಿ ನಿಂತಿದ್ದ. ಒಂದು ಬಾರಿ ತನ್ನ ಧನಸ್ಸನ್ನು ಮಂಡಲಾಕಾರವಾಗಿ ತಿರುಗಿಸಿ ರಾಕ್ಷಸರ ಮೇಲೆ ಬಾಣಗಳನ್ನು ಪ್ರಯೋಗಿಸಿದ. ಯಾವಾಗ ತನ್ನ ಬತ್ತಳಿಕೆಯಿಂದ ತನ್ನ ಬಾಣಗಳನ್ನು ತೆಗೆಯುತ್ತಿದ್ದನೋ, ಯಾವಾಗ ಬಾಣಗಳನ್ನು ತನ್ನ ಬಿಲ್ಲಿಗೆ ಹೂಡುತ್ತಿದ್ದನೋ, ಯಾವಾಗ ಗುರಿಯಿಡುತ್ತಿದ್ದನೋ ಯಾರಿಗೂ ತಿಳಿಯುತ್ತಿರಲಿಲ್ಲ. ಅಷ್ಟು ವೇಗವಾಗಿ ರಾಮನ ಬಿಲ್ಲಿನಿಂದ ಬಾಣಗಳು ಹೊರಬರುತ್ತಿದ್ದವು. ರಥಿಗಳಾದ ೧೪ ಸಾವಿರ ರಾಕ್ಷಸರು ರಾಮನೊಬ್ಬನ ಮೇಲೆ ಮಾಡುತ್ತಿರುವ ದಾರುಣ ಯುದ್ಧವನ್ನು ನೋಡಿ ಆಕಾಶದಲ್ಲಿನ ದೇವತೆಗಳು, ಋಷಿಗಳು ರಾಮನಿಗೆ ವಿಜಯಿಯಾಗೆಂದು ಆಶೀರ್ವದಿಸಿದರು.

ಯುದ್ಧ ಮುಂದುವರೆಯಿತು. ದಿಕ್ಕುಗಳು ಕದಲಿದವು. ಬೆಟ್ಟಗಳು ಬಿರಿದವು. ವನದೇವತೆಯರು ಕಾಡನ್ನು ಬಿಟ್ಟು ಓಡಿಹೋದರು. ಕ್ರೂರ ಮೃಗಗಳು ದಿಕ್ಕೆಟ್ಟು ಓಡಿದವು. ರಾಮನ ಬಾಣಗಳ ಸುರಿಮಳೆಗೆ ಆನೆಗಳ ಸೊಂಡಿಲುಗಳು ಬಿದ್ದವು, ಕುದುರೆಗಳ ಕಾಲುಗಳು ಮುರಿದವು, ಕೆಲವು ರಾಕ್ಷಸರ ಕುತ್ತಿಗೆಗಳು, ಕೆಲವರ ಭುಜಗಳು, ಕೆಲವರ ಕಾಲುಗಳು ಹಾರಿ ಹೋದವು. ರಾಮ ಒಂದೇ ಬಾರಿ ೧೩ ಬಾಣಗಳನ್ನು ತನ್ನ ಬಿಲ್ಲಿಗೆ ಸಂಧಿಸಿ ಬಿಡುತ್ತಿದ್ದ. ೧೪ ಸಾವಿರ ರಾಕ್ಷಸರನ್ನು ತಾನೊಬ್ಬನೇ ಸಂಹರಿಸಿದ. ಖರನ ತಮ್ಮನಾದ ದೂಷಣ ತನ್ನ ಪರಿಘವನ್ನು ಹಿಡಿದು ರಾಮನ ಮೇಲೆ ಬಂದಾಗ, ರಾಮ ಅವನ ಕೈಗಳನ್ನು ಕತ್ತರಿಸಿ ನೆಲದ ಮೇಲೆ ಬೀಳಿಸಿದ. ಆನೆಯಂತೆ ಬಿದ್ದ ದೂಷಣ ಅಲ್ಲೇ ಸತ್ತುಹೋದ. ಇನ್ನು ಯುದ್ಧದಲ್ಲಿ ಖರ, ತ್ರಿಶಿರಸ್ಸು ಮಾತ್ರವೇ ಬದುಕಿದ್ದರು. ಖರನ ಆಜ್ಞೆಯಂತೆ ಯುದ್ಧಕ್ಕೆ ಬಂದ ತ್ರಿಶಿರಸ್ಸನ್ನೂ ಹತನಾದ

ಖರನಿಗೂ ರಾಮನಿಗೂ ಘೋರವಾದ ಯುದ್ಧವಾಯಿತು. ರಾಮ ತನ್ನ ಬಾಣಗಳಿಂದ ಯುದ್ಧ ಮಾಡಿದರೆ, ಖರ ತನ್ನ ರಥದಲ್ಲಿ ವೇಗವಾಗಿ ಬಂದು ರಾಮನ ಮೇಲೆ ಬಿದ್ದ. ವೇಗಕ್ಕೆ ರಾಮನ ಬಾಣದ ತಂತಿ ಹರಿಯಿತು. ಖರನ ಬಾಣಗಳ ಮಳೆಗೆ ರಾಮನ ಕವಚ ಹರಿಯಿತು. ರಾಮನ ಎದೆಗೆ ಬಿಟ್ಟ ಬಾಣಗಳಿಂದ, ಪರ್ವತದಿಂದ ಝರಿ ಹರಿದಂತೆ, ರಕ್ತ ಹರಿಯಿತು

ಆಗ ತನ್ನ ಬಳಿಯಿದ್ದ ಅಗಸ್ತ್ಯರ ವಿಷ್ಣು ಧನಸ್ಸನ್ನು ತೆಗೆದುಕೊಂಡು ಖರನಿಗೆ, "ತ್ರಿಲೋಕಗಳನ್ನು ಆಳುವ ಸಮರ್ಥನಾದರೂ ಪಾಪಕರ್ಮಗಳನ್ನು ಮಾಡಿದವನು ಬದುಕಲಾರ. ಲೋಕಕಂಟಕರಿಗೆ ತಲೆ ತಗ್ಗಿಸಿ ಕೆಲವು ಕಾಲ ಜನ ಬದುಕಬಹುದು. ಆದರೆ ಸ್ವಲ್ಪ ಅವಕಾಶ ಸಿಕ್ಕಿದರೂ, ಒಂಟಿಯಾಗಿ ಹೋಗುತ್ತಿರುವ ಹಾವನ್ನು ಹತ್ತು ಜನ ಬಡಿದು ಸಾಯಿಸುವಂತೆ, ಎಲ್ಲರೂ ಸೇರಿ ಲೋಕಕಂಟಕನನ್ನು ಸಾಯಿಸುತ್ತಾರೆ. ಎಲ್ಲೋ ಅವರ ಪಾಡಿಗೆ ಅವರು ತಪಸ್ಸನ್ನು ಆಚರಿಸಿಕೊಳ್ಳುತ್ತಿರುವ ಋಷಿಗಳಿಗೆ ತೊಂದರೆ ಕೊಟ್ಟ ಪಾಪವನ್ನು ನೀನು ಈಗ ಅನುಭವಿಸುವೆ. ಯಾವ ಋತುವಿನಲ್ಲಿ ಹೂ ಅರಳಬೇಕೋ ಋತುವಿನಲ್ಲಿ ಅದು ಅರಳುತ್ತದೆ. ಹಾಗೆಯೇ ಯಾವ ಪಾಪಕ್ಕೆ ಯಾವಾಗ ಶಿಕ್ಷೆ ಕೊಡಬೇಕೆಂದು ಪರಮೇಶ್ವರ ನಿರ್ಣಯಿಸುತ್ತಾನೆ. ಯಾವ ಭೂಮಿಯನ್ನು ನೀನು ಇಷ್ಟು ಕಾಲ ಶೋಷಿಸಿದ್ದೀಯೋ ಭೂಮಿ ಇಂದು ನಿನ್ನ ರಕ್ತ ಕುಡಿಯುತ್ತಾಳೆ. ನೀನು ಮಾಡಿದ ಪಾಪಗಳ ಫಲವಾಗಿ ಇಂದು ನಿನ್ನ ಕತ್ತನ್ನು ತೆಗೆಯುತ್ತೇನೆ" ಎಂದ. ಮಾತುಗಳಿಂದ ಕೋಪಗೊಂಡ ಖರ ರಾಮನ ಮೇಲೆ ಒಂದು ಬಲವಾದ ಗದೆಯನ್ನು ಎಸೆದ. ಅದು ದಾರಿಯಲ್ಲಿನ ಮರಗಳನ್ನು ಸುಡುತ್ತಾ ರಾಮನ ಮೇಲೆ ಬಂತು. ರಾಮ ಒಂದೇ ಸಮಯದಲ್ಲಿ ಆರು ಬಾಣಗಳನ್ನು ಬಿಟ್ಟಾಗ ಗಾದೆ ಮಾರ್ಗ ಮಧ್ಯೆಯಲ್ಲಿಯೇ ಪುಡಿಯಾಯಿತು. ಅಲ್ಲದೆ ಖರನ ಧ್ವಜ, ಕುದುರೆ, ಸಾರಥಿಗಳು ಬಿದ್ದುಹೋದರು. ನಂತರ ಬಾಣಗಳು ಖರನ ಎದೆಯನ್ನು ಹೊಕ್ಕಿದವು. ರಕ್ತ ಚಿಮ್ಮಿ ಪ್ರವಹಿಸಿತು. ಸಾಯುವ ಸಮಯದಲ್ಲಿಯೂ ಆಕ್ರೋಶದಿಂದ ಖರ ಅಲ್ಲೇ ಇದ್ದ ಒಂದು ದೊಡ್ಡ ವೃಕ್ಷವನ್ನು ಕಿತ್ತು ರಾಮನ ಮೇಲೆ ಎಸೆದ. ರಾಮ ಅದನ್ನು ತನ್ನ ಬಾಣಗಳಿಂದ ನಿಗ್ರಹಿಸಿದ. ಕೊನೆಯಲ್ಲಿ ಮತ್ತೆ ಖರ ರಾಮನ ಮೇಲೆ ಬೀಳಲು ಹೋದಾಗ ರಾಮ ಅವನನ್ನು ತನ್ನ ಬಾಣಗಳಿಂದ ಹೊಡೆದು ಸಂಹರಿಸಿದ.

ಅರ್ಥ ಅಧಿಕ ಮುಹೂರ್ತೇನ ರಾಮೇಣ ನಿಶಿತೈಃ ಶರೈಃ
ಚತು್ ದಶ ಸಹಸ್ರಾಣಿ ರಾಕ್ಷಸಾಂ ಕಾಮ ರೂಪಿಣಾಂ

೧೪ ಸಾವಿರ ಮಂದಿ ರಾಕ್ಷಸರನ್ನು ಸಂಹರಿಸಲು ರಾಮನಿಗೆ ಒಂದು ಗಂಟೆ ೧೨ ನಿಮಿಷಗಳು ಹಿಡಿದವು. ಯುದ್ಧ ಮುಗಿಸಿ ಮರಳಿ ಬರುವಾಗ ಅವನ ಮೇಲೆ ಪುಷ್ಪವೃಷ್ಟಿಯಾಯಿತು. ಅಲ್ಲಿದ್ದ ಋಷಿಗಳು ಹರ್ಷಿಸಿದರು. ಅಲ್ಲಿಯವರೆಗೂ ಆತಂಕದಿಂದಿದ್ದ ಸೀತೆ ಓಡಿಬಂದು ರಾಮನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅಣ್ಣನು ಮಾಡಿದ ಶತ್ರುಸಂಹಾರದಿಂದ ಲಕ್ಷ್ಮಣ ತುಂಬಾ ಸಂತೋಷಗೊಂಡ. ಸೀತೆಯ ಆಲಿಂಗನದಿಂದ ರಾಮನ ನೋವೆಲ್ಲ ಮರೆಯಿತು. ನಂತರ ಅವರೆಲ್ಲ ಮತ್ತೆ ತಮ್ಮ ಪರ್ಣಶಾಲೆ ಸೇರಿಕೊಂಡರು.

Comments

Popular posts from this blog

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ