೫೩. ಸೀತಾಪಹರಣ

ಲಕ್ಷ್ಮಣ ಹೋಗುವುದನ್ನೇ ಕಾಯುತ್ತಿದ್ದ ರಾವಣ, ಅವನು ಕಣ್ಣಿಗೆ ಕಾಣದಷ್ಟು ದೂರ ಹೋದಮೇಲೆ ತನ್ನ ರಥದಿಂದ ಇಳಿ ಕಾಮ ರೂಪವನ್ನು ಪಡೆದ. ಮೃದುವಾದ ಕಾಷಾಯ ವಸ್ತ್ರ, ಜುಟ್ಟು, ಯಜ್ಞೋಪವೀತ, ಎಡ ಭುಜಕ್ಕೆ ಕಮಂಡಲಗಳನ್ನು ಧರಿಸಿ, ದಿವ್ಯ ತೇಜಸ್ಸನ್ನು ಪಡೆದು ಪರಿವ್ರಾಜಕ (ಸಾಧು) ವೇಷದಿಂದ ಆಶ್ರಮದ ಕಡೆ ಹೋದ. ಮಾರುವೇಷದಲ್ಲಿದ್ದ ರಾವಣನನ್ನು ಗುರುತಿಸಿದ ಅಲ್ಲಿದ್ದ ಗಿಡಗಳು ಅಲ್ಲಾಡದೆ ಹಾಗೇ ನಿಂತುಬಿಟ್ಟವು. ಗಾಳಿ ಮಂದವಾಗಿ ಬೀಸಿತು. ರಾವಣ ಒಮ್ಮೆ ತನ್ನ ತನ್ನ ದೃಷ್ಟಿಯನ್ನು ತಿರುಗಿಸಿದಾಗ ಅಲ್ಲಿಯವರೆಗೂ ರಭಸದಿಂದ ಹರಿಯುತ್ತಿದ್ದ ಗೋದಾವರಿ ಮೆಲ್ಲಗಾದಳು.

ರಾವಣ ಸೀತೆಯ ಬಳಿ ಬಂದು, "ನಿನ್ನ ಪದ್ಮದಂತಹ ಮುಖ, ಕೈ, ಪಾದಗಳನ್ನು ನೋಡಿದರೆ ಭೂಮಿಯ ಮೇಲೆ ತಿರುಗಲು ಬಂದ ರತಿಯಂತೆ ಕಾಣಿಸುತ್ತಿರುವೆ. ನಿನ್ನ ಮುಖ, ನಿನ್ನ ಕಣ್ಣು ಎಲ್ಲ ಸುಂದರವಾಗಿವೆ..." ಎಂದು ಸೀತೆಯ ಕೇಶದಿಂದ ಪಾದದವರೆಗೂ ಪ್ರತಿಯೊಂದು ಅಂಗಾಂಗಗಳನ್ನೂ ವರ್ಣಿಸಿ, "ವೇಗವಾಗಿ ಓಡುವ ನದಿ ತನ್ನ ದಡವನ್ನು ಕೊರೆದಂತೆ ನೀನು ನನ್ನ ಮನಸ್ಸನ್ನು ಕೊರೆಯುತ್ತಿದ್ದೀಯ! ಯಕ್ಷ, ಗಂಧರ್ವ, ಕಿನ್ನರ ಸ್ತ್ರೀಯರಲ್ಲಿ ನಿನ್ನಂತಹ ರೂಪವತಿಯನ್ನು ನನ್ನ ಎಲ್ಲಿಯೂ ನೋಡಿಲ್ಲ. ನಿನ್ನಂತಹವಳು ಕಾಡಿನಲ್ಲಿರುವುದೇಕೆ? ಇದು ಕ್ರೂರ ಮೃಗಗಳಿರುವ ಕಾಡು. ಇಲ್ಲಿ ರಾಕ್ಷಸರು ಕಾಮರೂಪದಿಂದ ತಿರುಗುತ್ತಿರುತ್ತಾರೆ. ಇಲ್ಲಿಂದ ನೀನು ಬೇಗ ಹೊರಡು. ನೀನು ದೊಡ್ಡ ನಗರದಲ್ಲಿದ್ದು ಸುಖಪಡಬೇಕು. ಹೂವಿನ ಹಾರ ಹಾಕಿಕೊಳ್ಳಬೇಕು. ಒಳ್ಳೆಯ ಬಟ್ಟೆಗಳನ್ನುಡಬೇಕು. ಎಲ್ಲದಕ್ಕಿಂತ ಹೆಚ್ಚಗಿ ನಿನಗೆ ಒಬ್ಬ ಗಂಡನಿರಬೇಕು" ಎಂದ.

(ಕಾಮದ ದೃಷ್ಟಿಯಿಂದ, ಅಂದವನ್ನು ಹೊಗಳುತ್ತಾ, ಪ್ರೀತಿ ಎಂಬ ಮುಖವಾಡವಿತ್ತು ಮಾತಾಡುವವನಂತೆ ರಾವಣ ಮಾತಾಡಿದ.)

ಸೀತೆಯ ಮನಸ್ಸೆಲ್ಲಾ ರಾಮನ ಯೋಚನೆಯಿಂದಲೇ ಕೂಡಿದ್ದರಿಂದ ಅವಳು ರಾವಣನ ಮಾತಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅತಿಥಿಯಂತೆ ಮನೆಗೆ ಬಂದ ಭಿಕ್ಷುಕನ ವೇಷದಲ್ಲಿದ್ದ ರಾವಣನಿಗೆ ಅರ್ಘ್ಯ ಪಾದ್ಯಾದಿಗಳನ್ನು ಕೊಟ್ಟು ಕುಳಿತುಕೊಳ್ಳಲು ಆಸನ ಕೊಟ್ಟಳು. ಸೀತಾಪಹರಣದಿಂದ ತನ್ನ ಅಂತ್ಯಕ್ಕೆ ತಾನೇ ನಾಂದಿಹಾಡಿಕೊಳ್ಳಲು ಸಿದ್ಧನಾಗುತ್ತಿದ್ದ ರಾವಣನಿಗೆ ಸೀತೆ ಸಮಸ್ತ ಅತಿಥಿ ಪೂಜೆ ಮಾಡಿದಳು!

ರಾವಣ ಕುಳಿತುಕೊಂಡ ನಂತರ ಸೀತೆ, "ನನ್ನ ಹೆಸರು ಸೀತೆ. ನಾನು ಜನಕ ಮಹಾರಾಜನ ಮಗಳು. ರಾಮನ ಪತ್ನಿ. ನಾನು ಇಕ್ಷ್ವಾಕು ವಂಶದ ರಾಮನನ್ನು ಮದುವೆಯಾದ ಮೇಲೆ ಮನುಷ್ಯರು ಅನುಭವಿಸುವ ಸುಖವನ್ನೆಲ್ಲಾ ಅನುಭವಿಸಿದ್ದೇನೆ. ಕೈಕೆಯ ಆಸೆಯಂತೆ ರಾಮ ೧೪ ವರ್ಷ ಕಾಡಿಗೆ ಬಂದಿದ್ದಾನೆ. ಅವನ ತಮ್ಮ ಲಕ್ಷ್ಮಣ ಯಾವಾಗಲೂ ನಮ್ಮ ಸೇವೆ ಮಾಡುತ್ತಿದ್ದಾನೆ.
ಮಮ ಭರ್ತಾ ಮಹಾತೇಜಾ ವಯಸಾ ಪಂಚ ವಿಂಶಕಃ
ಅಷ್ಟಾದಶ ಹಿ ವರ್ಷಾಣಿ ಮಮ ಜನ್ಮನಿ ಗಣ್ಯತೇ
ಅರಣ್ಯಕ್ಕೆ ಬಂದಾಗ ನನಗೆ ೧೮, ರಾಮನಿಗೆ ೨೫ ವರ್ಷಗಳು" ಎಂದು ತನ್ನನ್ನು ಪರಿಚಯಿಸಿಕೊಂಡು, "ಬ್ರಾಹ್ಮಣಾ! ನೀನೇಕೆ ಅರಣ್ಯದಲ್ಲಿದ್ದೀಯ? ನೀನು ಯಾರು? ನಿನ್ನ ಗೋತ್ರವೇನು?" ಕೇಳಿದಳು.

ರಾವಣ, "ಸೀತಾ! ನನ್ನ ಹೆಸರು ರಾವಣ. ನನ್ನನ್ನು ನೋಡಿದರೆ ದೇವಾ, ಗಂಧರ್ವರ ಸಹಿತ ಎಲ್ಲರೂ ಹೆದರುತ್ತಾರೆ. ಒಳ್ಳೆಯ ಸೀರೆಯುಟ್ಟು, ಇಷ್ಟು ಸುಂದರವಾಗಿ ಕಾಣುತ್ತಿರುವ ನಿನ್ನನ್ನು ನೋಡಿದಾಗಿನಿಂದ ನನಗೆ ಎಷ್ಟು ಪತ್ನಿಯರಿದ್ದರೂ ನಿನ್ನನ್ನು ಪಡೆಯಬೇಕೆಂಬ ಆಸೆಯಾಗಿದೆ. ನೀನು ನನ್ನ ಜೊತೆ ಬಂದರೆ ನಿನ್ನನ್ನು ಪಟ್ಟದ ರಾಣಿಯನ್ನಾಗಿ ಮಾಡುತ್ತೇನೆ. ನಿನಗೆ ೫೦೦೦ ಮಂದಿ ದಾಸಿಯರು ಇರುತ್ತಾರೆ. ನಾನು ನಿನಗೆ ಭೂಲೋಕದ ಸಮಸ್ತ ಐಶ್ವರ್ಯವನ್ನೂ ತಂದು ಕೊಡುತ್ತೇನೆ" ಎಂದ.

ರಾವಣನ ನೀಚವಾದ ಮಾತನ್ನು ಕೇಳಿದ ಸೀತೆ ಕೋಪದಿಂದ, "ರಾವಣಾ! ನಿನಗೆ ತಿಳಿಯದೆ ಇಷ್ಟು ಮಾತಾಡುತ್ತಿದ್ದೀಯ. ಮಹಾಸಮುದ್ರ, ಪರ್ವತಗಳನ್ನು ಕದಲಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಧರ್ಮಾತ್ಮನಾದ, ಸಿಂಹದಂತಹ ಬಾಹುಗಳುಳ್ಳ, ಮದಿಸಿದ ಆನೆಯಂತೆ ನಡೆಯುವ ರಾಮನನ್ನು ಅನುಸರಿಸುವ ನನ್ನನ್ನು ಕದಲಿಸುವುದೂ ಸಾಧ್ಯವಿಲ್ಲ. ನಿನ್ನಂತಹ ಅಯೋಗ್ಯ ಐಶ್ವರ್ಯದ ಕುರಿತು ಮಾತಾಡಿದ ತಕ್ಷಣ ನಾನು ನಿನ್ನ ಹಿಂದೆ ಬರುವುದಿಲ್ಲ. ನರಿ ಸಿಂಹದ ಜೊತೆ ಮಾತಾಡಿದಂತೆ ಮಾತಾಡಬೇಡ. ಕಣ್ಣಿನಲ್ಲಿರುವ ಪಿಸುರನ್ನು ಸೂಜಿಯಿಂದ ತೆಗೆಯುವುದು ಎಷ್ಟು ಅಜ್ಞಾನವೋ, ಕುತ್ತಿಗೆಗೆ ಕಲ್ಲನ್ನು ಕಟ್ಟಿಕೊಂಡು ಈಜುವುದು ಎಷ್ಟು ಅಜ್ಞಾನವೋ, ಸೂರ್ಯ ಚಂದ್ರರನ್ನು ಕೈಯಲ್ಲಿಟ್ಟುಕೊಂಡು ಮನೆಗೆ ತೆಗೆದುಕೊಂಡು ಹೋಗಬಹುದು ಎಂದುಕೊಳ್ಳುವುದು ಎಷ್ಟು ಅಜ್ಞಾನವೋ, ರಾಮನನ್ನು ಸೋಲಿಸಬಹುದು ಎಂದುಕೊಳ್ಳುವುದೂ ಅಷ್ಟೇ ಅಜ್ಞಾನ. ಸೀಸಕ್ಕೆ-ಬಂಗಾರಕ್ಕೆ, ಗಂಧಕ್ಕೆ-ಕೆಸರಿಗೆ, ಆನೆಗೆ-ಬೆಕ್ಕಿಗೆ, ಕಾಗೆಗೆ-ಗರುಡನಿಗೆ ಎಷ್ಟು ವ್ಯತ್ಯಾಸವೋ ನಿನಗೂ ರಾಮನಿಗೂ ಅಷ್ಟೇ ವ್ಯತ್ಯಾಸ.” ಎಂದಳು.

“ನಾನು ಸಾಕ್ಷಾತ್ ಕುಬೇರನ ತಮ್ಮ. ಒಂದು ಬಾರಿ ಕುಬೇರನ ಮೇಲೆ ಕೋಪಬಂದು ಯುದ್ಧ ಮಾಡಿ ಅವನನ್ನು ಲಂಕೆಯಿಂದ ಓಡಿಹೋಗುವಂತೆ ಮಾಡಿದೆ. ಅವನು ಉತ್ತರಕ್ಕೆ ಹೋಗಿಬಿಟ್ಟ. ಅಲ್ಲಿಗೂ ಹೋಗಿ ಅವನನ್ನು ಹೊಡೆದು ಅವನ ಹತ್ತಿರವಿರುವ ಪುಷ್ಪಕವಿಮಾನವನ್ನು ಹೊತ್ತುಕೊಂಡು ಬಂದೆ. ದಶರಥನಿಂದ ತಿರಸ್ಕೃತನಾಗಿ ರಾಜ್ಯವಿಲ್ಲದೆ, ಅರಣ್ಯದಲ್ಲಿ ತಿರುಗುತ್ತಿರುವ ರಾಮನನ್ನು ನಂಬುತ್ತಿದ್ದೀಯ? ನನ್ನ ಹತ್ತಿರವಿರುವ ಐಶ್ವರ್ಯವನ್ನು ನೋಡಿ ನನ್ನ ಪತ್ನಿಯಾಗು. ನಾನು ಕಿರುಬೆರಳಿನಿಂದ ಮಾಡುವ ಯುದ್ಧಕ್ಕೆ ರಾಮ ನಿಲ್ಲಲಾರ. ನಿನ್ನ ಅದೃಷ್ಟ ಚೆನ್ನಾಗಿದೆ. ನನ್ನ ಕಣ್ಣು ನಿನ್ನ ಮೇಲೆ ಬಿದ್ದಿದೆ.”

“ಕುಬೇರನ ತಮ್ಮನಾದ ನಿನಗೆ ಹತ್ತು ಜನ ಕೀಳಾಗಿ ಕಾಣುವಂತಹ ಮಾತಾಡಲು ನಾಚಿಕೆಯಾಗಬೇಕು! ನಿನ್ನ ಪ್ರಕಾರ ರಾಮ ತೃಣ. ಆದರೆ ಅವನಿಲ್ಲದ ಸಮಯದಲ್ಲಿ ಏಕೆ ಬಂದೆ? ಅವನು ಬರುವವರೆಗೂ ಇಲ್ಲೇ ಇರು ನೋಡೋಣ.”

ರಾವಣ ಅವಳ ಮಾತನ್ನು ಲೆಕ್ಕಿಸದೆ ತನ್ನ ಶರೀರವನ್ನು ಪರ್ವತದಷ್ಟು ದೊಡ್ಡದಾಗಿ ಬೆಳಸಿ, ತನ್ನ ನಿಜ ಸ್ವರೂಪವನ್ನು ತೋರಿಸಿದ. ಧನುರ್ಬಾಣ ಕುಂಡಲಿಗಳನ್ನು ಧರಿಸಿ ಆಕಾಶದಿಂದ ಬಂದ ಕಪ್ಪು ಮಬ್ಬಿನಂತಿದ್ದ ಅವನು, “ನನಗೆ ಸಮಾನನಾದವನು ಎಲ್ಲಿದ್ದಾನೆ? ನಿನ್ನನ್ನು ಈಗ ಹೊತ್ತುಕೊಂಡು ಹೋಗುತ್ತೇನೆ ನೋಡು” ಎಂದು ಸೀತೆಗೆ ಹೇಳಿ, ಭಯಪಡುತ್ತಿದ್ದ ಸೀತೆಯ ಹತ್ತಿರ ಬಂದು ತನ್ನ ಎಡಗೈಯಿಂದ ಅವಳ ಜುಟ್ಟನ್ನು ಹಿಡಿದು, ಬಲಗೈಯನ್ನು ಅವಳ ನಡುವಿನ ಕೆಳಗೆ ಹಾಕಿ ಅವಳನ್ನು ಎತ್ತಿಕೊಂಡು ಆಶ್ರಮದಿಂದ ಹೊರಗೆ ಬಂದ. ಅಲ್ಲಿಯವರೆಗೂ ಯಾರಿಗೂ ಕಾಣದಂತಿದ್ದ ಅವನ ರಥ ಪ್ರತ್ಯಕ್ಷವಾಗಿ ಭೂಮಿಯ ಮೇಲೆ ಬಂದಿಳಿದಿತು. ಜೋರಾಗಿ ಅಳುತ್ತಿದ್ದ ಸೀತೆಯನ್ನು ಮತ್ತೂ ಭಯಗೊಳಿಸಿ ರಥ ಹತ್ತಿ ಅವಳನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡ.

ರಥ ಮುಂದಕ್ಕೆ ಹೋಯಿತು. ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದ ರಥದಿಂದ ಸೀತೆ, “ರಾಮ! ರಾಮ! ನೀವು ಅರಣ್ಯದಲ್ಲಿ ಎಲ್ಲಿ ಹೋದಿರಿ? ನನ್ನ ಕೂಗು ನಿಮಗೆ ಕೇಳಿಸುತ್ತಿದೆಯೇ? ಈ ದುಷ್ಟ ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದಾನೆ. ಧರ್ಮಕ್ಕಾಗಿ ತನ್ನ ರಾಜ್ಯವನ್ನೇ ತ್ಯಾಗಮಾಡಿದ ರಾಮ! ನಿನ್ನ ಪತ್ನಿಯನ್ನು ಇಂದು ಒಬ್ಬ ರಾಕ್ಷಸ ಅಪಹರಿಸುತ್ತಿದ್ದಾನೆ. ಈ ವಿಷಯ ನಿಮಗೆ ತಿಳಿದಿಲ್ಲ. ಲಕ್ಷ್ಮಣಾ, ನೀನು ಯಾವಾಗಲೂ ರಾಮನನ್ನು ಅನುಸರಿಸುವವನು. ನಿನಗೂ ಈ ವಿಷಯ ತಿಳಿದಿಲ್ಲ. ಮೃಗಗಳೇ! ಪಕ್ಷಿಗಳೇ! ಪರ್ವತಗಳೇ! ಓ ಭೂಮಿ! ಓ ಗೋದಾವರಿ! ನೀವೆಲ್ಲಾ ಕೇಳಿ. ರಾವಣ ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದಾನೆ. ಇದನ್ನು ರಾಮನಿಗೆ ಹೇಳಿ ನನ್ನನ್ನು ಕಾಪಾಡಿ! ಕಾಪಾಡಿ!” ಎಂದು ಜೋರಾಗಿ ಕೂಗುತ್ತಾ, ಅಳುತ್ತಾ ರಾವಣನ ತೋಳ ತೆಕ್ಕೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ತನ್ನ ೨೦ ಕೈಗಳಿಂದ ರಾವಣ ಅವಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದ!

ರಾವಣ ಸೀತೆಯನ್ನು ಹೊತ್ತುಕೊಂಡು ಹೋಗುವಾಗ ಅಲ್ಲಿಯೇ ಕೂತಿದ್ದ ವೃದ್ಧನಾದ ಜಟಾಯು ನೋಡಿದ. ಆಗ ಜಟಾಯುವಿಗೆ ೬೦೦೦೦ ಸಾವಿರ ವರ್ಷಗಳು. ಅವನು ರಾವಣನಿಗೆ, “ದುಷ್ಟ ರಾವಣ! ನೀನು ಮಾಡಬಾರದ ಕೆಲಸ ಮಾಡುತ್ತಿದ್ದೀಯ. ಧರ್ಮಕ್ಕಾಗಿ ತನ್ನ ರಾಜ್ಯ ಬಿಟ್ಟು ಬಂದ ರಾಮನ ಪತ್ನಿಯನ್ನು ಅಪಹರಿಸುತ್ತಿದ್ದೀಯ. ಇದರಿಂದ ನಿನಗೇ ಆಪತ್ತು. ಈಗಲಾದರೂ ನಿನ್ನ ಮನಸ್ಸನ್ನು ಬದಲಾಯಿಸು. ರಾಜ್ಯದಲ್ಲಿ ಧರ್ಮದ ವಿಷಯದಲ್ಲಾಗಲೀ, ಅರ್ಥದ ವಿಷಯದಲ್ಲಾಗಲೀ, ಕಾಮದ ವಿಷಯದಲ್ಲಾಗಲೀ ಹೇಗೆ ವರ್ತಿಸಬೇಕೆಂಬ ಸಂದೇಹ ಬಂದರೆ ಅವರು ರಾಜನನ್ನು ನೋಡಿ ಅನುಸರಿಸುತ್ತಾರೆ. ರಾಜ ಧರ್ಮ ತಪ್ಪಿದರೆ ಪ್ರಜೆಗಳೂ ಧರ್ಮ ತಪ್ಪುತ್ತಾರೆ. ಕೆಲಸಕ್ಕೆ ಬರದವನಿಗೆ, ಸ್ವರ್ಗಕ್ಕೆ ಹೋಗಲು ವಿಮಾನ ಕೊಟ್ಟಂತೆ ನಿನಗೆ ರಾಜ್ಯ ಕೊಟ್ಟವನು ಯಾರು? ನಿನ್ನನ್ನು ರಾಜನಾಗಿ ಮಾಡಿದವನು ಯಾರು? ನಾನು ವೃದ್ಧ, ನನಗೆ ಕವಚವಿಲ್ಲ, ರಥವಿಲ್ಲ. ನೀನು ಯುವಕ. ನಿನಗೆ ಧನುರ್ಬಾಣಗಳು, ರಥ, ಕವಚಗಳಿವೆ. ಆದರೂ ನಾನು ನಿನ್ನನ್ನು ಬಿಡುವುದಿಲ್ಲ. ನನ್ನ ಪ್ರಾಣವಿರುವವರೆಗೂ ನೀನು ಸೀತೆಯನ್ನು ಕರೆದುಕೊಂಡು ಹೋಗಲು ಬಿಡುವುದಿಲ್ಲ. ನನ್ನ ಪರಾಕ್ರಮವನ್ನು ಈಗ ನೋಡು” ಎಂದು ಹೇಳಿ ತನ್ನ ರೆಕ್ಕೆಗಳನ್ನು ಜೋರಾಗಿ ಬಡಿಯುತ್ತಾ ರಾವಣನ ಮೇಲೆ ಯುದ್ಧಕ್ಕೆ ಹೋದ.

ತನ್ನ ಮೇಲೆ ಯುದ್ಧಕ್ಕೆ ಬಂದ ಜಟಾಯುವಿನ ಮೇಲೆ ಕೋಪಗೊಂಡ ರಾವಣ, ಅವನ ಮೇಲೆ ಅನೇಕ ಸಾವಿರ ಬಾಣಗಳನ್ನು ಬಿಟ್ಟ. ಅವು ಜಟಾಯುವಿನ ಮೈಯೆಲ್ಲಾ ಮುತ್ತಿಕೊಂಡಿದ್ದರೂ ಅವನು ತನ್ನ ರೆಕ್ಕೆಗಳನ್ನು ಆಡಿಸಿ ಬಾಣಗಳನ್ನು ಕೆಳಕ್ಕೆ ಉದುರಿಸಿದ. ನಂತರ ತನ್ನ ರೆಕ್ಕೆಗಳಿಂದ ರಥಕ್ಕೆ ಹೊಡೆದು, ರಾವಣನನ್ನು ತನ್ನ ಮೂಗಿನಿಂದ ತಿವಿದ. ಆ ಏಟಿಗೆ ರಾವಣನ ಬಿಲ್ಲು ಮುರಿಯಿತು. ಬಾಣಗಳು ಕೆಳಕ್ಕೆ ಬಿದ್ದವು. ಮತ್ತೆ ಜಟಾಯು ರೆಕ್ಕೆಯಿಂದ ರಥಕ್ಕೆ ಹೊಡೆದಾಗ ರಥವೇ ಕೆಳಗೆ ಬಿತ್ತು. ತನ್ನ ಮೂಗಿನಿಂದ ರಥದ ಸಾರಥಿಯನ್ನು ಕೊಂದ. ತನ್ನ ಕಾಲಿನ ಉಗುರುಗಳಿಂದ ಪಿಶಾಚಿಗಳಂತಿದ್ದ ರಥದ ಕತ್ತೆಗಳನ್ನು ಸಂಹರಿಸಿದ. ರಾವಣ ಸೀತೆಯ ಜೊತೆ ಕೆಳಕ್ಕೆ ಬಿದ್ದು ಹೋದ. ಆದರೂ ಅವನು ಸೀತೆಯನ್ನು ಎಡಗೈಯಲ್ಲಿ ಹಿಡಿದುಕೊಂಡಿದ್ದ. ಇದನ್ನು ನೋಡಿದ ಜಟಾಯು ರಾವಣನ ೧೦ ಎಡಗೈಗಳನ್ನು ಮುರಿದ. ಸೀತೆ ಕೆಳಗೆಬಿದ್ದಳು. ಆದರೆ ತಕ್ಷಣವೇ ಅವನಿಗೆ ಮತ್ತೆ ಆ ೧೦ ಕೈಗಳೂ ಬಂದವು. ರಾವಣ ಒಂದು ದೊಡ್ಡ ಖಡ್ಗವನ್ನು ತೆಗೆದುಕೊಂಡು ಜಟಾಯುವಿನ ಎರೆಡು ರೆಕ್ಕೆಗಳನ್ನು, ಕಾಲುಗಳನ್ನು ಕತ್ತರಿಸಿಬಿಟ್ಟ! 

ಜಟಾಯುವಿನ ಮೈಯಿಂದ ನದಿ ಹರಿದಂತೆ ರಕ್ತ ಹರಿಯಿತು. ಪ್ರಜ್ಞೆ ತಪ್ಪಿ ಸ್ವಲ್ಪ ದೂರದಲ್ಲಿ ಹೋಗಿ ಬಿದ್ದ. ಸೀತೆ, ತನಗಾಗಿ ಪ್ರಾಣವನ್ನೇ ಅರ್ಪಿಸಲು ಸಿದ್ದನಾದ ಜಟಾಯುವಿನ ಬಳಿ ಓಡಿ ಹೋಗಿ ಅವನನ್ನು ತಬ್ಬಿಕೊಂಡಳು. ಸೀತೆಯ ಆಭರಣಗಳು ಕೆಳಗೆ ಬಿದ್ದವು. ಅವಳ ಸೀರೆಯೆಲ್ಲ ರಕ್ತಮಯವಾಯಿತು. ಒಂದೇ ಸಮನೆ ಜೋರಾಗಿ ಅಳುತ್ತಿದ್ದ ಸೀತೆಯನ್ನು ನೋಡಿ ರಾವಣ, 'ಇವನಿಗಾಗಿ ಏಕೆ ಅಳುತ್ತಿದ್ದೀಯ' ಎಂದು ಅವಳ ಬಳಿ ಬಂದ. ಸೀತೆ ಜಟಾಯುವನ್ನು ಬಿಟ್ಟು ಅಲ್ಲಿದ್ದ ಮರ ಬಳ್ಳಿಗಳ ಬಳಿ ಓಡಿದಳು. ಅಲ್ಲಿಗೂ ಬಂದ ರಾವಣ ಅವಳ ಜುಟ್ಟು ಹಿಡಿದು ಎಳೆದುಕೊಂಡು ಬಂದು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ನೇರವಾಗಿ ಆಕಾಶಕ್ಕೆ ಹಾರಿದ. ರಾವಣ ಸೀತೆಯನ್ನು ಎಳೆದುಕೊಂಡು ಹೋಗುತ್ತಿದ್ದಾಗ, ಸೂರ್ಯ-ಚಂದ್ರರು ನಾಚಿಕೆಯಿಂದ ಮೋಡದೊಳಗೆ ಅವಿತುಕೊಂಡರು. ಪ್ರದೇಶವೆಲ್ಲ ಕತ್ತಲಿನಿಂದ ಆವೃತವಾಯಿತು. ಸತ್ಯಲೋಕದಲ್ಲಿದ್ದ ಬ್ರಹ್ಮ ದೇವರು, "ರಾವಣಾ! ನಿನ್ನ ತಪಸ್ಸು ನಾಶವಾಗಲು ಬೇಕಾದಷ್ಟು ಪಾಪ ಇಂದು ಮಾಡಿದ್ದೀಯ" ಎಂದು ಶೋಕಿಸಿದರು. ತನ್ನ ತೆಕ್ಕೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸೀತೆಯನ್ನು ೨೦ ಕೈಗಳಿಂದ ಹಿಡಿದಿಟ್ಟುಕೊಂಡಿದ್ದ ರಾವಣನನ್ನು ನೋಡಿ ಋಷಿಗಳು ವ್ಯಥಿಸಿದರು. ಇನ್ನು ಅವನ ನಾಶ ಖಂಡಿತ ಎಂದು ಮನಸ್ಸಿನಲ್ಲಿಯೇ ಅಂದುಕೊಂಡರು


ಆಕಾಶದಲ್ಲಿ ಹೋಗುತ್ತಿದ್ದ ಸೀತೆಯ ಆಭರಣಗಳು ಕೆಳಗೆ ಬೀಳುತ್ತಿದ್ದವು. ಕೇಶ ರಾಶಿ ಚದುರಿಹೋಗಿತ್ತು. ಹಣೆಗಿಟ್ಟ ತಿಲಕ ಪಕ್ಕಕ್ಕೆ ಸರಿದಿತ್ತು. ಆಕಾಶದಲ್ಲಿ ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಪರ್ವತ ಶಿಖರದ ಮೇಲೆ ಐವರು ವಾನರರು ಕಾಣಿಸಿದರು. ಅವರು ರಾಮನಿಗೆ ವಿಷಯ ತಿಳಿಸಬಹುದೆಂದು ಯೋಚಿಸಿ ಸೀತೆ ತನ್ನ ಆಭರಣಗಳನ್ನು ತನ್ನ ಸೆರಗಿನ ತುಂಡಿನಲ್ಲಿ ಕಟ್ಟಿ ಅವರ ಮಧ್ಯಕ್ಕೆ ಎಸೆದಳು. ಸೀತೆಯನ್ನು ಅಪಹರಿಸಿದ ಸಂತೋಷದಲ್ಲಿದ್ದ ರಾವಣ ಅದನ್ನು ಗಮನಿಸಲಿಲ್ಲ. ದೃಶ್ಯವನ್ನು ಐವರು ವಾನರರು ರೆಪ್ಪೆ ಮಿಸುಕಿಸದೆ ನೋಡುತ್ತಿದ್ದರು!

Comments

Popular posts from this blog

೪೮. ಖರದೂಷಣ ವಧೆ

೫. ಪುತ್ರಕಾಮೇಷ್ಠಿ