೧೮. ಸೀತೆ

ಮರುದಿನ ಜನಕ ಮಹಾರಾಜನ ಆಹ್ವಾನದ ಮೇಲೆ ವಿಶ್ವಾಮಿತ್ರರು ರಾಮ-ಲಕ್ಷ್ಮಣರ ಸಹಿತ ರಾಜಸಭೆಗೆ ಬಂದರು. ವಿಶ್ವಾಮಿತ್ರರು ಜನಕ ಮಹಾರಾಜನನ್ನು ಕುರಿತು, "ಇವರಿಬ್ಬರನ್ನು ನಿನ್ನ ಬಳಿಯಿರುವ ಶಿವಧನಸ್ಸನ್ನು ತೋರಿಸಲು ಕರೆದುಕೊಂಡು ಬಂದಿದ್ದೇನೆ. ನೀನು ಒಂದು ಬಾರಿ ತೋರಿಸಿದರೆ ಇವರು ಸಂತೋಷದಿಂದ ಹಿಂತಿರುಗಿ ತಮ್ಮ ಪ್ರಯಾಣ ಮುಂದುವರೆಸುತ್ತಾರೆ" ಎಂದು. ಆಗ ಜನಕಮಹಾರಾಜ ಶಿವ ಧನಸ್ಸಿನ ಚರಿತ್ರೆಯನ್ನು ಹೇಳಿದ:

"ಪೂರ್ವದಲ್ಲಿ ದಕ್ಷ ಪ್ರಜಾಪತಿ ಶಿವನಿಗೆ ಹವಿಸ್ಸು ಕೊಡದ ಯಾಗವನ್ನು ಪ್ರಾರಂಭಿಸಿದ. ಶಿವನಿರದ ಕಡೆ ಮಂಗಳವು ಹೇಗೆ ಇರುತ್ತದೆ ಎಂದು ದಕ್ಷನ ಮಗಳಾದ ಪಾರ್ವತೀದೇವಿ ಯಾಗಾಗ್ನಿಯಲ್ಲಿ ತನ್ನ ದೇಹತ್ಯಾಗ ಮಾಡಿದಳು. ಇದರಿಂದ ಕೋಪಗೊಂಡ ಶಿವ ರೌದ್ರನಾದ. ಇಂತಹ ಯಾಗಕ್ಕೆ ಹೋದ ದೇವತೆಗಳ ಮೇಲೆ ಕೋಪಿಸಿಕೊಂಡು ತನ್ನ ಧನಸ್ಸನ್ನು ಕೈಗೆತ್ತಿಕೊಂಡ. ತಕ್ಷಣವೇ ದೇವತೆಗಳು ಪ್ರಾರ್ಥಿಸಿದಾಗ ಶಿವ ಶಾಂತಿಸಿದ
ಧನಸ್ಸನ್ನು ನನ್ನ ಪೂರ್ವಿಕನಾದ ದೇವರಾತನೆಂಬುವವನ ಬಳಿ ತಾತ್ಕಾಲಿಕವಾಗಿ ಬಿಟ್ಟರು. ದೇವರಾತನು ಧನಸ್ಸನ್ನು ಒಂದು ಮಂಜೂಷದಲ್ಲಿ (ಮಂಜೂಷ - ದೊಡ್ಡ ಪೆಟ್ಟಿಗೆ) ಇಟ್ಟ. ಚಕ್ರವಿರುವ ಮಂಜೂಷವನ್ನು ಎಳೆಯಲು ಸುಮಾರು ಐದು ಸಾವಿರ ಮಂದಿ ಬೇಕು. ಪರಮ ಪವಿತ್ರವಾದ ಶಿವ ಧನಸ್ಸನ್ನು ನಮ್ಮ ವಿದೇಹ ವಂಶೀಯರು ದಿನವೂ ಪೂಜಿಸುತ್ತಾ, ನೋಡಿಕೊಳ್ಳುತ್ತಿದ್ದಾರೆ
ಅಥ ಮೇ ಕೃಷತಃ ಕ್ಷೇತ್ರಂ ಲಾಂಗಲಾತ್ ಉತ್ಥಿತಾ ಮಮ
ಕ್ಷೇತ್ರಂ ಶೋಧಯತಾ ಲಬ್ಧ್ವಾ ನಾಮ್ನಾ ಸೀತಾ ಇತಿ ವಿಶ್ರುತಾ
ಒಂದು ಬಾರಿ ನಾನು ಯಜ್ಞ ಮಾಡಲು ಭೂಮಿಯನ್ನು ಅಗಿಯುತ್ತಿದ್ದಾಗ, ನೇಗಿಲು ತಗುಲಿ ಒಂದು ಹೆಣ್ಣು ಮಗು ತನಗೆ ತಾನೇ ಮೇಲಕ್ಕೆ ಬಂದಳು. ನೇಗಿಲು ತಗುಲಿ ಮೇಲೆ ಬಂದಿದ್ದರಿಂದ ಮತ್ತು ಅವಳಿಗೆ ಭೂಮಿಗೆ ಇದ್ದಷ್ಟು ತಾಳ್ಮೆಯಿದ್ದದ್ದರಿಂದ ಮಗುವನ್ನು 'ಸೀತಾ' ಎಂದು ಕರೆದೆವು (ಜನಕನ ಮಗಳಾದ್ದರಿಂದ ಜಾನಕಿ, ಮಿಥಿಲಾ ನಗರದಲ್ಲಿ ಹುಟ್ಟಿದ್ದರಿಂದ ಮೈಥಿಲಿ, ದೇಹದ ಮೇಲೆಮೋಹವಿಲ್ಲದ ವಿದೇಹ ವಂಶದವಳಾದ್ದರಿಂದ ವೈದೇಹಿ ಎಂದೂ ಸೀತೆಗೆ ಹೆಸರುಗಳು). ಅವಳು ಅಯೋನಿಜೆ, ಯಾವುದೇ ಸ್ತ್ರೀಯ ಗರ್ಭವಾಸ ಮಾಡಿ ಬಂದವಳಲ್ಲ. ಅವಳು ಅದ್ಭುತವಾದ ಸೌಂದರ್ಯರಾಶಿ. ಅವಳನ್ನು ನೋಡಿದ ದೇವತೆಗಳು, ಯಕ್ಷರು, ರಾಕ್ಷಸರು ಮೊದಲಾಗಿ ಎಲ್ಲರೂ ತಮ್ಮ ತಮ್ಮ ಪತ್ನಿಯನ್ನಾಗಿ ಮಾಡಿಕೊಳ್ಳಬೇಕೆಂದು ಆಸೆ ಪಟ್ಟರು. ಆದ್ದರಿಂದ ನಾನು ಅವಳನ್ನು ವೀರ್ಯ ಶುಲ್ಕವಾಗಿ (ಅಂದರೆ - ಪರಾಕ್ರಮದಿಂದ ಗೆದ್ದುಕೊಂಡವನಿಗೆ) ಪ್ರಕಟಿಸಿ, ಯಾರು ಶಿವ ಧನಸ್ಸಿಗೆ ಹೆದೆಯೇರಿಸುತ್ತಾರೋ ಅವರಿಗೆ ಕೊಡುತ್ತೇನೆ ಎಂದಿದ್ದೇನೆ. ಇಲ್ಲಿಯವರೆಗೂ ಎಷ್ಟೋ ರಾಜರುಬಂದು ಹೋಗಿದ್ದಾರೆ. ಕೆಲವರಿಗೆ ಶಿವಧನಸ್ಸನ್ನು ಎತ್ತಲಾಗಲಿಲ್ಲ. ಕೆಲವರು ಅದನ್ನು ನೋಡಿಯೇ ಬಿದ್ದುಹೋದರು. ಆದರೆ ಯಾರಿಗೂ ಅದನ್ನು ಕದಲಿಸಲಾಗಲಿಲ್ಲ. ಬಂದವರೆಲ್ಲರೂ ನಿರಾಶರಾಗಿ ಹೋಗುತ್ತಿದ್ದರು

‘ಈ ಜನಕನ ಪರೀಕ್ಷೆಯಲ್ಲಿ ಯಾರೂ ಗೆಲ್ಲಲಾಗುವುದಿಲ್ಲ, ಶಿವ ಧನಸ್ಸನ್ನು ಹೆದೆಯೇರಿಸಲು ಯಾರಿಗೂ ಸಾಧ್ಯವಿಲ್ಲ’ ಎಂದುಕೊಂಡು ಎಲ್ಲರೂ ಒಂದಾಗಿ, ನಮ್ಮ ರಾಜ್ಯದ ಮೇಲೆ ದಾಳಿ ಮಾಡಿದರು. ಆಗ ನಮ್ಮ ರಾಜ್ಯದ ಸುತ್ತಲೂ ಭೂಮಿಯನ್ನು ಅಗೆದು, ಅದರ ತುಂಬ ನೀರನ್ನು ತುಂಬಿ ದ್ವಾರಗಳನ್ನು ಮುಚ್ಚಿಬಿಟ್ಟೆವು. ಒಂದು ವರ್ಷದ ಕಾಲ ಯುದ್ಧ ನಡೆದ ನಂತರ ನಮ್ಮ ಬಳಿಯಿದ್ದ ಆಹಾರ ಸಂಗ್ರಹ ಕ್ಷೀಣಿಸುತ್ತಾ ಬಂತು. ಆಗ ನಾನು ತಪಸ್ಸು ಮಾಡಿದೆ. ನನ್ನ ತಪಸ್ಸನ್ನು ಮೆಚ್ಚಿದ ದೇವತೆಗಳು ಅವರ ಸೈನ್ಯವನ್ನು ನನಗೆ ಕೊಟ್ಟರು. ಸೈನ್ಯದ ಸಹಾಯದಿಂದ ನಾನು ರಾಜರನ್ನು ಓಡಿಸಿದೆ. ಒಂದುವೇಳೆ ರಾಮನು ಶಿವ ಧನಸ್ಸಿಗೆ ಹೆದೆಯೇರಿಸಿದರೆ ನಾನು ನನ್ನ ಮಗಳು ಸೀತೆಯನ್ನು ಕೊಟ್ಟು ಕನ್ಯಾದಾನ ಮಾಡುತ್ತೇನೆ."

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ