೧೯. ಮಿಥಿಲೆಗೆ ದಶರಥನ ಆಗಮನ

“ಶಿವಧನಸ್ಸನ್ನು ಒಮ್ಮೆ ತರಿಸಿದರೆ ನಮ್ಮ ಮಕ್ಕಳು ಅದನ್ನು ನೋಡುತ್ತಾರೆ”, ಎಂದು ವಿಶ್ವಾಮಿತ್ರರು ಜನಕ ಮಹಾರಾಜನನ್ನು ಕೇಳಿದರು. ಜನಕ ಮಹಾರಾಜ ಅವರ ಕೋರಿಕೆಗೆ ಒಪ್ಪಿದ. ಆಗ ಚಕ್ರಗಳಿದ್ದ, ಶಿವಧನಸ್ಸಿದ್ದ ಮಂಜೂಷವನ್ನು ಅರಮನೆಯ ಸೇವಕರು ಎಳೆತಂದರು.
ಜನಕ ಮಹಾರಾಜ, "ಒಬ್ಬ ಮನುಷ್ಯನು, ಅದೂ ಇನ್ನೂ ಎಳೆವಯಸ್ಸಿನವನು, ಧನಸ್ಸನ್ನು ಮೇಲೆತ್ತಿ, ಅದಕ್ಕೆ ಹಗ್ಗ ಬಿಗಿಯುವುದು ಸಾಧ್ಯವೇ? ನೀವು ಕೇಳಿದಿರೆಂದು ತರಿಸಿದ್ದೇನೆ" ಎಂದು ವಿಶ್ವಾಮಿತ್ರರ ಬಳಿ ಸಂಶಯವ್ಯಕ್ತ ಪಡಿಸಿದ.

ವಿಶ್ವಾಮಿತ್ರರು ರಾಮನಿಗೆ ಧನಸ್ಸನ್ನು ಒಮ್ಮೆ ನೋಡಲು ಸೂಚಿಸಿದರು. ರಾಮ ಮಂಜೂಷವನ್ನು ತೆಗೆದು ನೋಡಿದಾಗ, ಶಿವ ಧನಸ್ಸು ಮಲಗಿದ ಹಾವಿನಂತೆ ಕಾಣಿಸಿತು. ಅದನ್ನು ಮುಟ್ಟಿ, ಮೇಲೆತ್ತಿ ವಿಶ್ವಾಮಿತ್ರರ ಅಪ್ಪಣೆಯನ್ನು ಕೇಳಿದ. ವಿಶ್ವಾಮಿತ್ರರು ಅನುಮತಿಸಿ, ಹಾಗೆಯೇ ಧನಸ್ಸನ್ನು ಎತ್ತಿ, ಹೆದೆಯೇರಿಸಲು ಸೂಚಿಸಿದರು.

ಆರೋಪಯತ್ ಧರ್ಮಾತ್ಮಾ ಲೀಲಂ ಇವ ತತ್ ಧನುಃ |
ಆರೋಪಯತ್ವಾಂ ಮೌರ್ವಿಂ ಪೋರಯಾಮಾಸ ವೀಯವಾನ್ |
ತತ್ ಬಭಂಜ ಧನು್ ಮಧ್ಯೇ ನರಶ್ರೇಷ್ಠೋ ಮಹಾಯಶಾಃ ||
ರಾಮ ಧನಸ್ಸನ್ನು ಕೊಂಚವೂ ಕಷ್ಟಪಡದೆ ಸರಾಗವಾಗಿ ಎತ್ತಿ, ಅದಕ್ಕೆ ಹಗ್ಗ ಬಿಗಿಯಲು ಯತ್ನಿಸಿದಾಗ, ಅವನ ಸೆಳತಕ್ಕೆ ನಿಧಾನವಾಗಿ ಬಗ್ಗಿದ ಧನಸ್ಸು, ಕೊನೆಗೆ ಭಾರಿ ಶಬ್ದ ಮಾಡಿ ಮುರಿದು ಬಿತ್ತು. ರಾಮ ಬಿಲ್ಲನ್ನು ಮುರಿದ ಗುಡುಗಿನಂಥ ಶಬ್ದಕ್ಕೆ, ವಿಶ್ವಾಮಿತ್ರರು, ರಾಮ-ಲಕ್ಷ್ಮಣ, ಜನಕ ಮಹಾರಾಜರನ್ನು ಹೊರತುಪಡಿಸಿ, ಮಿಕ್ಕೆಲ್ಲರೂ ಮೂರ್ಛೆಹೋದರು.

ಭಗವಾನ್ ದೃಷ್ಟ ವೀರ್ಯ ಮೇ ರಾಮ ದಶರಥ ಆತ್ಮಜಃ |
ಅತಿ ಅದ್ಭುತಂ ಅಚಿಂತ್ಯಂ ಅತರ್ಕಿತಂ ಇದಂ ಮಯಾ ||
ಆಗ ಜನಕ ಮಹಾರಾಜ, "ಮಹಾನುಭಾವ ವಿಶ್ವಾಮಿತ್ರಾ! ನಿಮಗೆಲ್ಲಾ ತಿಳಿದೇ ಮಕ್ಕಳನ್ನು ಇಲಿಗೆ ಕರೆತಂದಿದ್ದೀರ.  ಇಲ್ಲಿ ನಡೆದಿರುವುದು ಅದ್ಭುತ. ಇದು ಯಾರೂ ಊಹಿಸಲಾರದ, ತರ್ಕಿಸಲಾಗದ ಘಟನೆ. ಸೀತೆ ನಮ್ಮ ವಂಶದಲ್ಲಿ ಜನಿಸಿ ತಕ್ಕ ಪತಿಯನ್ನು ಪಡೆದು ನಮ್ಮ ವಂಶದ ಕೀರ್ತಿ ಬೆಳಗಿದ್ದಾಳೆ ಎಂದು ಸಂತೋಷಿಸುತ್ತೇನೆ” ಎಂದ.

ರಾಮ ಧನುರ್ಭಂಗ ಮಾಡಿ ಸೀತೆಯನ್ನು ಗೆದ್ದ ವಿಷಯವನ್ನು ಕೆಲವು ರಾಯಭಾರಿಗಳೊಂದಿಗೆ ದಶರಥ ಮಹಾರಾಜನಿಗೆ ಹೇಳಿ ಕಳುಹಿಸಲು ವಿಶ್ವಾಮಿತ್ರರು ಜನಕ ಮಹರಾಜನಿಗೆ ಸೂಚಿಸಿದರು. ತಕ್ಷಣವೇ ಜನಕ ಮಹಾರಾಜ ತನ್ನ ಪರಿವಾರವನ್ನು ಅಯೋಧ್ಯೆಗೆ ಕಳುಹಿಸದ. ಮೂರು ದಿನಗಳ ಪ್ರಯಾಣದ ನಂತರ ಅವರು ಅಲ್ಲಿಗೆ ಸೇರಿದರು.

ಅಯೋಧ್ಯೆಗೆ ಹೋದ ಮೇಲೆ ರಾಯಭಾರಿಗಳು ತಾವು ಜನಕ ರಾಜನ ಕಡೆಯವರು ಎಂದು ಪರಿಚಯಿಸಿಕೊಂಡರು. ನಂತರ, "ನಿಮ್ಮ ಹಿರಿಯ ಪುತ್ರನಾದ ರಾಮ ವಿಶ್ವಾಮಿತ್ರರೊಂದಿಗೆ ಮಿಥಲಾ ನಗರಕ್ಕೆ ಬಂದು, ಜನಕ ಮಹಾರಾಜರ ಬಳಿ ಇದ್ದ ಶಿವಧನಸ್ಸನ್ನು ಎತ್ತಿದ್ದಲ್ಲದೆ, ಧನುರ್ಭಂಗ ಮಾಡಿದ್ದಾನೆ. ಅದಕ್ಕಾಗಿ ಮಹಾರಾಜರು ತಮ್ಮ ಮಗಳಾದ ಸೀತಮ್ಮನನ್ನು ನಿಮ್ಮ ಪುತ್ರ ರಾಮನಿಗೆ ಕೊಟ್ಟು ವಿವಾಹ ಮಾಡಬೇಕೆಂದು ಯೋಚಿಸಿದ್ದಾನೆ. ನೀವೂ ಸಮ್ಮತಿಸಿದರೆ, ನಿಮ್ಮ ಕುಮಾರರನ್ನು ನೋಡಲು ನಮ್ಮ ಮಿಥಿಲಾ ನಗರಕ್ಕೆ ಆಗಮಿಸಬೇಕೆಂದು ಜನಕರಾಜರು ಅಹ್ವಾನಿಸಿದ್ದಾರೆ" ಎಂದು ಬಿನ್ನವಿಸಿದರು.

ದಶರಥ ಮಹಾರಾಜ ತನ್ನ ಗುರು, ಪುರೋಹಿತರ ಸಮಾವೇಶ ಕರೆದು, ಜನಕ ಮಹಾರಾಜನ ಬಗ್ಗೆ ವಿಚಾರಿಸಿದ.
ಅವರೆಲ್ಲರೂ, "ಮಹಾನುಭಾವ ದಶರಥ! ವಿದೇಹ ವಂಶದಲ್ಲಿ ಹುಟ್ಟಿದ ಜನಕನು ಅಸಮಾನ್ಯನು. ಶರೀರದ ಮೇಲೆ ವ್ಯಾಮೋಹವಿಲ್ಲದವನು. ಭಗವಂತನನ್ನು ನಂಬಿದವನು. ಖಚಿತವಾಗಿ ನಾವು ಸಂಬಂಧವನ್ನು ಬೆಳೆಸಬಹುದು" ಎಂದು ಒಕ್ಕೊರಲಿನಿಂದ ಹೇಳಿದರು.

ತಕ್ಷಣವೇ ದಶರಥ ಒಂದು ಕ್ಷಣವೂ ವೃಥಾ ಮಾಡದೆ ಮರುದಿನವೇ ಮಿಥಿಲಾ ನಗರಕ್ಕೆ ಹೊರಡಲು ಸಿದ್ಧನಾದ. ಕೋಶಧಿಕಾರಿಗಳನ್ನು ಕರೆದು, ರತ್ನಗಳು, ವಜ್ರಗಳು ಮತ್ತು ಬೇಕಾದ ಧನವನ್ನು ಮೂಟೆಗಳಲ್ಲಿ ತುಂಬಿಸಿಕೊಂಡು ಮುಂಚೆಯೇ ಹೊರಡಲು ಸೂಚಿಸಿ, ರಥ, ಚತುರಂಗ ಬಲವನ್ನು ಸಿದ್ಧ ಪಡಿಸಲು ಹೇಳಿದ. ಮಂತ್ರಿ ಮತ್ತು ಪುರೋಹಿತ ವರ್ಗದವರನ್ನು ತನ್ನೊಂದಿಗೆ ಹೊರಡಲು ತಿಳಿಸಿದ. ಇಕ್ಷ್ವಾಕು ವಂಶದ ಆಚಾರದ ಪ್ರಕಾರ ತನ್ನ ಮೂರು ಪಟ್ಟದ ರಾಣಿಯರು ದಶರಥನೊಂದಿಗೆ ಹೊರಡಲಿಲ್ಲ.

ದಶರಥ ಮಹಾರಾಜನು ತನ್ನ ಪರಿವಾರ ಸಮೇತ ಮಿಥಿಲಾನಗರವನ್ನು ಸೇರಿದಾಗ, ಜನಕ ಮಹಾರಾಜ ಅವರನ್ನು ಆದರದಿಂದ ಬರಮಾಡಿಕೊಂಡು, “ನಿಮ್ಮ ಆಗಮನದಿಂದ ನಮ್ಮ ರಾಜ್ಯ ಪವಿತ್ರವಾಯಿತು. ಶಿವ ಧನಸ್ಸನ್ನು ಎತ್ತಿದವರಿಗೆ, ನನ್ನ ಮಗಳಾದ ಸೀತೆಯನ್ನು ವೀರ್ಯ ಶುಲ್ಕವಾಗಿ ಪ್ರಕಟಿಸಿದ್ದೆ. ನಿಮ್ಮ ಮಗನಾದ ರಾಮ ಶಿವಧನುರ್ಭಂಗ ಮಾಡಿದ್ದಾನೆ. ಹಾಗಾಗಿ ನನ್ನ ಮಗಳನ್ನು ನಿಮ್ಮ ಮಗನಿಗೆ ಕೊಟ್ಟು ವಿವಾಹ ಮಾಡಬೇಂದಿದ್ದೇನೆ, ತಾವು ದಯಮಾಡಿ ಅನುಗ್ರಹಿಸಿ ನನ್ನ ಮಗಳನ್ನು ನಿಮ್ಮ ಸೊಸೆಯಗಿ ಸ್ವೀಕರಿಸಬೇಕುಎಂದು ಕೇಳಿದ.
ದಶರಥ,
“ಪ್ರತಿಗ್ರಹೋ ದಾತೃ ವಶಃ ಶ್ರುತಂ ಏತತ್ ಮಯಾ ಪುರಾ |
ಯಥಾ ವಕ್ಷ್ಯಸಿ ಧರ್ಮಜ್ಞ ತತ್ ಕರಿಷ್ಯಾಮಹೇ ವಯಂ ||
ಅಯ್ಯಾ! ಜನಕ, ಕೊಡುವವರಿದ್ದರಲ್ಲವೇ ಸ್ವೀಕರಿಸುವುದು. ನಿನ್ನ ಸೊಸೆಯಾಗಿ ಸ್ವೀಕರಿಸು ಎಂದು ನೀನು ಯಾಚಿಸುವ ಅಗತ್ಯವಿಲ್ಲ. ನಿನ್ನ ಕುಮಾರಿಯನ್ನು ನನ್ನ ಸೊಸೆಯಾಗಿ ಕಳಿಸುತ್ತಿರುವುದು ನಿನ್ನ ಔದಾರ್ಯ, ನೀನು ದಾತ, ತೆಗೆದುಕೊಳ್ಳುತ್ತಿರುವವನು ನಾನು" ಎಂದ.

ಅವರು ಪ್ರಯಾಸದಿಂದ ಬಳಲಿದ್ದರಿಂದ ಮರುದಿನ ಮಾತು ಮುಂದುವರೆಸಲು ನಿರ್ಧರಿಸಿದರು.

ದಶರಥನೊಂದಿಗೆ ಬಂದಿದ್ದ ಭರತ-ಶತೃಘ್ನರು, ರಾಮ-ಲಕ್ಷ್ಮಣರನ್ನು ಭೇಟಿ ಮಾಡಿದರು. ಇಷ್ಟು ದಿನ ವಿಶ್ವಾಮಿತ್ರರೊಂದಿಗೆ ಸಾಗಿದ ಪ್ರಯಾಣದ ಅನುಭವಗಳನ್ನು ಅವರು ನಾಲ್ವರೂ ಸಂತೋಷದಿಂದ ಹಂಚಿಕೊಂಡರು. ದಶರಥನೊಂದಿಗೆ ಬಂದಿದ್ದ ವಸಿಷ್ಠರು, ಕತ್ಯಾಯನ, ಜಬಾಲಿ, ಮರ್ಾಕಂಡೇಯ, ಕಾಶ್ಯಪ, ವಾಮನ ಮುಂತಾದವರು, ವಿಶ್ವಾಮಿತ್ರ, ಶತಾನಂದ ಮತ್ತಿತರ ಮಹರ್ಷಿಗಳೊಡನೆ ಚರ್ಚಿಸಿದರು. ರಾತ್ರಿ ಮಿಥಿಲಾನಗರವು ಅವರೆಲ್ಲರಿಂದ ಪ್ರಕಾಶಿಸುತ್ತಿತ್ತು.


Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ