೨೦. ಸೀತಾಕಲ್ಯಾಣ
ಮರುದಿನ ಬೆಳಿಗ್ಗೆ ದಶರಥ ಮಹಾರಾಜ, ವಿಶ್ವಾಮಿತ್ರರ ಅನುಮತಿ ಪಡೆದು, ಅಲ್ಲಿದ್ದ, ತನಗೆ ಎಷ್ಟೋ ಕಾಲದಿಂದ ಪುರೋಹಿತರಾದ, ತನ್ನ ವಂಶಾಭಿವೃದ್ಧಿಯನ್ನೇ ಬಯಸುವ ವಸಿಷ್ಠರಿಗೆ ತನ್ನ ವಂಶದ ಬಗ್ಗೆ ವಿವರಿಸುವಂತೆ ಕೇಳಿದ.
"ಮೊದಲು ಬ್ರಹ್ಮದೇವರು ಹುಟ್ಟಿದರು. ಆ ಬ್ರಹ್ಮನಿಂದ ಮರೀಚಿ, ಮರೀಚಿಗೆ ಕಾಶ್ಯಪ, ಕಾಶ್ಯಪನಿಗೆ ಸೂರ್ಯ, ಸೂರ್ಯನಿಗೆ ಮನು, ಮನುವಿಗೆ ಇಕ್ಷ್ವಾಕು, ಇಕ್ಷ್ವಾಕುವಿಗೆ ಕುಕ್ಷಿ, ಕುಕ್ಷಿಗೆ ವಿಕುಕ್ಷಿ, ವಿಕುಕ್ಷಿಗೆ ಬಾಣ, ಬಾಣನಿಗೆ ಅನರಣ್ಯ, ಅನರಣ್ಯನಿಗೆ ಪೃಥುವ, ಪೃಥುವಿಗೆ ತ್ರಿಶಂಕು, ತ್ರಿಶಂಕುವಿಗೆ ದುಂಧುಮಾರ, ದುಂಧುಮಾರನಿಗೆ ಮಾಂಧಾತ, ಮಾಂಧಾತನಿಗೆ ಸುಸಂಧಿ, ಸುಸಂಧಿಗೆ ಧ್ರುವಸಂಧಿ ಮತ್ತು ಪ್ರಸೇನಜಿತ್ ಎಂಬ ಇಬ್ಬರು ಮಕ್ಕಳು, ಹಿರಿಯನಾದ ಧ್ರುವಸಂಧಿಗೆ ಭರತ, ಭರತನಿಗೆ ಅಸಿತ, ಈ ಅಸಿತನವರೆಗೂ ರಾಜ್ಯಭಾರ ಮಾಡುತ್ತಾರೆ. ಅಸಿತ ಹೈಹೆಯ, ತಾಲಜಂಘ, ಶಶಬಿಂದ್ವ ಎಂಬ ವಂಶಗಳ ವಿರುದ್ಧ ಯುದ್ಧದಲ್ಲಿ ಸೋತು ತನ್ನ ಇಬ್ಬರು ಪತ್ನಿಯ ಜೊತೆ ಹಿಮಾಲಯಕ್ಕೆ ಹೋಗುತ್ತಾನೆ. ಅಷ್ಟರಲ್ಲೇ ಹಿರಿಯ ಪತ್ನಿ ಗರ್ಭವತಿಯಾಗುತ್ತಾಳೆ. ಕಿರಿಯಳಿಗೆ ಸಂತಾನ ಪ್ರಾಪ್ತವಾಗುವುದಿಲ್ಲ. ಅಸೂಯೆಯಿಂದ ಕಿರಿಯಳು ಹಿರಿಯಳಿಗೆ ವಿಷ ಪ್ರಯೋಗ ಮಾಡುತ್ತಾಳೆ. ಈ ವಿಷಯವನ್ನು ಆಗ ಅಲ್ಲಿಗೆ ಬಂದ ಚ್ಯವನ ಮಹರ್ಷಿ ತಿಳಿಸುತ್ತಾರೆ. ವಿಷಪ್ರಯೋಗವಾದರೂ ಸಾಯದೆ ಆ ವಿಷದಿಂದಲೇ ಹುಟ್ಟಿದವನಾದರಿಂದ ಅವನನ್ನು ಸಗರ (ಗರ - ವಿಷ) ಎಂದು ಕರೆದರು. ಆ ಸಗರನ ಇಬ್ಬರು ಪತ್ನಿಯರಲ್ಲಿ ಒಬ್ಬಳ ೬೦ ಸಾವಿರ ಮಕ್ಕಳನ್ನು ಕಪಿಲ ಮಹರ್ಷಿ ಭಸ್ಮ ಮಾಡಿದರು. ಮತ್ತೊಬ್ಬ ಪತ್ನಿಯ ಮಗನೇ ಅಸಮಂಜ, ಅಸಮಂಜನಿಗೆ ಅಂಶುಮಂತ, ಅಂಶುಮಂತನಿಗೆ ದಿಲೀಪ, ದಿಲೀಪನಿಗೆ ಭಗೀರಥ, ಭಗೀರಥನಿಗೆ ಕಾಕುತ್ಸ್ಯ, ಕಾಕುತ್ಸನಿಗೆ ರಘು, ರಘುವಿಗೆ ಪ್ರವೃದ್ಧ (ಒಂದು ಬಾರಿ ಈ ಪ್ರವೃದ್ಧ ಧರ್ಮ ಬಿಟ್ಟು ನಡೆದುಕೊಂಡಾಗ ವಸಿಷ್ಠರು ಶಪಿಸುತ್ತಾರೆ. ಅವನು ತಿರುಗಿ ವಸಿಷ್ಠರನ್ನು ಶಪಿಸಲು ಮುಂದಾದಾಗ ಅವನ ಪತ್ನಿ ಅಡ್ಡಬಂದು ಕುಲಗುರುವನ್ನು ಶಪಿಸಬಾರದೆಂದು ಕೇಳಿಕೊಳ್ಳುತ್ತಾಳೆ. ಅಷ್ಟರಲ್ಲೇ ಕಮಂಡಲದ ನೀರನ್ನು ತೆಗೆದುಕೊಂಡಿದ್ದ ಅವನು ಆ ನೀರನ್ನು ತನ್ನ ಕಾಲ ಮೇಲೇ ಹಾಕಿಕೊಳ್ಳುತ್ತಾನೆ. ಆದ್ದರಿಂದ ಅವನಿಗೆ ಕಲ್ಮಷಪಾದನೆಂದು ಹೆಸರು), ಪ್ರವೃದ್ಧನಿಗೆ ಶಂಖಣ, ಶಂಖಣನಿಗೆ ಸುದರ್ಶನ, ಸುದರ್ಶನನಿಗೆ ಅಗ್ನಿವರ್ಣ, ಅಗ್ನಿವರ್ಣನಿಗೆ ಶೀಘ್ರ, ಶೀಘ್ರನಿಗೆ ಮರು, ಮರುವಿಗೆ ಪ್ರಶುಶೃಕ, ಪ್ರಶುಶೃಕನಿಗೆ ಅಂಬರೀಶ, ಅಂಬರೀಷನಿಗೆ ನಹುಷ, ನಹುಷನಿಗೆ ಯಯಾತಿ, ಯಯಾತಿಗೆ ನಾಭಾಗ, ನಾಭಾಗನಿಗೆ ಅಜ, ಅಜನಿಗೆ ದಶರಥ, ದಶರಥನಿಗೆ ರಾಮ, ಲಕ್ಷ್ಮಣ, ಭರತ ಶತೃಜ್ಞರು. ಇದು ದಶರಥನ ವಂಶ. ಈ ವಂಶದಲ್ಲಿನ ರಾಜರು ಎಷ್ಟೋ ವರ್ಷಗಳ ಕಾಲ ರಾಜ್ಯಭಾರ ಮಾಡಿ, ಯಾಗಗಳನ್ನು ಮಾಡಿ ಸ್ವರ್ಗಸ್ಥರಾಗಿದ್ದಾರೆ."
ಇದನ್ನು ಕೇಳಿದ ಜನಕ ಮಹಾರಾಜ ಸಂತೋಷಪಟ್ಟು ತನ್ನ ವಂಶವೃಕ್ಷವನ್ನು ಕುರಿತು ಹೇಳಿದ:
“ನನ್ನ ವಂಶದ ಮೂಲಪುರುಷ ನಿಮಿ ಚಕ್ರವರ್ತಿ. ನಿಮಿಗೆ ಮಿಥಿ (ಇವನು ನಿರ್ಮಿಸಿದ ನಗರವೇ ಮಿಥಿಲಾ ನಗರ), ಮಿಥಿಗೆ ಉದಾವಸು, ಉದಾವಸುವಿಗೆ ನಂದಿವರ್ಣ, ನಂದಿವರ್ಣನಿಗೆ ಸುಕೇತು, ಸುಕೇತುವಿಗೆ ದೇವರಾತ, ದೇವರಾತನಿಗೆ ಬೃಹದ್ರಥ, ಬೃಹದ್ರಥನಿಗೆ ಶೂರ, ಮಹಾವೀರ ಎಂಬ ಇಬ್ಬರು ಮಕ್ಕಳು, ಮಹಾವೀರನಿಗೆ ಸುಧೃತಿ, ಸುಧೃತಿಗೆ ಧೃಷ್ಟಕೇತು, ಧೃಷ್ಟಕೇತುವಿಗೆ ಹರ್ಯಶ್ವ, ಹರ್ಯಶ್ವನಿಗೆ ಮರು, ಮರುವಿಗೆ ಪ್ರತೀಂಧಕ, ಪ್ರತೀಂಧಕನಿಗೆ ಕೀರ್ತಿರಥ, ಕೀರ್ತಿರಥನಿಗೆ ದೇವಮೀಢ, ದೇವಮೀಢನಿಗೆ ವಿಬುಧ, ವಿಬುಧನಿಗೆ ಮಹೀಧ್ರಕ, ಮಹೀಧ್ರಕನಿಗೆ ಕೀರ್ತಿರಾತ, ಕೀರ್ತಿರಾತನಿಗೆ ಮಹಾರೋಮ, ಮಹಾರೋಮನಿಗೆ ಸ್ವರ್ಣರೋಮ, ಸ್ವರ್ಣರೋಮನಿಗೆ ಹ್ರಸ್ವರೋಮ, ಹ್ರಸ್ವರೋಮನಿಗೆ ಜನಕ ಮತ್ತು ಕುಶಧ್ವಜ, ಜನಕನಿಗೆ ಅಯೋನಿಜೆ ಸೀತೆ ಸಿಕ್ಕಳು ಮತ್ತು ಊರ್ಮಿಳೆ ಹುಟ್ಟಿದಳು.”
ಸಾಂಕಾಶ್ಯವೆಂಬ ನಗರವನ್ನು ಆಳುತ್ತಿದ್ದ ತನ್ನ ತಮ್ಮನಾದ ಕುಶಧ್ವಜನನ್ನು ಕರೆತರಲು ಜನಕ ಆದೇಶಿಸಿ, ಅವನು ಬಂದ ಮೇಲೆ ದಶರಥನನ್ನು ಕುರಿತು,
“ವೀರ್ಯ ಶುಲ್ಕಾಂ ಮಮ ಸುತಾಂ ಸೀತಾಂ ಸುರ ಸುತ ಉಪಮಾಂ
ದ್ವತೀಯಾಂ ಉರ್ಮಿಲಾಂ ಚೈವ ತ್ರಿಃ ವದಾಮಿ ನ ಸಂಶಯಃ
ನನ್ನ ಇಬ್ಬರು ಕುಮಾರಿಯರಾದ ಸೀತ, ಊರ್ಮಿಳೆಯರನ್ನು ನಿನ್ನ ಮಕ್ಕಳಾದ ರಾಮ-ಲಕ್ಷ್ಮಣರಿಗೆ ಕೊಟ್ಟು ವಿವಾಹ ಮಾಡಬೇಕೆಂದುಕೊಂಡಿದ್ದೇನೆ. ಅಂತೆಯೇ ನನ್ನ ತಮ್ಮನ ಮಕ್ಕಳಾದ ಶೃತಕೀರ್ತಿಯನ್ನು ಶತೃಘ್ನನಿಗೆ, ಮಾಂಡವಿಯನ್ನು ಭರತನಿಗೆ ಕೊಡಬೇಕೆಂದುಕೊಂಡಿದ್ದೆನೆ” ಎಂದ. ದಶರಥನಿಗೂ ಸಂತೋಷವಾಗಿ ಜನಕನ ವಿನಂತಿಯನ್ನು ಒಪ್ಪಿಕೊಂಡ. ನಂತರ ಜನಕ ಮಹಾರಾಜ ದಶರಥನಿಗೆ ಅವನ ಕುಮಾರರ ಜೊತೆ ಗೋದಾನ, ಪಿತೃಕಾರ್ಯಗಳನ್ನು ಮಾಡಲು ಹೇಳಿದ.
ಎರೆಡು ದಿನಗಳ ನಂತರ ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಭಗನು ಅಧಿಷ್ಠಾನ ದೇವತೆಯಾಗಿದ್ದಾಗ ವಿವಾಹ ಮಹೋತ್ಸವವನ್ನು ನೆರವೇರಿಸಲು ಋಷಿಗಳು ನಿರ್ಧರಿಸಿದರು. ದಶರಥ ಮಹಾರಾಜ ಗೋದಾನ, ಪಿತೃಕಾರ್ಯಗಳನ್ನು ಮುಗಿಸಿ, ನಂತರ ಬಂಗಾರದ ಕೊಂಬುಗಳಿರುವ ನಾಲ್ಕು ಲಕ್ಷ ಗೋವುಗಳನ್ನು, ಒಬ್ಬೊಬ್ಬ ಮಗನಿಂದ ಒಂದೊಂದು ಲಕ್ಷ, ದಾನ ಮಾಡಿ, ಬ್ರಾಹ್ಮಣರಿಗೆ ಬಂಗಾರ, ಬೆಳ್ಳಿಗಳನ್ನು ದಾನ ಮಾಡಿದ. ವಸಿಷ್ಠ, ವಿಶ್ವಾಮಿತ್ರರನ್ನು ಕರೆದು ವಿವಾಹಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲು ಹೇಳಿದ.
ಮರುದಿನ ದಶರಥ ಮಹಾರಾಜ ಕನ್ಯಾದಾನವನ್ನು ಪಡೆಯಲು ಅರಮನೆಯ ಹೊರಗೆ ನಿಂತು ಜನಕನಿಗೆ ತಾನು ಬಂದ ಸಮಾಚಾರ ತಿಳಿಸಿದ. ‘ನಿಮ್ಮನ್ನು ಯಾವ ದ್ವಾರಪಾಲಕರೂ ಕೇಳುವುದಿಲ್ಲ, ಜನಕನ ಮನೆ ಬೇರೆಯಲ್ಲ, ದಶರಥನ ಮನೆ ಬೇರೆಯಲ್ಲ, ನೀವು ಕೇಳದೆಯೇ ಬರಬಹುದು’ ಎಂದು ಜನಕ ಮಹಾರಾಜ ಹೇಳಿ ಅವರನ್ನು ಒಳಗೆ ಬರಮಾಡಿಕೊಂಡ.
ಸೀತಾಕಲ್ಯಾಣಕ್ಕೆ ಅಗ್ನಿವೇದಿ ಸಿದ್ಧವಾಯಿತು. ಅಗ್ನಿಹೋತ್ರವನ್ನು ನಿಕ್ಷೇಪಿಸಿದರು. ಅಕ್ಷತೆ, ಗಂಧಗಳನ್ನು ಸಮರ್ಪಿಸಿದರು. ಜನಕ ಮಹಾರಾಜ ಅಗ್ನಿಹೋತ್ರದ ಬಳಿ ನಿಂತು, ರಾಮನೂ ಅಗ್ನಿಹೋತ್ರದ ಬಳಿ ಬಂದ ನಂತರ, ಸೀತೆಯನ್ನೂ ಕರೆದುಕೊಂಡು ಬಂದರು. ಜನಕನು ರಾಮನ ಕೈಯಲ್ಲಿ ಸೀತೆಯ ಕೈಯಿಟ್ಟು,
“ಇಯಂ ಸೀತಾ ಮಮ ಸುತಾ ಸಹ ಧರ್ಮ ಚರೀ ತವ
ಪ್ರತೀಚ್ಛ ಚ ಏನಾಂ ಭದ್ರಂ ತೇ ಪಾಣಿಂ ಗೃಹ್ಣೀಷ್ವ ಪಾಣಿನಾ
ಪತಿವ್ರತಾ ಮಹಾಭಾಗಾ ಛಾಯಾ ಇವ ಅನುಗತಾ ಸದಾ
ರಾಮಾ! ನಿನಗೆ ಸೀತೆ ಯಾರೋ ತಿಳಿಯದು, ಇಗೋ ಇವಳೇ ಸೀತೆ. ನನ್ನ ಮಗಳು. ಇವಳನ್ನು ನಾನು ನಿನಗೆ ಕಾಮ ಪತ್ನಿಯನ್ನಾಗಿ ಕೊಡುತ್ತಿಲ್ಲ. ಧರ್ಮದಲ್ಲಿ ಅನುರಕ್ತೆಯಾಗಲು ಕೊಡುತ್ತಿದ್ದೇನೆ, ಆದ್ದರಿಂದ ಧರ್ಮಪತ್ನಿಯನ್ನಾಗಿ ಸ್ವೀಕರಿಸು. ವಧುವಿನ ತಂದೆಯಾದ್ದರಿಂದ ಆನಂದದಲ್ಲಿ ಇಷ್ಟು ಮಾತುಗಳನ್ನು ಆಡಿದ್ದೇನೆ. ನನ್ನನು ಕ್ಷಮಿಸು. ನಿನ್ನ ಹಸ್ತದಿಂದ ನನ್ನ ಮಗಳ ಹಸ್ತವನ್ನು ಗಟ್ಟಿಯಾಗಿ ಹಿಡಿದುಕೊ (ಸೂರ್ಯವಂಶದಲ್ಲಿ ಕೈಯನ್ನು ಕೈಯಿಂದ ಹಿಡಿದುಕೊಂಡರೆ ಸುಮುಹೂರ್ತ. ನಾವು ಸುಮುಹೂರ್ತದಲ್ಲಿ ಜೀರಿಗೆ ಬೆಲ್ಲವನ್ನು ತಲೆಯ ಮೇಲೆ ಇಡುತ್ತೇವೆ), ಈ ಕ್ಷಣದಿಂದ ನನ್ನ ಮಗಳು ಏನು ಮಾಡಿದರೂ ಅವಳು ತನ್ನ ಪತಿಯೆಂದು ನಿನಗಾಗಿಯೇ ಮಾಡುತ್ತಾಳೆ. ರಾಮಾ! ನಮ್ಮದು ವಿದೇಹ ವಂಶ. ನಮಗೆ ದೇಹದ ಮೇಲೆ ಭ್ರಾಂತಿಯಿಲ್ಲ. ಆ ರೀತಿ ನನ್ನ ಮಗಳನ್ನು ಬೆಳಸಿದ್ದೇನೆ. ಒಂದು ವರ್ಷದ ನಂತರ ನನ್ನ ಮಗಳು ನಿನ್ನ ಜೊತೆ ತವರುಮನೆಗೆ ಬಂದಾಗ ನಾನು ಕಲಿಸಿದ ಸಂಪ್ರದಾಯ ಮರೆತುಹೋಗಿದ್ದರೆ, ಅದು ನಿನ್ನಿಂದಲೇ. ಏಕೆಂದರೆ ನಾನು ಕಲಿಸಿದ್ದನ್ನು ಪತಿ ಉದ್ಧರಿಸಬೇಕು. ಅದರಲ್ಲಿ ಏನಾದರೂ ಲೋಪವಾದರೆ ಅದು ನಿನ್ನದೇ ಆಗುತ್ತದೆ. ಇವಳು ನಿನ್ನನ್ನು ನೆರಳಿನ ರೀತಿಯಲ್ಲಿ ಅನುಸರಿಸುತ್ತಾಳೆ” ಎಂದ.
ಅದೇ ಮುಹೂರ್ತದಲ್ಲಿ, ಲಕ್ಷ್ಮಣನಿಗೆ ಊರ್ಮಿಳೆಯನ್ನೂ, ಭರತನಿಗೆ ಮಾಂಡವಿಯನ್ನೂ, ಶತೃಘ್ನನಿಗೆ ಶೃತಕೀರ್ತಿಯನ್ನೂ ಕೊಟ್ಟು ವಿವಾಹ ಮಾಡಿದರು. ವಿವಾಹ ನಡೆದ ಸಮಯದಲ್ಲಿ ದಿವ್ಯ ದುಂದುಭಿಗಳು ಮೊಳಗಿದವು, ದೇವತೆಗಳು ಸಂತೋಷದಿಂದ ಪುಷ್ಪವೃಷ್ಠಿ ಮಾಡಿದರು. ಅಂದು ನಡೆದ ಸೀತಾ-ರಾಮ ಕಲ್ಯಾಣದಿಂದ ಸಮಸ್ತ ಲೋಕಗಳೂ ಸಂತೋಷಿಸಿದವು.
Comments
Post a Comment