೨೧. ಪರಶುರಾಮ

ಮರುದಿನ ಬೆಳಗ್ಗೆ ವಿಶ್ವಾಮಿತ್ರರು ಎಲ್ಲರನ್ನೂ ಆಶಿರ್ವದಿಸಿ ಉತ್ತರ ದಿಕ್ಕಿಗೆ ಹೊರಟು ಹೋದರು.
ಜನಕ ಮಹಾರಾಜ ಆನೆ, ಕುದುರೆ, ವಸ್ತ್ರ, ಮುತ್ತು, ಹವಳ ಮೊದಲಾದ ದ್ರವ್ಯಗಳನ್ನು  ದಶರಥನಿಗೆ ಕಾಣಿಕೆಯಾಗಿ ಕೊಟ್ಟ. ದಶರಥ ತನ್ನ ಪರಿವಾರದೊಂದಿಗೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ.

ಹೋಗುವ ದಾರಿಯಲ್ಲಿ ಇದ್ದಕ್ಕಿದ್ದಂತೆ ಆಕಾಶದಲ್ಲಿ ಪಕ್ಷಿಗಳ ಭಯಂಕರವಾದ ಕೂಗು ಕೇಳಿಸಿತು. ಮಬ್ಬು ಮುಸುಕಿತು. ಮಂಗಳವಾದ ವೃಕ್ಷಗಳು ಕೆಳಗುರುಳಿದವು. ಆದರೆ ಮೃಗಗಳು ಮಾತ್ರ ಪ್ರದಕ್ಷಿಣೆಯಾಗಿ ತಿರುಗುತ್ತಿದ್ದವು. ಇದನ್ನು ಕಂಡ ದಶರಥನಿಗೆ ಭಯವಾಗಿ, ಅಲ್ಲಿನ ಶಕುನಗಳನ್ನು ಕುರಿತು ವಸಿಷ್ಠರನ್ನು ವಿಚಾರಿಸಿದ. ವಸಿಷ್ಠರು, "ಯಾವುದೋ ದೈವೀ ಸಂಬಂಧವಾದ ವಿಪತ್ತು ಬರಲಿದೆ, ಆದರೆ ಮೃಗಗಳು ಪ್ರದಕ್ಷಿಣೆಯಾಗಿ ತಿರುಗುತ್ತಿರುವುದರಿಂದ ನೀನು ವಿಪತ್ತಿನಿಂದ ಪಾರಾಗುತ್ತೀಯ" ಎಂದರು.

ಅಷ್ಟರಲ್ಲಿ ಪ್ರಳಯಕಾಲದ ರುದ್ರನಂತೆ, ವಿಷ್ಣು ಧನಸ್ಸನ್ನು ಹಿಡಿದು ಪರಶುರಾಮರು ಬಂದರು. ರಾಮನಿಗೆ, "ರಾಮ! ನೀನು ಶಿವಧನಸ್ಸನ್ನು ಮುರಿದೆ ಎಂದು ಕೇಳಿದೆ. ನಿನ್ನ ಬಗ್ಗೆ ಬಹಳಷ್ಟು ಕೇಳಿದ್ದೇನೆ. ನೀನು ಅಷ್ಟು ಶಕ್ತಿವಂತನೇ ಆದರೆ ವಿಷ್ಣು ಧನಸ್ಸನ್ನು ಹೂಡು" ಎಂದರು.

ಮಾತನ್ನು ಕೇಳಿದ ದಶರಥನು ಭಯಭೀತನಾಗಿ, ಪರುಶರಾಮರ ಬಳಿ ಓಡಿಬಂದು, "ಮಹಾನುಭಾವ! ಭೂಮಂಡಲದ ಮೇಲಿನ ಕ್ಷತ್ರಿಯರ ಮೇಲೆ ೨೧ ಬಾರಿ ದಂಡಯಾತ್ರೆ ಮಾಡಿ, ಕ್ಷತ್ರಿಯರನ್ನೆಲ್ಲಾ ಸಂಹರಿಸಿದ್ದೀಯ. ನೀನು ಹಿಮಾಲಯದಲ್ಲಿ ತಪಸ್ಸಿನಲ್ಲಿದ್ದೆ. ಬಹು ದಿನದನಂತರ ಹುಟ್ಟಿದ ನನ್ನ ಪ್ರೀತಿಯ ಪುತ್ರರಿವರು. ವಿವಾಹ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದೇವೆ. ನಮ್ಮನ್ನು ಕ್ಷಮಿಸು" ಎಂದು ಅಂಗಲಾಚಿದ. 

ಪರಶುರಾಮರು ಅವನ ಮಾತಿಗೆ ಬೆಲೆಕೊಡದೆ ವಿಷ್ಣುಧನಸ್ಸನ್ನು ಎತ್ತಿ ಬಾಣ ಹೂಡಲು ರಾಮನಿಗೆ ಸೂಚಿಸಿದರು.

ರಾಮ, ಪರಶುರಾಮ! ನೀನು ನನ್ನನ್ನು ಒಬ್ಬ ಅಯೋಗ್ಯನಂತೆ ಕಾಣುತ್ತಿದ್ದೀಯ, ಇದುವರೆಗೂ ತಂದೆ ಎದುರು ಮಾತನಡಬಾರದೆಂಬ ಸಂಸ್ಕಾರದಿಂದ ಸುಮ್ಮನಿದ್ದೆ, ನಾನು ಖಚಿತವಾಗಿಯೂ ವಿಷ್ಣು ಧನಸ್ಸನ್ನು ಎತ್ತಿ, ಬಾಣವನ್ನು ಹೂಡುತ್ತೇನೆ" ಎಂದು ಹೇಳಿ ವಿಷ್ಣು ಧನಸ್ಸನ್ನು ಸರಾಗವಾಗಿ ಎತ್ತಿ ಬಾಣ ಹೂಡಿದ. ನಂತರ,ನಾನು ನಿನ್ನ ಮೇಲೆ ಬಾಣಪ್ರಯೋಗ ಮಾಡಿ ಸಂಹರಿಸಬಲ್ಲೆ. ಆದರೆ ನೀನು ಬ್ರಾಹ್ಮಣ, ಅಲ್ಲದೇ ನನ್ನ ಗುರುವಾದ ವಿಶ್ವಾಮಿತ್ರರ ಸಂಬಂಧಿ. ಆದ್ದರಿಂದ ನಾನು ನಿನ್ನನ್ನು ಸಂಹರಿಸುವುದಿಲ್ಲ. ಆದರೆ ಒಮ್ಮೆ ಬಾಣವನ್ನು ಸಂಧಿಸಿದ ನಂತರ ಅದನ್ನು ಪ್ರಯೋಗಿಸಲೇ ಬೇಕು, ಆದ್ದರಿಂದ ನಿನ್ನ ಗಮನ ಶಕ್ತಿಯಮೇಲೆ ಪ್ರಯೋಗಿಸುತ್ತೇನೆ" ಎಂದ.
ಪರಶುರಾಮರು: "ರಾಮ! ನಾನು ಕ್ಷತ್ರಿಯರನ್ನು ಸೋಲಿಸಿ ಸಂಪಾದಿಸಿದ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದ್ದೇನೆ. ಕಶ್ಯಪ ನನ್ನನ್ನು ರಾತ್ರಿ ಹೊತ್ತು ಭೂ ಮಂಡಲದ ಮೇಲೆ ಇರಬೇಡವೆಂದು ತಾಕೀತು ಮಾಡಿದ್ದಾನೆ. ಈಗಾಗಲೇ ಕತ್ತಲಾಗುತ್ತಿದೆ, ನಾನು ತಕ್ಷಣವೇ ಮಹೇಂದ್ರ ಗಿರಿ ಪರ್ವತಕ್ಕೆ ಹೋಗಬೇಕು, ನೀನು ನನ್ನ ಗಮನ ಶಕ್ತಿಯನ್ನು ಪತನ ಮಾಡಿದರೆ ನಾನು ಹೋಗಲಾರೆ, ಮಾತಿಗೆ ತಪ್ಪಿದವನಾಗುತ್ತೇನೆ".
ಆದರೆ ನಿನ್ನ ತಪಃಶಕ್ತಿಯಿಂದ ಸಂಪಾದಿಸಿದ ತಪೋಲೋಕವನ್ನು ನಾಶ ಮಾಡುತ್ತೇನೆ”, ಎಂದು ಪರಶುರಾಮರು ಒಪ್ಪಿದ ನಂತರ ಅವರ ತಪಃ ಶಕ್ತಿಯನ್ನು ರಾಮ ನಾಶಗೊಳಿಸಿದ. 
ಪರಶುರಾಮರು ಹೊರಡುವಾಗ, "ರಾಮ ನೀನು ಯಾರು ಎಂದು ನನಗೆ ತಿಳಿದಿದೆ, ನೀನು ಮಹಾವಿಷ್ಣುವೇ! ಇನ್ನು ಭೂಲೋಕದಲ್ಲಿ ನನ್ನ ಅವಶ್ಯಕತೆ ಇಲ್ಲ" ಎಂದು ಹೇಳಿ ಮಹೇಂದ್ರ ಗಿರಿಯ ಕಡೆಗೆ ಹೋದರು.

ಎಲ್ಲರೂ ಸಂತೋಷದಿಂದ ಅಯೋಧ್ಯೆಗೆ ಹೋದರು. ಅಯೋಧ್ಯೆಯನ್ನು ತಲುಪಿದ ಮೇಲೆ, ಕೌಸಲ್ಯ, ಸುಮಿತ್ರ, ಕೈಕೆ ಅವರನ್ನು ಎದುರುಗೊಂಡು ಆರತಿ ಎತ್ತಿ, ತಮ್ಮ ಸೊಸೆಯರನ್ನು ನೋಡಿ ಹಿಗ್ಗಿದರು. ಎಲ್ಲರೂ ತಮ್ಮ ವಂಶದ ಕುಲದೇವತೆಗಳ ಗೃಹಕ್ಕೆ ಹೋಗಿ ಪೂಜೆಮಾಡಿದರು. 

ಸೀತಾರಾಮರು ಆನಂದದಿಂದ ಇರುವುದಕ್ಕೆ ಕಾರಣವನ್ನನು ವಾಲ್ಮೀಕಿ ಮಹರ್ಷಿಗಳು ಹೀಗೆ ವಿವರಿಸಿದ್ದಾರೆ:
ಪ್ರಿಯಾ ತು ಸೀತಾ ರಾಮಸ್ಯ ದಾರಾಃ ಪಿತೃ ಕೃತಾ ಇತಿ |
ಗುಣಾತ್ ರೂಪ ಗುಣಾತ್ ಅಪಿ ಪ್ರೀತಿಃ ಭೂಯಾ ಅಭಿವರ್ಧತೇ ||

ರೂಪ, ಗುಣ, ಸೌಂದರ್ಯಗಳಿಂದ ಶೋಭಿತಳಾಗಿ, ತನ್ನ ತಂದೆ ನಿರ್ಣಯಿಸಿದವಳು ಎಂದು ರಾಮನಿಗೆ ಸೀತೆಯೆಂದರೆ ತುಂಬಾ ಇಷ್ಟ. ಸೀತಾರಾಮರು ಒಬ್ಬೊರನ್ನೊಬ್ಬರು ಎಂದಿಗೂ ಏನನ್ನೂ ಬಾಯಿಬಿಟ್ಟು ಕೇಳಿಲ್ಲ. ಕೇವಲ ನೋಟದಿಂದಲೇ ಸಂಭಾಷಿಸುತ್ತಿದ್ದರು. ತನ್ನ ತಂದೆ ನಿರ್ಣಯಿಸಿದ ಪತ್ನಿ ಎಂದು ರಾಮ ಪ್ರೀತಿಸಿದರೆ, ಸೀತೆ ಮಾತ್ರ ಅವನು ತನ್ನ ಪತಿ ಎಂದೇ ಮನಸಾರೆ ಪ್ರೀತಿಸಿದಳು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ