೨೨. ಪಟ್ಟಾಭಿಷೇಕ ನಿರ್ಣಯ
ದಶರಥನ ಕುಮಾರರ ಮದುವೆಗೆ ಭರತನ ಸೋದರಮಾವನಾದ ಯಥಾಜಿತನೂ ಬಂದಿದ್ದ. ಭರತನನ್ನು ಕೆಲವು ದಿನಗಳ ಕಾಲ ತನ್ನ ಮನೆಗೆ ಕರೆದುಕೊಂಡು ಹೊಗಲು ಬಂದಿದ್ದ ಅವನು, ಅಷ್ಟು ಹೊತ್ತಿಗಾಗಲೇ ಭರತ ಮಿಥಿಲೆಗೆ ಹೊರಟ ಸುದ್ದಿ ತಿಳಿದು ತಾನೂ ಮಿಥಿಲೆಗೆ ಹೋಗಿದ್ದ. ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ವಿವಾಹವನ್ನು ನೋಡಿ ಅವರ ಜೊತೆಯಲ್ಲಿ ಅಯೋಧ್ಯೆಗೆ ಬಂದ. ಕೆಲವು ಕಾಲದ ನಂತರ ಅವನು ಭರತನನ್ನು, ಅವನ ಜೊತೆಯಲ್ಲಿಯೇ ಬಂದ ಶತ್ರುಘ್ನನನ್ನು, ತನ್ನ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಅವರು ಎಷ್ಟು ಸುಖಗಳನ್ನು ಅನುಭವಿಸಿದರೂ ಯಾವಾಗಲೂ ತನ್ನ ತಂದೆ ದಶರಥನನ್ನೇ ನೆನೆಸಿಕೊಳ್ಳುತ್ತಿದ್ದರು.
ನಾಲ್ಕು ಕೈಗಳಂತಿದ್ದ ತನ್ನ ನಾಲ್ಕು ಮಕ್ಕಳಲ್ಲಿ ದಶರಥನಿಗೆ ಎಲ್ಲ ಮಕ್ಕಳ ಮೇಲೂ ಸಮಾನವಾದ ಪ್ರೀತಿಯಿತ್ತು. ನಾಲ್ಕು ಮಕ್ಕಳನ್ನೂ ಸಮಾನವಾದ ದೃಷ್ಠಿಯಿಂದ ನೋಡುತ್ತಿದ್ದ. ಆದರೂ ಅವನಿಗೆ ರಾಮನೆಂದರೆ ಅಪ್ರತಿಮವಾದ ಪ್ರೀತಿ. ಕಾರಣ:
ತೇಷಾಮಪಿ ಮಹಾತೇಜಾ ರಾಮೋ ರತಿಕರಃ ಪಿತುಃ
ಸ್ವಯಂಭೂರಿವ ಭೂತಾನಾಂ ಬಭೂವ ಗುಣವತ್ತರಃ
ರಾಮನಿಗೆ ಇದ್ದ ಗುಣಗಳು. ರಾಮ ಯಾವಾಗಲೂ ಪ್ರಶಾಂತವಾಗಿ, ನಿರ್ಮಲವಾಗಿ ಇರುತ್ತಿದ್ದ, (ಪ್ರಾಣಿಗಳಲ್ಲಿ ಕೆಲವಕ್ಕೆ ಹುಟ್ಟಿನಿಂದ ಕಿವಿ ಕೇಳದಿರಬಹುದು, ಕಣ್ಣು ಕಾಣಿಸದಿರಬಹುದು, ಮಾತು ಬರದಿರಬಹುದು, ಕೈಕಾಲುಗಳು ಇಲ್ಲದಿರಬಹುದು, ಆದರೆ ಕೆಟ್ಟ ಮನಸ್ಸಿನಿಂದ ಯಾರೂ ಹುಟ್ಟುವುದಿಲ್ಲ. ನಮ್ಮ ಮನಸ್ಸುಗಳನ್ನು ನಾವು ಬದಲಾಯಿಸಿಕೊಳ್ಳಬಹುದು, ಹಾಗೆ ಬದಲಾಯಿಸಿಕೊಳ್ಳದಿದ್ದರೆ ಅದು ನಮ್ಮ ತಪ್ಪು. ಅನವಶ್ಯಕ ವಿಷಯಗಳ ಕುರಿತು ಆಲೋಚಿಸದಿದ್ದರೆ ಎಲ್ಲರೂ ಪ್ರಶಾಂತವಾಗಿರಬಹುದು), ಯಾವಾಗಲೂ ಮೃದುವಾಗಿ, ಮಧುರವಾಗಿ ಮಾತಾಡುತ್ತಿದ್ದ, ಬೇರೆಯವರು ಅಸಂಬದ್ಧವಾಗಿ, ಉದ್ರೇಕವಾಗಿ ಮಾತಾಡಿದರೆ ತಾನು ಮಾತ್ರ ಮೌನವಾಗಿಯೇ ಇರುತ್ತಿದ್ದ, ವಾದ ಮಾಡುತ್ತಿರಲಿಲ್ಲ. ತನಗೆ ನೂರು ಅಪಕಾರ ಮಾಡಿದ್ದರೂ, ಒಂದು ಬಾರಿ ಉಪಕಾರ ಮಾಡಿದ್ದರೆ ಅವನು ಮಾಡಿದ ಉಪಕಾರವನ್ನು ಮಾತ್ರ ನೆನಪಿಟ್ಟುಕೊಂಡು ಆನಂದಿಸುತ್ತಿದ್ದ (ಪರರಲ್ಲಿ ದೋಷ ಕಂಡುಹಿಡಿಯುತ್ತಿರಲಿಲ್ಲ). ರಾಮ ಬುದ್ಧಿವಂತ. ತಾನೇ ಮೊದಲು ಮಾತನಾಡಿಸುತ್ತಿದ್ದ, ಯಾರಾದರೂ ತಾವೇ ಮೊದಲು ಮಾತನಾಡಿಸಿದರೆ, ತಾನು ಮೊದಲು ಮಾತಾಡಿಸಲಿಲ್ಲವೆಂದು ವ್ಯಥಿಸುತ್ತಿದ್ದ. ಪರಾಕ್ರಮಿಗಳಲ್ಲಿ ಪರಾಕ್ರಮಿಯಾದರೂ ಅಹಂಕಾರವಿರಲಿಲ್ಲ. ತನಗಿಂತ ದೊಡ್ಡವರನ್ನು ಯಾವಾಗಲೂ ಗೌರವಿಸುತ್ತಿದ್ದ. ಯಾವುದೇ ಸಂದರ್ಭದಲ್ಲೂ ಧರ್ಮ ವಿರುದ್ಧವಾದ ಮಾತಾಡುತ್ತಿರಲಿಲ್ಲ. ಆಶ್ರೇಯಸ್ಕರವಾದ ಕೆಲಸ ಮಾಡುತ್ತಿರಲಿಲ್ಲ (ನಾವು ಏನಾದರೂ ಕೆಲಸ ಮಾಡುವ ಮೊದಲು, ನಮ್ಮ ಬುದ್ಧಿ ನಾವು ಮಾಡುತ್ತಿರುವ ಕೆಲಸ ಒಳ್ಳೆಯದೋ, ಕೆಟ್ಟದ್ದೋ ಎಂದು ಹೇಳುತ್ತದೆ. ಆದರೆ ನಮ್ಮ ಮನಸ್ಸು ಆ ಮಾತು ಕೇಳುವುದಿಲ್ಲ. ಅದು ಈ ಕೆಲಸ ಮಾಡು ಎಂದು ಹೇಳುವುದಿಲ್ಲ. ‘ಎಲ್ಲರೂ ಮಾಡುತ್ತಿದ್ದಾರೆ. ನಾನು ಸುಮ್ಮನೆ ಕೂತರೆ ಏತಕ್ಕೂ ಬರುವುದಿಲ್ಲ. ಇದೊಂದು ಬಾರಿ ಮಾಡಿದರೆ ಏನೂ ಆಗುವುದಿಲ್ಲ. ಈ ಕೆಲಸ ಮಾಡಿದ್ದು ನಾನು ಎಂದು ನಾನಾಗಿಯೇ ಹೇಳುವವರೆಗೂ ಯಾರಿಗೂ ತಿಳಿಯುವುದಿಲ್ಲ’, ಮುಂತಾಗಿ ಹಲವು ಬಗೆಯಾಗಿ ಚಿಂತಿಸಿ, ಇಂದ್ರಿಯಗಳಿಗೆ ಬಲಿಯಾಗಿ, ಅಶ್ರೇಯಸ್ಕರವಾದ ಕೆಲಸ ಮಾಡಿಸುತ್ತದೆ. ಆದರೆ ರಾಮ ಮನಸ್ಸಿಗೆ ಬಾಗದೆ ಅಶ್ರೇಯಸ್ಕರವಾದ ಕೆಲಸ ಮಾಡುತ್ತಿರಲಿಲ್ಲ).
ಧರ್ಮಕಾಮಾರ್ಥತತ್ವಜ್ಞಃ ಸ್ಮೃತಿವಾನ್ ಪ್ರತಿಭಾನವಾನ್
ಲೌಕಿಕೇ ಸಮಯಾಚಾರೇ ಕೃತಕಲ್ಪೋ ವಿಶಾರದಃ
ರಾಮನಿಗೆ ಗುರುಗಳು ಹೇಳಿದ ವಿಷಯಗಳನ್ನು ಅವಶ್ಯಕತೆಯಿದ್ದಾಗ ಸ್ಮರಿಸುವ ಸಹನೆಯಿತ್ತು. ಸಮಯಸ್ಪೂರ್ತಿಯಿಂದ ಮಾತಾಡುವ ಕಲೆಯಿತ್ತು. ಆಚಾರಗಳನ್ನು ದೊಡ್ಡವರು ಪಾಲಿಸುವ ರೀತಿಯಲ್ಲಿ ಪಾಲಿಸುತ್ತಿದ್ದ. ಪ್ರಾಜ್ಞರನ್ನು, ಸತ್ಪುರುಷರನ್ನು ಹೇಗೆ ರಕ್ಷಿಸಬೇಕೋ, ಯಾರನ್ನು ಎಲ್ಲಿರಿಸಬೇಕೋ, ಯಾರನ್ನು ಎಲ್ಲಿ ನೇಮಿಸಬೇಕೋ, ಹೇಗೆ ಅರ್ಚಿಸಬೇಕೋ, ಹೇಗೆ ವ್ಯಯಿಸಬೇಕೋ ತಿಳಿದವನಾಗಿದ್ದ. ಸಂಗಿತ, ಶಿಲ್ಪ, ನೃತ್ಯಗಳಲ್ಲಿ ಪರಿಣತಿ ಹೊಂದಿದ್ದ. ಹಿಡಿತಕ್ಕೆ ಸಿಕ್ಕದ ಕುದುರೆ, ಆನೆಗಳನ್ನು ಪಳಗಿಸಿ, ಅವುಗಳ ಮೇಲೆ ಸವಾರಿ ಮಾಡುವ ಶಕ್ತಿವುಳ್ಳವನಾಗಿದ್ದ. ಪ್ರಪಂಚದಲ್ಲಿ ಇದ್ದ ಕೆಲವೇ ಕೆಲವು ಅತಿರಥರಲ್ಲಿ ಶ್ರೇಷ್ಟನಾಗಿದ್ದ. ಎಲ್ಲ ಅಸ್ತ್ರ, ಶಸ್ತ್ರಗಳನ್ನು ತಿಳಿದಿದ್ದರೂ, ನಿಷ್ಕಾರಣವಾಗಿ ಬಾಣ ಪ್ರಯೋಗ ಮಾಡುತ್ತಿರಲಿಲ್ಲ.
ಒಂದು ದಿನ ದಶರಥ, ‘ನನಗೆ ಭೂಮಿಯ ಮೇಲೆ, ಅಂತರಿಕ್ಷದಲ್ಲಿ ಉಲ್ಕಾಪಾತ ಕಾಣಿಸುತಿದೆ, ನನಗೆ ವೃದ್ದಾಪ್ಯವು ಸಮೀಪಿಸಿದೆ, ಇನ್ನು ಬಹಳ ಕಾಲ ಬದುಕಲಾರೆ, ಹಾಗಾಗಿ ತನ್ನ ಪ್ರಿಯನಾದ, ಸಕಲಗುಣಾಭಿರಾಮನಿಗೆ ಯುವರಾಜ್ಯ ಪಟ್ಟಾಭಿಷೇಕ ಮಾಡಿದರೆ ಪ್ರಜೆಗಳು ಸಂತೋಷಿಸುತ್ತಾರೆ’, ಎಂದು ಯೋಚಿಸಿ, ತನ್ನ ಮಂತ್ರಿ ವರ್ಗದವರನ್ನು, ಇತರ ರಾಜರನ್ನು, ಪ್ರಭುತ್ವದ ಉದ್ಯೋಗಿಗಳನ್ನು, ಜಾನಪದರನ್ನು, ಅಯೋಧ್ಯಾ ಪಟ್ಟಣವಾಸಿಗರನ್ನು ಕರೆಸಿ ಸಮಾವೇಶದ ಏರ್ಪಾಟು ಮಾಡಿದ. ಆದರೆ ಅವಸರದ ನಿರ್ಣಯವಾದ್ದರಿಂದ, ಕೈಕೇಯ ರಾಜನಿಗೂ, ಜನಕ ರಾಜನಿಗೂ ಆಹ್ವಾನ ಕಳಿಸಲಿಲ್ಲ.
ಸಭೆ ಸೇರಿದ ಮೇಲೆ ದಶರಥ ಎಲ್ಲರನ್ನು ಕುರಿತು,
“ಇದಂ ಶರೀರಂ ಕೃತ್ಸ್ನಸ್ಯ ಲೋಕಸ್ಯ ಚರತಾ ಹಿತಂ |
ಪಾಣ್ದುರಸ್ಯಾತಪತ್ರಸ್ಯ ಛಾಯಾಯಾಂ ಜರಿತಂ ಮಯಾ ||
ಈ ಶ್ವೇತ ಛತ್ರದ ಕೆಳಗೆ ಎಷ್ಟೋ ಸಾವಿರ ಸಂವತ್ಸರದಿಂದ ಕುಳಿತಿದ್ದೇನೆ. ನನ್ನ ಶರೀರಕ್ಕೆ ವೃದ್ಧಾಪ್ಯ ಬಂದಿದೆ. ಈಗ ನನ್ನ ಶರೀರ ವಿಶ್ರಾಂತಿ ಕೋರುತ್ತಿದೆ, ಹಾಗಾಗಿ ಮೂರು ಲೋಕವನ್ನೂ ಶಾಸಿಸುವಂಥ ಶಕ್ತಿಯಿರುವ ನನ್ನ ಹಿರಿಯ ಪುತ್ರ ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕ ಮಾಡಬೇಕೆಂದಿದ್ದೇನೆ. ನನ್ನ ನಿರ್ಣಯ ಸರಿಯಿಲ್ಲದಿರಬಹುದು. ರಾಮ ನನ್ನ ಹಿರಿಯ ಪುತ್ರನೆಂಬ ಪಕ್ಷಪಾತ ಬುದ್ದಿಯಿಂದ ತೀರ್ಮಾನಿಸಿರಲೂಬಹುದು. ನಾನು ನ್ಯಾಯಾನ್ಯಾಯ ವಿಚಾರಣೆಯನ್ನು ಮಾಡದಿರಬಹುದು. ಈ ಸಿಂಹಾಸನವೇರುವವನು ಈ ರಾಜ್ಯವನ್ನು ಧರ್ಮಬದ್ಧವಾಗಿ ಪಾಲಿಸಬೇಕು, ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಣಬೇಕು, ರಾಮ ಪಟ್ಟಾಭಿಷೇಕಕ್ಕೆ ಅರ್ಹನೆಂದುಕೊಂಡಿದ್ದೇನೆ. ಆದರೂ ಅವನು ಎಂಥವನೆಂದು ನೀವು ವಿಚಾರಿಸಿ, ನಿಷ್ಪಕ್ಷಪಾತವಾಗಿ, ರಾಗದ್ವೇಷಗಳಿಲ್ಲದೆ ಆಲೋಚಿಸಿ ನಿರ್ಣಯಿಸಿ, ನೀವೆಲ್ಲರೂ ರಾಮನು ಪಟ್ಟಾಭಿಷೇಕಕ್ಕೆ ಅರ್ಹನೆಂದರೆ ಮಾತ್ರ ಪಟ್ಟಾಭಿಷೇಕವನ್ನು ಮಾಡುತ್ತೇನೆ, ನೀವೆಲ್ಲರೂ ಚೆನ್ನಾಗಿ ಆಲೋಚಿಸಿ, ನಿಮ್ಮ ನಿರ್ಣಯವನ್ನು ತಿಳಿಸಿ".
ದಶರಥನ ಮಾತನ್ನು ಕೇಳಿ ಅಲ್ಲಿದ್ದವರೆಲ್ಲ ಸಂತೋಷಗೊಂಡು ಒಕ್ಕೊರಲಿನಿಂದ, "ದಶರಥ ಮಹಾರಾಜ! ನೀವು ಹೇಳಿದ್ದನ್ನು ನಾವು ಅಂಗೀಕರಿಸುತ್ತೇವೆ. ತಕ್ಷಣವೇ ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕವನ್ನು ಮಾಡಿ. ರಾಮನು ಪಟ್ಟಭಿಷೇಕ ಮಾಡಿಸಿಕೊಂಡು ಆನೆಯೇರಿ ಶ್ವೇತ ಛತ್ರದ ಕೆಳಗೆ ಕುಳಿತು ರಾಜಮಾರ್ಗದಲ್ಲಿ ಮೆರವಣಿಗೆ ಬರುವುದನ್ನು ಯಾವಾಗ ಕಾಣುತ್ತೇವೆಂದು ನಮ್ಮ ಮನಸ್ಸುಗಳು ಕಾತರಿಸುತ್ತಿವೆ" ಎಂದು ಕೂಗಿದರು. ಆ ಕೂಗಿನಿಂದ ಅಂತಃಪುರದ ಪ್ರಾಕಾರ ಹಾರಿಹೋದಂತೆ ಭಾಸವಾಯಿತು.
ಈ ಮಾತನ್ನು ಕೇಳಿದ ದಶರಥನು ಸಂತೋಷಿಸಿ ಅವರನ್ನೆಲ್ಲಾ ಕೇಳುತ್ತಾನೆ:
"ಕೆಲವು ಸಾವಿರ ವರ್ಷಗಳಿಂದ ನಿಮ್ಮನ್ನೆಲ್ಲ ಹೆತ್ತ ಮಕ್ಕಳಂತೆ ನೋಡುತ್ತಾ, ಧರ್ಮವನ್ನು ತಪ್ಪದಂತೆ ಪರಿಪಾಲನೆ ಮಾಡಿದ್ದೇನೆ. ಈ ದಿನ ನಾನು ರಾಮನಿಗೆ ಯುವರಾಜ್ಯ ಪಟ್ಟಾಭಿಷೇಕದ ಪ್ರಸ್ತಾಪ ಮಾಡಿದಾಗ, ನಿಮ್ಮಲ್ಲಿ ಒಬ್ಬರು ಕೂಡ, ’ರಾಜ ನಿಮಗೀಗ ಬಂದಿರುವ ಲೋಪವಾದರೂ ಏನು ? ಕೆಲವು ಸಂವತ್ಸರಗಳಿಂದ ಧರ್ಮ ತಪ್ಪದೆ ಪರಿಪಾಲನೆ ಮಾಡಿ ನಮ್ಮನ್ನು ತಂದೆಯಂತೆ ಕಾಪಾಡಿದ್ದೀಯ’ ಎಂದು ಹೇಳಲಿಲ್ಲ. ನನ್ನ ಮಗನ ಪಟ್ಟಾಭಿಷೇಕವನ್ನು ನೋಡಬೇಕೆಂದಿರಿ. ನನ್ನ ಮಾತಿಗೆ ಕಟ್ಟುಬಿದ್ದಿರೋ, ಅಥವಾ ನನ್ನಲ್ಲಿ ಲೋಪಗಳು ಕಾಣಿಸಿದವೋ, ನನಗಿಂತ ದೊಡ್ಡ ಗುಣ ರಾಮನಲ್ಲಿ ಏನು ಕಂಡಿರಿ? ರಾಮನು ನಿಮಗೆ ಯುವರಾಜನಾಗಿ ಏಕೆ ಬೇಕು?”
ಎಲ್ಲರೂ,
“ರಾಮಃ ಸತ್ಪುರುಷೋ ಲೋಕೇ ಸತ್ಯಧರ್ಮಪಾರಾಯಣಃ |
ಸಾಕ್ಷ್ವಾದ್ರಾಮಾದ್ವಿನಿವೃತ್ತೋ ಧರ್ಮಶ್ಚಾಪಿ ಶ್ರಿಯಾ ಸಹಾ ||
ರಾಮ ಸತ್ಪುರುಷ. ಆತನಿಗೆ ಸತ್ಯ-ಧರ್ಮ ಬೇಕು, ಎಲ್ಲಕ್ಕಿಂತ ಮಿಗಿಲಾಗಿ ಧರ್ಮವನ್ನೂ, ಲಕ್ಷ್ಮಿಯನ್ನು ಜೊತೆಯಾಗಿರಿಸುವುದು ರಾಮನಿಗೆ ಗೊತ್ತು. ರಾಮನನ್ನು ನೋಡಿದರೆ ಹುಣ್ಣಿಮೆಯ ಚಂದ್ರನಂತೆ ಆಹ್ಲಾದಕರವಾಗಿರುತ್ತದೆ. ಅವನಿಗೆ ಭೂಮಿಗಿರುವಷ್ಟು ತಾಳ್ಮೆ ಇದೆ. ಬೃಹಸ್ಪತಿಗಿರುವಷ್ಟು ಜ್ಞಾನವಿದೆ. ಇಂದ್ರನಿಗಿರುವಷ್ಟು ಶಕ್ತಿ ಇದೆ. ರಾಮ ಲಕ್ಷ್ಮಣನ ಜೊತೆಯಾಗಿ ಯುದ್ಧಕ್ಕೆ ಹೋದರೆ ವಿಜಯಿಯಾಗದೆ ಹಿಂದಿರುಗನು. ರಾಮನು ಬಹು ಕಾಲ ಯುದ್ಧ ಮಾಡಿ ಅಯೊಧ್ಯೆಗೆ ಮರಳಿದಾಗ ಸಂತೋಷವಾಗಿ ಅರಮನೆಯಲ್ಲಿ ಕಾಲ ಕಳೆಯುವುದಿಲ್ಲ. ತಕ್ಷಣವೇ ಮಿಂದು ರಥವೇರಿ ಅಯೋಧ್ಯೆಯ ಪ್ರತಿ ಪ್ರಜೆಯ ಬಳಿಗೆ ಹೋಗಿ, ತಾನೇ ಮೊದಲು ಕುಶಲವನ್ನು ವಿಚಾರಿಸುತ್ತಾನೆ, ರಥದಲ್ಲಿ ಹೋಗುತ್ತಿರುವಾಗ ಪ್ರತಿಯೊಬ್ಬರನ್ನೂ ತಾನೇ ಕರೆದು ಮಾತನಾಡಿಸುತ್ತಾನೆ. ಇಂಥಹ ಗುಣ ನಿಮ್ಮ ಕುಮಾರನಲ್ಲಿದೆ.
ಪ್ರಜೆಗಳು ಸುಖದಿಂದಿದ್ದರೆ, ತಂದೆಯು ಸಂತೋಷಿಸಿದಂತೆ ಸಂತೋಷಿಸುತ್ತಾನೆ. ನಮ್ಮನ್ನು ತಂದೆಯಂತೆ ಪ್ರೇಮದಿಂದ ನೋಡುತ್ತಾನೆ. (ಪ್ರೇಮ ಎಂದರೆ ತಾನು ಅನುಭವಿಸದಿದ್ದರೂ ತನ್ನವರು ಅನುಭವಿಸಿದರೆ, ಅವರು ಅನುಭವಿಸಿದ ಆನಂದವನ್ನು ನೋಡಿ ತಾನು ಆನಂದ ಪಡುವುದು). ಪ್ರಜೆಗಳಿಗೆ ಯಾವುದೇ ಕಷ್ಟ ಬಂದು ಹೋದರೂ ಅವನು ಅದನ್ನು ನೆನೆಸಿಕೊಂಡು ಬಾಧೆ ಪಡುತ್ತಾನೆ. ಏನೂ ತಿಳಿಯದ ಜಾನಪದರು, ಸ್ತ್ರೀಯರು, ಮಕ್ಕಳು, ರಾಮನಿಗೆ ಏನೂ ಸಂಬಂಧವಿಲ್ಲದವರಾದರೂ, ರಾಮನು ಸಂತೋಷವಾಗಿ, ಆರೋಗ್ಯವಾಗಿ ನಮ್ಮನ್ನೆಲ್ಲ ಪರಿಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಅದಕ್ಕಾಗಿಯೇ ನಿಮ್ಮ ಕುಮಾರ ರಾಮನು ಯುವರಾಜನಾಗ ಬೇಕು" ಎಂದರು.
ಅವರ ಮಾತನ್ನು ಕೇಳಿದ ದಶರಥನು ಹರುಷದ ಕಡಲಲ್ಲಿ ತೇಲಿದ. ಈ ಚೈತ್ರ ಮಾಸದ ಪುಶ್ಯಮಿ ನಕ್ಷತ್ರದೊಂದಿಗೆ ಚಂದ್ರನು ಜೊತೆಯಾಗಿರುವಾಗ ರಾಮನ ಪಟ್ಟಾಭಿಷೇಕ ಮಾಡುವುದಾಗಿ ನಿರ್ಧರಿಸಿದರು.
Comments
Post a Comment