೫. ಪುತ್ರಕಾಮೇಷ್ಠಿ



ಅಶ್ವಮೇಧ ಯಾಗದ ನಂತರ ಋಷ್ಯಶೃಂಗ ಮಹರ್ಷಿಗಳು, "ರಾಜನೇ ನಿನಗೆ ಸಂತಾನ ಪ್ರಾಪ್ತವಾಗಲು ಅಥರ್ವ ವೇದದಲ್ಲಿ ಹೇಳಿರುವ ಒಂದು ಇಷ್ಟಿಯನ್ನು ಮಾಡಿಸುತ್ತೇನೆ. ಅದೇ ಪುತ್ರಕಾಮೇಷ್ಟಿ”, ಎಂದು ಹೇಳಿ ಯಾಗ ಪ್ರಾರಂಭಿಸುತ್ತಾರೆ.

ತತೋ ದೇವಾಃ ಗಂಧರ್ವಾಃ ಸಿದ್ಧಾಃ ಚ ಪರಮ ಋಷಯಃ
ಭಾಗ ಪ್ರತಿಗ್ರಹಾರ್ಥಂ ವೈ ಸಮವೇತಾ ಯಥಾವಿಧಿ
ಯಜ್ಞ ನಡೆಯುತ್ತಿರುವ ವೇಳೆ, ಹವಿಸ್ಸನ್ನು ಸ್ವೀಕರಿಸಲು ಯಕ್ಷ, ಗಂಧರ್ವ, ಕಿಂಪುರುಷ ಮೊದಲಾದ ಎಲ್ಲ ದೇವತೆಗಳು ಬಂದು ಸೇರಿದರು. ಅಲ್ಲಿಗೆ ಚತುರ್ಮುಖ ಬ್ರಹ್ಮನೂ ಬಂದಿದ್ದ. ದೇವತೆಗಳೆಲ್ಲ ಬ್ರಹ್ಮನ ಬಳಿ ಬಂದು,
“ನೈನಂ ಸೂರ್ಯಃ ಪ್ರತಪತಿ ಪಾರ್ಶ್ವೈ ವಾತಿ ನ ಮಾರುತಃ
ಚಲೋರ್ಮಿಮಾಲಿ ತಂ ದೃಷ್ಟ್ವಾ ಸಮುದ್ರೋಪಿ ನ ಕಂಪತೇ
ದೇವಾ, ನೀವು ರಾವಣನ ತಪಸ್ಸಿಗೆ ಮೆಚ್ಚಿ ಅನೇಕ ವರಗಳನ್ನು ಕೊಟ್ಟಿದ್ದೀರ. ಅದರಿಂದ ಅವನು ಗರ್ವಿತನಾಗಿ ಎಲ್ಲರನ್ನೂ ಪೀಡಿಸುತ್ತಿದ್ದಾನೆ. ಅವನಿಗೆ ಹೆದರಿ ಸೂರ್ಯ ಕಾಂತಿಹೀನನಾಗಿದ್ದಾನೆ. ಸಮುದ್ರರಾಜ ಅಲೆಗಳಿಲ್ಲದೆ ನಿಶ್ಚಲನಾಗಿದ್ದಾನೆ. ವಾಯು ನಿಧಾನವಾಗಿ ಬೀಸುತ್ತಿದ್ದಾನೆ. ರಾವಣನಿಂದ ಎಲ್ಲಿಯೂ ಯಜ್ಞ-ಯಾಗಾದಿಗಳು ನಡೆಯುತ್ತಿಲ್ಲ. ಋಷಿಗಳು ಪೀಡಿಸಲ್ಪಡುತ್ತಿದ್ದಾರೆ. ರಾವಣ ಪರ ಪತ್ನಿಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ. ಅವನನ್ನು ಸಂಹರಿಸಲು ದಾರಿ ತೋರಿಸಿ", ಎಂದು ಕೇಳಿಕೊಂಡರು. ಅದಕ್ಕೆ ಬ್ರಹ್ಮ, “ನಾನೂ ಅವನ ದುಷ್ಕೃತ್ಯಗಳನ್ನು ಕೇಳಿದ್ದೇನೆ. ಅವನು ವರದಿಂದ ರಾಕ್ಷಸ, ದೇವ, ಯಕ್ಷ, ಗಂಧರ್ವ, ಕಿನ್ನರ, ಕಿಂಪುರುಷರಿಂದ ಮರಣ ಬರಬಾರದೆಂದು ಕೇಳಿಕೊಂಡಿದ್ದಾನೆ. ಆದರೆ ಅವನಿಗೆ ಮನುಷ್ಯನ ಮೇಲಿರುವ ಕೀಳು ಭಾವನೆಯಿಂದ ಅವರನ್ನು ಬಿಟ್ಟಿದ್ದಾನೆ”, ಎಂದಾಗ ದೇವತೆಗಳೆಲ್ಲಾ ಸಂತೋಷಟ್ಟರು. 

ಏತಸ್ಮಿನ್ ಅನಂತರೇ ವಿಷ್ಣುಃ ಉಪಯಾತೋ ಮಹಾದ್ಯುತಿಃ
ಶಂಖ ಚಕ್ರ ಗದಾ ಪಾಣಿಃ ಪೀತವಾಸಾ ಜಗತ್ಪತಿಃ
ಆದೇ ಸಮಯದಲ್ಲಿ ಆಪತ್ಭಾಂದವನಾದ, ದಯಾಮೂರ್ತಿಯಾದ ಮಹಾವಿಷ್ಣುವು ಸಭೆಯ ಮಧ್ಯೆ ಒಂದು ಕಪ್ಪು ಮೋಡ ಬಂದರೆ ಹೇಗಿರುತ್ತದೆಯೋ ಹಾಗೆ, ರೂಪವಂತನಾಗಿ, ಶಂಖ, ಚಕ್ರ, ಗದಾಪಾಣಿಯಾಗಿ  ಬಂದು ಪ್ರತಿಜ್ಞೆ ಮಾಡಿದ:
“ಹತ್ವಾ ಕ್ರೂರಂ ದುರಾಧರ್ಷಂ ದೇವ ಋಷಿಣಾಂ ಭಯಾವಹಂ
ದಶ ವರ್ಷ ಸಹಸ್ರಾಣೀ ದಶ ವರ್ಷ ಶತಾನಿ ಚ
ವತ್ಸ್ಯಾಮಿ ಮಾನುಷೇ ಲೋಕೇ ಪಾಲಯನ್ ಪೃಥ್ವೀಂ ಇಮಾಂ
ಏವಂ ದತ್ವಾ ವರಂ ದೇವೋ ದೇವಾನಾಂ ವಿಷ್ಣುಃ ಆತ್ಮವಾನ್
ತತಃ ಪದ್ಮ ಪಲಾಶಾಕ್ಷಃ ಕೃತ್ವಾ ಆತ್ಮಾನಾಂ ಚತುರ್ವಿಧಂ
ಪಿತರಂ ರೋಚಯಾಮಾಸ ತದಾ ದಶರಥಂ ನೃಪಂ
ನೀವು ಭಯಪಡಬೇಡಿ. ರಾವಣನ ದುಷ್ಕೃತ್ಯಗಳು ನನಗೆ ತಿಳಿದಿವೆ. ಅವನ ಸಂಹಾರಕ್ಕಾಗಿ ನಾನು ಮನುಷ್ಯ ಜನ್ಮವೆತ್ತಿ ಬರುತ್ತೇನೆ. ನನ್ನ ಮೇಲೆ ನಂಬಿಕೆಯಿಟ್ಟಿರುವ ದೇವ, ಋಷಿಗಳಿಗೆ ತೊಂದರೆ ಕೊಡುತ್ತಿರುವ ಅವನನ್ನು ಸಂಹರಿಸಿ, ೧೧ ವರ್ಷಗಳ ಕಾಲ ಈ ಭೂಮಂಡಲದ ರಾಜ್ಯಭಾರ ಮಾಡುತ್ತೇನೆ. ನಾನೇ ನಾಲ್ಕಾಗಿ ದಶರಥ ಮಹಾರಾಜನಿಗೆ ಪುತ್ರರಾಗಿ ಜನಿಸುತ್ತೇನೆ.”

ಇತ್ತ ಋಷ್ಯಶೃಂಗ ಮಹರ್ಷಿಗಳು ಮಾಡಿಸುತ್ತಿದ್ದ ಪುತ್ರಕಾಮೇಷ್ಟಿ ಮುಗಿಯುತ್ತಾ ಬಂತು. ಅಷ್ಟರಲ್ಲೇ ಆ ಯಾಗಾಗ್ನಿಯಿಂದ ಕಪ್ಪು ಕೆಂಪು ವಸ್ತ್ರ ಧರಿಸಿದ, ಕೈಯಲ್ಲಿ ಪಾಯಸವಿರುವ ಬೆಳ್ಳಿ ಮುಚ್ಚಳದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡು ಸಿಂಹದಂತೆ ನಡೆಯುತ್ತಾ ಒಬ್ಬ ದಿವ್ಯ ಪುರುಷ ಹೊರಬಂದ. ದಶರಥನು ಅವನಿಗೆ ನಮಸ್ಕರಿಸಿ, ತಾನೇನು ಮಾಡಬೇಕೆಂದು ಕೇಳಿದಾಗ, ಆ ಮಹಾಪುರುಷ, “ದಶರಥನೇ! ನನ್ನನ್ನು ಪ್ರಾಜಾಪತ್ಯ ಪುರುಷನೆನ್ನುತ್ತಾರೆ. ನನ್ನನ್ನು ಪ್ರಜಾಪತಿ ಕಳುಹಿಸಿದ್ದಾನೆ. ಈ ಪಾತ್ರೆಯಲ್ಲಿರುವ ಪಾಯಸವನ್ನು ದೇವತೆಗಳು ಮಾಡಿದ್ದಾರೆ. ಇದನ್ನು ನಿನ್ನ ಪತ್ನಿಯರು ಸ್ವೀಕರಿಸಿದರೆ ಅವರಿಗೆ ಸಂತಾನವಾಗುತ್ತದೆ. ಇದರಿಂದ ನಿನ್ನ ರಾಜ್ಯದ ಜನ ಧನ ಧಾನ್ಯ ಸಮೃದ್ಧಿಯಿಂದ ಆರೋಗ್ಯವಾಗಿ ಇರುತ್ತಾರೆ” ಎಂದು ಹೇಳಿ ಅಂತರ್ಧಾನನಾದ.

ಒಡನೆಯೇ ಪಾಯಸವನ್ನು ತನ್ನ ಪತ್ನಿಯರಿಗೆ ಕೊಡಲು ದಶರಥ ಮಹಾರಾಜ ಅಂತಃಪುರಕ್ಕೆ ಹೋಗಿ, ಪತ್ನಿಯರನ್ನು ಕರೆದು, ಆ ಪಾಯಸದಲ್ಲಿನ ಅರ್ಧ ಭಾಗವನ್ನು ಕೌಸಲ್ಯೆಗೆ, ಉಳಿದ ಅರ್ಧದ ಅರ್ಧವನ್ನು ಸುಮಿತ್ರೆಗೆ ಮತ್ತು ಇನ್ನೊಂದರ್ಧದಲ್ಲಿ ಮತ್ತೆರೆಡು ಭಾಗಮಾಡಿ ಅವನ್ನು ಸುಮಿತ್ರೆ, ಕೈಕೇಯಿಗೆ ಕೊಟ್ಟ.


ಯಾಗ ಪೂರ್ತಿಯಾದ ನಂತರ, ಆಹ್ವಾನಿತ ರಾಜರೆಲ್ಲರಿಗೂ ಉಚಿತ ರೀತಿಯಲ್ಲಿ ಸತ್ಕರಿಸಿ, ಬಹುಮಾನಗಳನ್ನು ಕೊಟ್ಟು ಕಳುಹಿಸಿಕೊಡಟ್ಟರು. ಋಷ್ಯಶೃಂಗನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಸತ್ಕರಿಸಿ, ದಂಪತಿ ಸಮೇತ ಎಲ್ಲ ಮರ್ಯಾದೆಗಳಿಂದ ಕಳಿಸಿದರು. ಕೆಲವು ಕಾಲಕ್ಕೆ ದಶರಥನ ತೇಜಸ್ಸು ತನ್ನ ಪತ್ನಿಯರನ್ನು ಪ್ರವೇಶಿಸಿ ಅವರು ಗರ್ಭವತಿಯರಾದರು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ