೫೨. ಸಂದೇಹ!

ರಾವಣ ಮಾರೀಚರು ರಥದಲ್ಲಿ ಬಂದು ಆಶ್ರಮದ ಬಳಿ ಇಳಿದರು. ತಕ್ಷಣ ಮಾರೀಚ ಜಿಂಕೆಯಾಗಿ ಬದಲಾದ. ಜಿಂಕೆಯ ಮೈಯೆಲ್ಲಾ ಬಂಗಾರದ ಬಣ್ಣವಾಗಿತ್ತು, ಅದರ ಮೇಲೆ ಬೆಳ್ಳಿ ಚುಕ್ಕೆಗಳು. ಕೊಂಬುಗಳು ಹೊಳೆಯುತ್ತಿದ್ದವು. ಅದರ ಮುಖ ಅರ್ಧ ಕಪ್ಪು, ಅರ್ಧ ಬಿಳಿ ಬಣ್ಣದಲ್ಲಿತ್ತು. ಚಿಕ್ಕ ಕಾಲುಗಳು. ಹೊಟ್ಟೆ ಮುತ್ತಿನಂತೆ ಹೊಳೆಯುತ್ತಿತ್ತು. ಪ್ರಪಂಚದಲ್ಲಿ ಅಲ್ಲಿಯವರೆಗೂ ಎಲ್ಲಿಯೂ ನೋಡಿರದಷ್ಟು ಸುಂದರವಾದ ಜಿಂಕೆಯ ರೂಪವನ್ನು ಪಡೆದು ಮಾರೀಚ ಆಶ್ರಮದೊಳಗೆ ಪ್ರವೇಶಿಸಿದ. ಎಳೆ ಹುಲ್ಲನ್ನು ತಿನ್ನುತ್ತಾ, ಅತ್ತಿತ್ತ ತಿರುಗುತ್ತಾ, ಅಲ್ಲಿದ್ದ ಇತರ ಪ್ರಾಣಿಗಳ ಬಳಿ ಹೋಗಿ ಬರುತ್ತಾ, ಜಿಂಕೆಯಂತೆಯೇ ವರ್ತಿಸಲು ಪ್ರಯತ್ನಿಸುತ್ತಿದ್ದ. ಆದರೆ ಅಲ್ಲಿದ್ದ ಪ್ರಾಣಿಗಳು ಅವನು ರಾಕ್ಷಸನೆಂದು ಗುರುತಿಸಿ ಓಡಿಹೋದವು. ಅದೇ ಸಮಯದಲ್ಲಿ ಸೀತೆ ಹೂಗಳನ್ನು ಕಿತ್ತುಕೊಂಡು ಬರಲು ಅಲ್ಲಿಗೆ ಬಂದಳು. ಕರ್ಣಿಕಾರವ ವೃಕ್ಷದ ಬಳಿ ಹೂ ಕೀಳುತ್ತಿದ್ದಾಗ, ಜಿಂಕೆಯ ರೂಪದಲ್ಲಿದ್ದ ಮಾರೀಚ ಅವಳ ಎದುರಿಗೆ ಬಂದು ನಿಂತ. ಜಿಂಕೆಯನ್ನು ನೋಡಿದ ಸೀತೆ ರಾಮ ಲಕ್ಷ್ಮಣರನ್ನು ಜೋರಾಗಿ ಕೂಗಿ ಕರೆದು, "ಎದುರಿಗಿರುವ ಜಿಂಕೆಯನ್ನು ನೋಡಿ! ಎಷ್ಟು ಸುಂದರವಾಗಿದೆ! ಸೃಷ್ಟಿಯಲ್ಲಿ ಇಂತಹ ಜಿಂಕೆಯನ್ನು ಎಲ್ಲಿಯೂ ನೋಡಿಲ್ಲ. ಬಂಗಾರ ವರ್ಣದ ಚರ್ಮ, ಬೆಳ್ಳಿ ಚುಕ್ಕೆಗಳು..." ಎಂದು ವರ್ಣಿಸುತ್ತಿದ್ದಾಗ, ಲಕ್ಷ್ಮಣ ಮಧ್ಯದಲ್ಲೇ ತಡೆದು,
ಶಂಕಮಾನಃ ತು ತಂ ದೃಷ್ಟ್ವಾ ಲಕ್ಷ್ಮಣೋ ರಾಮಂ ಅಬ್ರವೀತ್
ತಂ ಏವ ಏನಂ ಅಹಂ ಮನ್ಯೇ ಮಾರೀಚಂ ರಾಕ್ಷಸಂ ಮೃಗಂ
ಅಣ್ಣಾ! ಇದು ಮೃಗವಲ್ಲ. ಇವನು ಮಾರೀಚ. ಸೃಷ್ಟಿಯಲ್ಲಿ ಇಂತಹ ಜಿಂಕೆ ಎಲ್ಲಿಯೂ ಇಲ್ಲ. ಮಾರೀಚ ಕಾಮರೂಪವನ್ನು ಪಡೆದು, ಬೇಟೆಗೆ ಬಂದ ರಾಜರನ್ನು ಆಕರ್ಷಿಸಿ, ಅವರನ್ನು ಕೊಂದು ತಿನ್ನುತ್ತಿದ್ದ. ಇದು ಖಚಿತವಾಗಿ ಮಾರೀಚನ ಮಾಯೆ" ಎಂದ.
ಸೀತೆ ಲಕ್ಷ್ಮಣನ ಮಾತಿಗೆ ಲಕ್ಷ್ಯ ಕೊಡದೆ ರಾಮನನ್ನು ಕುರಿತು, "ಆರ್ಯಪುತ್ರ! ಮೃಗ ನನ್ನ ಮನಸ್ಸನ್ನು ಆಕರ್ಷಿಸಿದೆ. ಇದು ನನಗೆ ಆಟವಾಡಲು ಬೇಕು. ಆಶ್ರಮದಲ್ಲಿರುವ ಪ್ರಾಣಿಗಳ ಜೊತೆ ಜಿಂಕೆಯೂ ಇದ್ದರೆ ನನಗೆ ಸಂತೋಷ. ಜೀವಂತವಾಗಿ ಇಲ್ಲದಿದ್ದರೆ ಕೊಂದಾದರೂ ಅದನ್ನು ಹಿಡಿದು ತನ್ನಿ. ಅಕಸ್ಮಾತ್ ಸತ್ತಿದ್ದರೆ ಇದರ ಚರ್ಮ ತೆಗೆದು ಹುಲ್ಲಿನ ಮೇಲೆ ಹಾಸಿಕೊಂಡು ಕೂತರೆ ತುಂಬಾ ಚೆನ್ನಾಗಿರುತ್ತದೆ. ಅರಣ್ಯವಾಸದ ನಂತರ ಅಯೋಧ್ಯೆಗೆ ಹೋಗುವಾಗ ಇದನ್ನು ನಮ್ಮ ಜೊತೆ ನಮ್ಮ ಅಂತಃಪುರಕ್ಕೆ ತೆಗೆದುಕೊಂಡು ಹೋಗೋಣ. ಇದನ್ನು ನೋಡಿ ಅತ್ತೆ, ಭರತ ಎಲ್ಲರೂ ಸಂತೋಷ ಪಡುತ್ತಾರೆ. ಸ್ತ್ರೀಯರಿಗೆ ಏನಾದರೂ ಆಸೆಯಾದರೆ ಮನಸ್ಸಿನಲ್ಲಿ ವ್ಯಗ್ರತೆ ಏರ್ಪಡುತ್ತದೆ. ಹಾಗೇನಾದರೂ ನಾನು ಮಾತಾಡಿದ್ದರೆ ಕ್ಷಮಿಸಿ" ಎಂದಳು.

ಸೀತೆಯ ಮಾತು ಕೇಳಿದ ರಾಮ ಲಕ್ಷ್ಮಣನ ಕಡೆ ನೋಡಿ, "ಲಕ್ಷ್ಮಣಾ! ನಿನ್ನ ಅತ್ತಿಗೆ ೧೩ ವರ್ಷಗಳಲ್ಲಿ ನನ್ನನ್ನು ಏನೂ ಕೇಳಿಲ್ಲ. ಮೊದಲ ಬಾರಿಗೆ ಜಿಂಕೆಯನ್ನು ಕೇಳುತ್ತಿದ್ದಾಳೆ. ಅವಳ ಮಾತಿನ ವೈಖರಿ ಇದರ ಮೇಲೆ ಅವಳೆಷ್ಟು ಆಸೆ ಇಟ್ಟುಕೊಂಡಿದ್ದಾಳೆ ಎಂಬುದನ್ನು ಹೇಳುತ್ತಿದೆ. ಅವಳ ಆಸೆಯನ್ನು ಇಲ್ಲ ಎನ್ನಲು ನನಗೆ ಮನಸ್ಸು ಬರುತ್ತಿಲ್ಲ. ಅವಳು ಹೇಳಿದಂತೆ ಇಂತಹ ಮೃಗವನ್ನು ನಾನೂ ಎಲ್ಲಿಯೂ ನೋಡಿಲ್ಲ. ಇಂತಹ ಪ್ರಾಣಿ ನನಗೆ ತಿಳಿದಂತೆ ಎರೆಡು ಇವೆ, ಒಂದು ಚಂದ್ರನಲ್ಲಿ, ಒಂದು ಇಲ್ಲಿ ( ಮಾತಿನ ಅರ್ಥ - ಚಂದ್ರನ ಮೇಲೆ ಯಾವುದೇ ಮೃಗವಿಲ್ಲ. ಆದರೆ ಭೂಮಿಯ ಮೇಲೆ ಇದೆಯೆಂದರೆ ಇದು ಮಾಯೆ). ಒಂದು ವೇಳೆ ನೀನು ಹೇಳಿದಂತೆ ಇದು ಮಾರೀಚನೇ ಆದರೆ ಅವನನ್ನು ಕೊಲ್ಲುತ್ತೇನೆ. ನೀನು ಹುಷಾರು. ನೀನು ಮತ್ತು ಜಟಾಯು ಸೀತೆಯನ್ನು ಕಾಪಾಡಿ. ನಾನು ಹೋಗಿಬರುತ್ತೇನೆ" ಎಂದು ಹೇಳಿ ಜಿಂಕೆಯನ್ನು ಹಿಡಿಯಲು ಅದರ ಹಿಂದೆ ಹೋದ.

ಜಿಂಕೆಯ ರೂಪದಲ್ಲಿದ್ದ ಮಾರೀಚ ಮುಂದೆ ಓಡುತ್ತಿದ್ದರೆ ಹಿಂದೆ ರಾಮ ಓಡುತ್ತಿದ್ದ. ಮಾರೀಚ ಅಲ್ಲಲ್ಲಿ ಕಾಣಿಸಿದಂತೆ ಮಾಯವಾಗಿ ಪೊದೆಗಳ ಹಿಂದೆ ಅವಿತುಕೊಂಡು ಓಡುತ್ತಿದ್ದ. ರಾಮ ಹತ್ತಿರ ಹೋದರೆ, ಅಲ್ಲಿ ಮಾಯವಾಗಿ ದೂರದಲ್ಲಿ ಕಾಣಿಸುತ್ತಿದ್ದ. ಹಾಗೆಯೇ ರಾಮನ ಕಣ್ಣು ತಪ್ಪಿಸಿ ಅವನನ್ನು ತುಂಬಾ ದೂರಕ್ಕೆ ಕರೆದುಕೊಂಡು ಹೋದ. ರಾಮನಿಗೆ ಸುಸ್ತಾಗಿ ಒಂದು ಮರದ ಕೆಳಗೆ ವಿಶ್ರಾಂತಿ ಪಡೆದ. ಆಗ ಮಾರೀಚ ದೂರದಲ್ಲಿ, ಒಂದು ಪೊದೆಯ ಹತ್ತಿರ ಅತ್ತಿತ್ತ ತಿರುಗುತ್ತಾ ಮತ್ತೆ ಕಾಣಿಸಿದ. ಇನ್ನು ತನಗೆ ಅದನ್ನು ಹಿಡಿಯಲು ಸಾಧ್ಯವಿಲ್ಲ ಎಂದುಕೊಂಡು ರಾಮ ಒಂದು ಬಾಣವನ್ನು ತೆಗೆದು, ಅದನ್ನು ತನ್ನ ಬಿಲ್ಲಿಗೆ ಸಂಧಿಸಿ, ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಜಿಂಕೆಯ ಕಡೆ ಬಿಟ್ಟ. ಅಸ್ತ್ರ ಬೆಂಕಿಯನ್ನು ಕಾರುತ್ತಾ, ಮಾರೀಚನನ್ನು ಹೊಕ್ಕಿತು. ಮಾರೀಚ ರಾಮನ ಸ್ವರದಲ್ಲಿ ಜೋರಾಗಿ, "ಹಾ ಸೀತಾ! ಹಾ ಲಕ್ಷ್ಮಣ!" ಎಂದು ಕೂಗುತ್ತಾ ಅಣೆಕಟ್ಟಿನಿಂದ ನೀರು ಹೊರಬಂದಂತೆ ರಕ್ತ ಕಾರುತ್ತಾ ತನ್ನ ನಿಜ ರೂಪವನ್ನು ತಾಳಿ ಸತ್ತುಬಿದ್ದ

ದೃಶ್ಯವನ್ನು ನೋಡಿದ ರಾಮನಿಗೆ ತಕ್ಷಣ ಸೀತೆ ಜ್ಞಾಪಕಬಂದಳು. ಅದರ ಜೊತೆಯೇ ಲಕ್ಷ್ಮಣನ ಮಾತುಗಳೂ ಜ್ಞಾಪಕ ಬಂದವು. ಸೀತೆಗೆ ಯಾವುದೇ ತೊಂದರೆ ಬಾರದಿರಲಿ ಎಂದುಕೊಂಡು ಅಲ್ಲಿದ್ದ ಎರೆಡು ಮೃಗಗಳನ್ನು ಸಂಹರಿಸಿ, ಅವುಗಳ ಚರ್ಮ ತೆಗೆದುಕೊಂಡು ಆಶ್ರಮದ ಕಡೆ ಓಡಿದ.

ಇತ್ತ ಸೀತೆಗೆ ಮಾರೀಚನ ಕೂಗು ಕೇಳಿಸಿತು. ತಕ್ಷಣ ಲಕ್ಷ್ಮಣನನ್ನು ಕರೆದು ಗಾಬರಿಯಿಂದ, "ನಿಮ್ಮ ಅಣ್ಣ ತೊಂದರೆಯಲ್ಲಿರಬೇಕು. ಹಾ ಸೀತಾ! ಹಾ ಲಕ್ಷ್ಮಣ! ಎಂಬ ಕೂಗು ಕೇಳಿಸುತ್ತಿದೆ. ಸಿಂಹ ಎಳೆದೊಯ್ಯುವಾಗ ಬಲಿಷ್ಠವಾದ ಎತ್ತು ಅರಚುವಂತೆ ನಿಮ್ಮ ಅಣ್ಣ ಅರಚುತ್ತಿದ್ದಾರೆ. ನನಗೆ ಗಾಬರಿಯಾಗುತ್ತಿದೆ. ನೀನು ಬೇಗ ಅರಣ್ಯದೊಳಕ್ಕೆ ಹೋಗಿ ನೋಡು" ಎಂದಳು.

ಲಕ್ಷ್ಮಣ, "ಅತ್ತಿಗೆ ನೀವು ಅನಗತ್ಯವಾಗಿ ಗಾಬರಿಯಾಗುತ್ತಿದ್ದೀರ. ಅಣ್ಣನಿಗೆ ಏನೂ ಆಗಿರಲಾರದು" ಎಂದ.

ತನ್ನ ಗಂಡ ದೊಡ್ಡ ತೊಂದರೆಯಲ್ಲಿದ್ದಾನೆಂದು ಭಾವಿಸಿದ್ದ ಸೀತೆಗೆ ಲಕ್ಷ್ಮಣ ಮಾತುಗಳಿಂದ ತುಂಬಾ ಕೋಪ ಬಂತು. “ನೀನು ಏಕೆ ನಮ್ಮ ಜೊತೆ ಬಂದೆಯೆಂದು ನನಗೆ ಈಗ ಅರ್ಥವಾಗುತ್ತಿದೆ. ನೀನು ನಿನ್ನ ಅಣ್ಣನಿಗೆ ತಮ್ಮನಲ್ಲ. ಅವನಿಗೆ ಶತ್ರು. ನಿಮ್ಮ ಅಣ್ಣನಿಗೆ ತೊಂದರೆಯಾದಾಗ ಇಷ್ಟು ಸಂತೋಷವಾಗಿದ್ದೀಯ. ನೀನು ಇಷ್ಟು ಕಾಲ ರಾಮನ ಜೊತೆಯಿರಲು ಕಾರಣ ನಿನಗೆ ನನ್ನ ಮೇಲಿರುವ ಆಸೆ! ಹೀಗೆ ರಾಮನಿಗೆ ಗಂಡಾಂತರ ಬಂದಾಗ ನನ್ನನ್ನು ಪಡೆಯಲು ಹಿಂದೆ ಬಂದಿದ್ದೀಯ. ಈಗ ನಿನ್ನ ಮುಖದಲ್ಲಿ ನಂಬಿಕೆ, ನೆಮ್ಮದಿಗಳು ಕಾಣುತ್ತಿವೆ. ರಾಮ ಶತ್ರುವಿನ ಕೈಯಲ್ಲಿ ಏಟು ತಿಂದಿದ್ದರೂ ನೀನು ಅಷ್ಟು ಆರಾಮವಾಗಿರಲು ಹೇಗೆ ಸಾಧ್ಯ? ಕ್ಷಣಕ್ಕಾಗಿಯೇ ನೀನು ೧೩ ವರ್ಷ ಕಾದಂತಿದೆ. ಮಹಾಪಾಪಿ! ಎಷ್ಟು ದ್ರೋಹ ಬುದ್ಧಿ ನಿನಗೆ! ಬಹುಶಃ ಭರತನೇ ನಿನ್ನನ್ನು ಕಳಿಸಿರಬೇಕು. ಇಬ್ಬರೂ ಸೇರಿ ದ್ರೋಹ ಮಾಡಿರಬೇಕು!" ಎಂದಳು.

ಮಾತುಗಳನ್ನು ಕೇಳಿದ ಲಕ್ಷ್ಮಣ ತನ್ನ ಎರೆಡು ಕೈಗಳಿಂದ ನಮಸ್ಕರಿಸಿ, "ದೇವ, ದಾನವ, ಗಂಧರ್ವ, ಯಕ್ಷ, ಕಿನ್ನರ, ಬ್ರಹ್ಮಾಂಡದಲ್ಲಿರುವ ಎಲ್ಲ ವೀರರು ಸೇರಿದರೂ ಅಣ್ಣನನ್ನು ಏನೂ ಮಾಡಲಾರರು. ಅವನ ಶಕ್ತಿ ನನಗೆ ಗೊತ್ತು. ಅತ್ತಿಗೆ! ಯಾರೋ ಕೂಗಿದರೆ ನೀವು ಗಾಬರಿ ಪಟ್ಟುಕೊಳ್ಳುತ್ತಿದ್ದೀರ. ಕೂಗಿದ್ದು ಮಾರೀಚ. ಅಣ್ಣನಲ್ಲ. ನನ್ನನ್ನು ನಂಬಿ.
ಸಸ್ತಸ್ಯ ಸ್ವರೋ ವ್ಯಕ್ತಂ ನ ಕಶ್ಚಿತಪಿ ದೈವತಃ
ಗಂಧರ್ವ ನಗರ ಪ್ರಖ್ಯಾ ಮಾಯಾ ತಸ್ಯ ಚ ರಕ್ಷಸಃ
ನಾನು ಖಚಿತವಾಗಿ ಹೇಳುತ್ತೇನೆ. ಇದು ರಾಮನ ಧ್ವನಿಯೇ ಅಲ್ಲ. ಇದು ಮಾಯಾವಿಯ ಧ್ವನಿ. ನನ್ನನ್ನು ದೂರ ಕಳಿಸಿದರೆ ನಿಮಗೆ ಆಪತ್ತು. ನೀವು ಗಾಬರಿಪಡಬೇಡಿ. ನೋಡುತ್ತಿರಿ. ಅಣ್ಣ ಬಿಲ್ಲು ಹಿಡಿದು ಬರುತ್ತಾನೆ. ಮಾಯಾಮೃಗದ ಚರ್ಮ ತೆಗೆದುಕೊಂಡು ಬರುತ್ತಾನೆ. ಅವನು ಹೋಗುವ ಮುಂಚೆ ನಿಮ್ಮನ್ನು ನನ್ನ ಜವಾಬ್ದಾರಿಗೆ ಬಿಟ್ಟು ಹೋಗಿದ್ದಾನೆ. ನಿಮ್ಮನ್ನು ಬಿಟ್ಟು ಹೋದರೆ ಮಾತಿಗೆ ತಪ್ಪಿದವನಾಗುತ್ತೇನೆ. ಕೊಟ್ಟ ಮಾತಿಗೆ ತಪ್ಪದಂತೆ ಅನುಗ್ರಹಿಸಿ. ಮೊನ್ನೆ ತಾನೇ ಅವನು ೧೪ ಸಾವಿರ ರಾಕ್ಷಸರನ್ನು ಕೊಂದಿದ್ದಾನೆ. ಅವರು ದ್ವೇಷದಿಂದ ನಮಗೆ ತೊಂದರೆ ಕೊಡಲು ಹೀಗೆ ಮಾಡುತ್ತಿದ್ದಾರೆ. ದಯವಿಟ್ಟು ನನ್ನ ಮಾತನ್ನು ನಂಬಿಎಂದ.

"ನನಗೆ ನಿನ್ನ ಮಾತು ಆರ್ಥವಾಯಿತು. ಪಾಪಿ! ದುರಾತ್ಮ! ನೀನು ಏಕೆ ಬಂದೆಯೆಂದು ನನಗೆ ತಿಳಿಯದು ಅಂದುಕೊಂಡೆಯಾ? ರಾಮ ಸತ್ತ ವಿಷಯವನ್ನು ಧೃಢಪಡಿಸಿಕೊಳ್ಳುವುದಕ್ಕೆ ಇನ್ನೂ ಇಲ್ಲೇ ಇದ್ದೀಯ. ನನ್ನನ್ನು ಪಡೆಯುವುದಕ್ಕೇ ನೀನು ಬಂದಿರುವುದು. ನಿನ್ನನ್ನು ಭರತನೇ ಕಳಿಸಿದ್ದಾನೆ. ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊ, ರಾಮ ಹೋದ ಮೇಲೆ ನಾನು ನಿನ್ನನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಅವನಿಗೆ ಆಪತ್ತು ಬಂದಾಗಲೂ ನೀನು ಇಲ್ಲೇ ಇದ್ದೀಯ. ನಿನ್ನ ಮುಂದೆಯೇ ವಿಷ ಕುಡಿದು ಸಾಯುತ್ತೇನೆ!"

ಲಕ್ಷ್ಮಣ ದುಃಖದಿಂದ, "ಎಷ್ಟು ಕಷ್ಟ ತಂದಿರಿ ಅತ್ತಿಗೆ ನೀವು! ನಾನು ಇಲ್ಲಿದ್ದರೆ ನೀವು ಪ್ರಾಣ ಕಳೆದುಕೊಳ್ಳುತ್ತೀರ. ನಾನು ಹೋದರೆ ನಿನಗೆ ಆಪತ್ತು ಖಂಡಿತ" ಎಂದು ತನ್ನ ಎರೆಡೂ ಕೈಗಳಿಂದ ಸೀತೆಯ ಕಾಲು ಹಿಡಿದು, "ಅತ್ತಿಗೆ! ಇಂದು ನೀವು ಒಬ್ಬ ಸಾಮಾನ್ಯ ಸ್ತ್ರೀಯಂತೆ ಮಾತಾಡುತ್ತಿದ್ದೀರ. ನಿಮ್ಮನ್ನು ನಾನು ಎಂದೂ ಭಾವನೆಯಿಂದ ನೋಡಿಲ್ಲ. ನನ್ನನ್ನು ಇಷ್ಟೆಲ್ಲಾ ಅಂದಿದ್ದಲ್ಲದೆ ಇದರಲ್ಲಿ ಭರತನನ್ನೂ ಸೇರಿಸಿದ್ದೀರ. ನಾನು ಇದಾವುದಕ್ಕೂ ಉತ್ತರ ಹೇಳುವುದಿಲ್ಲ. ನೀವು ಅತ್ತಿಗೆ. ದೊಡ್ಡವರು. ಅನ್ನಲು ನಿಮಗೆ ಅಧಿಕಾರವಿದೆ. ಆದರೆ ನನ್ನನ್ನು ದೂರ ಕಳಿಸಿದ ಫಲವನ್ನು ಮಾತ್ರ ನೀವು ಅನುಭವಿಸುತ್ತೀರಎಂದು ಪ್ರಕೃತಿಯ ಕಡೆ ನೋಡಿ, "ಅತ್ತಿಗೆ ನನಗೆ ಹೇಳಿದ ಮಾತನ್ನು ನಾನು ನನ್ನ ಅಣ್ಣನಿಗೆ ಹೇಳಲಾರೆ. ನೀವೇ ಇದಕ್ಕೆ ಸಾಕ್ಷಿ. ಇಲ್ಲಿಂದ ನಾನು ಹೊರಡುವ ನ್ಯಾಯವನ್ನು ಗ್ರಹಿಸಿ. ಅತ್ತಿಗೆ! ನಿಮ್ಮನ್ನು ವನದೇವತೆಯೇ ರಕ್ಷಿಸುತ್ತಾಳೆ" ಎಂದು ಹೇಳಿ ಹೊರಟ. 

ಹೋಗುವಾಗ ಹಿಂದೆ ನೋಡಿ, "ಅಮ್ಮಾ! ನಾನು ಮತ್ತೆ ಹಿಂದೆ ಅಣ್ಣನ ಜೊತೆ ಬಂದು, ಅವನು ನಿಮ್ಮ ಪಕ್ಕ ನಿಂತರೆ ನಿಮ್ಮ ಪಾದಗಳಿಗೆ ನಮಸ್ಕಾರ ಮಾಡುವ ಅದೃಷ್ಟವಿದೆಯಾ?" ಎಂದು ಕೇಳಿದ.

ಸೀತೆ ನಿಷ್ಕರುಣೆಯಿಂದ, "ಪಾಪಿಷ್ಠ! ನೀನು ಹೋಗದೆ ಇನ್ನೂ ಇಲ್ಲೇ ಇರುವೆ. ನಾನು ನಿನ್ನನ್ನು ನನ್ನ ಪಾದದಿಂದಲೂ ಮುಟ್ಟುವುದಿಲ್ಲ. ನೀನು ಇನ್ನೂ ಹೋಗದಿದ್ದರೆ ವಿಷ ಕುಡಿದಾದರೂ, ಬೆಂಕಿಯಲ್ಲಿ ಬಿದ್ದಾದರೂ, ಗೋದಾವರಿಯಲ್ಲಿ ಧುಮುಕಿಯಾದರೂ ಸಾಯುತ್ತೇನೆ. ನಿನಗೆ ಮಾತ್ರ ಸಿಗುವುದಿಲ್ಲ. ಇನ್ನೂ ನೀನು ಹೋಗುತ್ತೀಯಾ? ಇಲ್ಲವಾ?" ಎಂದಳು.

ಲಕ್ಷ್ಮಣ ಸೀತೆಗೆ ಪ್ರದಕ್ಷಿಣೆ ಹಾಕಿ ಅಳುತ್ತಾ ಹೊರಟುಹೋದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ