೭೬. ಬಂಧನ

ರಾವಣ ತುಂಬಾ ಯೋಚಿಸಿ ಸಭೆಯಲ್ಲಿದ್ದ ತನ್ನ ಕಿರಿಯ ಮಗನಾದ ಅಕ್ಷಕುಮಾರನ ಕಡೆ ನೋಡಿದ. ತಂದೆ ನೋಡಿದ ತಕ್ಷಣ ಅಕ್ಷಕುಮಾರ ಮೇಲಕ್ಕೆದ್ದು, ಸಂತೋಷದಿಂದ ಯುದ್ಧಕ್ಕೆ ಹೋದ. ಇನ್ನೂ ಚಿಕ್ಕವನಾದ ಅಕ್ಷನನ್ನು ನೋಡಿದ ಹನುಮ, 'ಇವನು ಎಷ್ಟು ಚೆನ್ನಾಗಿದ್ದಾನೆ! ಚಿಕ್ಕವನಾದರೂ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದಾನೆ. ಇವನನ್ನು ಸ್ವಲ್ಪ ಹೊತ್ತು ಯುದ್ಧ ಮಾಡಲು ಬಿಡೋಣ' ಎಂದುಕೊಂಡು ಅಕ್ಷ ಬಿಟ್ಟ ಬಾಣಗಳಿಂದ ತಪ್ಪಿಸಿಕೊಂಡು ಸೂಕ್ಶ್ಮ ರೂಪದಿಂದ ಅವನಿಗೆ ಕಾಣದಂತೆ ತಿರುಗುತ್ತಿದ್ದ. ಆದರೂ ಅಕ್ಷ ಹನುಮನ ಶರೀರದ ತುಂಬ ಬಾಣಗಳನ್ನು ಬಿಟ್ಟ. ಹನುಮ, 'ಇವನ ಯುದ್ಧವನ್ನು ನೋಡಿದರೆ ದೇವತೆಗಳೂ ಸಂತೋಷವಾಡುತ್ತಾರೆ. ಆದರೆ ಇನ್ನು ಸುಮ್ಮನಿದ್ದರೆ ಆಗುವುದಿಲ್ಲ' ಎಂದುಕೊಂಡು ಆಕಾಶಕ್ಕೆ ಎಗರಿ ಅವನ ಮೇಲೆ ಬಿದ್ದ. ಅಕ್ಷನ ರಥ, ಸಾರಥಿ ಸತ್ತರು. ಆದರೂ ಅಕ್ಷ ಆಕಾಶದಲ್ಲಿ ನಿಂತು ಯುದ್ಧ ಮಾಡಲು ಆರಂಭಿಸಿದ. ಹನುಮ ಅವನನ್ನು ಆಕಾಶದಿಂದ ಎತ್ತಿ ಕೆಳಕ್ಕೆ ಬಿಸಾಡಿದಾಗ ಅಕ್ಷ ತಲೆ ಒಡೆದು ಸತ್ತುಬಿದ್ದ.

ತನ್ನ ಮಗನ ಸಾವನ್ನು ಕೇಳಿ ರಾವಣನಿಗೆ ಮೊದಲ ಬಾರಿ ಸೋಲು, ಭಯಗಳು ಒಮ್ಮೆಲೇ ಉಂಟಾದವು. ಇನ್ನು ಯಾರನ್ನು ಕಳಿಸಬೇಕೆಂಬುದು ತಿಳಿಯದೆ ಕೊನೆಗೆ ಇಂದ್ರಜಿತ್ತನ ಕಡೆ ನೋಡಿ, "ನಿನ್ನನ್ನು ಕಳಿಸಬಾರದು. ಆದರೆ ಈಗ ನನಗೆ ಬೇರೆ ದಾರಿಯಿಲ್ಲ. ಹುಷಾರು. ಲಂಕೆಯ ಭದ್ರತೆ ನಿನ್ನ ಕೈಲಿದೆ. ನಿನ್ನ ಅಸ್ತ್ರಗಳನ್ನೆಲ್ಲ ಜ್ಞಾಪಿಸಿಕೊಂಡು ಹೋಗು. ಹೇಗಾದರೂ ಮಾಡಿ ವಾನರವನ್ನು ಹಿಡಿ, ಅವಕಾಶ ಸಿಕ್ಕರೆ ಕೊಂದುಬಿಡು" ಎಂದು ಹೇಳಿಕಳಿಸಿದ. ಇಂದ್ರಜಿತ್ತ ರಾವಣನಿಗೆ ಪ್ರದಕ್ಷಿಣೆ ಹಾಕಿ ಹೊರಟ.

ಹನುಮ ಇಂದ್ರಜಿತ್ತರು ಒಬ್ಬೊರಿಗೊಬ್ಬರು ಸಿಗದಂತೆ ಯುದ್ಧ ಮಾಡುತ್ತಿದ್ದರು. ವಾನರನ ವೇಗವನ್ನು ತಗ್ಗಿಸಬೇಕೆಂದು ಇಂದ್ರಜಿತ್ತ ಹನುಮನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ. ಹನುಮಂತನಿಗೆ ಯಾವ ಅಸ್ತ್ರವೂ ತನಗೆ ಏನೂ ಮಾಡದೆಂಬ ವರ ಜ್ಞಾಪಕ ಬಂದು, 'ಇದು ಬ್ರಹ್ಮದೇವರ ಹೆಸರಿನ ಅಸ್ತ್ರ. ಇದನ್ನು ನಾನು ಗೌರವಿಸಬೇಕು. ಬ್ರಹ್ಮದೇವರನ್ನು ನೆನಪಿಸಿಕೊಂಡು ಕೈ ಮುಗಿದರೆ ಇದು ನನ್ನನ್ನು ಬಿಟ್ಟು ಬಿಡುತ್ತದೆ. ಆದರೆ ನಾನು ಇದಕ್ಕೆ ತಲೆ ಬಾಗುತ್ತೇನೆ' ಎಂದುಕೊಂಡು ಬ್ರಹ್ಮಾಸ್ತ್ರಕ್ಕೆ ತಲೆಬಾಗಿ ಕೆಳಗೆ  ಬಿದ್ದು ಬಿಟ್ಟ. ತಕ್ಷಣ ಓಡಿ ಬಂದ ರಾಕ್ಷಸರು ಹನುಮನ ಕೈ, ಕಾಲುಗಳನ್ನು ಕಟ್ಟಿ ಕಟ್ಟಿಗೆಗಳಿಂದ ಹೊಡೆದರು. ಹನುಮಂತ, 'ಇವರನ್ನು ಕೊಲ್ಲಬಹುದು. ಆದರೆ ರಾವಣನನ್ನೂ ಒಂದು ಬಾರಿ ನೋಡೋಣ' ಎಂದುಕೊಂಡು ಸುಮ್ಮನಾದ.

ಇಂದ್ರಜಿತ್ತನೂ, ' ರಾಕ್ಷಸರು ಮೂರ್ಖರು. ನಾನು ಬ್ರಹ್ಮಾಸ್ತ್ರದಿಂದ ಕಟ್ಟಿದರೆ, ಇವರು ಹಗ್ಗಗಳಿಂದ ಕಟ್ಟಿದ್ದಾರೆ. ಬ್ರಹ್ಮಾಸ್ತ್ರದಿಂದ ನಿರ್ಬಂಧಿಸಿದವನನ್ನು ಬೇರೆಯದರಿಂದ ನಿರ್ಬಂಧಿಸಿದರೆ ಬ್ರಹ್ಮಾಸ್ತ್ರ ಬಿಟ್ಟುಬಿಡುತ್ತದೆ. ಧನುರ್ವೇದದ ಪ್ರಕಾರ ನಾಳೆಯ ಸೂರ್ಯೋದಯದವರೆಗೂ ಇನ್ನು ಯಾವ ಅಸ್ತ್ರವೂ ಇವನ ಮೇಲೆ ಕೆಲಸ ಮಾಡುವುದಿಲ್ಲ. ಈಗ ಇವನು ಅಂದುಕೊಂಡರೆ ಏನು ಬೇಕಾದರೂ ಮಾಡಬಹುದು. ಆದರೆ ಇವನಿಗೆ ಅಸ್ತ್ರ ಬಿಟ್ಟುಬಿಟ್ಟಿದೆಯೆಂಬ ವಿಷಯ ತಿಳಿದಿಲ್ಲ' ಎಂದುಕೊಂಡು ಸುಮ್ಮನಾದ.

ಹನುಮನನ್ನು ರಾವಣನ ಮುಂದೆ ನಿಲ್ಲಿಸಿದರು. ಕಪ್ಪು ಮಬ್ಬಿನಂತೆ, ಕಾಟಿಕೆಯ ಬೆಟ್ಟ ಸಿಂಹಾಸನದ ಮೇಲೆ ಕೂತಂತೆ ರಾವಣ ವಜ್ರ, ರತ್ನ, ಸ್ಫಟಿಕಗಳಿಂದ ಮಾಡಿದ್ದ ವೇದಿಕೆಯ ಮೇಲಿನ ಸಿಂಹಾಸನದಲ್ಲಿ ಕೂತಿದ್ದ. ವಾನರನಾದ ಹನುಮನ ಜೊತೆ ಮಾತಾಡುವುದು ನಾಚಿಕೆಯ ಸಂಗತಿಯೆಂದುಕೊಂಡು ತನ್ನ ಮಂತ್ರಿ ಪ್ರಹಸ್ತನ ಕಡೆ ತಿರುಗಿ, "ಇವನು ಎಲ್ಲಿಂದ ಬಂದ? ಏಕೆ ಬಂದ? ಇವನು ಯಾರು? ನನಗಿಷ್ಟವಾದ ಅಶೋಕವನವನ್ನು ಏಕೆ ನಾಶಮಾಡಿದ? ಸೀತೆಯ ಜೊತೆ ಮಾತಾಡಿದ್ದೇಕೆ ? ಎಂದು ಕೇಳಿ. ನಿಜ ಹೇಳಿದರೆ ಬದುಕುತ್ತಾನೆ. ಇಲ್ಲದಿದ್ದರೆ ಇವನ ಪ್ರಾಣ ಹೋಗುತ್ತದೆ" ಎಂದ.

ಪ್ರಹಸ್ತನೆದ್ದು ಹನುಮನಿಗೆ, "ನೀನು ಭಯ ಪಡಬೇಡ. ನಮ್ಮ ಪ್ರಭು ಧರ್ಮಾತ್ಮ. ನಿಜ ಹೇಳಿದರೆ ನಿನ್ನನ್ನು ಬಿಟ್ಟುಬಿಡುತ್ತಾರೆ. ನಿನ್ನನ್ನು ಅಗ್ನಿ ಕಳಿಸಿದನಾ? ಅಥವಾ ಯಮನಾ? ಕುಬೇರನಾ? ವಿಷ್ಣುವಾ? ಯಾರ ಕಾರಣಕ್ಕಾಗಿ ಬಂದೆ? ಅಶೋಕ ವನವನ್ನು ಏಕೆ ನಾಶ ಮಾಡಿದೆ?" ಎಂದು ಕೇಳಿದ.

ಹನುಮ ರಾವಣನ ಕಡೆ ನೋಡಿ, "ಎಂತಹ ಕಾಂತಿ? ಎಂತಹ ತೇಜಸ್ಸು? ಎಂತಹ ದ್ಯುತಿ? ಎಂತಹ ಪರಾಕ್ರಮ? ಸೀತೆಯನ್ನು ಅಪಹರಿಸಿದ ಪಾತಕವಿಲ್ಲದಿದ್ದರೆ ಇವನು ಜಗತ್ತನ್ನೇ ಆಳುತ್ತಿದ್ದ" ಎಂದ. ಹನುಮನನ್ನು ನೋಡಿದ ರಾವಣನಿಗೆ ಭಯವಾಯಿತು. 'ಇವನದು ಒಂದು ವಾನರನಿಗೆ ಇರಬೇಕಾದ ತೇಜಸ್ಸಲ್ಲ. ನಾನು ಜಾಂಬವಂತ, ವಾಲಿ, ಸುಗ್ರೀವ, ಸುಷೇಣ, ನೀಲರನ್ನು ನೋಡಿದ್ದೇನೆ. ಅವರು ಯಾರಿಗೂ ಇವನಷ್ಟು ಸಾಮರ್ಥ್ಯ, ಪರಾಕ್ರಮಗಳಿಲ್ಲ. ಕೈಲಾಸ ಪರ್ವತವನ್ನು ಎತ್ತಿದಾಗ ನಂದೀಶ್ವರ ವಾನರರಿಂದ ನನಗೆ ತೊಂದರೆ ಎಂದು ಶಪಿಸಿದ್ದ. ಬಹುಶಃ ಅವನೇ ವಾನರ ರೂಪದಲ್ಲಿ ಬಂದಿರಬಹುದು' ಎಂದುಕೊಂಡ

ಹನುಮ ಮುಂದುವರೆಸಿದ:
"ನಾನು ರಾಮನ ದೂತನಾಗಿ ಬಂದಿದ್ದೇನೆ. ನನ್ನ ಸ್ವರೂಪ ನಿಜವಾಗಿಯೂ ವಾನರನದೇ. ನನ್ನ ಹೆಸರು ಹನುಮ. ಸುಗ್ರೀವನ ಮಂತ್ರಿ. ಕಿಷ್ಕಿಂಧೆಯ ವಾಲಿ ನಿನಗೆ ತಿಳಿದಿದೆ. ಅವನನ್ನು ಕೊಂದು ರಾಮ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದ್ದಾನೆ. ನಿನಗೂ ವಾಲಿಗೂ ಇದ್ದ ಸ್ನೇಹದಿಂದ ಸುಗ್ರೀವ ನಿನಗೆ ಸೋದರನ ಸಮಾನ. ಅವನು ನಿನ್ನ ಕುಶಲವನ್ನು ವಿಚಾರಿಸಿದ್ದಾನೆ. ನಾನು ರಾಕ್ಷಸನೂ ಅಲ್ಲ, ನರನೂ ಅಲ್ಲ. ತಟಸ್ಥನಾದ ವಾನರ. ಆದ್ದರಿಂದ ನಿನ್ನ ಒಳಿತಿಗಾಗಿ ಒಂದೆರೆಡು ಮಾತುಗಳನ್ನು ಹೇಳುತ್ತೇನೆ. ಕೇಳಿದರೆ ಸರಿ. ಇಲ್ಲದಿದ್ದರೆ ನಿನ್ನ ಅಂತ್ಯ ಖಂಡಿತ. ನಿನ್ನನ್ನು ನೋಡಲು ಬೇರೆ ಉಪಾಯವಿಲ್ಲದೆ ದಂಡೋಪಾಯದಿಂದ ಅಶೋಕವನವನ್ನು ನಾಶ ಮಾಡಿದೆ. ನಿನ್ನವರು ನನ್ನ ಮೇಲೆ ಯುದ್ಧಕ್ಕೆ ಬಂದರು. ನನ್ನನ್ನು ನಾನು ಕಾಪಾಡಿಕೊಳ್ಳಲು ನಾಲ್ಕು ಗುದ್ದು ಗುದ್ದಿದೆ. ಅವರು ಸತ್ತುಬಿದ್ದರು

ಹಿಂದೆ ದಶರಥನೆಂಬುವವನು ಕೋಸಲದ ರಾಜನಾಗಿದ್ದ. ಅವನ ಮಕ್ಕಳಲ್ಲಿ ರಾಮ ಹಿರಿಯವನು. ತಂದೆಯ ಮಾತಿನಂತೆ ತಮ್ಮ ಲಕ್ಷ್ಮಣ ಮತ್ತು ಪತ್ನಿ ಸೀತೆಯರ ಜೊತೆ ಅರಣ್ಯವಾಸಕ್ಕೆ ಬಂದ. ಸೀತೆಯನ್ನು ನೀನು ಅಪಹರಿಸಿ ಲಂಕೆಯಲ್ಲಿ ತಂದಿಟ್ಟಿದ್ದೀಯ. ಸೀತೆ ಯಾರೋ ಗೊತ್ತಿಲ್ಲ ಎಂದು ಸುಳ್ಳು ಹೇಳಬೇಡ. ನಾನು ಸೀತೆಯನ್ನು ಅಶೋಕವನದಲ್ಲಿ ನೋಡಿದೆ. ಸೀತೆ ಐದು ತಲೆಯ ಹಾವು. ನಿನ್ನ ಮೃತ್ಯುವನ್ನು ನೀನೇ ತಂದಿಟ್ಟುಕೊಂಡಿದ್ದೀಯ. ರಾಮನ ಮುಂದೆ ನೀನು ನಿಲ್ಲುವುದಿಲ್ಲ. ರಾಮನೇಕೆ ಸುಗ್ರೀವನೇ ನಿನ್ನನ್ನು ಕೊಂದುಬಿಡುತ್ತಾನೆ. ರಾಮ ಸುಗ್ರೀವರಿಗೆ ಅಗ್ನಿಸಾಕ್ಷಿಯಾಗಿ ಸ್ನೇಹವಾಗಿದೆ. ಆದ್ದರಿಂದ ರಾಮನ ಶತ್ರು ಸುಗ್ರೀವನ ಶತ್ರು. ನೀನು ನರವಾನರರನ್ನು ಬಿಟ್ಟು ಇನ್ನಾರಿಂದಲೂ ಸಾವು ಬರಬಾರದೆಂದು ವರ ಕೇಳಿದ್ದೆ. ಸುಗ್ರೀವ ದೇವ, ಯಕ್ಷ, ಕಿನ್ನರ, ಗಂಧರ್ವ ಯಾರೂ ಅಲ್ಲ. ಅವನು ವಾನರ. ನಾವು ಮಾಡುವ ಪಾಪ ಪುಣ್ಯಗಳಿಗೆ ದೇವರು ಒಟ್ಟಿಗೆ ಫಲ ಕೊಡುತ್ತಾನೆ. ನೀನು ಮಾಡಿದ ಪುಣ್ಯದಿಂದ ಕಾಂಚನ ಲಂಕೆಯನ್ನು ಪಡೆದೆ. ಅನೇಕ ಸ್ತ್ರೀಯರನ್ನು ಪಡೆದೆ. ಇಷ್ಟು ಜನ ರಾಕ್ಷಸರಿಗೆ ರಾಜನಾದೆ. ಆದರೆ ಸೀತೆಯನ್ನು ಅಪಹರಿಸಿದ ಪಾಪಕ್ಕೆ ನೀನು ಸಾಯುತ್ತೀಯ. ರಾಮನಿಗೆ ಸಮಸ್ತ ಅಸ್ತ್ರ ಶಸ್ತ್ರಗಳು ತಿಳಿದಿವೆ. ಋಷಿಗಳ ಬಳಿ ಶಿಕ್ಷಣ ಪಡೆದಿದ್ದಾನೆ. ಮಹಾ ಧರ್ಮಾತ್ಮ. ಅವನು ಬಿಡುವ ಬಾಣದ ಮುಂದೆ ನೀನು ನಿಲ್ಲಲಾರೆ. ನೀನೇನು, ನಿನ್ನಂತಹ ಲಕ್ಷ ರಾವಣರು ಬಂದರೂ ನಿಲ್ಲುವುದಿಲ್ಲ. ಒಂದು ಬಾರಿ ನೀನು ಕೈಲಾಸ ಪರ್ವತವನ್ನು ಎತ್ತಲು ಹೋದಾಗ ಶಿವ ಕಾಲಿನಿಂದ ಪರ್ವತವನ್ನು ತುಳಿದ. ಆಗ ನಿನ್ನ ಬೆರಳುಗಳು ಅದರ ಕೆಳಗೇ ಸಿಕ್ಕಿಹಾಕಿಕೊಂಡವು. ಶಿವನ ಧನಸ್ಸನ್ನು ಲೀಲಾಜಾಲವಾಗಿ ಮುರಿದುಬಿಟ್ಟವನು ರಾಮ. ಪ್ರಪಂಚದಲ್ಲಿದ್ದ ಕ್ಷತ್ರಿಯರನ್ನೆಲ್ಲ ಸೋಲಿಸಿದ ಪರಶುರಾಮರನ್ನೇ ಸೋಲಿಸಿದ. ೧೪೦೦೦ ರಾಕ್ಷಸರನ್ನು ರಾಮನೊಬ್ಬನೇ ಕೊಂದ. ಅವನ ಮುಂದೆ ನೀನು ಬದುಕುತ್ತೀಯ? ನಿನಗೆ ರಾಮನೇಕೆ? ನಾನೇ ಸಾಕು. ಮರ್ಯಾದೆಯಾಗಿ ಸೀತೆಯನ್ನು ನನಗೆ ಒಪ್ಪಿಸಿದರೆ ಬದುಕುತ್ತೀಯ. ಇಲ್ಲದಿದ್ದರೆ ನಿನ್ನ ಸಾವು ಖಂಡಿತ."

ಸಭೆ ಸ್ತಬ್ಧವಾಯಿತು. ತುಂಬು ಸಭೆಯಲ್ಲಿ ಹನುಮ ಮಾತಾಡಿದ್ದನ್ನು ಸಹಿಸದೆ ಕೋಪಗೊಂಡ ರಾವಣ, " ವಾನರವನ್ನು ಕೊಂದುಬಿಡಿ" ಎಂದ.

ತಕ್ಷಣ ವಿಭೀಷಣ ಮೇಲಕ್ಕೆದ್ದು, "ಅಣ್ಣ! ನೀನು ವೇದವನ್ನು, ಧರ್ಮಗಳನ್ನು ಓದಿಕೊಂಡಿದ್ದೀಯ. ದೂತರನ್ನು ಕೊಲ್ಲುವುದು ಸರಿಯಲ್ಲ. ದೂತರಿಗೆ ಕೊಡುವ ಶಿಕ್ಷೆಗಳಾದ ತಲೆ ಬೋಳಿಸುವುದು, ಶರೀರದ ಯಾವುದಾರಾದರೂ ಭಾಗವನ್ನು ತೆಗೆಯುವುದು ಹಾಗೇನಾದರೂ ಮಾಡೋಣ. ವಾನರವನ್ನು ಕೊಂದರೆ ನಿನ್ನ ಬಲ ಬೇರೆಯವರಿಗೆ ತಿಳಿಯುವದಿಲ್ಲ" ಎಂದು ಸಲಹೆಕೊಟ್ಟ. ವಿಭೀಷಣನ ಮಾತಿಗೆ ಸಮ್ಮತಿಸಿದ ರಾವಣ, "ಕೋತಿಗಳಿಗೆ ಅವರ ಬಾಲವೆಂದರೆ ತುಂಬಾ ಇಷ್ಟ. ಆದ್ದರಿಂದ ಕೋತಿಯ ಬಾಲವನ್ನು ಸುಟ್ಟುಬಿಡಿ. ಇದನ್ನು ಕಳಿಸಿದವರ ಬಳಿ ಹೋಗಲಿ. 'ಬಾಲವಿಲ್ಲದ ಕೋತಿ' ಎಂದು ಅವರೆಲ್ಲ ಹಾಸ್ಯ ಮಾಡಲಿ" ಎಂದ.


ಹನುಮನ ಬಾಲಕ್ಕೆ ಬಟ್ಟೆ ಸುತ್ತಿ, ತುಪ್ಪ ಸವರಿ ಬೆಂಕಿ ಹಚ್ಚಿದರು. ಅವನನ್ನು ರಥಕ್ಕೆ ಕಟ್ಟಿ ಕಟ್ಟಿಗೆಗಳಿಂದ ಹೊಡೆಯುತ್ತಾ, "ಗೂಢಾಚಾರಿ" ಎಂದು ಪ್ರಕಟಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಲಂಕೆಯ ಜನ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು. ಆದರೆ ಹನುಮ, 'ರಾತ್ರಿ ವೇಳೆಯಲ್ಲಿ ಲಂಕೆಯನ್ನು ನೋಡಿದೆ. ಒಂದು ಬಾರಿ ಹಗಲಿನಲ್ಲೂ ನೋಡಿ ಲಂಕೆಯ ಬಲವನ್ನು ಸುಗ್ರೀವನಿಗೆ ಹೇಳುತ್ತೇನೆ' ಎಂದುಕೊಂಡ. ಅವರು ಲಂಕೆಯನ್ನೆಲ್ಲ ಸುತ್ತಿಸಿದ ಮೇಲೆ ಹನುಮ ಕಟ್ಟು ಬಿಚ್ಚಿಕೊಂಡು ರಾಜದ್ವಾರದ ಮೇಲೆ ಹತ್ತಿ ಸುಡುತ್ತಿದ್ದ ಬಾಲವನ್ನು ಕೈಯಲ್ಲಿ ಹಿಡಿದುಕೊಂಡ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ