೭೮. ಸೈನ್ಯ ಹೊರಟಿತು

ಎಲ್ಲಾ ಸರಿ. ಆದರೆ ೧೦೦ ಯೋಜನಗಳ ಸಮುದ್ರವನ್ನು ದಾಟಿ ಯಾರು ಹೋಗುತ್ತಾರೆ? ನಮಗಿರುವ ಈ ವಾನರ ಸಮೂಹದ ಜೊತೆ ಸಮುದ್ರ ದಾಟುವುದು ಹೇಗೆ? ಅದರಲ್ಲಿ ಕ್ರೂರ ರಾಕ್ಷಸರು, ತಿಮಿಂಗಲಗಳು, ಮೊಸಳೆಗಳು ಇರುತ್ತವಲ್ಲವೇ?” ಎಂದು ರಾಮ ಯೋಚಿಸುತ್ತಿದ್ದಾಗ ಸುಗ್ರೀವ, “ರಾಮ ನೀನು ಯೋಚಿಸಬೇಡ. ನಿನ್ನ ಉತ್ಸಾಹ, ಪೌರುಷ, ಪರಾಕ್ರಮಗಳನ್ನು ಒಂದು ಬಾರಿ ಜ್ಞಾಪಿಸಿಕೊ. ನೀನು ಬಾಣ ಹಿಡಿದು ನಿಂತರೆ ನಿನ್ನ ಮುಂದೆ ನಿಲ್ಲುವವರು ಯಾರು? ನಿನಗೆ ಈ ಬ್ರಹ್ಮಾಂಡವನ್ನೇ ಆಳುವ ಶಕ್ತಿಯಿದೆ. ನೀನು ಆಜ್ಞೆ ಮಾಡಿದರೆ ನಿನ್ನ ಹಿಂದೆ ಬರಲು ಸಮಸ್ತ ವಾನರ ಸೈನ್ಯ ಸಿದ್ಧವಾಗಿದೆ. ಒಂದು ಬಾರಿ ವಾನರ ಸೈನ್ಯ ಲಂಕೆಯಲ್ಲಿ ಕಾಲಿಟ್ಟರೆ ರಾವಣನಿಗೆ ಏನೂ ಮಾಡಲಾಗುವುದಿಲ್ಲ. ಸಮುದ್ರ ದಾಟುವ ವಿಷಯದ ಮೇಲೆ ದೃಷ್ಠಿಯಿಡುವುದನ್ನು ಬಿಟ್ಟು ಮುಂದಿನ ದಾರಿಯನ್ನು ಉಪದೇಶಿಸು” ಎಂದ.

ಸುಗ್ರೀವನ ಮಾತುಗಳಿಗೆ ಉತ್ಸಾಹಗೊಂಡು ರಾಮ, “ನಿಜವೇ! ನಾನು ಅಂದುಕೊಂಡರೆ ನನ್ನ ತಪಃಶ್ಶಕ್ತಿಯಿಂದ ಈ ವಾನರರನ್ನು ಸಮುದ್ರ ದಾಟಿಸುತ್ತೇನೆ. ನನ್ನ ಅಸ್ತ್ರಗಳಿಂದ ಸಮುದ್ರವನ್ನು ಇಂಗಿಸುತ್ತೇನೆ” ಎಂದು ಹೇಳಿ ಹನುಮನ ಕಡೆ ತಿರುಗಿ, “ಹನುಮಾ! ಆ ಲಂಕಾಪಟ್ಟಣದ ಬಲದ ಕುರಿತು ಹೇಳು. ಅಲ್ಲಿ ಎಷ್ಟು ಸೈನ್ಯವಿದೆ? ದ್ವಾರಗಳು, ಕೋಟೆಗಳು ಹೇಗಿವೆ?” ಎಂದು ಕೇಳಿದ.

ಹನುಮ ಹೇಳಿದ: “ಸಮುದ್ರವನ್ನು ದಾಟಿ ಹೋದರೆ ತ್ರಿಕೂಟಾಚಲ ಪರ್ವತದ ಮಧ್ಯದಲ್ಲಿ ನಮಗೆ ಲಂಕೆ ಸಿಗುತ್ತದೆ. ಅದು ಶತೃಗಳಿಗೆ ದುರ್ಭೇದ್ಯ. ದೇವದಾನವರೂ ಅದನ್ನು ಆಕ್ರಮಿಸಲಾರರು. ಲಂಕೆಯ ಸುತ್ತ ಒಂದು ನದಿ ಹರಿಯುತ್ತದೆ. ಅದರಲ್ಲಿ ಒಂದು ವಿಶಾಲವಾದ ನಾಲೆ ಕಟ್ಟಿದ್ದಾರೆ. ನದಿಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸೇತುವೆಗಳಿವೆ. ಆ ಸೇತುವೆಗಳ ಮೇಲೆ ಸಾವಿರಾರು ಪಿರಂಗಿಗಳು ಯಾವಾಗಲೂ ಸಿದ್ಧವಾಗಿರುತ್ತವೆ. ಇವುಗಳ ಜೊತೆ ಲಂಕೆಗೆ ನಾಲ್ಕು ದುರ್ಗಗಳಿವೆ. ನದಿಯಿಂದ ಕಾಪಾಡಲ್ಪಡುವ ದುರ್ಗಕ್ಕೆ ನದಿದುರ್ಗವೆನ್ನುತ್ತಾರೆ. ಅಂತೆಯೇ ಅಲ್ಲಿ ಪರ್ವತದುರ್ಗ, ಅರಣ್ಯದುರ್ಗಗಳಿವೆ. ಇನ್ನೊಂದು ಕೈತ್ರಿಮವಾದ ದುರ್ಗವೂ ಅಲ್ಲಿದೆ. ಅದನ್ನು ಕೃತ್ರಿಮದುರ್ಗವೆನ್ನುತ್ತಾರೆ. ಲಂಕೆಗೆ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ದ್ವಾರಗಳಿವೆ. ಪೂರ್ವ ದ್ವಾರವನ್ನು ಹತ್ತುಸಾವಿರ ರಾಕ್ಷಸರು ಆಯುಧಗಳನ್ನು ಹಿಡಿದು, ಕುದುರೆ, ಆನೆಗಳ ಮೇಲೆ ತಿರುಗುತ್ತಾ ಕಾವಲು ಕಾಯುತ್ತಿರುತ್ತಾರೆ. ದಕ್ಷಿಣ ದ್ವಾರವನ್ನು ಲಕ್ಷ ಸೈನಿಕರು, ಪಶ್ಚಿಮ ದ್ವಾರವನ್ನು ಹತ್ತುಲಕ್ಷ ಸೈನಿಕರು ಮತ್ತು ಉತ್ತರ ದ್ವಾರವನ್ನು ಕೋಟಿ ಸೈನಿಕರು ಕಾವಲು ಕಾಯುತ್ತಿರುತ್ತಾರೆ. ಆ ರಾಕ್ಷಸರಿಗೆ ಯುದ್ಧಮಾಡುವುದೆಂದರೆ ತುಂಬಾ ಇಷ್ಟವಾದ ವಿಷಯ. ರಾಜದ್ವಾರಕ್ಕೆ ಭಯಂಕರವಾದ ಕಬ್ಬಿಣದ ಬೀಗಗಳು, ಪರಿಘಗಳನ್ನು ಬಿಗಿಸಿದ್ದಾರೆ. ಲಂಕೆಯನ್ನು ಸೇರಿ ಯುದ್ಧ ಮಾಡುವುದು ಆಷ್ಟು ಸಾಮಾನ್ಯವಾದ ವಿಷಯವೇನಲ್ಲ. ನೀವು ಆಜ್ಞೆಮಾಡಿದರೆ ಸುಷೇಣ, ಗಂಧಮಾದನ, ನೀಲ, ನಲ, ದ್ವಿವಿದ, ಮೈಂದ, ಸುಗ್ರೀವ, ಅಂಗದರು ಲಂಕೆಯನ್ನು ಸರ್ವನಾಶಮಾಡಿಬಿಡುತ್ತಾರೆ. ನಾನು ಹೋದಾಗ ಅಲ್ಲಿನ ರಾಕ್ಷಸ ಸೈನ್ಯದ ಒಂದು ಭಾಗವನ್ನು ನಾಶ ಮಾಡಿದ್ದೇನೆ. ಒಂದು ಸೇತುವೆಯನ್ನು ಪೂರ್ತಿಯಾಗಿ ಮುರಿದುಬಿಟ್ಟಿದ್ದೇನೆ. ಅನೇಕ ಪ್ರಾಸಾದಗಳನ್ನು ಬೀಳಿಸಿದ್ದೇನೆ. ಪ್ರಸ್ತುತವಾಗಿ ಲಂಕೆ ಚದುರಿಹೋಗಿದೆ. ರಾಕ್ಷಸರು ಉದ್ವಿಗ್ನರಾಗಿದ್ದಾರೆ. ಅವರ ಜೊತೆ ಯುದ್ಧ ಮಾಡಲು ಇದು ಪ್ರಶಸ್ತವಾದ ಸಮಯವೆಂದು ನನ್ನ ಅಭಿಪ್ರಾಯ.” 

ಸುಗ್ರೀವ, “ನನಗೆ ಶುಭಶಕುನಗಳು ಕಾಣಿಸುತ್ತಿವೆ. ನನ್ನ ಮನಸ್ಸಿನಲ್ಲಿ ಉತ್ಸಾಹ ಇಮ್ಮಡಿಯಾಗುತ್ತಿದೆ. ನಾವು ಸಮುದ್ರಕ್ಕೆ ಸೇತುವೆ ಕಟ್ಟಿ ಅದನ್ನು ದಾಟಿದರೆ ರಾವಣನನ್ನು ಕಟ್ಟಿಹಾಕಿದಂತೆಯೇ. ಒಳ್ಳೆಯ ಮುಹೂರ್ತ ನಿರ್ಣಯಿಸಿ. ನಾವು ಹೊರಡೋಣ” ಎಂದ.

ಸುಗ್ರೀವನ ಮಾತಿಗೆ ರಾಮ, “ನಾವು ಯೋಚನೆ ಮಾಡುತ್ತಿರುವ ಈ ಸಮಯದಲ್ಲಿ ಸೂರ್ಯ ಆಕಾಶದ ಮಧ್ಯದಲ್ಲಿದ್ದಾನೆ. ಇಂದಿನ ವಿಶಾಖಾ ನಕ್ಷತ್ರ ನಮ್ಮ ಇಕ್ಷ್ವಾಕು ವಂಶೀಯರದೇ. ಇಂದಿರುವ ಮುಹೂರ್ತವನ್ನು ವಿಜಯೀ ಮುಹೂರ್ತವೆಂದು ಕರೆಯುತ್ತಾರೆ. ನಾವು ಈಗಲೇ ಸೈನ್ಯ ತೆಗೆದುಕೊಂಡು ಹೊರಡೋಣ” ಎಂದ. ರಾಮನ ಮಾತು ಕೇಳಿ ವಾನರರರು ಸಂತೋಷದಿಂದ, “ಜೈ ಶ್ರೀರಾಂ! ಜೈ ಜೈ ಶ್ರೀರಾಂ! ಹೊರಡೋಣ. ಲಂಕೆಯನ್ನು ಸೇರೋಣ. ರಾವಣನನ್ನು ಸಂಹರಿಸೋಣ” ಎಂದು ಕೂಗಿದರು.

ನಂತರ ರಾಮ ಸುಗ್ರೀವನಿಗೆ, “ವೃದ್ಧರು, ಶರೀರದಲ್ಲಿ ಶಕ್ತಿಯಿಲ್ಲದವರು, ಏಟು ತಿಂದಿರುವವರು ನಮ್ಮ ಜೊತೆ ಬರುವುದು ಬೇಡ. ಮೊದಲು ನೀಲ ವಿಶೇಷವಾದ ಬಲವುಳ್ಳ ಲಕ್ಷ ವಾನರರ ಜೊತೆ ಹೊರಡಲಿ. ಮಿಕ್ಕ ವಾನರರು ಬರಲು ಬೇಕಾದ ದಾರಿಯನ್ನು ಅವರು ಸಿದ್ಧಪಡಿಸಬೇಕು. ಎಲ್ಲರಿಗೂ ಅನುವಾದ ರೀತಿಯಲ್ಲಿ ರಹದಾರಿಯಿರಬೇಕು. ಸ್ವಲ್ಪಹೊತ್ತು ಪ್ರಯಾಣ ಮಾಡಿದ ಮೇಲೆ ಎಲ್ಲರೂ ಬಳಲುತ್ತಾರೆ. ಅವರು ವಿಶ್ರಾಂತಿ ಪಡೆಯಲು ವೃಕ್ಷ ಸಮುದಾಯವಿರಬೇಕು. ಕುಡಿಯಲು ನೀರು, ತಿನ್ನಲು ಹಣ್ಣು, ಜೇನುಗಳು ಸಿಗಬೇಕು. ಅಂತಹ ಸ್ಥಳವನ್ನು ನೀಲನೇ ನಿರ್ಣಯಿಸಬೇಕು. ಸೈನ್ಯದ ಮುಂದೆ ಗಜ, ಗವಾಕ್ಷ, ಗವಯ ನಡೆಯಲಿ. ಸೈನ್ಯದ ಬಲ ಭಾಗದಲ್ಲಿ ಋಷಭ ಲಕ್ಷ ವಾನರರ ಜೊತೆ ಕಾವಲು ಕಾಯಲಿ. ಎಡ ಭಾಗದಲ್ಲಿ ಗಂಧಮಾದನ ಕಾವಲು ಕಾಯಲಿ. ಹಾಗೆಯೇ ಹಿಂದೆಯೂ ಲಕ್ಷ ವಾನರರು ಸೈನ್ಯವನ್ನು ಕಾವಲು ಕಾಯಲಿ. ಹೋಗುವ ದಾರಿಯಲ್ಲಿ ಸರೋವರಗಳಿರುತ್ತವೆ. ಅವುಗಳನ್ನು ಶತ್ರುಗಳು ವಿಷ ಬೆರೆಸಿ ನಾಶ ಮಾಡಬಹುದು. ಆ ನೀರನ್ನು ವಾನರರು ಕುಡಿದರೆ ಸಾಯಬಹುದು. ಆದ್ದರಿಂದ ನಾವು ಬೇಗ ಹೋಗಿ ಸರೋವರಗಳ ಕಾವಲು ಕಾಯಬೇಕು. ನಾನು ಸೈನ್ಯ ಮಧ್ಯದಲ್ಲಿ ಹನುಮನ ಭುಜದ ಮೇಲೆ ಕೂತು ಬರುತ್ತೇನೆ. ಲಕ್ಷ್ಮಣ ಅಂಗದನ ಭುಜದ ಮೇಲೆ ಕೂತು ಬರುತ್ತಾನೆ. ಜಾಂಬವಂತ ಮೊದಲಾದವರು ಎಲ್ಲ ದಿಕ್ಕುಗಳಲ್ಲಿ ಸೈನ್ಯವನ್ನು ರಕ್ಷಿಸಿಲಿ“ ಎಂದು ಹೇಳಿದ.

ವಾನರ ಸೈನ್ಯ ಹೊರಟಿತು. ರಾಮನ ಪಕ್ಕ ನಡೆಯುತ್ತಿದ್ದವರು, “ಲಂಕೆಗೆ ಹೋದಮೇಲೆ ನೋಡು ಏನು ಮಾಡುತ್ತೇನೆಂದು”, “ನಾನು ಒಂದು ಗುದ್ದು ಗುದ್ದಿದರೆ ಅವನ ತಲೆ ಒಡೆಯಬೇಕು” ಎಂದು ಮುಂತಾಗಿ ರಾಮನಿಗೆ ಕೇಳಿಸುವಂತೆ ಕೂಗುತ್ತಿದ್ದರು. ಬಲಶಾಲಿಗಳು ನಿಧಾನವಾಗಿ ನಡೆಯುತ್ತಿದ್ದವರನ್ನು ಎತ್ತಿ ಪಕ್ಕಕ್ಕೆ ಬಿಸಾಡಿ ಹೋಗುತ್ತಿದ್ದರು. ಕೆಲವರು ಬೇಗ ಬೇಗ ಹೋಗಲು ಬೆಟ್ಟಗಳ ಮೇಲೆ ಹತ್ತಿ ಹೋಗುತ್ತಿದ್ದರು. ಕೆಲವರು ಮರಗಳನ್ನು ಕಿತ್ತು ಛತ್ರಿಗಳನ್ನಾಗಿ ಮಾಡಿಕೊಂಡು ಹೋಗುತ್ತಿದ್ದರು. ಎಲ್ಲರೂ ಹೊರಟು ದಕ್ಷಿಣದ ಸಹ್ಯಾದ್ರಿ ಪರ್ವತಕ್ಕೆ ಸೇರಿಕೊಂಡರು. ಅಲ್ಲಿದ್ದ ಹಣ್ಣುಗಳನ್ನು ತಿಂದು ವಿಶ್ರಮಿಸಿದರು. ಅಲ್ಲಿಂದ ಹೊರಟು ಸ್ವಲ್ಪ ದೂರ ಪ್ರಯಾಣಿಸಿದ ಮೇಲೆ ಅವರಿಗೆ ಸಮುದ್ರ ಕಾಣಿಸಿತು. ಸಮುದ್ರ ಸೇರುವ ಹೊತ್ತಿಗೆ ಕತ್ತಲಾಗಿತ್ತು.

ರಾಮ, “ನೀವೆಲ್ಲ ಹುಷಾರಾಗಿ ಇಲ್ಲಿ ಬಿಡದಿ ಮಾಡಿ. ರಾಕ್ಷಸರ ಕಣ್ಣಿಗೆ ಬೀಳದಂತೆ ಸೈನ್ಯವನ್ನು ಮೂರು ಭಾಗಗಳನ್ನಾಗಿ ಮಾಡಿ” ಎಂದ. ರಾಮನ ಮಾತಿನಂತೆ ವಾನರ ಸೈನ್ಯ, ಲಾಂಗೂಲಗಳ ಸೈನ್ಯ ಮತ್ತು ಕರಡಿಗಳ ಸೈನ್ಯ ಹೀಗೆ ಮೂರು ಭಾಗಗಳನ್ನಾಗಿ ವಿಂಗಡಿಸಿದರು. 


ಚಂದ್ರನ ಕಾಂತಿ ನೀರಿನ ಮೇಲೆ, ಎಲೆಗಳ ಮೇಲೆ ಬಿದ್ದು ಕಂಗೊಳಿಸುತ್ತಿತ್ತು. ಚಂದ್ರನನ್ನು, ಅವನನ್ನು ನೋಡಿ ಉಬ್ಬುತ್ತಿದ್ದ ಸಮುದ್ರವನ್ನು ನೋಡಿದರೆ ಆಶ್ಚರ್ಯವಾಗುತ್ತಿತ್ತು. ಗಾಳಿಯಿಂದ ತೇಲುತ್ತಿದ್ದ ನೀರು ಚಂದ್ರನ ಕಾಂತಿಯಿಂದ ಬೆಳ್ಳಿಯಂತೆ ಹೊಳೆಯುತ್ತಿತ್ತು. ನಕ್ಷತ್ರಗಳು ಸಮುದ್ರದ ಮೇಲೆ ಪ್ರತಿಫಲಿಸುತ್ತಾ ಅಗ್ನಿಚೂರ್ಣವನ್ನು ನೀರಿನ ಮೇಲೆ ಚಲ್ಲಿದಂತಿತ್ತು. ಆಕಾಶ ಸಮುದ್ರದಂತೆ, ಸಮುದ್ರ ಆಕಾಶದಂತೆ ಕಾಣಿಸುತ್ತಿತ್ತು. ಆಕಾಶದಲ್ಲಿ ತಾರೆಗಳು, ಸಮುದ್ರದಲ್ಲಿ ರತ್ನಗಳು. ಆಕಾಶದಲ್ಲಿ ಚಲಿಸುವ ಮೋಡಗಳು, ಸಮುದ್ರದಲ್ಲಿ ಉಕ್ಕುತ್ತಿರುವ ಅಲೆಗಳು. ಹೀಗೆ ಆಕಾಶ ಸಮುದ್ರಗಳ ನಡೆವೆ ಯಾವುದೇ ವ್ಯತ್ಯಾಸವಿಲ್ಲದಂತಿತ್ತು. ರಾಮ ಸಮುದ್ರವನ್ನು ನೋಡುತ್ತಾ, ‘ಸೀತೆ ಲಂಕೆಯಲ್ಲಿದ್ದಾಳೆ. ನಾನು ಇಲ್ಲಿದ್ದೇನೆ. ಚಂದ್ರ! ಸೀತೆ ನಿನ್ನನ್ನು ನೋಡುತ್ತಾಳೆ. ನೀನು ನನ್ನನ್ನು ನೋಡಿದರೆ ನನಗೆ ಸಮಾಧಾನವಾಗುತ್ತದೆ. ಸೀತೆಯನ್ನು ತಾಕಿ ಆ ಕಡೆಯಿಂದ ಬರುವ ಗಾಳಿ ನನ್ನನ್ನು ತಾಕಿದರೆ ಎಷ್ಟೋ ಸಂತೋಷವಾಗುತ್ತದೆ’ ಎಂದುಕೊಳ್ಳುತ್ತಿದ್ದ. 

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ