೭೯. ವಿಭೀಷಣನ ವಿವೇಚನೆ
ಅತ್ತ ಲಂಕೆಯಲ್ಲಿ ರಾವಣ ಮಂತ್ರಿಗಳ ಜೊತೆ ತಲೆ ತಗ್ಗಿಸಿ ಕುಳಿತಿದ್ದ. “ನಡೆಯಬಾರದ್ದು ನಡೆದಿದೆ. ನಾನು ಸೀತೆಯನ್ನು ಅಪಹರಿಸಿರುವುದು ನಿಮಗೆ ಗೊತ್ತಿರುವ ಸಂಗತಿ. ರಾಮ ನನ್ನ ಮೇಲೆ ಯುದ್ದಕ್ಕೆ ಬರುತ್ತಿದ್ದಾನೆ. ಹನುಮಂತನೊಬ್ಬನೇ ಇಲ್ಲಿಗೆ ಬಂದು ಲಂಕೆಯನ್ನು ಧ್ವಂಸ ಮಾಡಿದ್ದು ನಿಮಗೇ ತಿಳಿದಿದೆ. ಈ ಮಾತು ಹೇಳಲು ನನಗೆ ನಾಚಿಕೆಯಾಗುತ್ತಿದೆ. ಗೂಢಾಚಾರರಿಂದ ಬಂದ ವಾರ್ತೆಯೇನೆಂದರೆ ರಾಮ ಸಮುದ್ರ ತೀರಕ್ಕೆ ಬಂದು ಸೇರಿದ್ದಾನೆ. ಹೇಗಾದರೂ ಮಾಡಿ ಸಮುದ್ರವನ್ನು ದಾಟುತ್ತಾನೆ. ನಾವು ರಾಮ, ಲಕ್ಷ್ಮಣ, ವಾನರರ ಜೊತೆ ಯುದ್ಧ ಮಾಡಬೇಕಾಗುತ್ತದೆ. ನೀವೆಲ್ಲ ಏಕಾಭಿಪ್ರಾಯವಾಗಿ ನಿರ್ಧಾರ ತಿಳಿಸಿ. ಮಂತ್ರಿಗಳು ಏಕಾಭಿಪ್ರಾಯವಾಗಿ ಹೇಳುವ ಮಾತು ಉತ್ತಮವಾದ ಮಾತು. ತಮ್ಮಲ್ಲಿ ಭೇದಗಳಿದ್ದರೂ, ಅವನ್ನು ಪಕ್ಕಕ್ಕಿಟ್ಟು ಹೇಳುವ ಮಾತು ಮಧ್ಯಮ ಮಾತು. ಮಂತ್ರಿಗಳೆಲ್ಲ ಬೆರೆ ಬೇರೆಯಾಗಿ ಹೇಳುವ ಮಾತು ಅಧಮವಾದ ಮಾತು. ಈಗ ನೀವು ನನಗೆ ಉತ್ತಮವಾದ ಮಾತು ಹೇಳಿ” ಎಂದ.
ಮಂತ್ರಿಗಳೆಲ್ಲ ಸೇರಿ, “ಪ್ರಭು ನೀವೆಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದೀರ? ನೀವು ಹಿಮಾಲಯದಲ್ಲಿದ್ದ ಕುಬೇರನ ಮೇಲೆ ಯುದ್ಧ ಮಾಡಿ ಅವನನ್ನು ಓಡಿಸಿ ಪುಷ್ಪಕ ವಿಮಾನವನ್ನು ತಂದವರು. ಅವನಿದ್ದ ಮನೆಯಿಂದಲೇ ಅವನನ್ನು ಓಡಿಸಿ ಲಂಕೆಯನ್ನು ವಶಪಡಿಸಿಕೊಂಡವರು. ನಿಮ್ಮ ತಂಗಿ ಕುಂಭೀನಸಿಯ ಗಂಡ ಮಧುವನ್ನು ಓಡಿಸಿ ಅಲ್ಲಿಂದ ಅನೇಕ ವಸ್ತುಗಳನ್ನು ತಂದಿದ್ದೀರಿ. ಪಾತಾಳದಲ್ಲಿದ್ದ ನಾಗ, ತಕ್ಷಕ, ಜಟೆ ಮೊದಲಾದವರನ್ನು ಓಡಿಸಿ ಅಪಾರವಾದ ಕೀರ್ತಿಯನ್ನು ಪಡೆದಿದ್ದೀರ. ದೇವಲೋಕದ ದೇವೇಂದ್ರನನ್ನು, ಯಮಲೋಕದ ಯಮನನ್ನು ಓಡಿಸಿದ್ದೀರ. ಇಷ್ಟುಮಂದಿಯನ್ನು ಮಟ್ಟಹಾಕಿದ ನೀವು ಭಯಪಡಬೇಕಿಲ್ಲ. ನಿಮ್ಮ ಬಳಿ ಇಂದ್ರಜಿತ್ತನಿದ್ದಾನೆ. ಅವನ ಮುಂದೆ ಆ ರಾಜಕುಮಾರರು ಎಷ್ಟರವವರು?” ಎಂದರು.
ರಾವಣನ ಮಂತ್ರಿಗಳಲ್ಲಿ ಒಬ್ಬನಾದ ಪ್ರಹಸ್ತನೆದ್ದು, “ರಾವಣ ನೀನು ಭಯಪಡಬೇಡ. ನಾನು ಒಬ್ಬ ಯುದ್ಧಕ್ಕೆ ಹೋದರೆ ಸಾಕು. ಆ ರಾಮಲಕ್ಷ್ಮಣರನ್ನು ಕೊಂದುಬಿಡುತ್ತೇನೆ. ನಿನ್ನೆ ಮತ್ತಿನಲ್ಲಿದ್ದರಿಂದ ಆ ವಾನರನನ್ನು ಹಿಡಿಯಲಾಗಲಿಲ್ಲ” ಎಂದ.
ವಜ್ರದಂಷ್ಟ್ರನೆದ್ದು, “ರಾಮನನ್ನು ಮೋಸ ಮಾಡಿ ಗೆಲ್ಲುವ ಪ್ರಣಾಳಿಕೆಯನ್ನು ನಿಮಗೆ ಹೇಳುತ್ತೇನೆ. ನಮ್ಮ ಬಳಿ ಕಾರೂಪಿಗಳಾದ ಎಷ್ಟೋ ರಾಕ್ಷಸರಿದ್ದಾರೆ. ಅವರನ್ನು ಭರತರ ಸೈನ್ಯದಂತೆ ರೂಪ ಬದಲಾಯಿಸಿ ರಾಮನ ಬಳಿ ಕಳಿಸಿ, ‘ಅಯೋಧ್ಯೆಯಲ್ಲಿ ಮೂಖ್ಯವಾದ ಕೆಲಸವಿದೆ. ಭರತ ತುಂಬಾ ಕಷ್ಟದಲ್ಲಿದ್ದಾನೆ. ನಿನ್ನನ್ನು ತಕ್ಷಣ ಬರಬೇಕೆಂದಿದ್ದಾನೆ’ ಎಂದು ಹೇಳಿಸೋಣ. ಭರತನ ಮೇಲಿನ ಪ್ರೀತಿಯಿಂದ ರಾಮ ಹೋಗುತ್ತಾನೆ. ಅದೇ ಸಮಯದಲ್ಲಿ ನಮ್ಮ ಸೈನ್ಯ ರಾಮನನ್ನು ಹೊಡೆದುಬಿಡಲಿ. ಆಗ ವಾನರರು ದಿಕ್ಕಾಪಾಲಾಗಿ ಓಡುತ್ತಾರೆ. ನೀವು ಆಜ್ಞೆ ಮಾಡಿ. ಮರುಕ್ಷಣದಲ್ಲಿ ನಾವು ಹೊರಡುತ್ತೇವೆ” ಎಂದ.
ಕುಂಭಕರ್ಣನ ಮಗನಾದ ನಿಕುಂಭನೆದ್ದು, “ಇದಕ್ಕೆ ಮೋಸವೇಕೆ? ನಾನೇ ಹೋಗಿ ಅವರನ್ನು ಕೊಂದು ಬರುತ್ತೇನೆ” ಎಂದ.
ರಾವಣನ ತಮ್ಮನಾದ ವಿಭೀಷಣನೆದ್ದು, “ನಿರ್ಲಕ್ಷ್ಯದಿಂದ ಇರುವ ರಾಜರ ಮೇಲೆ, ಬೇರೆ ಶತ್ರುವಿನ ಮೇಲೆ ಯುದ್ದ ಮಾಡುತ್ತಿರುವ ರಾಜರ ಮೇಲೆ, ದೈವ ಪ್ರತಿಕೂಲವಾಗಿರುವ ರಾಜರ ಮೇಲೆ ಯುದ್ಧ ಮಾಡುವುದು ಸುಲಭ. ಆದರೆ ಈಗ ರಾಮನೇ ಯುದ್ಧಕ್ಕೆ ಬಂದಿದ್ದಾನೆ. ಎಚ್ಚರಿಕೆಯಿಂದಿದ್ದಾನೆ. ದೈವ ಅವನಿಗೇ ಅನುಕೂಲಕರವಾಗಿದೆ. ನೀವೆಲ್ಲ ರಾಮನನ್ನು ಕೊಲ್ಲುತ್ತೇನೆ, ಹಿಡಿಯುತ್ತೇನೆ ಎನ್ನುತಿದ್ದೀರ. ರಾಮ ನಿಮಗೆ ಕೈಲಾಗದವನಂತೆ ಕಾಣಿಸುತ್ತಿದ್ದಾನಾ? ನೀವು ಭರತನ ಸೈನ್ಯದ ವೇಷದಲ್ಲಿ ಹೋದರೆ ತಿಳಿಯದಷ್ಟು ಮೂರ್ಖನಲ್ಲ ಅವನು. ನದಿಗಳಿಗೆ ಗಂಡನಾದ ಸಮುದ್ರನನ್ನು ದಾಟಿ ಬಂದ ಹನುಮ ಈ ಲಂಕೆಯನ್ನೆಲ್ಲ ಸುಟ್ಟುಬಿಟ್ಟ. ಅಷ್ಟು ಕೋಟಿ ಮಂದಿಯಿದ್ದರೂ ನಿಮಗೆ ಅವನನ್ನು ಹಿಡಿಯಲಾಗಲಿಲ್ಲ. ಏಕೆ? ಇಂದು ಮಾತ್ರ ಪ್ರಭುವಿನ ಬಳಿ ನಿಂತು ಕೊಲ್ಲುತ್ತೇನೆ, ಹಿಡಿಯುತ್ತೇನೆ ಎನ್ನುತ್ತಿದ್ದೀರ. ಇದು ಮಂತ್ರಿಗಳು ಹೇಳುವ ಮಾತೇ? ನಿಮ್ಮ ಸಲಹೆಯಲ್ಲಿ ಯೋಚನೆ, ವಿಚಕ್ಷಣೆಗಳೇನೆದರೂ ಇದೆಯೇ? ಯುದ್ಧಕ್ಕೆ ಹೋಗುವ ಮುಂಚೆ ಶತೃಸೈನ್ಯದ ಬಲಾಬಲಗಳನ್ನು ಹುಷಾರಾಗಿ ಲೆಕ್ಕಹಾಕಬೇಕು. ಅದರಲ್ಲಿ ಪಕ್ಷಪಾತ ಬುದ್ಧಯಿರಬಾರದು. ಶತೃವಿಗೆ ನಮಗಿಂತಲೂ ಹೆಚ್ಚಿನ ಶಕ್ತಿಯಿದ್ದರೆ ಬೇರೆ ಮಾರ್ಗವನ್ನು ಆಲೋಚಿಸಬೇಕು. ಶತೃವಿನ ಬಲ ನಮಗಿಂತಲೂ ಕಡಿಮೆಯಿದ್ದರೆ ಯುದ್ಧಕ್ಕೆ ಹೋಗಬೇಕು. ಶತೃವಿನ ಬಲ, ಸಂಖ್ಯಾಶಕ್ತಿ, ಯಾರು ಎಂತಹವರು ಎಂಬುದನ್ನೇನಾದರೂ ಯೋಚಿಸಿದ್ದೀರ? ಒಂದು ಬಾರಿ ಯೋಚಿಸಿ. ರಾಮನಿಗೆ ನಮ್ಮ ಮೇಲೆ ಯುದ್ಧಕ್ಕೆ ಬರುವ ಕಾರಣವೇನು? ಅಪಹರಿಸಲ್ಪಟ್ಟ ತನ್ನ ಪತ್ನಿಯನ್ನು ಬಿಡಿಸಿಕೊಳ್ಳಲು ಬರುತ್ತಿದ್ದಾನೆ. ಧರ್ಮ ಅವನ ಕಡೆಯೇ ಇದೆ. ಧರ್ಮವಿರುವ ಕಡೆ ದೇವತೆಗಳಿರುತ್ತಾರೆ. ಯಾವ ರೀತಿಯಿಂದ ನೋಡಿದರೂ ರಾಮನದೇ ಮೇಲುಗೈ. ಅವನ ಮೇಲೆ ಯುದ್ದಕ್ಕೆ ಹೋಗಬಹುದು ಎಂದು ಹೇಗೆ ಅಂದುಕೊಳ್ಳುತ್ತಿದ್ದೀರ? ಲಂಕೆಗೆ, ರಾಕ್ಷಸರಿಗೆ, ರಾವಣನಿಗೆ ಯಾವುದೇ ಉಪದ್ರವ ಬರಬಾರದು ಎಂದಿದ್ದರೆ ಆ ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡಿ. ಆಗ ಅವನು ನಮ್ಮ ಮೇಲೆ ಯುದ್ಧಕ್ಕೆ ಬರುವುದಿಲ್ಲ. ತಪ್ಪು ಮಾಡಿರುವುದು ನಾವು. ಇದನ್ನು ಸಮರ್ಥಿಸಲು ಕೊಟ್ಯಾಂತರ ಜನರ ಪ್ರಾಣವನ್ನು ಒತ್ತೆಯಿಡುವುದು ಸರಿಯಲ್ಲ. ನನ್ನ ಮಾತು ಕೇಳಿ ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡಿ” ಎಂದ.
ವಿಭೀಷಣನ ಮಾತಿಗೆ ತಲೆ ಕೆಡಿಸಿಕೊಳ್ಳದೆ ರಾವಣ ತನ್ನ ಮಂತ್ರಿಗಳನ್ನು ಸಭೆಯಿಂದ ಹೋಗಲು ಹೇಳಿ ತಾನೂ ನಿರ್ಗಮಿಸಿದ. ಮರುದಿನ ವಿಭೀಷಣ ರಾವಣನ ಅಂತಃಪುರಕ್ಕೆ ಬಂದ. ಅಲ್ಲಿ ಹಲವಾರು ಸ್ತ್ರೀಯರಿದ್ದರು. ಬ್ರಾಹ್ಮಣರು ಸ್ವಸ್ತಿವಾಚನ ಮಾಡುತ್ತಿದ್ದರು. ಪೂಜೆಗಳು, ಅಗ್ನಿಕಾರ್ಯಗಳು ನಡೆಯುತ್ತಿದ್ದವು. ರಾವಣ ಒಂದು ತಲ್ಪದ ಮೇಲೆ ಕೂತಿದ್ದಾಗ, ವಿಭೀಷಣ ಅವನಿಗೆ ನಮಸ್ಕಾರ ಮಾಡಿ ತನ್ನ ಮಾತು ಆರಂಭಿಸಿದ: “ಅಣ್ಣಾ ನಿನ್ನೆ ಸಭೆಯಲ್ಲಿ ಕೆಲವು ವಿಷಯಗಳು ಹೇಳುತ್ತಿದ್ದಾಗ ನೀನು ಬಂದುಬಿಟ್ಟೆ. ಈಗ ನಿನಗೆ ಏಕಾಂತವಾಗಿ ಕೆಲವು ವಿಷಯಗಳನ್ನು ಹೇಳಬೇಕೆಂದಿದ್ದೇನೆ. ಈ ವಿಷಯಗಳು ಎಲ್ಲರಿಗೂ ತಿಳಿದಿದೆ, ನಿನ್ನ ಮಂತ್ರಿಗಳಿಗೂ. ಆದರೆ ನಿನ್ನ ಭಯದಿಂದ ಯಾರೂ ಹೇಳುತ್ತಿಲ್ಲ. ನಾನು ನನ್ನ ಆಣ್ಣನನ್ನು ರಕ್ಷಿಸಿಕೊಳ್ಳಲು, ನಿನ್ನ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದೇನೆ. ನೀನು ಸೀತೆಯನ್ನು ಲಂಕೆಗೆ ತಂದಾಗಿನಿಂದ ನನಗೆ ಅಪಶಕುನಗಳು ಕಾಣಿಸುತ್ತಿವೆ. ಹೋಮ ಮಾಡಲು ಸಮಿತ್ತುಗಳನ್ನು ಹೋಮಕುಂಡದಲ್ಲಿ ಹಾಕಿದರೂ ಅಗ್ನಿ ಮೇಲೇಳುತ್ತಿಲ್ಲ. ಹೊಗೆ ಸುತ್ತುಕೊಳ್ಳುತ್ತಿದೆ. ಅಗ್ನಿಶಾಲೆಯಲ್ಲಿ, ವೇದಶಾಲೆಯಲ್ಲಿ, ಪೂಜಾಗೃಹದಲ್ಲಿ ಹಾವುಗಳು ಕಾಣಿಸುತ್ತಿವೆ. ಬೆಳಗಿನ ಜಾವದಲ್ಲಿ ಹೋಮ ಮಾಡಲು ಪಾಯಸ ಅಥವಾ ಜೇನನ್ನು ತಂದರೆ ಅವುಗಳನ್ನು ಇರುವೆಗಳು ಮುತ್ತಿಕೊಳ್ಳುತ್ತಿವೆ. ಹಾಲು ತಂದ ತಕ್ಷಣ ಒಡೆಯುತ್ತದೆ. ಆನೆಗಳು ಸುಮ್ಮನೆ ನಿಂತುಕೊಳ್ಳುತ್ತಿವೆ. ಕುದುರೆಗಳು ಉತ್ಸಾಹದಿಂದ ಇಲ್ಲ. ದೀನವಾಗಿ ಕಣ್ಣಿನಿಂದ ನೀರು ಸುರಿಸುತ್ತಿವೆ. ಕತ್ತೆ, ಹೇಸರಗತ್ತೆ, ಒಂಟೆ ಮುಂತಾದ ಪ್ರಾಣಿಗಳ ಮೇಲಿರುವ ಕೂದಲು ವಿನಾಕಾರಣ ಉದುರುತ್ತಿವೆ. ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಸರಿಹೋಗುತ್ತಿಲ್ಲ. ಕಾಗೆಗಳು ಗುಂಪು ಗುಂಪಾಗಿ ಬಂದು ಮನೆಗಳ ಮೇಲೆ ಕೂತು ಕೂಗುತ್ತಿವೆ. ಹದ್ದುಗಳು ಮನೆಯ ಮೇಲೆ ಕೂರುತ್ತಿವೆ. ಅರಣ್ಯದಲ್ಲಿರಬೇಕಾದ ನರಿಗಳು ರಾತ್ರಿಹೊತ್ತು ಊರಿಗೆ ಬಂದು ಜೋರಾಗಿ ಅಳುತ್ತಿವೆ. ಆದ್ದರಿಂದ ಸೀತೆಯನ್ನು ರಾಮನಿಗೆ ಒಪ್ಪಿಸುವುದೇ ಸರಿ.”
ವಿಭೀಷಣ ಮಾತಿನಿಂದ ರಾವಣ ಅವನ ಕಡೆ ನೋಡಿ ಕೋಪದಿಂದ ಹೇಳಿದ: “ನಿನಗೆ ಕಾಣುತ್ತಿರುವ ಅಪಶಕುನಗಳು ನನಗೇಕೆ ಕಾಣುತ್ತಿಲ್ಲ? ರಾಮ ಯುದ್ಧಕ್ಕೆ ದೇವೇಂದ್ರನನ್ನು ಕರೆದುಕೊಂಡು ಬಂದರೂ ಸರಿ. ಸೀತೆಯನ್ನು ಮಾತ್ರ ಕೊಡುವುದಿಲ್ಲ. ಇನ್ನು ನೀನು ಹೋಗಬಹುದು.”
Comments
Post a Comment