೮೦. ಅಭಿಪ್ರಾಯಗಳು

ಮರುದಿನ ರಾವಣ ಸಭೆ ಸೇರಲು ಆದೇಶಿಸಿ ರಥವನ್ನು ಹತ್ತಿ ಸಭಾ ಮಂಟಪಕ್ಕೆ ಬಂದ. ಎಲ್ಲರೂ ಬಂದು ಕುಳಿತಮೇಲೆ, “ನಾನು ಸೀತೆಯನ್ನು ಅಪಹರಿಸಿರುವುದು ವಾಸ್ತವ. ಆ ಸಮಯದಲ್ಲಿ ಕುಂಭಕರ್ಣ ನಿದ್ದೆ ಹೋಗುತ್ತಿದ್ದರಿಂದ ಅವನಿಗೆ ನಾನು ಹೇಳಿಲ್ಲ. ಪ್ರಹಸ್ತ, ನೀನು ಹೋಗಿ ಕುಂಭಕರ್ಣನನ್ನು ಕರೆದುಕೊಂಡು ಬಾ” ಎಂದ. ಪ್ರಹಸ್ತ ಹೊರಟ ಮೇಲೆ ರಾವಣ ಸಭೆಯನ್ನುದ್ದೇಶಿಸಿ ಹೇಳಿದ: “ಮೂರು ಲೋಕದಲ್ಲಿಯೂ ಸೀತೆಯಷ್ಟು ಅಂದವಾದ ಸ್ತ್ರೀ ಇಲ್ಲ. ಪ್ರತಿದಿನವೂ ಅವಳ ಸಣ್ಣ ನಡುವನ್ನು ನೋಡಿದರೆ ನನ್ನ ಕಾಮ ಹೆಚ್ಚುತ್ತಿದೆ. ಕಾಮ ಹೆಚ್ಚಾಗುತ್ತಿರುವುದರಿಂದ ನನಗೆ ನೀರಸವಾಗುತ್ತಿದೆ (ರಾವಣ ಸೀತೆಯ ಕುರಿತು ಇನ್ನೂ ನೀಚವಾಗಿ ಮಾತಾಡುತ್ತಾನೆ. ಅದನ್ನು ಇಲ್ಲಿ ಬರೆಯುವುದು ಸಾಧ್ಯವಿಲ್ಲ). ಅವಳನ್ನು ಅಪಹರಿಸಿ ತಂದ ಮೇಲೆ, ‘ರಾಮ ಇಲ್ಲಿಗೆ ಬರಬಹುದು. ಒಂದು ವರ್ಷ ಕಾಯೋಣ’ ಎಂದಳು. ಒಂದು ವರ್ಷದವರೆಗೂ ಮಂಚ ಹತ್ತುವುದಿಲ್ಲವೆಂದಳು. ಹೋಗಲಿ ಎಂದು ಒಂದು ವರ್ಷದ ಕಾಲಾವಕಾಶ ಕೊಟ್ಟಿದ್ದೇನೆ.”

ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಕುಂಭಕರ್ಣ ಹೇಳಿದ: “ನೀನು ಮಾಡಿದ ಕೆಲಸ ತಪ್ಪು. ಈಗ ನಮ್ಮನ್ನು ಕರೆದು ಏನು ಮಾಡಬೇಕು ಎಂದು ಏಕೆ ಕೇಳುತ್ತೀಯ? ನೀನು ಸೀತೆಯನ್ನು ಅಪಹರಿಸುವ ಮುಂಚೆ ನಮ್ಮನ್ನು ಕೇಳಿದ್ದೆಯಾ? ರಾಜ ಯಾವುದೇ ಕೆಲಸ ಮಾಡುವ ಮೊದಲು ಯುಕ್ತಾಯುಕ್ತಗಳನ್ನು ಯೋಚಿಸಿ ನಿರ್ಧಾರ ಮಾಡಬೇಕು. ವಿಚಕ್ಷಣವಿಲ್ಲದೆ ನಿರ್ಣಯ ತೆಗೆದುಕೊಂಡರೆ, ಆ ನಿರ್ಣಯದಿಂದ ಹೊರಗಿನವರು ಪ್ರಯೋಜನ ಪಡೆಯುತ್ತಾರೆ. ನೀನು ಆತುರಪಟ್ಟು ಸೀತೆಯನ್ನು ಅಪಹರಿಸಿರುವೆ. ನಿನ್ನ ಅದೃಷ್ಟ ಚೆನ್ನಾಗಿದೆ. ರಾಮನ ಕೈಲಿ ಸಾಯದಂತೆ ಇನ್ನೂ ಬದುಕಿದ್ದೀಯ. ಏನೋ ತಪ್ಪುನಡೆದಿದೆ. ನೀನೇನು ಭಯಪಡಬೇಡ. ಹಾಯಾಗಿ ಹೋಗಿ ಕಾಂತೆಯರ ಜೊತೆ ವಿಹರಿಸು. ನಾನು ಹೋಗಿ ರಾಮಲಕ್ಷ್ಮಣರನ್ನು ಕೊಂದು ಬರುತ್ತೇನೆ.”
ಮಹಾಪಾರ್ಷನೆಂಬ ಮಂತ್ರಿ, “ಹುಂಜಕ್ಕೆ ಆಸೆಯಾದರೆ ಕೋಳಿಯನ್ನು ಬಲಾತ್ಕಾರವಾಗಿ ಅನುಭವಿಸುತ್ತದೆ. ನೀನು ಹಾಗೆಯೇ ಮಾಡು” ಎಂದ.
ಅವನ ಮಾತನ್ನು ಕೇಳಿದ ರಾವಣ ಅವನನ್ನು ಹತ್ತಿರ ಕರೆದು, “ನೀನು ಹೇಳಿದ್ದು ಸರಿ. ಆದರೆ ನನಗೆ ಒಂದು ಶಾಪವಿದೆ. ಒಂದು ಬಾರಿ ಬ್ರಹ್ಮದೇವರ ಸಭೆಗೆ ಹೋಗವ ಮುನ್ನ ನಾನು ಒಬ್ಭಳು ಅಪ್ಸರೆಯನ್ನು ಬಲಾತ್ಕರಿಸಿದೆ. ಅವಳು ಹೋಗಿ ಬ್ರಹ್ಮದೇವರಿಗೆ ಹೇಳಿರಬಹುದು. ಬ್ರಹ್ಮದೇವರು ನನಗೆ, ‘ನಿನ್ನ ಕೋರಿ ಬಂದ ಸ್ತ್ರೀಯರನ್ನು ಬಿಟ್ಟು ಬೇರೆಯಾರನ್ನಾದರೂ ಬಲಾತ್ಕರಿಸಿದರೆ ಉತ್ತರ ಕ್ಷಣದಲ್ಲಿ ನಿನ್ನ ತಲೆ ನೂರು ಹೋಳಾಗುತ್ತದೆ’ ಎಂದು ಶಾಪಕೊಟ್ಟರು. ಆದ್ದರಿಂದ ನಾನು ಸುಮ್ಮನಿದ್ದೇನೆ” ಎಂದ.
ವಿಭೀಷಣ ಎದ್ದು ಸಭೆಗೆ ಹೇಳಿದ: “ನೀವೆಲ್ಲ ರಾಮನನ್ನು ಲಘುವಾಗಿ ಪರಿಗಣಿಸುತ್ತೀರ. ಸೀತೆಯನ್ನು ಕಡುವಾಗಿ ನೋಡುತ್ತಿದ್ದೀರ. ಒಂದು ವಿಷಯವನ್ನು ನೆನಪಿನಲ್ಲಿಡಿ. ಇಂದ್ರಜಿತ್ತನಾಗಲಿ, ಕುಂಭಕರ್ಣನಾಗಲಿ, ರಾವಣನಾಗಲಿ, ಮಹಾಪಾರ್ಷನಾಗಲಿ, ಮಹೋದರನಾಗಲಿ, ನಿಕುಂಭನಾಗಲಿ ಯಾರೂ ರಾಮನನ್ನು ಏನೂ ಮಾಡಲಾರರು.”
ಪ್ರಹಸ್ತ: “ಏನು ವಿಭೀಷಣ ಹಾಗೆ ಮಾತಾಡುತ್ತಿದ್ದೀಯ. ನಮ್ಮ ಪ್ರಭು ದೇವದಾನವರನ್ನು ಸೋಲಿಸಿದ್ದಾನೆ. ನಮಗೆ ಭಯವೆಂದರೆ ಏನು ಎಂಬುದೇ ತಿಳಿದಿಲ್ಲ. ನೀನೇಕೆ ರಾಮನನ್ನು ನೋಡಿ ಭಯಪಡುತ್ತೀಯ?”
ವಿಭೀಷಣ: “ಇಕ್ಷ್ವಾಕು ವಂಶದ ರಾಮ ಧರ್ಮಾತ್ಮ. ನಿಮಗಿರದಿರುವುದು, ಅವನಿಗೆ ಇರುವುದು ಧರ್ಮ. ಧರ್ಮವಿರುವ ಕಡೆ ವಿಜಯ ನಿಶ್ಚಿತ. ಪ್ರಹಸ್ತ, ನಿನಗೇನು ತಿಳಿದಿದೆ ಎಂದು ಮಾತಾಡುತ್ತಿದ್ದೀಯ? ಯಾವಾಗಲಾದರೂ ಹದ್ದಿನಂತಿರುವ ರಾಮ ಬಾಣಗಳು ನಿನ್ನ ಎದೆಯನ್ನು ನಾಟಿದ್ದರೆ ನೀನು ಹೀಗೆ ಮಾತಾಡುತ್ತಿರಲಿಲ್ಲ. ನೀವೆಲ್ಲ ಬದುಕಬೇಕಾದರೆ, ಎಲ್ಲರೂ ಕಲೆತು ನಿರ್ಧಾರ ತೆಗೆದುಕೊಂಡು ರಾವಣನ ಮೇಲೆ ತಿರುಗಿ ಬೀಳಿ. ಅವನಿಗೆ ಬುದ್ಧಿಹೇಳಿ, ಸೀತೆಯನ್ನು ರಾಮನಿಗೆ ಒಪ್ಪಿಸಿ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿ.”
ಇಂದ್ರಜಿತ್ತ: “ವೀರ್ಯದಲ್ಲಾಗಲಿ, ಪರಾಕ್ರಮದಲ್ಲಾಗಲಿ, ಬಲದಲ್ಲಾಗಲಿ, ತೇಜಸ್ಸಿನಲ್ಲಾಲಿ ನನ್ನ ತಂದೆ ರಾವಣನಿಗೆ, ಅವನ ತಮ್ಮ ಕುಂಭಕರ್ಣನಿಗೆ ಸಾಟಿಯಾರು? ನೀನು ಇಷ್ಟು ಪೌರುಷಹೀನನಾಗಿ ಹೇಗೆ ಹುಟ್ಟಿದೆ ಚಿಕ್ಕಪ್ಪ? ಆಗಿನಿಂದ, ‘ರಾಮ ಬರುತ್ತಿದ್ದಾನೆ’ ಎನ್ನುತ್ತಿದ್ದೀಯ. ಅಷ್ಟು ಭಯವೇಕೆ ನಿನಗೆ?”
ವಿಭೀಷಣ: “ನೀನು ಚಿಕ್ಕವನು. ನಿನಗೇನು ತಿಳಿಯುವುದಿಲ್ಲ. ನಿನ್ನನ್ನು ಈ ಸಭೆಗೆ ಕರೆದುಕೊಂಡು ಬಂದವನನ್ನು ಮೊದಲು ಕೊಲ್ಲಬೇಕು. ನಿನಗೇನು ತಿಳಿದಿದೆಯೆಂದು ಈ ಸಭೆಗೆ ಬಂದೆ? ಈ ಸಭೆಯಲ್ಲಿ ನಿನ್ನ ತಂದೆ ಪರಸ್ತ್ರೀಯ ಮೇಲಿಟ್ಟಿರುವ ಕಾಮದ ಬಗ್ಗೆ ಮಾತಾಡುತ್ತಿದ್ದಾಗ ಕೇಳಿಸಿಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವೇ? ನಿನ್ನ ಪೌರುಷ, ಪರಾಕ್ರಮ ರಾಮನ ಮೇಲೆ ನಡೆಯುವುದಿಲ್ಲ. ಇಲ್ಲದಿರುವ ವ್ಯಗ್ರತೆಯಿಂದ ಮಾತಾಡಬೇಡ. ಸುಮ್ಮನೆ ಕುಳಿತುಕೊ.”
ರಾವಣ: “ಮನೆಯಲ್ಲಿ ದ್ವೇಷವಿರುವ ಹಾವಿದ್ದರೆ ಅದರ ಜೊತೆ ಇರಬಹುದು. ಶತೃ ಎಂದು ತಿಳಿದಿದ್ದರೂ ಅವನ ಜೊತೆ ಇರಬಹುದು. ಆದರೆ ಮಿತ್ರ ರೂಪದಲ್ಲಿರವ ಶತೃವಿನ ಜೊತಯಿರಬಾರದು. ಪೂರ್ವದಲ್ಲಿ ಕೆಲವು ಆನೆಗಳು ಸರೋವರದ ಬಳಿಯಿದ್ದವು. ಅವು ಹೇಳಿದ ಮಾತುಗಳನ್ನು ನಿನಗೆ ಹೇಳುತ್ತೇನೆ ಕೇಳು ವಿಭೀಷಣ: ‘ನಮಗೆ ಅಗ್ನಿಯ ಭಯವಿಲ್ಲ. ಬಲೆಗಳ ಭಯವಿಲ್ಲ. ನೀರಿನ ಭಯವಿಲ್ಲ. ನಮಗೆ ನಮ್ಮ ಜಾತಿಯದೇ ಭಯ.’ ನಿನ್ನನ್ನು ನೋಡಿದರೆ ನನಗೆ ಆ ಮಾತುಗಳು ನಿಜವೆನಿಸುತ್ತಿದೆ. ಹಸುಗಳಿಂದ ಐಶ್ವರ್ಯ, ಬ್ರಾಹ್ಮಣರಿಂದ ತಪಸ್ಸು, ಸ್ತ್ರೀಯರಿಂದ ಚಪಲ ಬುದ್ಧಿ, ಬಂಧುಗಳಿಂದ ಭಯಗಳು ಏರ್ಪಡುತ್ತವೆ. ನನಗೆ ನಿನ್ನದೇ ಭಯ. ಇಂದು ಎಲ್ಲರೂ ನನ್ನನ್ನು ಹೊಗಳುತ್ತಿದ್ದರೆ ನಿನಗೆ ನೋಡಲಾಗುತ್ತಿಲ್ಲ. ನೀನು ನನ್ನ ತಮ್ಮನಲ್ಲ. ನನ್ನ ಶತೃ.”
ವಿಭೀಷಣ, “ನೀನು ನನಗಿಂತ ಮುಂಚೆ ಹುಟ್ಟಿದವನು. ತಂದೆಯ ನಂತರ ದೊಡ್ಡಣ್ಣ ತಂದೆಯಂತವನು. ಆದ್ದರಿಂದ ನಿನ್ನನ್ನು ರಕ್ಷಿಸಿಕೊಳ್ಳಲು ನನ್ನ ಬುದ್ಧಿಗೆ ತೋಚಿದ ಸಲಹೆ ಕೊಟ್ಟೆ. ನಿನ್ನನ್ನು ಮೀರಿಸಬೇಕೆಂಬ ಆಸೆ ನನಗೆಂದೂ ಉಂಟಾಗಲಿಲ್ಲ. ಒಂದುವೇಳೆ ನಾನೇನಾದರೂ ತಪ್ಪಾಗಿ ಮಾತಾಡಿದ್ದರೆ ನನ್ನನ್ನು ಕ್ಷಮಿಸು. ನಿನ್ನನ್ನು ಗುಂಡಿಯಲ್ಲಿ ತಳ್ಳುವವರು, ತಪ್ಪು ಸಲಹೆ ಕೊಡುವವರು ತುಂಬಾ ಜನ ಸಿಗುತ್ತಾರೆ. ಯದಾರ್ಥವನ್ನು ಹೇಳುವವರು ತುಂಬಾ ಕಡಿಮೆ. ಅಂಹವನು ಸಿಗುವುದಿಲ್ಲ, ಸಿಕ್ಕರೂ ನೀನು ಕೇಳುವುದಿಲ್ಲ. ನಾನು ಇಲ್ಲಿರುವುದರಿಂದ ನಿನಗೆ ಭಯವಾಗುತ್ತದಾದ್ದರಿಂದ, ನಿನ್ನ ಕೀರ್ತಿಯನ್ನು ನನಗೆ ತಡೆದುಕೊಳ್ಳಲಾಗುವುದಿಲ್ಲ ಎಂದು ನಿನಗನಿಸಿದೆಯಾದ್ದರಿಂದ ನಾನು ಇಲ್ಲಿಂದ ಹೊರಟು ಹೋಗುತ್ತೇನೆ. ಈಗಲೂ ನನ್ನ ಆಸೆಯೊಂದೇ. ನೀನು, ನಿನ್ನ ಜನ, ಈ ಲಂಕೆ, ರಾಕ್ಷಸರು, ನಿನ್ನ ಬಂಧುಗಳು ಎಲ್ಲರೂ ಸುಖವಾಗಿರಿ” ಎಂದು ಹೇಳಿ ಸಭೆಯಿಂದ ಹೊರಟುಬಿಟ್ಟ. ಅವನ ಹಿಂದೆ ನಾಲ್ಕು ರಾಕ್ಷಸರೂ ಹೊರಟರು.  

ವಿಭೀಷಣ ಮತ್ತು ಅವನ ಜೊತೆ ಬಂದ ನಾಲ್ಕು ಸಹಚರರು ರಾಮಲಕ್ಷ್ಮಣರಿದ್ದ ಪ್ರದೇಶದಲ್ಲಿ ಬಂದು ನಿಂತರು. ಅವರನ್ನು ನೋಡಿದ ತಕ್ಷಣ ಅಲ್ಲಿದ್ದ ವಾನರರು, "ರಾಕ್ಷಸ ಬಂದ ಹೊಡೆಯಿರಿ" ಎಂದು ಕಿರುಚಿಕೊಂಡು ಅಲ್ಲದ್ದ ಮರಗಳನ್ನು ಕಿತ್ತುಕೊಂಡರು. ವಿಭೀಷಣ ಹೆದರದೆ, "ನಾನು ಲಂಕೆಯಿಂದ ಬಂದ ರಾವಣನ ತಮ್ಮ. ನನ್ನ ಹೆಸರು ವಿಭೀಷಣ. ನನ್ನ ಅಣ್ಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಿದ್ದಾನೆ. ದುರಾತ್ಮನಾದ ಅವನಿಗೆ ನಾನು ಎಷ್ಟೋ ಮಾತುಗಳನ್ನು ಹೇಳಿದೆ. ಆದರೆ ಅವನು ನನ್ನ ಮಾತು ಕೇಳಲಿಲ್ಲ. ಅವನ ಬಳಿ ಧರ್ಮವಿಲ್ಲದ ಕಾರಣ ಅವನನ್ನು ಬಿಟ್ಟು ರಾಮನ ಬಳಿ ಶರಣಾಗಲು ಬಂದಿದ್ದೇನೆ. ರಾಮ ಈ ಲೋಕಕ್ಕೆ ಆಶ್ರಯ ಕೊಡಬಲ್ಲನು. ನಾನು ನಿಮ್ಮ ಶತ್ರುವಲ್ಲ" ಎಂದ.

ಆದರೆ ಸುಗ್ರೀವ ರಾಮನ ಬಳಿ ಬಂದು, "ರಾಮ, ಬಂದವನು ನಮ್ಮ ಶತ್ರುವಾದ ರಾವಣನ ತಮ್ಮ. ಅವನು ಒಬ್ಬ ರಾಕ್ಷಸ. ಯುದ್ಧ ಸಮಯದಲ್ಲಿ ಇಲ್ಲಿ ಬಂದು ನಿಂತಿದ್ದಾನೆ.  ಇವನು ಗೂಢಾಚಾರಿಯಿರಬಹುದು. ಇವನನ್ನು ನಮ್ಮ ಕಡೆ ಸೇರಿಸಿಕೊಂಡರೆ ನಮ್ಮ ಸೈನ್ಯದ ಲೋಪಗಳನ್ನು ಕಂಡುಹಿಡಿಯುತ್ತಾನೆ. ನಮ್ಮ ರಹಸ್ಯಗಳನ್ನು ತಿಳಿದು ನಮ್ಮಲ್ಲೇ ಭೇದಗಳನ್ನು ಹುಟ್ಟಿಸಬಹುದು. ನೀನು ಇವನಿಗೆ ಆಶ್ರಯ ಕೊಡಬೇಡ. ನೀನು ಅನುಮತಿ ಕೊಟ್ಟರೆ ಇವನನ್ನು ಈಗಲೇ ಮುಗಿಸುತ್ತೇವೆ. ಕಾಗೆಗಳು ಗೂಬೆಗೆ ಆಶ್ರಯ ಕೊಡಲು ತಮ್ಮ ಗೂಡಿನಲ್ಲಿ ಬಿಟ್ಟರೆ, ಗೂಬೆ ಕಾಗೆಯ ಮರಿಗಳನ್ನೇ ತಿಂದುಬಿಡುತ್ತದೆ. ಇವನೂ ಹಾಗೆಯೇ" ಎಂದ.
ರಾಮ ಸುಗ್ರೀವನಿಗೆ, "ನನಗೆ ನೀನು ನನ್ನ ಮೇಲಿಟ್ಟಿರುವ ಪ್ರೀತಿ ಎಷ್ಟೆಂದು ತಿಳಿದಿದೆ. ನಿನ್ನ ಅನುಭವದಿಂದ ಚೆನ್ನಾಗಿ ಹೇಳಿದ್ದೀಯ" ಎಂದು ಹೇಳಿ ಅಲ್ಲಿರುವವರಿಗೆ, "ಈ ವಿಷಯದಲ್ಲಿ ಇನ್ನು ಯಾರಾದರೂ ನನಗೆ ಸಲಹೆ ಕೊಡಲು ಇಚ್ಛಿಸುತ್ತೀರಾ?" ಎಂದು ಕೇಳಿದ.
ಅಂಗದ ಹೇಳಿದ: "ನಾವು ವಿಭೀಷಣನನ್ನು ಪರೀಕ್ಷಿಸಿ ಅವನಲ್ಲಿ ಸದ್ಗುಣಗಳು ಕಾಣಿಸಿದರೆ ಸ್ವೀಕರಿಸೋಣ. ಇಲ್ಲದ್ದಿದ್ದರೆ ಬಿಟ್ಟುಬಿಡೋಣ."
ಶರಭ: "ನಾವು ಕೆಲವು ಗೂಢಾಚಾರಿಗಳನ್ನು ಕಳಿಸೋಣ. ಅವರು ಇವನನ್ನು ಪರೀಕ್ಷಿಸಲಿ. ಅವರ ವರದಿಯ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳೋಣ."
ಜಾಂಬವಂತ: "ಇದು ಸರಿಯಾದ ಸಮಯವಲ್ಲ. ನಾವಿರುವುದೂ ಪರದೇಶದಲ್ಲಿ. ಇಂತಹ ಸಮಯದಲ್ಲಿ ರಾವಣನ ತಮ್ಮನಾದ ಇವನು ನಮ್ಮ ಬಳಿ ಬಂದು ಆಶ್ರಯ ಕೇಳುತ್ತಿದ್ದಾನೆ. ಇವನನ್ನು ಸೇರಿಸದಿರುವುದೇ ಒಳ್ಳೆಯದು."
ಮೈಂದ: "ನಾವು ಯಾರಾದರೂ ಹಿರಿಯರನ್ನು ವಿಭೀಷಣನ ಬಳಿ ಕಳಿಸೋಣ. ಅವರು ವಿಭೀಷಣನನ್ನು ಪ್ರಶ್ನಿಸಲಿ. ಅವನ ಉತ್ತರಗಳು ನಮಗೆ ಅನುಕೂಲವಾಗಿದ್ದರೆ ಅವನನ್ನು ಸ್ವೀಕರಿಸೋಣ."


ಎಲ್ಲರ ಅಭಿಪ್ರಾಯಗಳನ್ನು ಕೇಳಿದ ರಾಮ ಹನುಮನ ಕಡೆ ನೋಡಿದ. ಹನುಮ: "ಮೂರು ಲೋಕದಲ್ಲಿ ನಡೆಯುವುದನ್ನೂ ತಿಳಿಯುವ ಪ್ರಾಜ್ಞತೆ ನಿನಗಿದೆ. ಬೇರೆಯವರು ನಿನಗೆ ಹೇಳಬೇಕಿಲ್ಲ. ನನ್ನ ಅಭಿಪ್ರಾಯ ಹೇಳುವಾಗ ಇದನ್ನು ವಾದ, ತರ್ಕ, ಬೇರೆಯವರ ಅಭಿಪ್ರಾಯಗಳ ಖಂಡನೆ ಎಂದು ಯಾರೂ ತಿಳಿಯಬೇಡಿ. ನೀವು ನನ್ನ ಮೇಲಿನ ಗೌರವದಿಂದ ಕೇಳಿದ್ದೀರಿ. ನಾನು ಅದೇ ಗೌರವದಿಂದ ನನಗೆ ಯುಕ್ತವೆನಿಸಿದ ಮಾತುಗಳಿಂದ ಉತ್ತರಿಸುತ್ತೇನೆ. ಕೆಲವರು ವಿಭೀಷಣನನ್ನು ನಂಬಬಾರದು ಎನ್ನುತ್ತಿದ್ದಾರೆ. ಆದರೆ ಕಾಮರೂಪವನ್ನು ಪಡೆದು ನಮ್ಮ ಸೈನ್ಯದಲ್ಲಿ ಗೂಢಾಚಾರಿಕೆ ಮಾಡಬೇಕೆಂದಿದ್ದರೆ ಅವನು ಇಲ್ಲಿ ಬಂದು ನಿಂತು ಆಶ್ರಯ ಕೇಳುವ ಅವಶ್ಯಕತೆಯಿರಲಿಲ್ಲ. ಕೆಲವರು ಇವನ ಮೇಲೆ ಗೂಢಾಚಾರರನ್ನು ಕಳಿಸಿ ಎಂದರು. ಆದರೆ ನಮ್ಮ ಎದುರಿಗೆ ಬಂದು ನಿಂತವನ ಮೇಲೆ ಗೂಢಾಚಾರಿಕೆ ಮಾಡುವುದು ಹೇಗೆ? ಕೆಲವರು ಅವನಿಗೆ ಪ್ರಶ್ನೆಗಳನ್ನು ಕೇಳಬೇಕೆನ್ನುತ್ತಿದ್ದಾರೆ. ಆದರೆ ಅವನನ್ನು ಏನೆಂದು ಪ್ರಶ್ನಿಸುವುದು? ಪ್ರಶ್ನೆ ಕೇಳುವವನು ಕಡಿಮೆ ದರ್ಜೆಯ ಪ್ರಶ್ನೆಗಳನ್ನು ಕೇಳಿದರೆ, ಮಿತ್ರನಾಗಬೇಕಾದವನು ಶತ್ರುವಾಗಿ ಹೋಗಿಬಿಡಬಹುದು. ಅದರಿಂದ ನಮಗೆ ನಷ್ಟ. ಎಲ್ಲ ಸಂದರ್ಭಗಲ್ಲಿಯೂ ಪ್ರಶ್ನೆಗಳನ್ನು ಕೇಳಿ ನಿರ್ಧರಿಸುವುದು ಸಾಧ್ಯವಿಲ್ಲ. ಕೆಲವರು ಗುಣಗಳನ್ನು ಪರೀಕ್ಷಿಸಲು ಹೇಳಿದರು. ಆದರೆ ಬೇರೆಯವರಲ್ಲಿ ಇಂತಹ ಗುಣವಿರಬಾರದು ಎಂದು ಹೇಳುವುದು ನಮ್ಮ ಗುಣದ ಮೇಲೆ ಆಧಾರವಾಗಿರುತ್ತದೆ. ಇನ್ನೂ ಕೆಲವರು ದೇಶ, ಕಾಲಗಳಲ್ಲಿ ದೋಷವಿದೆಯೆಂದು ಹೇಳಿದರು. ಆದರೆ ನನಗೆ ಇಲ್ಲಿ ಯಾವುದೇ ದೋಷ ಕಾಣಿಸುತ್ತಿಲ್ಲ. ಅಪಕಾರಬುದ್ಧಿಯಿಂದ ಬಂದಿದ್ದರೆ ಅವನ ಮುಖ ಅಷ್ಟು ತೇಜೋವಂತವಾಗಿ, ನಿರ್ಮಲವಾಗಿ, ಪ್ರಶಾಂತವಾಗಿ, ಧೈರ್ಯವಾಗಿ ಇರುವುದಿಲ್ಲ. ಅವನ ಮುಖದಲ್ಲಿ ದೋಷವಾಗಲಿ, ಮೋಸದ ಬುದ್ದಿಯಾಗಲಿ ನನಗೆ ಕಾಣಿಸುತ್ತಿಲ್ಲ. ಆದ್ದರಿಂದ ಅವನಲ್ಲಿ ಬೇರೊಂದು ಗುಣವನ್ನು ಆರೋಪಿಸಿ ಆಶ್ರಯ ಕೊಡದಿರಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದು ನನ್ನ ಬುದ್ದಿಗೆ ತೋಚಿದ ವಿಶ್ಲೇಷಣೆ. ವಿಭೀಷಣನಿಗೆ ನಿಮ್ಮ ಪೌರುಷ, ಪರಾಕ್ರಮಗಳ ಬಗ್ಗೆ ನಿಮ್ಮ ಧರ್ಮದ ಬಗ್ಗೆ ತಿಳಿದಿದೆ. ಹಾಗೆಯೇ ರಾವಣನ ಬಗ್ಗೆಯೂ ತಿಳಿದಿದೆ. ನಿಮ್ಮ ಮುಂದೆ ರಾವಣ ನಿಲ್ಲಲಾರನೆಂದು ನಿಮ್ಮ ಬಳಿ ಬಂದಿದ್ದಾನೆ. ನೀವು ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದ ವಿಷಯವನ್ನು ಅವನು ಕೇಳಿದ್ದಾನೆ. ಅಧಾರ್ಮಿಕನನ್ನು ಕೊಂದು ಧಾರ್ಮಿಕನಿಗೆ ಪಟ್ಟಾಭಿಷೇಕ ಮಾಡುತ್ತೀರೆಂದು ಅಪೇಕ್ಷಿಸಿ ನಿಮ್ಮ ಬಳಿ ಬಂದಿದ್ದಾನೆ. ನೀವು ಅವನಿಗೆ ಆಶ್ರಯ ಕೊಡಬಹುದು."

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ