೮೧. ರಾಮನ ತೀರ್ಪು

ಎಲ್ಲರ ಮಾತುಗಳನ್ನು ಕೇಳಿದ ರಾಮ ತನ್ನ ನಿರ್ಧಾರವನ್ನು ಹೇಳಿದ: "ಇಲ್ಲಿಯವರೆಗೂ ನೀವು ವಿಭೀಷಣನಲ್ಲಿ ದೋಷಗಳಿವೆಯೋ ಇಲ್ಲವೋ, ಅವನನ್ನು ಸೇರಿಸಿಕೊಳ್ಳಬೇಕೋ ಇಲ್ಲವೋ ಎಂಬುದರ ಬಗ್ಗೆ ಮಾತಾಡಿದ್ದೀರ. ಈಗ ನನ್ನ ಮಾತು ಕೇಳಿ. ನಾನು, ನನ್ನ ಬಳಿ ಬಂದು, 'ರಾಮ ನಾನು ನಿನ್ನವನು. ನನ್ನನ್ನು ಕಾಪಾಡು' ಎಂದು ಕೇಳಿಕೊಳ್ಳುವವನ ಗುಣದೋಷ ವಿಚಾರಣೆ ಮಾಡುವುದಿಲ್ಲ. 
ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ
ಅಭಯಂ ಸರ್ವ ಭೂತೇಭ್ಯೋ ದದಾಮ್ಯೇತದ್ ವ್ರತಂ ಮಮ
ಬಂದವನು ವಿಭೀಷಣನೇ ಆಗಲಿ, ರಾವಣನೇ ಆಗಲಿ ಶರಣಾದವನನ್ನು ರಕ್ಸಿಸುತ್ತೇನೆ. ವಾಸ್ತವದಲ್ಲಿ ಇಂತಹ ಯುದ್ಧ ನಡೆಯುವಾಗ ಎರೆಡು ರೀತಿಯವರಿಗೆ ರಾಜ್ಯದ ಮೇಲೆ ಆಸೆಯಿರುತ್ತದೆ. ಒಬ್ಬ: ಅದೇ ಕುಲದಲ್ಲಿ ಜನಿಸಿದವನು. ಇನ್ನೊಬ್ಬ: ಪಕ್ಕದ ರಾಜ್ಯದ ರಾಜ. ಈ ವಿಷಯಗಳಲ್ಲಿ ನಾವು ತಟಸ್ಥರು. ಆದರೆ ವಿಭೀಷಣನ ಬಳಿ ಈ ಕಾರಣಗಳಿವೆ. ಅದಕ್ಕಾಗಿ ಬಂದು ಶರಣಾಗಿದ್ದಾನೆ. ಸುಗ್ರೀವ, ಪ್ರಪಂಚದಲ್ಲಿ ಭರತನಂತಹ ತಮ್ಮ, ನನ್ನಂತಹ ಮಗ, ನಿನ್ನಂತಹ ಮಿತ್ರನಿರನು. ಆದ್ದರಿಂದ ಎಲ್ಲರನ್ನೂ ಅದೇ ತಕ್ಕಡಿಯಲ್ಲೇ ತೂಕ ಮಾಡಬೇಡ. ದುಷ್ಟನಾಗಲಿ, ಒಳ್ಳೆಯವನಾಗಲಿ ನನ್ನ ಆಶ್ರಯ ಕೋರಿದರೆ ನಾನು ರಕ್ಷಿಸುತ್ತೇನೆ. ಬ್ರಹ್ಮಾಂಡದ ಯಕ್ಷ, ಕಿನ್ನರ, ದಾನವ, ಗಂಧರ್ವ, ಪೃಥ್ವಿಯ ಸಮಸ್ತ ಭೂತಗಳು ನನ್ನ ಮೇಲೆ ಯುದ್ಧಕ್ಕೆ ಬಂದರೂ ಅವರನ್ನೆಲ್ಲ ಕೊಲ್ಲುತ್ತೇನೆ. ನಿನಗೆ ಒಂದು ಪೂರ್ವದ ಕಥೆ ಹೇಳುತ್ತನೆ ಕೇಳು:
ಒಂದು ಮರದ ಮೇಲೆ ಎರೆಡು ಗಿಳಿಗಳಿದ್ದವು. ಒಂದು ಹೆಣ್ಣು, ಒಂದು ಗಂಡು. ಒಂದು ಸಂಜೆ ಒಬ್ಬ ಬೇಟೆಗಾರ ರಮಿಸುತ್ತಿದ್ದ ಆ ಗಿಳಿಗಳನ್ನು ನೋಡಿದ. ತನ್ನ ಬಾಣದಿಂದ ಹೆಣ್ಣು ಗಿಳಿಯನ್ನು ಕೊಂದು, ಕೆಳಕ್ಕೆ ಬಿದ್ದ ಅದನ್ನು ತಿಂದು ಹೊರಟುಹೋದ. ಕಾಂತೆಯನ್ನು ಕಳೆದುಕೊಂಡ ಗಂಡು ಗಿಳಿ ತುಂಬಾ ದುಃಖಪಟ್ಟಿತು. ಸ್ವಲ್ಪ ದಿನದ ನಂತರ ಅದೇ ಬೇಟೆಗಾರ ಬೇಟೆಗೆ ಬಂದಾಗ ಜೋರಾದ ಮಳೆ ಬಂತು. ರಕ್ಷಣೆಗಾಗಿ ಮರದ ಕೆಳಗೆ ಕುಳಿತುಕೊಂಡ. ನಂತರ ಚಳಿಗೆ ನೀರಸನಾಗಿ ಅರಣ್ಯದಲ್ಲಿ ನಡೆಯುತ್ತಾ, ಕೊನೆಗೆ ಗಿಳಿಯಿದ್ದ ಮರದ ಕೆಳಗೆ ತಲೆ ಸುತ್ತಿ ಬಿದ್ದುಬಿಟ್ಟ. ಆಗ ಆ ಗಂಡು ಗಿಳಿ ಬೇಗ ಹೋಗಿ ಎಲ್ಲಿಂದಲೋ ಒಣ ಹುಲ್ಲನ್ನು ತಂದು ಅಗ್ನಿಯಿಟ್ಟಿತು. ಬೇಟೆಗಾರ ಹುಷಾರಾದ. ಕೊನೆಗೆ ಅವನ ಹಸಿವನ್ನು ತೀರಿಸಲು ಆ ಗಂಡು ಗಿಳಿ ತಾನೇ ಅಗ್ನಿಯಲ್ಲಿ ಬಿದ್ದುಬಿಟ್ಟಿತು. ತನ್ನ ಪತ್ನಿಯನ್ನೇ ಕೊಂದ ಬೇಟೆಗಾರ, ತಾನು ಕುಳಿತ ಮರದ ಕೆಳಗೆ ಬಿದ್ದರೆ, ಅದೇ ಶರಣಾಗತಿಯೆಂದುಕೊಂಡು ಆ ಗಿಳಿ ಅವನನ್ನು ರಕ್ಷಿಸಿತು. ಇನ್ನು ನಾನು ಮನುಷ್ಯ. ಅದರಲ್ಲೂ ಕ್ಷತ್ರಿಯ, ದಶರಥನ ಮಗ. ನನ್ನ ಬಳಿ ಶರಣಾದವನ ಗುಣದೋಷಗಳನ್ನು ನೋಡಿ ಅವನಿಗೆ ಆಶ್ರಯ ಕೊಡೆನೆಂದರೆ ನಾನು ರಾಜ ಹೇಗಾಗುತ್ತೇನೆ? ಶರಣಾದವನು ದುರ್ಬಲನಾದರೆ ಅವನಿಗೆ ರಕ್ಷಣೆ ಕೊಡಬೇಕು. ಹಾಗಾಗದೆ ರಕ್ಷಣೆ ಕೇಳಿದವನೇನಾದರೂ ಸತ್ತರೆ, ಅವನು ಉಳಿದವನ ಪುಣ್ಯವನ್ನು ತೆಗೆದುಕೊಂಡು ಹೋಗುತ್ತಾನೆ. ರಕ್ಷಿಸದವನ್ನ ಕೀರ್ತಿಗಳು ನಶಿಸುತ್ತವೆ. ನಾನು ವಿಭೀಷಣನಿಗೆ ರಕ್ಷಣೆ ಕೊಡುತ್ತೇನೆ. ಅವನನ್ನು ಕರೆದುಕೊಂಡು ಬನ್ನಿ."
ಸುಗ್ರೀವ, "ರಾಮ ನಿನಗೆ ಬಿಟ್ಟು ಇನ್ನಾರಿಗೂ ಇಂತಹ ಮಾತುಗಳನ್ನು ಆಡಲು ಬರುವುದಿಲ್ಲ. ನಿನ್ನ ಪ್ರಾಜ್ಞತೆಗೆ ನನ್ನ ಸಾಷ್ಟಾಂಗ ನಮಸ್ಕಾರ" ಎಂದು ಹೇಳಿ ವಿಭೀಷಣನನ್ನು ಕರೆದುಕೊಂಡು ಬರಲು ಆದೇಶಿಸಿದ.

ರಾಮನ ಕರೆಯಿಂದ ಸಂತೋಷದಿಂದ ವಿಭೀಷಣ ಬಂದು ರಾಮನಿದ್ದ ಭೂಮಿಗೆ ನಮಸ್ಕರಿಸಿ, "ರಾಮ ನಾನು ರಾವಣನ ತಮ್ಮ. ವಿಭೀಷಣ. ನಾನು ಲಂಕೆಯನ್ನು, ಐಶ್ವರ್ಯ, ಹೆಂಡತಿ, ಮಕ್ಕಳನ್ನು ಬಿಟ್ಟು ನೀನೆ ಸರ್ವಸ್ವವೆಂದು ನಿನ್ನ ಬಳಿ ಬಂದಿದ್ದೇನೆ. ನಿನಗೆ ನಮಸ್ಕಾರ ಮಾಡಿ ಶರಣಾಗುತ್ತೇನೆ. ನೀನೇ ರಕ್ಷಿಸಬೇಕು" ಎಂದ.
ರಾಮ ವಿಭೀಷಣನನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಲಂಕೆಯ ಬಲಾಬಲಗಳನ್ನು ಕೇಳಿದ. ವಿಭೀಷಣ ರಾವಣ, ಕುಂಭಕರ್ಣ, ಇಂದ್ರಜಿತ್ತರ ಬಗ್ಗೆ ವಿವರಿಸಿದ. ಲಂಕೆ ಶತ್ರು ದುರ್ಭೆದ್ಯವೆಂಬುದನ್ನೂ ತಿಳಿಸಿದ. ನಂತರ ರಾಮ, "ವಿಭೀಷಣ ಭಯ ಪಡಬೇಡ. ರಾವಣನನ್ನು ಅವನ ಬಂಧುಗಳ ಸಹಿತ ಕೊಲ್ಲುತ್ತೇನೆ. ನಿನಗೆ ಪಟ್ಟಾಭಿಷೇಕ ಮಾಡುತ್ತೇನೆ. ರಾವಣ ಸಾಯುವವರೆಗೇಕೆ? ಈಗಲೇ ನಿನಗೆ ಪಟ್ಟಾಭಿಷೇಕ ಮಾಡುತ್ತೇನೆ" ಎಂದ.
"ನಿಮಗೆ ಶರಣಾದ್ದರಿಂದ ನೀವು ಹೇಳಿದಂತೆ ಕೇಳುತ್ತೇನೆ. ರಾವಣನ ವಿರುದ್ಧ ಯುದ್ಧ ಮಾಡು ಎಂದರೂ ಮಾಡುತ್ತೇನೆ. ನಿಮಗೆ ಏನಾದರೂ ಸಲಹೆ ಬೇಕಂದರೆ ಕೇಳಿ. ನನಗೆ ತಿಳಿದಷ್ಟು ಹೇಳುತ್ತೇನೆ.”
ರಾಮ ಲಕ್ಷ್ಮಣನಿಗೆ ಸಮುದ್ರ ಜಲ ತರಲು ಹೇಳಿದ. ಆ ನೀರಿಂದಲೇ ವಿಭೀಷಣನಿಗೆ ಪಟ್ಟಾಭಿಷೇಕ ನಡೆಯಿತು.

ರಾಮನ ಸೈನ್ಯವನ್ನು ನೋಡಿದ ಶಾರ್ದೂಲನೆಂಬ ರಾವಣನ ಗೂಢಾಚಾರ ರಾವಣನ ಬಳಿ ಬಂದು, "ಅದು ವಾನರ ಸೈನ್ಯವಾ ಅಥವಾ ಸಮುದ್ರವಾ? ನೀವು ಆ ವಾನರ ಸೈನ್ಯವನ್ನು ಗೆಲ್ಲಲಾರಿರಿ. ಅವರು ಸಾಮಾನ್ಯರಲ್ಲ. ನೀವು ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡಿ" ಎಂದ.
"ನಾನು ಮಾತ್ರ ಸೀತೆಯನ್ನು ಕೊಡುವುದಿಲ್ಲ" ಎಂದು ಹೇಳಿ ರಾವಣ ಶುಕನೆಂಬುವವನನ್ನು ಕರೆದು, "ನೀನು ಪಕ್ಷಿರೂಪದಲ್ಲಿ ಸುಗ್ರೀವನ ಬಳಿ ಹೋಗಿ ನಾನು ಹೇಳಿದೆನೆಂದು ಹೀಗೆ ಹೇಳು: 'ನೀನು ವಾನರ. ನಾನು ರಾಕ್ಷಸ. ನಾನು ಅಪಹರಿಸಿರುವುದು ನರಕಾಂತೆಯನ್ನು. ಇದರಲ್ಲಿ ನಿನಗೆ ನನಗೆ ಜಗಳವೇಕೆ? ನೀವು ಸಮುದ್ರವನ್ನು ದಾಟಲಾರಿರಿ. ಒಂದು ವೇಳೆ ಪ್ರಯತ್ನಿಸಿದರೂ ಸಾಯುತ್ತೀರ. ಮಾನವ ಸ್ತ್ರೀಗಾಗಿ ನೀವೇಕೆ ಪ್ರಾಣ ಬಿಡಬೇಕು? ಸುಮ್ಮನೆ ನಾನು ಹೇಳಿದಂತೆ ಕೇಳಿ ಇಲ್ಲಿಂದ ಹೊರಡಿ.'"

ಶುಕ ಪಕ್ಷಿ ರೂಪವನ್ನು ಪಡೆದು ಆಕಾಶದಲ್ಲಿ ನಿಂತು ರಾವಣನ ಮಾತುಗಳನ್ನು ಸುಗ್ರೀವನಿಗೆ ನಿವೇದಿಸಿದ. ಅದನ್ನು ಕೇಳಿದ ಸುಗ್ರೀವ ಕೋಪದಿಂದ, “ದುರಾತ್ಮನಾದ ರಾವಣ ನಿಜವಾಗಿಯೂ ಬಲವಂತನೇ ಆದರೆ ರಾಮಲಕ್ಷ್ಮಣರಿಲ್ಲದ ಸಮಯದಲ್ಲಿ ಸೀತೆಯನ್ನೇಕೆ ಅಪಹರಿಸಿದ? ರಾಮನ ವಿದ್ಯೆಯ ಮುಂದೆ ರಾವಣ ನಿಲ್ಲುವುದಿಲ್ಲ. ಅವನ ಸ್ನೇಹ, ಅವನ ಸಂದೇಶಗಳು ನನಗೆ ಬೇಕಾಗಿಲ್ಲ” ಎಂದ. ಅಲ್ಲಿದ್ದ ವಾನರರು ಗೂಢಾಚಾರಿಯನ್ನು ಬಿಡಬಾರದೆಂದು ಮೇಲೆ ಎಗರಿ ಶುಕನ ರೆಕ್ಕೆಗಳನ್ನು ಕತ್ತರಿಸಿದರು. ಶುಕ ‘ರಾಮ, ರಾಮ’ ಎಂದು ಅರಚಿಕೊಂಡಾಗ ರಾಮ ವಾನರರಿಂದ ಶುಕನನ್ನು ಬಿಡಿಸಿದ. ಆದರೂ ವಾನರರು ಅವನನ್ನು ಬಂಧಿಯಾಗಿ ಇಟ್ಟುಕೊಂಡರು. 

ರಾಮ ಏನು ಮಾಡಿದರೆ ಸಮುದ್ರ ದಾರಿಬಿಡುತ್ತದೆ ಎಂದು ವಿಭೀಷಣನನ್ನು ಕೇಳಿದಾಗ ವಿಭೀಷಣ, “ರಾಮ ಶರಣಾದರೆ ಸಮುದ್ರ ದಾರಿ ಬಿಡುತ್ತದೆ” ಎಂದ. 

ರಾಮ ಯೋಚಿಸಿ ಕೊನೆಗೆ ಸಮುದ್ರಕ್ಕೆ ಶರಣಾಗುವ ನಿರ್ಧಾರಕ್ಕೆ ಬಂದ. ಚಂದನ ಮೊದಲಾದ ಸುವಾಸಿತ ಪದಾರ್ಥಗಳನ್ನು ಹಚ್ಚಿಸಿಕೊಂಡಿದ್ದ ಬಾಹು, ಕೋಟಿ ಗೋವುಗಳನ್ನು ದಾನ ಕೊಟ್ಟಿದ್ದ ಬಾಹು, ಮಣಿ, ಕೇಯೂರಗಳಿಂದ ಅಲಂಕೃತಗೊಂಡಿದ್ದ ಬಾಹು, ಸೀತೆಯನ್ನು ತಲೆದಿಂಬಾಗಿಸಿಕೊಂಡಿದ್ದ ಬಾಹು ಅಂದು ತನಗೆ ತಾನೇ ತಲೆದಿಂಬಾಗಿ ಸಮುದ್ರಕ್ಕೆ ಶರಣಾಗಿ ತೀರದ ಕಡೆ ತಲೆಹಾಕಿ ಮಲಗಿಕೊಂಡಿತು. ಮೂರು ರಾತ್ರಿಗಳು ಕಳೆದರೂ ಸಮುದ್ರ ರಾಜ ಹೊರಗೆ ಬರಲಿಲ್ಲ. ಕೋಪಗೊಂಡ ರಾಮ ಲಕ್ಷ್ಮಣನಿಗೆ, “ಪೌರುಷವಿರುವವನು ತನ್ನ ಪೌರುಷವನ್ನು ತೋರಿಸದೆ ಒಳ್ಳೆಯವನಾಗಿಯೇ ಇದ್ದರೆ ಈ ಪ್ರಪಂಚ ಅವನನ್ನು ಕೈಲಾಗದವನೆಂದುಕೊಳ್ಳುತ್ತದೆ. ಈ ಸಾಗರ ದಾರಿ ಕೊಡದಿದ್ದರೆ ನಾನು ಹೋಗಲಾರೆನೆಂದುಕೊಳ್ಳುತ್ತಿದೆ. ಬ್ರಹ್ಮಾಸ್ತ್ರದಿಂದ ಈ ಸಾಗರವನ್ನು ಇಂಗಿಸಿಬಿಡುತ್ತೇನೆ. ಇದರಲ್ಲಿರುವ ತಿಮಿಂಗಲ, ಮೊಸಳೆ, ಹಾವು, ರಾಕ್ಷಸರನ್ನು ನಿಗ್ರಹಿಸುತ್ತೇನೆ. ಒಂದು ಪ್ರಾಣಿಯನ್ನೂ ಬದುಕಲು ಬಿಡುವುದಿಲ್ಲ. ಬ್ರಹ್ಮಾಸ್ತ್ರವನ್ನು ಬಿಟ್ಟ ಮರುಕ್ಷಣದಲ್ಲಿ ಈ ನೀರು ಆವಿಯಾಗುತ್ತದೆ. ನಂತರ ವಾನರರು ಭೂಮಿಯ ಮೇಲೆ ನಡೆದು ಹೋಗಲಿ” ಎಂದು ಹೇಳಿ ತನ್ನ ಬಿಲ್ಲನ್ನು ತೆಗೆದು ಒಂದು ಬಾಣದಲ್ಲಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿದ. ಅಷ್ಟರಲ್ಲಿ ಭೂಮಿ ಕಂಪಿಸಿತು. ಗಾಳಿ ಜೋರಾಗಿ ಬೀಸಿತು. ಸೂರ್ಯನಿಂದ ಅಗ್ನಿಯುಂಡೆಗಳು ಬಿದ್ದವು. ಪ್ರಾಣಿಗಳು ದೀನವಾಗಿ ಕೂಗಿದವು. ಸಮುದ್ರ ೨ ಯೋಜನಗಳಷ್ಟು ಹಿಂದೆ ಹೋಯಿತು. ಅದರೊಳಗಿಂದ ಸಮುದ್ರರಾಜ ಹೊರಗೆ ಬಂದ. 

ಸಮುದ್ರರಾಜ ಸಮುದ್ರದಲ್ಲಿ ಹುಟ್ಟಿದ ರತ್ನ, ಬಂಗಾರಗಳಿಂದ ಕೂಡಿದ ಒಂದು ದೊಡ್ಡ ಹಾರವನ್ನು ಹಾಕಿಕೊಂಡಿದ್ದ. ಮಹಾವಿಷ್ಣು ಧರಿಸುವ ಕೌಸ್ತುಭದ ಜೊತೆಯಲ್ಲೇ ಹುಟ್ಟಿದ್ದ ಒಂದು ಮಣಿ ಕತ್ತಿನಲ್ಲಿತ್ತು. ಗಂಗೆ, ಸಿಂಧು ಮೊದಲಾದ ನದಿಗಳು ಸ್ತ್ರೀರೂಪವನ್ನು ಧರಿಸಿ ಅವನ ಹಿಂದೆ ಬಂದರು. ಅವನು ರಾಮನಿಗೆ ನಮಸ್ಕರಿಸಿ, “ರಾಮ, ಭೂಮಿ, ನೀರು, ಅಗ್ನಿ, ಗಾಳಿ, ಆಕಾಶಗಳೆಂಬ ಪಂಚಭೂತಗಳಿಗೆ ತಮ್ಮದೇ ಆದ ಸ್ವಭಾವಗಳಿವೆ. ಈ ಸ್ವಭಾವಗಳನ್ನು ಅತಿಕ್ರಮಿಸಲಾಗುವುದಿಲ್ಲ. ಸಮುದ್ರವೆಂದರೆ ಅಗಾಧವಾಗಿರಬೇಕು, ಆಳವಾಗಿರಬೇಕು. ಅದರಲ್ಲಿ ಇಳಿದವನಿಗೆ ಆಧಾರ ಸಿಗಬಾರದು. ಅದರಲ್ಲಿ ಏನಾದರೂ ಬಿದ್ದರೆ ಮುಳುಗಿಬಿಡಬೇಕು. ಭಯಂಕರವಾದ ಅಲೆಗಳಿಂದ ತೀರವನ್ನು ಹೊಡೆಯುತ್ತಿರಬೇಕು. ಇಲ್ಲದಿದ್ದರೆ ಅದನ್ನು ಸಮುದ್ರ ಎನ್ನರು. ಸಮುದ್ರವನ್ನು ಬರಿದಾಗಿಸುವುದು, ಇದರಿಂದ ದಾರಿ ಬಿಡುವುದು ನನ್ನಿಂದ ಸಾಧ್ಯವಿಲ್ಲ. ನೀನು ಅಭಿಮಂತ್ರಿಸಿದ ಬ್ರಹ್ಮಾಸ್ತ್ರವನ್ನು ನನ್ನ ಮೇಲೆ ಬಿಡಬೇಡ. ನಿನ್ನ ಬಳಿಯಿರುವ ನಲ ವಿಶ್ವಕರ್ಮನ ಮಗ. ವಿಶ್ವಕರ್ಮ ಅದ್ಭುತವಾದ ಭವನಗಳನ್ನು ನಿರ್ಮಿಸುತ್ತಾನೆ. ಅಂತಹವನ ತೇಜಸ್ಸಾದ್ದರಿಂದ ನಲನಿಗೆ ಸೇತು ನಿರ್ಮಾಣ ತಿಳಿದಿದೆ. ನೀವು ನನ್ನ ಮೇಲೆ ಸೇತುವನ್ನು ನಿರ್ಮಿಸಿಕೊಳ್ಳಿ. ವಾನರರು ನನ್ನ ಮೇಲೆ ಬಂಡೆಗಳನ್ನು ತಂದು ಹಾಕಿದರೆ ಅವು ಅತ್ತಿತ್ತ ಹೋಗದಂತೆ ನನ್ನಲ್ಲಿರುವ ಅಲೆಗಳಿಂದ ಹಿಡಿದಿಟ್ಟುಕೊಳ್ಳುತ್ತೇನೆ. ನನ್ನಲ್ಲಿರುವ ಕ್ರೂರ ಮೃಗಗಳು ವಾನರರನ್ನು ಏನೂ ಮಾಡದಂತೆ ನೋಡಿಕೊಳ್ಳುತ್ತೇನೆ. ಸೇತು ನಿರ್ಮಾಣವನ್ನು ತಕ್ಷಣವೇ ಆರಂಭಿಸಿ. ಉತ್ತರದಲ್ಲಿ ದ್ರುಮಕುಲವೆಂಬ ಪ್ರದೇಶವಿದೆ. ಅಲ್ಲಿ ಅಭೀರರು, ದಾಸ್ಯರು ಅಲ್ಲಿರುವ ಜಲಗಳನ್ನೆಲ್ಲ ಕುಡಿದು ನಾಶ ಮಾಡುತ್ತಿರುತ್ತಾರೆ. ಸಮುದ್ರವನ್ನೇ ಕ್ಷೋಭಿಸುತ್ತಾರೆ. ನೀನು ಅಭಿಮಂತ್ರಿಸಿರುವ ಬ್ರಹ್ಮಾಸ್ತ್ರವನ್ನು ಅವರ ಮೇಲೆ ಪ್ರಯೋಗಿಸು” ಎಂದ. 


ರಾಮ ಬಿಟ್ಟ ಬಾಣ ದಾಸ್ಯರನ್ನು, ಅಭೀರನ್ನು ಕೊಂದಿತು. ನಂತರ ಅದು ಭೂಮಿಯಲ್ಲಿ ಹೊಕ್ಕಾಗ ಅದರಿಂದ ನೀರು ಉದ್ಭವಿಸಿತು. ಆ ಪ್ರಾಂತಕ್ಕೆ ರಾಮ, “ಇಲ್ಲಿ ಮಂದಾಕಿನಿಯಂತಹ ಸಿಹಿ ನೀರಿನ ನದಿಗಳು ಹರಿಯಲಿ. ಗೋಸಂಪದ ಬೆಳೆಯಲಿ. ರೋಗರುಜಿನಗಳು ಬಾರದಿರಲಿ. ಮನುಷ್ಯರು ಪ್ರಶಾಂತವಾಗಿ ಬದುಕಲಿ. ಜೇನು, ಮೊಸರು, ಹಣ್ಣು, ತುಪ್ಪ ಮುಂತಾದವುಗಳು ಯೆಥೇಚ್ಛವಾಗಿ ಸಿಗಲಿ. ಈ ಪ್ರಾಂತ ಸಸ್ಯಶ್ಯಾಮಲವಾಗಲಿ” ಎಂದು ವರ ಕೊಟ್ಟ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ