೮೩. ಯುದ್ಧ ಸಿದ್ಧತೆಗಳು
ಸೀತೆಯ ಬಳಿ ನೇರವಾಗಿ ಬಂದ ರಾವಣ, “ಸೀತಾ, ನಿನ್ನ ಗಂಡ ಅಷ್ಟು ಶಕ್ತಿವಂತ ಎಂದು ಹೇಳುತ್ತಿದ್ದೆ! ಈಗ ನೋಡು ಏನಾಗಿದೆ. ರಾಮ ವಾನರರ ಜೊತೆ ಸೇರಿ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಬಂದ. ಅವನು ದಕ್ಷಿಣ ತೀರದಲ್ಲಿ ಮಲಗಿದ್ದಾಗ, ಪ್ರಹಸ್ತನ ನಾಯಕತ್ವದಲ್ಲಿ ನಮ್ಮ ಸೈನ್ಯ ಹೋಗಿ ರಾಮ ಶರೀರದಿಂದ ತಲೆಯನ್ನು ಬೇರ್ಪಡಿಸಿದರು. ನಿದ್ದೆ ಹೋಗುತ್ತಿದ್ದ ವಾನರರನ್ನು ಕೊಂದುಬಿಟ್ಟರು. ಹನುಮ ದವಡೆಯಿಂದ ರಕ್ತ ಕಾರುತ್ತಾ ಸತ್ತುಬಿದ್ದ. ರಾಮ ಸತ್ತದ್ದನ್ನು ನೋಡಿ ಲಕ್ಷ್ಮಣ ಹೆದರಿ ಓಡಿಹೋದ. ಜಾಂಬವಂತ, ಸುಷೇಣ, ಗಂಧಮಾದನ, ಶತಬಲಿ, ಅಂಗದ ಮೊದಲಾದ ವೀರರೆಲ್ಲ ಸತ್ತಿದ್ದಾರೆ. ಮಿಕ್ಕವರನ್ನು ಸಮುದ್ರದಲ್ಲಿ ಬಿಸಾಕಿದ್ದೇವೆ. ಕೆಲವು ವಾನರರ ಜೊತೆ ಲಕ್ಷ್ಮಣ ಓಡಿಹೋಗಿದ್ದಾನೆ. ನಿನ್ನ ಗಂಡನ ತಲೆಯನ್ನು ನೋಡಿ ಸಂತೋಷಪಡು” ಎಂದು ಹೇಳಿ ಅಲ್ಲಿದ್ದ ರಾಕ್ಷಸ ಸ್ತ್ರೀಯರಿಗೆ ವಿದ್ಯುಜಿಹ್ವನನ್ನು ಕರೆಯಲು ಆದೇಶಿಸಿದ. ವಿದ್ಯುಜಿಹ್ವ ಬಂದು ರಾಮನ ತಲೆ, ಬಿಲ್ಲು-ಬಾಣಗಳನ್ನು ಸೀತೆಯ ಮುಂದಿಟ್ಟ. ಅದನ್ನು ನೋಡಿದ ಸೀತೆ ಮೂರ್ಛೆಹೋದಳು.
“ಸೀತಾ ಈಗಲಾದರೂ ನೀನು ನನ್ನ ಬಳಿ ಬರುತ್ತೀಯಾ?” ಎಂದ ರಾವಣ.
ಸೀತೆ ವಿದ್ಯುಜಿಹ್ವ ತಂದ ತಲೆಯನ್ನು ಅದು ರಾಮನದೋ ಅಲ್ಲವೋ ಎಂದು ಪರೀಕ್ಷಿಸಿದಳು. ಅದು ರಾಮನ ಶಿರಸ್ಸಿನಂತೆಯೇ ಇತ್ತು. ಸೀತೆಯ ಎದೆಯೊಡೆಯಿತು. “ರಾಮ, ನನಗೆ ಸೌಭಾಗ್ಯವಿದೆಯೆಂದು, ನೀನು ದೀರ್ಘಾಯುಷಿಯೆಂದು ಜ್ಯೋತಿಷಿಗಳು ಹೇಳಿದ್ದರು. ಆದರೆ ಇಂದು ಅದು ಸುಳ್ಳಾಗಿದೆ. ನಿನಗೆ ಯಜ್ಞಾಗ್ನಿಯಿಂದ ಸಂಸ್ಕಾರವಾಗಬೇಕಿತ್ತು. ಆದರೆ ಇಂದು ನೀನು ದಿಕ್ಕಿಲ್ಲದವನಂತೆ ಯುದ್ಧಭೂಮಿಯಲ್ಲಿ ಬಿದ್ದಿದ್ದರೆ ಕ್ರೂರಪ್ರಾಣಿಗಳು ನಿನ್ನ ಶರೀರವನ್ನು ತಿಂದುಬಿಟ್ಟಿರುತ್ತವೆ. ಪತ್ನಿಯಲ್ಲಿ ದೋಷವಿದ್ದರೆ, ಅವಳ ವರ್ತನೆಯಲ್ಲಿ ವೈಕಲ್ಯವಿದ್ದರೆ ಪತಿಗೆ ತೊಂದರೆ ಎಂದು ಶಾಸ್ತ್ರಗಳು ಹೇಳುತ್ತವೆ. ನನ್ನಲ್ಲಿ ಯಾವ ದೋಷವಿದೆಯೆಂದು ನೀನು ಹೊರಟು ಹೋದೆ ರಾಮ?” ಎಂದು ಗೋಳಾಡಿದಳು. ಅವಳನ್ನು ನೋಡಿ ರಾವಣ ನಗುತ್ತಿದ್ದ. ಅವನನ್ನು ನೋಡಿ ಸೀತೆ, “ಈಗಲಾದರೂ ರಾಮನ ಶಿರಸ್ಸಿನ ಜೊತೆ ನನ್ನ ಶಿರಸ್ಸನ್ನು, ರಾಮನ ಶರೀರದ ಜೊತೆ ನನ್ನ ಶರೀರವನ್ನು ಸೇರಿಸಿ ಒಟ್ಟಿಗೆ ಸಂಸ್ಕಾರ ಮಾಡು. ನನ್ನ ಇದೊಂದು ಆಸೆಯನ್ನಾದರೂ ತೀರಿಸು” ಎಂದು ಕೇಳಿಕೊಂಡಳು. ಅಷ್ಟರಲ್ಲಿ ಭಟನೊಬ್ಬ ಬಂದು, “ಮಹಾರಾಜ, ಪ್ರಹಸ್ತರು ನಿಮಗಾಗಿ ಕಾಯುತ್ತಿದ್ದಾರೆ. ನೀವು ತಕ್ಷಣ ಬರಬೇಕಂತೆ” ಎಂದು ನಿವೇದಿಸಿದ. ರಾವಣ ಅಲ್ಲಿಂದ ಹೊರಟ. ಅವನು ಹೋದ ತಕ್ಷಣ ಅಲ್ಲಿದ್ದ ರಾಮನ ತಲೆ, ಬಿಲ್ಲು-ಬಾಣಗಳು ಮಾಯವಾದವು.
ಸ್ವಲ್ಪಹೊತ್ತಿನ ನಂತರ ಅಳುತ್ತಿದ್ದ ಸೀತೆಯ ಬಳಿ ವಿಭೀಷಣನ ಪತ್ನಿ ಸರಮೆ ಬಂದು, “ನೀನು ಶೋಕಿಸಬೇಡ ಸೀತಾ. ನಾನು ಆಕಾಶದಲ್ಲಿ ನಿಂತರೆ ಯಾರಿಗೂ ಕಾಣಿಸುವುದಿಲ್ಲ. ಆ ಶಕ್ತಿ ನನಗಿದೆ. ನಾನು ರಾಮನನ್ನು ನೋಡಿದೆ. ಅವನು ವಾನರ ಸೈನ್ಯವನ್ನು ಕಾಪಾಡುತ್ತಾ ಸಮುದ್ರತೀರದಲ್ಲಿದ್ದಾನೆ. ರಾಮ ಅಪ್ರಮತ್ತವಾಗಿ ನಿದ್ದೆ ಮಾಡುತ್ತಾನಾ? ರಾಕ್ಷಸರು ರಾಮನನ್ನು ಸಂಹರಿಸಬಲ್ಲರಾ? ನಾನು ರಾಮನನ್ನು ಈಗ ತಾನೇ ನೋಡಿ ಬಂದೆ. ಇದೆಲ್ಲ ವಿದ್ಯುಜಿಹ್ವನ ಮಾಯೆ. ನೀನು ರಾವಣನ ಮಾಯೆಗಳನ್ನು ನಂಬಬೇಡ. ಶಾಂತಿಸು” ಎಂದು ಸಮಾಧಾನ ಮಾಡಿದಳು.
“ನೀನು ಹೇಳಿದ್ದೇ ನಿಜವಾದರೆ ಈಗ ರಾವಣ ಏನು ಮಾಡುತ್ತಿದ್ದಾನೋ ಹೇಳು ನೋಡೋಣ” - ಸೀತೆ ಪ್ರಶ್ನಿಸಿದಳು.
ಸರಮೆ ರಾವಣನ ಅಂತಃಪುರಕ್ಕೆ ಹೋಗಿ ಸ್ವಲ್ಪಹೊತ್ತಿನಲ್ಲಿ ವಾಪಸ್ಸು ಬಂದು ಹೇಳಿದಳು: “ಈಗ ತಾನೇ ನಾನು ಕೇಳಿಸಿಕೊಂಡು ಬಂದೆ. ರಾವಣನ ತಾಯಿ ಕೈಕಸಿ ಮತ್ತು ಒಬ್ಬ ವೃದ್ಧ ಮಂತ್ರಿ ರಾವಣನಿಗೆ ಬುದ್ಧಿ ಹೇಳಿದರು. ರಾವಣ ಏನಾದರೂ ಆಗಲಿ ಸೀತೆಯನ್ನು ಮಾತ್ರ ಬಿಡುವುದಿಲ್ಲ ಎಂದು ಹೇಳಿ ಸೈನ್ಯವನ್ನು ಕರೆಯಲು ಆದೇಶಿಸಿದ. ರಾಕ್ಷಸರ ಕೋಲಾಹಲ ಕೇಳಿಸುತ್ತಿದೆ. ನೀನು ಮೇರು ಪರ್ವತದ ಸುತ್ತ ಕುದುರೆಗಳ ಮೇಲೆ ತಿರುಗುವ ಸೂರ್ಯನಾರಾಯಣನ ಉಪಾಸನೆ ಮಾಡು. ನಿನಗೆ ಶುಭವಾಗುತ್ತದೆ.”
ಸರಮೆಯ ಮಾತು ಕೇಳಿ ಸೀತೆಗೆ ಸ್ವಲ್ಪ ನೆಮ್ಮದಿಯಾಯಿತು.
ರಾವಣನ ಅಂತಃಪುರದಲ್ಲಿ ಮಾಲ್ಯವಂತ (ತಾತನ ವರಸೆ) ರಾವಣನಿಗೆ ಹೇಳುತ್ತಿದ್ದ: "ಸೃಷ್ಟಿಯಲ್ಲಿ ಯಾವಾಗಲೂ ಧರ್ಮ ದೇವತೆಗಳ ಬಳಿಯೇ ಇರುತ್ತದೆ. ಅಧರ್ಮ ರಾಕ್ಷಸರ ಬಳಿ ಇರುತ್ತದೆ. ಅಧರ್ಮ ಧರ್ಮದ ವಿರುದ್ಧ ಸೋಲುತ್ತದೆ. ನೀನು ಸೀತೆಯನ್ನು ತಂದಾಗಿನಿಂದ ನನಗೆ ಅಪಶಕುನಗಳು ಕಾಣಿಸುತ್ತಿವೆ. ಬಿಳಿ ರೆಕ್ಕೆ, ಕೆಂಪು ಪಾದಗಳಿರುವ ಪಾರಿವಾಳಗಳು ಅರಚುತ್ತಿವೆ. ಮನೆಗಳಲ್ಲಿರುವ ಗಿಳಿಗಳು ಒಳ್ಳೆಯ ಮಾತುಗಳನ್ನು ಆಡುತ್ತಿಲ್ಲ. ಎಲ್ಲಿಂದಲೋ ಬಂದ ಕ್ರೂರ ಪಕ್ಷಿಗಳು ಅವುಗಳ ಜೊತೆ ಯುದ್ಧ ಮಾಡುತ್ತಿವೆ. ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಯಾವನೋ ಕಪ್ಪಾದ, ತಲೆ ಬೋಳಿಸಿದ ವ್ಯಕ್ತಿ ಕೆಂಪು ವಸ್ತ್ರ ಧರಿಸಿ ಮನೆಮನೆಯ ಕಿಟಕಿಗಳಲ್ಲಿ ಬಗ್ಗಿ ನೋಡುತ್ತಿದ್ದಂತೆ ಅನಿಸುತ್ತಿದೆ. ಬಂದವನು ಸಾಮಾನ್ಯನಲ್ಲ. ಅವನು ಶ್ರೀಮಹಾವಿಷ್ಣುವೇ. ಸೀತೆಯನ್ನು ರಾಮನಿಗೆ ಒಪ್ಪಿಸಿ ಸಂಧಿ ಮಾಡಿಕೊ. ನನ್ನ ಮಾತು ಕೇಳು. ಯುದ್ಧ ಮಾಡಬೇಡ."
"ಕೈಲಿ ಪದ್ಮವಿಲ್ಲದ ಲಕ್ಷ್ಮೀದೇವಿಯಷ್ಟು ಸುಂದರವಾಗಿರುವ ಸೀತೆಯನ್ನು ನಾನು ಬಿಡುವುದಿಲ್ಲ. ರಾಮ ಬಲವಂತನಾಗಿರಬಹುದು. ಆದರೆ ನಾನೂ ಸುರಾಸುರರನ್ನು ಸೋಲಿಸಿದ್ದೇನೆ. ಎಲ್ಲರೂ ನನಗೆ ಬುದ್ದಿ ಹೇಳುವವರೇ. ತಾತಾ, ನೀನೇ ಅಲ್ಲ, ಒಂದು ವೇಳೆ ನನ್ನ ಶರೀವನ್ನು ಎರೆಡು ಹೋಳಾಗಿ ಮಾಡಿದರೂ ನಾನು ಮಾತ್ರ ಬಗ್ಗುವುದಿಲ್ಲ. ಒಬ್ಬರ ಮಾತು ಕೇಳುವುದು ನನ್ನ ಸ್ವಭಾವವಲ್ಲ."
ಅತ್ತ ರಾಮ ಲಂಕೆಯನ್ನು ನೋಡಲು ಸುವೇಲ ಬೆಟ್ಟವನ್ನು ಹತ್ತಿದ. ಅವನಿಗೆ ರಾವಣ ವಿಶೇಷ ಮಾಲೆ, ವಸ್ತ್ರಗಳನ್ನು ಹೊದ್ದು ಅಂತಃಪುರದಿಂದ ಹೊರಗೆ ಬರುವುದು ಕಾಣಿಸಿತು. ಅವನನ್ನು ನೋಡಿದ ಸುಗ್ರೀವ ಕೋಪದಿಂದ ಒಂದೇ ಜಿಗಿತದಲ್ಲಿ ರಾವಣನ ಎದುರಿಗೆ ಬಂದು ನಿಂತ. ಇಬ್ಬರೂ ರಕ್ತ ಬರುವಂತೆ ಹೊಡೆದುಕೊಂಡರು. ಅಷ್ಟರಲ್ಲಿ ರಾವಣ ಮಾಯಾಯುದ್ಧವನ್ನು ಆರಂಭಿಸಿದ. ಅದನ್ನು ತಿಳಿದು ಸುಗ್ರೀವ ಮತ್ತೆ ರಾಮನ ಬಳಿ ಬಂದುಬಿಟ್ಟ. ಅವನ ಸಾಹಸವನ್ನು ನೋಡಿ ರಾಮ, "ಸುಗ್ರೀವ! ನೀನು ಹಾಗೆ ಒಬ್ಬೊಬ್ಬನೇ ಹೋಗಬೇಡ. ನೀನಿಲ್ಲದಿದ್ದರೆ ನನಗೆ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಯಾರೂ ಬೇಡ. ಒಂದು ವೇಳೆ ಯುದ್ಧದಲ್ಲಿ ನಿನಗೇನಾದರೂ ಆದರೆ ನಾನು ರಾವಣನನ್ನು ಕೊಂದು, ವಿಭೀಷಣನಿಗೆ ಪಟ್ಟಕಟ್ಟಿ, ಲಕ್ಶ್ಮಣನನ್ನು ಅಯೋಧ್ಯೆಗೆ ಕಳಿಸಿ ನಾನು ಇಲ್ಲೇ ಪ್ರಾಣ ಬಿಡಬೇಕೆಂದುಕೊಂಡಿದ್ದೇನೆ. ನೀನಿಲ್ಲದೆ ನಾನೊಬ್ಬನೇ ವಾಪಸ್ಸು ಹೋಗುವುದಿಲ್ಲ. ಮತ್ತೆ ಇಂತಹ ಸಾಹಸ ಮಾಡಬೇಡ" ಎಂದ.
ಅಂಗದನನ್ನು ರಾಯಭಾರಿಯಾಗಿ ರಾವಣನ ಬಳಿ ಕಳಿಸಬೇಕೆಂದು ನಿರ್ಧರಿಸಿ ಅವನಿಗೆ, "ನೀನು ರಾವಣನಿಗೆ ರಾಮ ಹೇಳಿದನೆಂದು ಹೀಗೆ ಹೇಳು: ನೀನು ಎಷ್ಟೋ ಮಹರ್ಷಿಗಳಿಗೆ ತೊಂದರೆ ಕೊಟ್ಟಿದ್ದೀಯ. ಎಷ್ಟೋ ಸ್ತ್ರೀಯರನ್ನು ಅಪಹರಿಸಿದ್ದೀಯ. ನೀನು ಮಾಡಿದ ಪಾಪಗಳಿಗೆ ನಿನ್ನನ್ನು ಕೊಲ್ಲಲು ನಾನು ಬಂದಿದ್ದೇನೆ. ಋಷಿಗಳನ್ನು, ರಾಜರನ್ನು ವಿನಾಕಾರಣವಾಗಿ ಕೊಂದು ಅವರನ್ನು ಎಲ್ಲಿಗೆ ಕಳಿಸಿದ್ದೀಯೋ ನಾನು ನಿನ್ನನ್ನೂ ಅಲ್ಲಿಗೇ ಕಳಿಸುತ್ತೇನೆ. ಅಂತಃಪುರದಿಂದ ಹೊರಗೆ ಬಾ" ಎಂದು ಹೇಳಿ ಕಳಿಸಿದರು. ಅಂಗದ ಈ ಮಾತುಗಳನ್ನು ರಾವಣನಿಗೆ ಹೇಳಿದಾಗ ಅವನು ಅಂಗದನನ್ನು ಬಂಧಿಸಲು ಆದೇಶಿಸಿದ. ರಾವಣನ ಸೈನಿಕರು ಅಂಗದನನ್ನು ಹಿಡಿದರು. ಅಂಗದ ಒಂದು ಬಾರಿ ತನ್ನ ಶರೀರವನ್ನು ಕದಲಿಸಿದಾಗ ಸೈನಿಕರೆಲ್ಲ ಕೆಳಗೆ ಬಿದ್ದರು. ಅವನು ಹೊರಗೆ ಹೋಗುತ್ತಾ ಒಂದು ಪ್ರಾಸಾದವನ್ನು ಕೈಯಿಂದ ಹೊಡೆದು ಹೋದ. ಆ ಏಟಿಗೆ ಪ್ರಾಸಾದ ಕೆಳಗೆ ಬಿದ್ದು ಹೋಯಿತು! ಅಂಗದ ಹೋದ ತಕ್ಷಣ ರಾವಣ ಬಾಗಿಲುಗಳನ್ನು ಮುಚ್ಚಿಬಿಡಲು ಆದೇಶಿಸಿ, ಎಲ್ಲರಿಗೂ ಯುದ್ಧಕ್ಕೆ ಸಿದ್ಧನಾಗಲು ಹೇಳಿದ. ಪೂರ್ವದಲ್ಲಿ ಸರ್ವಸೈನ್ಯಾಧಿಕಾರಿಯಾದ ಪ್ರಹಸ್ತನನ್ನು ನೇಮಿಸಿದ. ದಕ್ಷಿಣಕ್ಕೆ ಮಹೋದರ, ಮಹಾಪಾರ್ಷರನ್ನು, ಪಶಿಮಕ್ಕೆ ಇಂದ್ರಜಿತ್ತನನ್ನು ಕಳಿಸಿ ಉತ್ತರದಲ್ಲಿ ಶುಕ ಸಾರಣರ ಜೊತೆ ತಾನೇ ಯುದ್ಧಕ್ಕೆ ನಿಂತ.
ವಿಭೀಷಣನ ಗೂಢಾಚಾರರು ಈ ವಿಷಯವನ್ನು ರಾಮನಿಗೆ ಅರುಹಿದರು. ರಾಮನ ಪಾಳಯದಲ್ಲಿಯೂ ಯುದ್ಧ ಸಿದ್ದತೆಗಳು ಆರಂಭವಾದವು. ಪೂರ್ವದಲ್ಲಿ ಪ್ರಹಸ್ತನನ್ನು ಎದುರಿಸಲು ರಾಮನ ಕಡೆಯ ಸರ್ವಸೈನ್ಯಾಧಿಕಾರಿಯಾದ ನೀಲನನ್ನು ನೇಮಿಸಿದರು. ದಕ್ಷಿಣದಲ್ಲಿ ಅಂಗದನನ್ನು ನೇಮಿಸಿದರು. ಇಂದ್ರಜಿತ್ತನನ್ನು ಎದುರಿಸಲು ಹನುಮನನ್ನು ಕಳಿಸಲಾಯಿತು. ಉತ್ತರದಲ್ಲಿ ರಾವಣನ ವಿರುದ್ಧ ರಾಮಲಕ್ಶ್ಮಣರು ನಿಂತರು.
ಯುದ್ಧ ಆರಂಭವಾಗುವುದಕ್ಕೆ ಮುಂಚೆ ರಾಮ ವಾನರರಿಗೆ, "ಯುದ್ಧ ಮಾಡುವಾಗ ರಾಕ್ಷಸರು ಕಾಮರೂಪವನ್ನು ಪಡೆಯುತ್ತಾರೆ. ನಿಮ್ಮಲ್ಲೂ ಕೆಲವರು ಕಾಮರೂಪವನ್ನು ಪಡೆಯಬಲ್ಲಿರಿ ಎಂದು ನನಗೆ ತಿಳಿದಿದೆ. ಆದರೆ ನೀವು ಮಾತ್ರ ಎಂತಹ ಪರಿಸ್ಥಿತಿಯಲ್ಲಿಯೂ ವಾನರರಾಗಿಯೇ ಇರಬೇಕು. ನಾನು, ಲಕ್ಷ್ಮಣ, ವಿಭೀಷಣ ಮತ್ತು ಅವನ ನಾಲ್ವರು ಸಹಚರರು ಮನುಷ್ಯ ರೂಪದಲ್ಲಿರುವತ್ತೇವೆ" ಎಂದು ಹೇಳಿದ.
Comments
Post a Comment