೯೫. ಮಂಡೋದರಿಯ ಶೋಕ

ಮನುಷ್ಯ ಬದುಕಿರುವವರಿಗೂ ಮನಸ್ಸು ಒಂದು ರೀತಿಯಿರುತ್ತದೆ. ಅವನು ಸತ್ತ ಮೇಲೆ ಅದು ಇನ್ನೊಂದು ರೀತಿಯಾಗಿರುತ್ತದೆ. ರಾವಣ ಕೆಳಗೆ ಬಿದ್ದಾಗ ವಿಭೀಷಣ ಅಳುತ್ತಾ ಓಡಿ ಹೋಗಿ, "ಅಣ್ಣ, ನಾನು ಎಷ್ಟು ಹೇಳಿದರೂ ಅಹಂಕಾರದಿಂದ ನೀನು, ಇಂದ್ರಜಿತ್ತ, ಪ್ರಹಸ್ತ, ಕುಂಭಕರ್ಣ, ಅತಿಕಾಯ ಯಾರೂ ನನ್ನ ಮಾತು ಕೇಳಲಿಲ್ಲ. ಇಂದು ನೋಡು ಏನಾಗಿದೆ! ನೀನಿದ್ದ ಕಾಲವೂ ಎಷ್ಟೋ ದಾನಗಳನ್ನು, ಯಜ್ಞಗಳನ್ನು ಮಾಡಿದೆ. ಮಿತ್ರಧರ್ಮದಿಂದ ಸ್ನೇಹಿತರಿಗೆ ಸಹಾಯ ಮಾಡಿದೆ. ಶತ್ರುಗಳಿಗೆ ಸಿಂಹಸ್ವಪ್ನನಾಗಿದ್ದೆ. ಆದರೆ ಇಂದು ಯಾರಿಗೂ ಬೇಡದವನಂತೆ ಭೂಮಿಯ ಮೇಲೆ ಸತ್ತು ಬಿದ್ದಿದ್ದೀಯ" ಎಂದು ಪ್ರಲಾಪಿಸಿದ.
ರಾಮ ಅವನನ್ನು ಸಮಾಧಾನ ಮಾಡುತ್ತಾ, "ವಿಭೀಷಣ, ನಿನ್ನ ಅಣ್ಣ ಯುದ್ಧ ಮಾಡಲು ಹಿಂಜರಿಯಲಿಲ್ಲ. ಭಯಪಡಲಿಲ್ಲ. ಸಾಹಸದಿಂದಲೇ ಯುದ್ಧ ಮಾಡಿದ. ಒಬ್ಬ ವೀರ ಹೇಗೆ ಸಾಯಬೇಕೆಂದುಕೊಳ್ಳುತ್ತಾನೋ ಹಾಗೆಯೇ ಸತ್ತಿದ್ದಾನೆ" ಎಂದ.

ಅಷ್ಟರಲ್ಲಿ ಅಂತಃಪುರದಿಂದ ರಾವಣನ ಸಾವಿರಾರು ಪತ್ನಿಯರು ಓಡಿ ಬಂದು, "ರಾವಣ ನೀನು ಹೋದೆ. ನಿನ್ನ ಜೊತೆ ನಮ್ಮ ಭೋಗ, ಭಾಗ್ಯಗಳೂ ಹೋದವು. ಅಷ್ಟು ಸಾಹಸ ಮಾಡಿಯೂ ಇಂದು ಒಬ್ಬ ಮನುಷ್ಯನ ಕೈಲಿ ಸತ್ತಿದ್ದೀಯ" ಎಂದು ಗೋಳಾಡಿದರು.
ರಾವಣನ ಪಟ್ಟದರಾಣಿ ಮಂಡೋದರಿ ಅಳುತ್ತಾ ಅವನನ್ನು ತಬ್ಬಿ, "ನೀನು ದೇವತೆಗಳನ್ನು ಸೋಲಿಸಿದೆ. ಎಷ್ಟೋ ಜನರನ್ನು ಓಡಿಸಿಕೊಂಡು ಹೋಗಿ ಹೊಡೆದೆ. ದುರ್ಭೆದ್ಯವಾದ ಕಾಂಚನ ಲಂಕೆಯನ್ನು ನಿರ್ಮಿಸಿದೆ. ೧೦ ತಲೆ, ೨೦ ಕೈಗಳಿಂದ ಪ್ರಕಾಶಿಸಿ, ಎಷ್ಟೋ ತಪಸ್ಸುಗಳನ್ನು ಮಾಡಿ ಕೊನೆಗೆ ಒಬ್ಬ ಮನುಷ್ಯನ ಕೈಲಿ ಸತ್ತಿದ್ದೀಯ. ಅಂದು ಹನುಮ ಸಮುದ್ರವನ್ನು ದಾಟಿ, 'ನಾನೇ ನಿನ್ನನ್ನು ಕೊಲ್ಲಬಹುದು. ಆದರೆ ರಾಮನೇ ನಿನ್ನನ್ನು ಕೊಲ್ಲಬೇಕು' ಎಂದು ಹೇಳಿ ಲಂಕೆಯನ್ನು ಸುಟ್ಟು ಹೋದ. ಆಗಲೂ ನಿನಗೆ ಅನುಮಾನ ಬರಲಿಲ್ಲವೇ? ಕೋತಿಗಳದು ಚಪಲ ಬುದ್ದಿ. ಇಂತಹ ಕೋಟ್ಯಾಂತರ ಕಪಿಗಳನ್ನು ರಾಮ ಸಮುದ್ರ ದಾಟಿಸಿದ್ದಾನೆ. ಆಗಲಾದರೂ ನಿನಗೆ ಸಂಶಯ ಬರಬೇಕಿತ್ತು" ಎಂದು ರಾಮನನ್ನು ನೋಡಿ, "ಇವನು ಮನುಷ್ಯನಲ್ಲ. ಪರಮಾತ್ಮ. ನಿನ್ನನ್ನು ಕೊಲ್ಲಲೆಂದೇ ಬಂದ ಮಹಾವಿಷ್ಣು. ಇವರೆಲ್ಲ ವಾನರ ರೂಪದಲ್ಲಿನ ದೇವತೆಗಳು. ಅಷ್ಟು ಬಾರಿ ನೋಡಿದರೂ ಇವನು ವಿಷ್ಣುವೇ ಎಂದು ನಿನಗೆ ಅರ್ಥವಾಗಲಿಲ್ಲವೇ? ಒಂದು ಬಾರಿ ನೀನು ತಪಸ್ಸು ಮಾಡಲು ನಿನ್ನ ಇಂದ್ರಿಯಗಳನ್ನು ನಿಗ್ರಹಿಸದ್ದೆ. ಇಂದು ಇಂದ್ರಿಯಗಳೇ ನಿನ್ನನ್ನು ಕೊಂದಿವೆ. ನಿನಗೆ ಸಾವಿರಾರು ಪತ್ನಿಯರಿದ್ದಾರೆ. ಅವರಲ್ಲಿ ಯಾರನ್ನಾದರೂ ನೀನು ಕಾಮಿಸಬಹುದು. ರಾಜ್ಯ ನಾಶವಾಗಲೆಂದೇ ನಿನಗೆ ಸೀತೆಯ ಮೇಲೆ ಆಸೆ ಹುಟ್ಟಿತು. ಸೀತೆ ರೋಹಿಣಿ, ಅರುಂಧತಿಯರಿಂಗಿಂತಲೂ ಹೆಚ್ಚು. ತನ್ನ ಪತಿಯನ್ನು ಅನುಗಮಿಸುವ ಪತ್ನಿಯನ್ನು ಯಾವಾಗ ಅಪಹರಿಸಿದೆಯೋ ಆಗಲೇ ಅವಳ ತೇಜಸ್ಸು ನಿನ್ನನ್ನು ಸುಟ್ಟಿತು. ನಿನಗೆ ಎಷ್ಟೋ ಬಾರಿ ಹೇಳಿದ್ದೇನೆ. ಅವಳನ್ನು ತರುವುದು ನಿನ್ನ ನಾಶಕ್ಕೆ ಕಾರಣವಾಗುತ್ತದೆಂದುವಿಭೀಷಣ ಪುಣ್ಯ ಮಾಡಿದ್ದಾನೆ. ಸೀತೆ ಯಾರೆಂದು ಅವನಿಗೆ ಬೇಗ ತಿಳಿಯಿತು. ರಾವಣಾ, ನಾನು ದಾನವಾಸುರನಾದ ಮಯನ ಮಗಳು. ಸೀತೆ ನನಗಿಂತ ದೊಡ್ಡ ಕುಟುಂಬದಲ್ಲಿ ಹುಟ್ಟಿದ್ದಳಾ? ನನ್ನ ಗಂಡ ಲೋಕವನ್ನೇ ಗೆದ್ದ ರಾವಣ, ನನ್ನ ಮಗ ಇಂದ್ರನನ್ನೇ ಗೆದ್ದ ಮೇಘನಾದ ಎಂದು ಅಹಂಕಾರದಿಂದಿದ್ದೆ. ಆದರೆ ಅದು ಬಹುಕಾಲ ನಿಲ್ಲಲಿಲ್ಲ. ಇಂದು ನನಗೆ ರಾಜ್ಯವಿಲ್ಲ, ಗಂಡನಿಲ್ಲ, ಮಗನಿಲ್ಲ. ನಿನ್ನ ಚಿತೆಗೆ ಬೆಂಕಿಯಿಡಲೂ ಯಾರೂ ಉಳಿಯಲಿಲ್ಲ. ಪತಿವ್ರತೆ ಯಾರಮನೆಯಲ್ಲಾದರೂ ಕಣ್ಣೀರಿಟ್ಟರೆ ಮನೆ ನಾಶವಾಗುತ್ತದೆ. ಸೀತೆಯ ಕಣ್ಣೀರಿನಿಂದ ಇಂದು ಲಂಕೆಯೇ ನಾಶವಾಯಿತುಎಂದು ರೋದಿಸಿದಳು.
ಅವಳನ್ನು ನೋಡಿ ರಾಮ, "ಇವಳು ತುಂಬಾ ಶೋಕಿಸುತ್ತಿದ್ದಾಳೆ. ಒಳಕ್ಕೆ ಕರೆದುಕೊಂಡು ಹೋಗಿ. ರಾವಣನ ಮಕ್ಕಳೆಲ್ಲ ಸತ್ತಿರುವ ಕಾರಣ, ವಿಭೀಷಣ, ನೀನು ಅಂತ್ಯಕ್ರಿಯೆಗಳನ್ನು ಮಾಡು" ಎಂದ.
"ರಾಮ, ಬದುಕಿದ್ದಷ್ಟು ದಿನ ಇವನು ಅಧರ್ಮದಿಂದಲೇ ಇದ್ದ. ಪರಸ್ತ್ರೀಯರ ಹಿಂದೆ ತಿರುಗಿದ. ಇಂತಹವನಿಗೆ ಸಂಸ್ಕಾರವೇಕೆ? ಶರೀರವನ್ನು ಹೀಗೆ ಬಿಟ್ಟುಬಿಡೋಣ"
"ವಿಭೀಷಣ, ಸತ್ತ ಮೇಲೆ ಪಾಪಗಳೆಲ್ಲ ಶರೀರದ ಜೊತೆಯೇ ಹೊರಟುಹೋಗುತ್ತವೆ. ಇನ್ನು ವೈರ ಬೇಡ. ಸಂಸ್ಕಾರವಾಗದಿದ್ದರೆ ಇವನು ಒಳ್ಳೆಯ ಲೋಕಗಳನ್ನು ಪಡೆಯುವುದಿಲ್ಲ. ಸ್ನೇಹಿತನ ಅಣ್ಣ ನನಗೂ ಸ್ನೇಹಿತನೇ. ಒಂದು ವೇಳೆ ನೀನು ಮಾಡದಿದ್ದರೆ ನಾನೇ ಇವನ ಅಂತ್ಯಸಂಸ್ಕಾರ ಮಾಡುತ್ತೇನೆ"


ರಾಮನ ಮಾತು ಕೇಳಿ ವಿಭೀಷಣ ರಾವಣನ ಅಂತ್ಯಸಂಸ್ಕಾರ ಮಾಡಿದ. ಆಕಾಶದಲ್ಲಿದ್ದ ದೇವತೆಗಳು ನಿಧಾನವಾಗಿ ಹೊರಟುಹೋದರು. ರಾಮ, ವಿಭೀಷಣನಿಗೆ ಪಟ್ಟಾಭಿಷೇಕ ಮಾಡಲು ಸಮುದ್ರದಿಂದ ನೀರು ತರಲು ಹೇಳಿದ. ವಿಭೀಷಣನ ಪಟ್ಟಾಭಿಷೇಕವಾಯಿತು. ನಂತರ ಹನುಮನನ್ನು ಕರೆದು, "ಹನುಮ ನೀನು ಹೋಗಿ ಸೀತೆಯನ್ನು ನೋಡು. ನಾನು ಸುಗ್ರೀವನ ಸಹಾಯದಿಂದ ರಾವಣನನ್ನು ಕೊಂದೆನೆಂದು ತಿಳಿಸು. ವಿಭೀಷಣನ ಪಟ್ಟಾಭಿಷೇಕವಾಗಿದೆ. ಆದ್ದರಿಂದ ಅವಳು ಈಗ ನನ್ನ ಸ್ನೇಹಿತನ ಆಶ್ರಯದಲ್ಲಿದ್ದಾಳೆಂದು ಹೇಳಿ ಇನ್ನು ಭಯಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸು" ಎಂದ.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ