೯೬. ಹನುಮ-ಸೀತೆಯರ ಭೇಟಿ
ಹನುಮ ಬಂದಾಗ ಸೀತೆ ಧ್ಯಾನ ಮಾಡುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಕಣ್ಣು ಬಿಟ್ಟು, "ನೀನು ಹನುಮ ಅಲ್ಲವೇ?" ಎಂದು ಕೇಳಿದಳು.
ಹನುಮ, "ಹೌದಮ್ಮ. ರಾಮ ಸುಗ್ರೀವ, ವಿಭೀಷಣರ ಸಹಾಯದಿಂದ ರಾವಣನನ್ನು ಸಂಹರಿಸಿದ. ವಿಭೀಷಣನನ್ನು ಲಂಕೆಗೆ ರಾಜನನ್ನಾಗಿ ಮಾಡಿದ್ದಾರೆ. ನೀನು ರಾಮನ ಸ್ನೇಹಿತನ ವನದಲ್ಲಿರುವುದರಿಂದ ನೀನು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿ ಕಳಿಸಿದ್ದಾರೆ” ಎಂದ.
"ಎಂತಹ ಒಳ್ಳೆಯ ವಾರ್ತೆ ಹೇಳಿದೆ ಹನುಮ" ಎಂದು ಹೇಳಿ ಸೀತೆ ಮೌನವಾದಳು.
"ಏಕಮ್ಮಾ ಸುಮ್ಮನಾದೆ?"
"ಹತ್ತು ತಿಂಗಳಿಂದ ನಾನು ಈ ಮಾತು ಕೇಳಲೆಂದೇ ಕಾದಿದ್ದೆ. ಆಗ ನೀನು ಬಂದು ಹೇಳಿದಾಗ ತಕ್ಷಣಕ್ಕೆ ಬಾಯಿಯಿಂದ ಮಾತು ಹೊರಡಲಿಲ್ಲ. ನನಗೆ ತುಂಬಾ ಸಂತೋಷವಾಗಿದೆ. ನಾನು ನಿನಗೆ ಏನು ಕೊಡಲಿ. ಎಷ್ಟು ಬಂಗಾರ, ಮುತ್ತು, ರತ್ನಗಳು ಕೊಟ್ಟರೂ ಸಾಲದು. ಈಗ ನನ್ನ ಬಳಿ ಏನೂ ಇಲ್ಲ. ನೀನು ಮಧುರವಾಗಿ ಮಾತಾಡುತ್ತೀಯ. ನಿನಗೆ ಅಷ್ಟಾಂಗ ಯೋಗದಿಂದ ಕೂಡಿದ ಬುದ್ಧಿಯಿದೆ. ನಿನ್ನ ವೀರ್ಯ, ಪರಾಕ್ರಮ, ತೇಜಸ್ಸನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ."
"ಅಮ್ಮ, ನಿನ್ನ ಬಳಿ ಏನೂ ಇಲ್ಲವೆಂದು ಹೇಳಿದೆ. ಆದರೆ ನಾನು ಒಂದು ವರ ಕೇಳುತ್ತೇನೆ. ಹಿಂದೆ ನಾನು ಬಂದಿದ್ದಾಗ, ಈ ರಾಕ್ಷಸಿಯರು ನೀನು ಬದುಕಿದ್ದಾಗಲೇ ನಿನ್ನನ್ನು ಹಂಚಿಕೊಳ್ಳುತ್ತಿದ್ದರು. ನೀನು ಅನುಮತಿಕೊಟ್ಟರೆ ಅವರನ್ನು ಸ್ವಲ್ಪ ಹಿಂಸಿಸಿ ಬರುತ್ತೇನೆ."
"ಹನುಮ ಅವರು ದಾಸೀ ಜನರು. ಪ್ರಭು ಹೇಳಿದಂತೆ ಮಾಡುತ್ತಾರೆ. ದೋಷ ಅವರದ್ದಲ್ಲ. ಅವರ ರಾಜನದು. ನೀನು ನಿನ್ನ ಪ್ರಭು ಹೇಳಿದಂತೆ ಮಾಡುವ ಹಾಗೆ ಅವರೂ ಅವರ ಪ್ರಭು ಹೇಳಿದಂತೆ ಮಾಡಿದ್ದಾರೆ. ಹಿಂದೆ ಏನೋ ನಾನು ಪಾಪ ಮಾಡಿದ್ದೇನೆ. ಅದರ ಫಲವನ್ನು ಈಗ ಅನುಭವಿಸಿದೆ. ಒಂದು ಕಥೆ ಹೇಳುತ್ತೇನೆ ಕೇಳು.
ಪೂರ್ವದಲ್ಲಿ ಒಬ್ಬಬೇಟೆಗಾರನಿದ್ದ. ಅವನನ್ನು ಒಂದು ಹುಲಿ ಅಟ್ಟಸಿಕೊಂಡು ಬಂದಿತು. ಅದರಿಂದ ತಪ್ಪಿಸಿಕೊಳ್ಳಲು ಅವನು ಮರ ಹತ್ತಿದ. ಅದರ ಮೇಲೆ ಒಂದು ಕರಡಿ ಮಲಗಿತ್ತು. ಕೆಳಗೆ ಇಳಿದರೆ ಹುಲಿ ತಿನ್ನುತ್ತದೆ. ಅಲ್ಲೇ ಇದ್ದರೆ ಕರಡಿ ತಿನ್ನುತ್ತದೆ. ಈ ಪರಿಸ್ಥಿತಿಯಲ್ಲಿ ಹುಲಿ ಕರಡಿಗೆ, 'ಅವನು ನರ. ನಾವು ಮೃಗಗಳು. ಅವನ ಜಾತಿಯೇ ಬೇರೆ. ನಮ್ಮ ಜಾತಿಯೇ ಬೇರೆ. ಅವನನ್ನು ಅಲ್ಲಿಂದ ತಳ್ಳಿಬಿಡು' ಎಂದಿತು. ಆದರೆ ಕರಡಿ. 'ಅವನು ತಿಳಿದೋ, ತಿಳಿಯದೆಯೋ ನಾನಿರುವ ಮರವನ್ನೇ ಹತ್ತಿದ್ದಾನೆ. ಅಂದರೆ ನನಗೆ ಶರಣಾಗಿದ್ದಾನೆ. ಆದ್ದರಿಂದ ಅವನನ್ನು ತಳ್ಳುವುದಿಲ್ಲ' ಎಂದಿತು. ನಂತರ ಮಾನವನಿಗೆ, ನನಗೂ ಹುಲಿಯಿಂದ ತೊಂದರೆಯಿದೆ. ಮಲಗಿದಾಗ ನಾನು ಕೆಳಗೆ ಬಿದ್ದುಬಿಡಬಹುದು. ಆದ್ದರಿಂದ ನಾನು ಬೀಳದಂತೆ ನೋಡಿಕೋ' ಎಂದು ಹೇಳಿತು. ಕರಡಿ ಮಲಗಿದ ಮೇಲೆ ಹುಲಿ ಮಾನವನಿಗೆ, 'ಅದಕ್ಕೆ ಎದ್ದ ಮೇಲೆ ಹಸಿವಾಗುತ್ತದೆ. ನಿನ್ನನ್ನು ಕೊಂದೇ ಕೊಲ್ಲುತ್ತದೆ. ಅದನ್ನು ಕೆಳಗೆ ತಳ್ಳು. ನಾನು ತಿಂದು ಹೋಗುತ್ತೇನೆ. ಆಮೇಲೆ ನೀನೂ ಹೋಗಹುದು' ಎಂದಿತು. ಆ ಬೇಟೆಗಾರ ಕರಡಿಯನ್ನು ಕೆಳಗೆ ತಳ್ಳಿಬಿಟ್ಟ. ಆದರೆ ಕರಡಿ ಒಂದು ಕೊಂಬೆಯನ್ನು ಹಿಡಿದು ಮೇಲೆ ಬಂದಿತು. ಮತ್ತೆ ಹುಲಿ ಕರಡಿಯಲ್ಲಿ ಭೇದವನ್ನು ಪ್ರೇರಿಸಲು ನೋಡಿತು. ಆದರೆ ಕರಡಿ ಅಪಕಾರ ಮಾಡಿದ್ದರೂ ಅವನು ಆಶ್ರಿತನಾದರೆ ಅವನನ್ನು ಕಾಪಾಡಲೇಬೇಕು ಎಂದು ಬೇಟೆಗಾರನನ್ನು ಕಾಪಾಡಿತು.
ನಾನು ಮನುಷ್ಯ ಸ್ತ್ರೀ. ಅದರಲ್ಲಿಯೂ ಕ್ಷತ್ರೀಯಳು. ರಾಮನ ಪತ್ನಿಯಾಗಿ ಈ ರಾಕ್ಷಸ ಸ್ತ್ರೀಯರನ್ನು ಕೊಂದರೆ ಉತ್ತಮ ಕುಲದಲ್ಲಿ ಹುಟ್ಟಿಯೂ ಏನು ಪ್ರಯೋಜನ? ಕೆಟ್ಟವರ ಮೇಲೂ ದಯೆಯಿರಬೇಕು. ಇವರು ತಪ್ಪು ಮಾಡಿದ್ದಾರೆ. ನನಗೆ ಇವರ ಮೇಲೆ ದಯೆಯಿದೆ. ನಾನು ಇವರನ್ನು ರಕ್ಷಿಸುತ್ತೇನೆ."
"ಅಮ್ಮ ಇಂತಹ ಮಾತುಗಳು ನಿನಗೆ ಮಾತ್ರ ಸಾಧ್ಯ" ಎಂದು ಹೇಳಿ ಹನುಮ ರಾಮನ ಬಳಿ ಬಂದು, "ಸೀತೆಯೂ ನಿನ್ನನ್ನು ನೋಡಲು ಇಚ್ಛಿಸುತ್ತಿದ್ದಾಳೆ" ಎಂದ.
ಹನುಮನ ಮಾತು ಕೇಳಿ ರಾಮ ಸ್ವಲ್ಪ ಹೊತ್ತು ಯೋಚಿಸಿದ. ಅವನ ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯಿತು. ಬಹಳ ದುಃಖದಿಂದ ಭೂಮಿಯನ್ನು ನೋಡುತ್ತಾ ವಿಭೀಷಣನಿಗೆ ಹೇಳಿದ: "ವಿಭೀಷಣ ನೀನು ಲಂಕೆಯ ಒಳಗೆ ಹೋಗಿ, ಸೀತೆಗೆ ನಾನು ಹೇಳಿದೆನೆಂದು ಹೇಳಿ ತಲೆ ಸ್ನಾಸ ಮಾಡಿಸಿ, ಒಳ್ಳೆಯ ಸೀರೆಯುಡಿಸಿ, ಅಲಂಕಾರ ಮಾಡಿಸಿ ನನ್ನ ಬಳಿ ಕರೆದುಕೊಂಡು ಬಾ"
ವಿಭೀಷಣ ಆಶ್ಚರ್ಯದಿಂದ ತಕ್ಷಣ ಸೀತೆಯ ಬಳಿ ಹೋಗಿ ರಾಮ ಹೇಳಿದಂತೆ ನಿವೇದಿಸಿದ.
ಆದರೆ ಸೀತೆ, "ನಾನು ಈಗ ಹೇಗಿದ್ದೇನೋ ಹಾಗೆಯೇ ರಾಮನ ದರ್ಶನ ಮಾಡಬೇಕೆಂದುಕೊಂಡಿದ್ದೇನೆ" ಎಂದಳು.
"ಅಮ್ಮ, ಇದು ರಾಮನ ಆಜ್ಞೆ. ಪ್ರಭು ಹೇಳಿದಂತೆ ಮಾಡಬೇಕು. ಅಂತಃಪುರದ ಸ್ತ್ರೀಯರು ನಿನಗೆ ತಲೆ ಸ್ನಾನ ಮಾಡಿಸಿ, ಅಲಂಕಾರ ಮಾಡುತ್ತಾರೆ. ನೀನು ಒಳ್ಳೆಯ ಭೂಷಣಗಳನ್ನು ಧರಿಸಿ ರಾಮನಿಗೆ ದರ್ಶನ ಕೊಡು."
Comments
Post a Comment