೯೭. ಅಗ್ನಿಪ್ರವೇಶ

ಸೀತೆ ಸ್ನಾನ ಮಾಡಿ, ಅಲಂಕರಿಸಿಕೊಂಡ ಮೇಲೆ ಅವಳನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ರಾಮನ ಬಳಿ ಕರೆತಂದರು. ರಾಮನ ಮುಖದಲ್ಲಿ ದೈನ್ಯ, ಸಂತೋಷ, ಕೋಪ ಎಲ್ಲ ಭಾವನೆಗಳೂ ಒಟ್ಟಾಗಿ ಕಾಣಿಸುತ್ತಿದ್ದವು. "ನೀವು ಅವಳನ್ನು ಪಲ್ಲಕ್ಕಿಯಲ್ಲೇಕೆ ಕರೆತರುತ್ತಿದ್ದೀರಿ? ಇಳಿಸಿ. ನಡೆದು ಬರಲಿ" ಎಂದ.
ನಡೆದು ಬರುತ್ತಿದ್ದ ಸೀತೆಯನ್ನು ನೋಡಲು ವಾನರರು ಮುಗಿದುಬೀಳುತ್ತಿದ್ದರು. ಸುಗ್ರೀವ ಅವರನ್ನು ಹಿಂದೆ ಹೋಗಲು ಹೇಳಿದ. ರಾಮ, "ಇವಳಿಗಾಗಿಯೇ ಇವರು ಇಷ್ಟು ದಿನ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಯುದ್ಧಮಾಡಿದ್ದಾರೆ. ಈಗ ಅವಳು ಬರುತ್ತಿದ್ದಾಗ ಅವರನ್ನು ಹಿಂದೆ ನೂಕಿದರೆ ಹೇಗೆ? ನೋಡಲಿ ಬಿಡಿ. ಪ್ರಿಯ ಬಂಧು ವಿಯೋಗವಾದಾಗ, ರಾಜ್ಯದಲ್ಲಿ ಕ್ಷೋಭೆಯಾದಾಗ, ಯುದ್ಧ ನಡೆಯುತ್ತಿದ್ದಾಗ ಅಂತಃಪುರದ ಸ್ತ್ರೀಯರು ಹೊರಗೆ ಬರಬಹುದು. ನಾನು ಇಲ್ಲೇ ಇದ್ದೇನೆ. ನಾನು ಪಕ್ಕದಲ್ಲಿರುವಾಗ ಸೀತೆಯನ್ನು ನೋಡುವುದರಲ್ಲಿ ಯಾವುದೇ ದೋಷವಿಲ್ಲ" ಎಂದ.
ಹನುಮ, "ರಾಮಾ, ನಾವು ಯಾರಿಗಾಗಿ ಇಷ್ಟು ಕಷ್ಟ ಪಟ್ಟೆವೋ ಸೀತೆ ಇಂದು ನಿಮ್ಮ ಬಳಿ ಬಂದು ನಿಂತಿದ್ದಾಳೆ" ಎಂದ.
ಸೀತೆ ಆನಂದದಿಂದ ಕಣ್ಣೀರಿಡುತ್ತ ರಾಮನನ್ನು, "ಆರ್ಯಪುತ್ರಾ" ಎಂದು ಕರೆದು ಅವನ ಮುಂದೆ ನಿಂತಳು.

ರಾಮ ಹೇಳಿದ: "ಶತ್ರುವನ್ನು ಗೆದ್ದು ನಿನ್ನನ್ನು ಪಡೆದಿದ್ದೇನೆ. ಯಾವ ದೈವದ ಅನುಗ್ರವಿಲ್ಲದೆ ನೀನು ಅಪಹರಿಸಲ್ಪಟ್ಟೆಯೋ ದೈವವನ್ನು ನಾನು ಪುರುಷ ಪ್ರಯತ್ನದಿಂದ ತಿದ್ದಿದ್ದೇನೆ. ಪೌರುಷ, ಪರಾಕ್ರಮವಿರುವವನಿಗೆ ಏನಾದರೂ ಅಪವಾದ ಬಂದಾಗ ಅದನ್ನು ತಿದ್ದುಕೊಳ್ಳದಿದ್ದರೆ ಲೋಕ ಅವನನ್ನು ಕೈಲಾಗದವನು ಎಂದುಕೊಳ್ಳುತ್ತದೆ. ರಾಮನ ಪತ್ನಿಯನ್ನು ರಾವಣ ಅಪಹರಿಸಿದರೆ ರಾಮ ಏನೂ ಮಾಡಲಿಲ್ಲ ಎನ್ನುವ ಅಪವಾದವನ್ನು ಹೋಗಲಾಡಿಸಿಕೊಳ್ಳಲು ರಾವಣನನ್ನು ಕೊಂದಿದ್ದೇನೆ. ಸಮುದ್ರವನ್ನು ದಾಟಿ ಹನುಮ ಮಾಡಿದ ಭೀಭತ್ಸ ಇಂದಿಗೆ ಸಾರ್ಥಕ್ಯವನ್ನು ಪಡೆದಿದೆ. ನಾನು ಇದೆಲ್ಲ ಮಾಡಿದ್ದು ನನ್ನ ವಂಶದ ಹೆಸರನ್ನು ಉಳಿಸಲು. ಇಕ್ಷ್ವಾಕು ವಂಶದವನು ಕೈಲಾಗದವನು ಎಂದು ಲೋಕ ಮಾತಾಡಿಕೊಳ್ಳಬಾರದು. ಆದರೆ ಸೀತಾ, ಇಂದು ನಿನ್ನ ಚಾರಿತ್ರ್ಯ ಶಂಕೆಗೆ ಒಳಪಟ್ಟಿದೆ. ಇಷ್ಟು ದಿನದಿಂದ ನೀನು ರಾಕ್ಷಸನ ಮನೆಯಲ್ಲಿದ್ದೀಯ. ದುಷ್ಟ ರಾವಣ ನಿನ್ನ ಮೇಲೆ ನೋಡಬಾರದ ನೋಟ ಬೀರಿದ್ದಾನೆ. ಬಲವಂತವಾಗಿ ಜುಟ್ಟು ಹಿಡಿದು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ. ೧೦ ತಿಂಗಳ ಕಾಲ ನಿನ್ನನ್ನು ನೋಡಿದ್ದಾನೆ. ನೀನೂ ಸೌಂದರ್ಯವತಿ. ವಯಸ್ಸಿನಲ್ಲಿರುವವಳು. 
ಪ್ರತ್ಯಚಾರಿತ್ರ ಸಂದೇಹ ಮಮ ಪ್ರತಿಮುಖೇ ಸ್ಥಿತಾ
ದೀಪೋ ನೇತ್ರಾತುರಸ್ಯೇವ ಪ್ರತಿಕೂಲಾಸಿ ಮೇ ದೃಢಮ್
ಕಣ್ಣು ಸರಿಯಾಗಿಲ್ಲದವನಿಗೆ ದೀಪದ ಬೆಳಕು ಒಪ್ಪಿಗೆಯಾಗಲಾರದು (ಇಲ್ಲಿ ರಾಮ ಲೋಕದ ದೃಷ್ಟಿಯಿಂದ ನೋಡಿ, ತನ್ನ ಕಣ್ಣಿನಲ್ಲಿಯೇ ದೋಷವಿದೆ ಎನ್ನುತ್ತಾನೆ. ಇಲ್ಲಿ ದೀಪ ಸೀತೆ. ಕಣ್ಣು ಸರಿಯಾಗಿಲ್ಲದವನು ರಾಮ! ಈ ಶ್ಲೋಕದ ಅರ್ಥವನ್ನು ಗಮನಿಸುವುದು ಮುಖ್ಯವಾಗುತ್ತದೆ). ಈಗ ನಿನ್ನ ನಡತೆಯಿಂದ ಉದ್ಭವವಾಗಿರುವ ಸಂದೇಹ ನನಗೆ ಪ್ರತಿಕೂಲವಾಗಿದೆ. ಆದ್ದರಿಂದ ಈಗ ನಿನ್ನಿಷ್ಟ. ನಿನಗೆ ಯಾರು ರಕ್ಷಣೆ ಕೊಡುತ್ತಾರೋ ಅವರ ಜೊತೆ ಹೊರಟುಹೋಗು. ಅದು ಲಕ್ಷ್ಮಣನೇ ಆಗಬಹುದು, ಭರತನೇ ಆಗಬಹುದು, ಸುಗ್ರೀವನೇ ಆಗಬಹುದು, ಯಾರಾದರೂ ಆಗಬಹುದು. ಅದಕ್ಕೆ ನನ್ನ ಅನುಮತಿಯಿದೆ. ಇನ್ನು ನೀನು ನನಗೆ ಬೇಕಿಲ್ಲ."

ಸೀತೆಯ ಎದೆಯೊಡೆಯಿತು. "ರಾಮ, ನೀನು ಚಿಕ್ಕವನಾದಾಗಲೇ ನನ್ನನ್ನು ವರಿಸಿದೆ. ಅಷ್ಟುದಿನದಿಂದ ನಾವು ಜೊತೆಯಲ್ಲಿದ್ದೇವೆ. ನಾನು ಎಂತಹವಳೆಂದು ನಿನಗೆ ತಿಳಿಯದೇ? ನಾನು ಅಷ್ಟು ಕೈಲಾಗದವಳಂತೆ ಕಾಣಿಸುತ್ತಿದ್ದೀನಾ? ನನ್ನ ಚಾರಿತ್ರ್ಯದ ಬಗ್ಗೆ ಅನುಮಾನವಿದ್ದರೆ ಅಂದು ನೀನು ಹನುಮನನ್ನು ಏಕೆ ಕಳಿಸಿದೆ? ನಾನು ರಾಕ್ಷಸರ ಮಧ್ಯೆ ಇದ್ದೇನೆಂದು ಹನುಮ ಹೇಳಿದಾಗ ಮತ್ತೆ ಅವನ ಜೊತೆಯೇ ನೀನು ನನ್ನ ಶೀಲವನ್ನು ಅನುಮಾನಿಸುತ್ತಿದ್ದೀಯ ಎಂದು ಹೇಳಿ ಕಳಿಸಬಹುದಾಗಿತ್ತು. ಆಗಲೇ ನನ್ನ ಪ್ರಾಣವನ್ನು ಬಿಟ್ಟುಬಿಡುತ್ತಿದ್ದೆ. ಹಾಗೇಕೆ ಮಾಡಲಿಲ್ಲ? ನನಗಾಗಿ ಸಮುದ್ರಕ್ಕೆ ಸೇತುವೆ ಕಟ್ಟಿ, ಲಂಕೆಗೆ ಬಂದು, ಯುದ್ಧವೇಕೆ ಮಾಡಿದೆ? ಇಷ್ಟು ತೊಂದರೆಯೇಕೆ ತೆಗೆದುಕೊಂಡೆ? ಯುದ್ಧದಲ್ಲಿ ಜಯಾಪಜಯಗಳು ವಿಧಿನಿರ್ಣಿತ. ನೀನಾದರೂ ಗೆಲ್ಲಬಹುದು. ರಾವಣನಾದರೂ ಗೆಲ್ಲಬಹುದು. ನೀನು ನನ್ನ ಮೇಲಿನ ಪ್ರೀತಿಯಿಂದಲೇ ಇಷ್ಟು ಕಷ್ಟ ಪಟ್ಟೆ. ಆದರೆ ಇಂದೇಕೆ ಇಷ್ಟು ಲಘುವಾಗಿ ಮಾತಾಡುತ್ತಿದ್ದೀಯ? ಇಂದು ನನ್ನ ಶೀಲ, ನನ್ನ ಭಕ್ತಿ, ನನ್ನ ನಡತೆ ಎಲ್ಲವನ್ನೂ ಗಾಳಿಗೆ ತೂರಿಬಿಟ್ಟೆ. ನಾನು ಬದುಕಿದ್ದರೆ ರಾಮನ ಪತ್ನಿಯಾಗಿಯೇ ಬದುಕುತ್ತೇನೆ. ಸತ್ತರೂ ಅವನ ಪತ್ನಿಯಾಗಿಯೇ ಸಾಯುತ್ತೇನೆ. ಒಂದು ಬಾರಿ ಅಪನಿಂದೆ ಬಂದ ಮೇಲೆ ನನಗೂ ಜೀವನಕ್ಕೂ ಸಂಬಂಧವಿಲ್ಲ. ಲಕ್ಷ್ಮಣಾ, ಚಿತೆಯನ್ನು ಸಿದ್ದ ಮಾಡು" ಎಂದಳು.


ಲಕ್ಷ್ಮಣ ರಾಮನನ್ನು ಕೋಪದಿಂದ ನೋಡಿದ. ರಾಮ ಅದಕ್ಕಿಂತಲೂ ಹೆಚ್ಚು ಕೋಪದಿಂದ ಲಕ್ಷ್ಮಣನನ್ನು ನೋಡಿದ. ಆಗ ಲಕ್ಷ್ಮಣ ಚಿತೆಯನ್ನು ಸಿದ್ದ ಮಾಡಿದ. ಸೀತೆ, "ನನ್ನ ಮನಸ್ಸು ಸರ್ವಕಾಲದಲ್ಲಿಯೂ ರಾಮನ ಮೇಲೇ ಇದ್ದದ್ದು ನಿಜವಾದರೆ, ಪೃಥ್ವಿ, ಆಕಾಶ, ಅಷ್ಟದಿಕ್ಪಾಲಕರು, ಅಂತರಾತ್ಮ, ಅಗ್ನಿ ಎಲ್ಲರ ಸಾಕ್ಷಿಯಾಗಿ ನನ್ನ ಮನಸ್ಸು ರಾಮನನ್ನು ಬಿಡದೆ ಅವನಲ್ಲೇ ಇದ್ದದ್ದು ನಿಜವಾದರೆ ಅಗ್ನಿಹೋತ್ರವೇ ನನ್ನನ್ನು ರಕ್ಷಿಸಲಿ" ಎಂದು ಹೇಳಿ ಅಗ್ನಿಯಲ್ಲಿ ಧುಮುಕಿದಳು

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ