೯೮. ದೇವತೆಗಳ ದರ್ಶನ
ಸೀತೆ ಅಗ್ನಿಗೆ ಧುಮುಕಿದ ತಕ್ಷಣ ದೇವತೆಗಳೆಲ್ಲ ಅಲ್ಲಿಗೆ ಬಂದರು. "ಎಂತಹ ಕೆಲಸ ಮಾಡಿದೆ ರಾಮ! ನೀನು ಸಾಕ್ಷಾತ್ ಮಹಾವಿಷ್ಣು. ಸೃಷ್ಟಿ, ಸ್ಥಿತಿ, ಲಯಗಳಿಗೆ ನೀನೇ ಕಾರಣ. ನೀನೇ ಪರಬ್ರಹ್ಮ. ಸೀತೆಯನ್ನು ಅಗ್ನಿಗೆ ಧುಮುಕು ಎಂದು ಹೇಗೆ ಹೇಳಿದೆ?" ಎಂದು ಪ್ರಶ್ನಿಸಿದರು.
"ನೀವೆಲ್ಲರೂ ನನ್ನನ್ನು ದೊಡ್ಡವನು ಎನ್ನುತ್ತಿದ್ದೀರ. ಆದರೆ ನಾನು ಹಾಗೆ ಭಾವಿಸುತ್ತಿಲ್ಲ. ನಾನು ದಶರಥನ ಪುತ್ರ. ಮನುಷ್ಯ" - ರಾಮ ಉತ್ತರಿಸಿದ.
ಅಷ್ಟರಲ್ಲಿ ಅಗ್ನಿಯಿಂದ ಅಗ್ನಿದೇವ ಸೀತೆಯನ್ನು ತನ್ನ ತೊಡೆಯಮೇಲೆ ಕೂರಿಸಿಕೊಂಡು ಬಂಗಾರದ ಸಿಂಹಾಸನದ ಮೇಲೆ ಹೊರಗೆ ಬಂದ. "ರಾಮ, ಇವಳು ಮಹಾ ಪತಿವ್ರತೆ. ಪುನೀತೆ. ಪುಣ್ಯಚಾರಿತ್ರ್ಯವುಳ್ಳವಳು. ಮನಸ್ಸಿನಿಂದಾಗಲೀ, ವಾಕ್ಕಿನಿಂದಾಗಲೀ ಇವಳಿಂದ ಯಾವ ದೋಷವೂ ನಡೆದಿಲ್ಲ. ಇವಳ ಪಾತಿವ್ರತ್ಯದಿಂದಲೇ ರಾಕ್ಷಸ ಸಂಹಾರ ನಡೆದಿದೆ. ಸರ್ವಕಾಲದಲ್ಲಿಯೂ, ಸರ್ವಾವಸ್ಥೆಯಲ್ಲಿಯೂ ನಿನ್ನ ನಾಮವನ್ನೇ, ನಿನ್ನ ಪಾದವನ್ನೇ ಸ್ಮರಿಸುವವಳು ಸೀತೆ. ನೀನು ಇವಳನ್ನು ಸ್ವೀಕರಿಸಲೇಬೇಕು" ಎಂದ.
ರಾಮ ಸಂತುಷ್ಠನಾಗಿ, "ನೀವೆಲ್ಲ ನನಗೆ ಇಷ್ಟು ಹೇಳಬೇಕಿಲ್ಲ. ಸರ್ವಕಾಲದಲ್ಲಿಯೂ ಸೀತೆಯ ಮನಸ್ಸು ನನ್ನ ಮೇಲೆ ಇದೆ ಎಂದು ನನಗೆ ತಿಳಿದಿದೆ. ಸೀತೆಯನ್ನು ರಾವಣ ಎಂದಿಗೂ ಮುಟ್ಟಲಾರ. ಆದರೆ ಅದು ನನಗೆ ಗೊತ್ತು. ಸೀತೆಯ ಚಾರಿತ್ರ್ಯವನ್ನು ಲೋಕಕ್ಕೆ ತಿಳಿಸಬೇಕೆಂದು ಪತಿಯಾಗಿ ನಾನು ಹೀಗೆ ಮಾಡಿದೆ" ಎಂದ. ರಾಮ ಸೀತೆಯ ಹೆಗಲಿಗೆ ಕೈಹಾಕಿ ಹತ್ತಿರಕ್ಕೆ ಕರೆದುಕೊಂಡ. ವಾನರರೆಲ್ಲರೂ ಆನಂದದಲ್ಲಿ ತೇಲಿದರು.
ದೇವತೆಗಳ ಜೊತೆ ಅಲ್ಲಿಗೆ ಬಂದಿದ್ದ ಶಿವ ಹೇಳಿದರು: “ರಾಮ, ನಿನ್ನ ತಮ್ಮನಾದ ಭರತ ಅಯೋಧ್ಯೆಯಲ್ಲಿ ನಿನಗಾಗಿ ಕಾಯುತ್ತಾ ದೀನನಾಗಿದ್ದಾನೆ. ನೀನು ಹೋಗಿ ಅವನನ್ನು ಸಮಾಧಾನ ಮಾಡು. ನಿನ್ನ ತಾಯಿ ಕೌಸಲ್ಯೆ, ಸುಮಿತ್ರೆ, ಕೈಕೆ ಎಲ್ಲರೂ ನಿನಗಾಗಿಯೇ ಕಾಯುತ್ತಿದ್ದಾರೆ. ಅವರಿಗೆ ನಮಸ್ಕಾರ ಮಾಡು. ಇಕ್ಷ್ವಾಕು ವಂಶೀಯರು ಇಷ್ಟು ಕಾಲದಿಂದ ಆಳುತ್ತಿರುವ ಅಯೋಧ್ಯೆಯ ರಾಜ್ಯಭಾರ ಮಾಡಿ ನಿನ್ನವರನ್ನು ಸಂತೋಷವಾಗಿರುವಂತೆ ನೋಡಿಕೊ. ವಂಶವನ್ನು ಬೆಳೆಸು. ಆ ವಿಮಾನದಲ್ಲಿ ನಿನ್ನ ತಂದೆ ದಶರಥ ಮಹಾರಾಜರಿದ್ದಾರೆ. ಹೋಗಿ ನೋಡು.”
ತಂದೆಯನ್ನು ನೋಡಿದ ರಾಮ ಲಕ್ಷಣ, ಸೀತೆಯರ ಜೊತೆ ಸೇರಿ ದಶರಥನಿಗೆ ನಮಸ್ಕಾರ ಮಾಡಿದ. ದಶರಥ ಸಂತೋಷವಾಗಿ ರಾಮನನ್ನು ತೊಡೆಯ ಮೇಲೆ ಕೂರಿಸಿಕೊಂಡು, “ರಾಮ ನಾನು ಸ್ವರ್ಗ, ಇಂದ್ರಲೋಕಗಳಲ್ಲಿ ಸಂಚರಿಸಿದ್ದೇನೆ. ಆದರೆ ನೀನಿಲ್ಲದಿದ್ದರೆ ನನಗೆ ಎಲ್ಲಿಯೂ ಸುಖ ಸಿಗುವುದಿಲ್ಲ. ಅಂದು ನಿನಗೆ ಪಟ್ಟಾಭಿಷೇಕ ಮಾಡಬೇಕೆಂದುಕೊಂಡಾಗ ನನಗೆ ಎಷ್ಟೋ ಸಂತೋಷವಾಗಿತ್ತು. ಕೈಕೆಯ ಬಳಿ ಹೋಗಿದ್ದು, ಅವಳು ವರ ಕೇಳಿದ್ದು, ನಿನ್ನ ಪಟ್ಟಾಭಿಷೇಕ ಭಗ್ನವಾಗಿದ್ದು ಎಲ್ಲವೂ ಜ್ಞಾಪಕವಿದೆ. ರಾವಣನ ವಧೆಯಾಗಲು ಆ ದೇವತೆಗಳೇ ನಿನ್ನ ಪಟ್ಟಾಭಿಷೇಕಕ್ಕೆ ಅಡ್ಡವಾದರು” ಎಂದ.
ರಾಮ, “ಅಂದು ನೀವು ವ್ಯಗ್ರರಾಗಿ ನನ್ನ ಪಟ್ಟಾಭಿಷೇಕಕ್ಕೆ ಕೈಕಮ್ಮನೇ ಅಡ್ಡಿಯೆಂದುಕೊಂಡು, ‘ನಾನು ನಿನ್ನನ್ನು ಬಿಟ್ಟುಬಿಡುತ್ತಿದ್ದೇನೆ. ನೀನು ನನ್ನ ಪತ್ನಿಯಲ್ಲ. ಭರತ ನನ್ನ ಮಗನಲ್ಲ’ ಎಂದಿದ್ದಿರಿ. ಈಗ ಆ ಮಾತನ್ನು ಹಿಂತೆಗೆದುಕೊಳ್ಳಿ. ನನಗೆ ಸಂತೋಷವಾಗುತ್ತದೆ” ಎಂದ.
“ನೀನು ಹೇಳಿದಂತೆಯೇ ಆಗಲಿ” ಎಂದು ಹೇಳಿ ದಶರಥ ಲಕ್ಷಣನಿಗೆ, “ಲಕ್ಷಣ, ಪ್ರಾಜ್ಞನೆಂದರೆ ನೀನು. ಹೀಗೆಯೇ ಸರ್ವಕಾಲದಲ್ಲಿಯೂ ನಿನ್ನ ಅಣ್ಣ ಅತ್ತಿಗೆಯರ ಸೇವೆ ಮಾಡುತ್ತಿರು” ಎಂದ.
ರಾಮಲಕ್ಷ್ಮಣರ ಹಿಂದೆ ನಮಸ್ಕಾರ ಮಾಡುತ್ತಾ ನಿಂತಿದ್ದ ಸೀತೆಯನ್ನು ಹತ್ತಿರ ಕರೆದು ದಶರಥ, “ಸೀತಾ, ನಿನ್ನ ಮನಸ್ಸಿಗೆ ತುಂಬಾ ನೋವಾಗಿರಬೇಕು. ರಾಮ, ‘ನಿನ್ನಿಂದ ನನಗೆ ಪ್ರಯೋಜನವಿಲ್ಲ. ನಿನ್ನನ್ನು ಬಿಟ್ಟುಬಿಡುತ್ತೇನೆ’ ಎಂದು ಹೇಳಿದನೆಂದು ದುಃಖಿಸುತ್ತಿದ್ದೀಯಾ? ನಾನು ನಿನಗೆ ನಿಜ ಹೇಳುತ್ತೇನೆ. ರಾಮನಿಗೆ ನಿನ್ನ ಮೇಲೆ ಅಂತಹ ಅಭಿಪ್ರಾಯ ಎಂದೂ ಬಂದಿಲ್ಲ. ನಿನ್ನನ್ನು ಬೇರೆಯವರು ಬೆರಳು ತೋರಿಸಿ ಮಾತಾಡಬಾರದೆಂದು ಹಾಗೆ ಹೇಳಿದ. ನೀನು ಮಾಡಿದ ಪತಿಸೇವೆಗೆ ಚರಿತ್ರೆಯಲ್ಲಿ ಪರಿವ್ರತೆಯೆಂದರೆ ಸೀತೆ ಎಂದು ನಿನ್ನನ್ನು ತೋರಿಸುತ್ತಾರೆ. ನಿನ್ನಂತಹ ಸೊಸೆ ನಮ್ಮ ವಂಶಕ್ಕೆ ಸಿಕ್ಕಿರುವುದು ನಮ್ಮ ಅದೃಷ್ಟ. ನಿನ್ನ ಮಾವನಾಗಿ ಒಂದು ಮಾತು ಹೇಳುತ್ತೇನೆ. ಪತಿಯೆಂದರೆ ದೈವ. ಇದನ್ನು ಯಾವಾಗಲೂ ಜ್ಞಾಪಕದಲ್ಲಿಟ್ಟುಕೊ” ಎಂದು ಹೇಳಿ ವಿಮಾನದಲ್ಲಿ ಊರ್ಧ್ವಲೋಕಕ್ಕೆ ಹೊರಟುಹೋದ.
ನಂತರ ಇಂದ್ರ ರಾಮನಿಗೆ, “ರಾಮ, ಒಂದು ಬಾರಿ ನಾವು ದರ್ಶನ ಕೊಟ್ಟರೆ ಅದು ವ್ಯರ್ಥವಾಗಬಾರದು. ಆದ್ದರಿಂದ ಏನಾರದೂ ವರವನ್ನು ಕೇಳು” ಎಂದ.
“ನನಗಾಗಿ ತಮ್ಮ ಪತ್ನಿ ಪುತ್ರರನ್ನು ಬಿಟ್ಟು ಕೋಟ್ಯಾಂತರ ವಾನರರು, ಭಲ್ಲೂಕಗಳು, ಲಾಂಗೂಲಗಳು ಯುದ್ಧಕ್ಕೆ ಬಂದಿದ್ದಾರೆ. ಬಂದವರಲ್ಲಿ ಕೆಲವರು ಸತ್ತಿದ್ದಾರೆ. ಕೆಲವರು ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಕೆಲವರು ರಕ್ತಕಾರಿ ಕೆಳಗೆ ಬಿದ್ದಿದ್ದಾರೆ. ನಿಮಗೆ ನಿಜವಾಗಿಯೂ ನನ್ನ ಮೇಲೆ ಪ್ರೀತಿಯಿದ್ದರೆ ಇವರೆನ್ನೆಲ್ಲ ಮೊದಲು ಹೇಗಿದ್ದರೋ ಹಾಗೆಯೇ ಆಗುವಂತೆ ಮಾಡಿ. ಇವರು ಎಲ್ಲಿ ಹೋದರೆ ಅಲ್ಲಿ ಹಣ್ಣುಗಳು, ಜೇನುಗಳು ಸಮೃದ್ಧಿಯಾಗಿ ಸಿಗಬೇಕು. ಕುಡಿಯಲು ಶುದ್ಧ ನೀರು ಸಿಗಬೇಕು.”
ರಾಮನ ಕೋರಿಕೆಗೆ ಇಂದ್ರ ತಥಾಸ್ತು ಎಂದ. ವಾನರರೆಲ್ಲ ಮೊದಲಿನಂತಾದರು.
Comments
Post a Comment