೯೯. ಮರಳಿ ಅಯೋಧ್ಯೆಗೆ
ಲ್ಲರೂ ಅಂದು ಲಂಕೆಯಲ್ಲೇ ವಿಶ್ರಮಿಸಿದರು. ಮರುದಿನ ಬೆಳಗ್ಗೆ ರಾಮ ವಿಭೀಷಣನಿಗೆ, “ನಾನು ಅಯೋಧ್ಯೆಗೆ ಬೇಗ ಹೋಗಿ ಸೇರಬೇಕು. ಕಾಲಿನಲ್ಲಿ ನಡೆದರೆ ತುಂಬಾ ಕಾಲವಾಗುತ್ತದೆ. ಬೇಗ ಹೋಗಲು ಏನಾದರೂ ಏರ್ಪಾಟು ಮಾಡುತ್ತೀಯಾ?” ಎಂದು ಕೇಳಿದ.
ವಿಭೀಷಣ, “ನಮ್ಮ ಬಳಿ ಪುಷ್ಪಕ ವಿಮಾನವಿದೆ. ಉತ್ತರಕ್ಷಣದಲ್ಲಿ ಅದು ನಿಮ್ಮನ್ನು ಅಯೋಧ್ಯೆ ಕರೆದುಕೊಂಡು ಹೋಗುತ್ತದೆ. ಇಷ್ಟು ಕಷ್ಟ ಪಟ್ಟಿದ್ದೀರ. ಈಗ ಸೀತಮ್ಮ ಸಿಕ್ಕಿದ್ದಾಳೆ. ನೀವೂ ಸೀತೆಯಂತೆಯೇ ಅಭ್ಯಂಜನ ಸ್ನಾನ ಮಾಡಿ, ಒಳ್ಳೆಯ ಬಟ್ಟೆಯನ್ನು ಉಟ್ಟು ನಮ್ಮ ಉಡುಗೊರೆಗಳನ್ನು ಸ್ವೀಕರಿಸಿ ಹೋದರೆ ನಮಗೆ ತುಂಬಾ ಸಂತೋಷವಾಗುತ್ತದೆ” ಎಂದ.
“ನನ್ನ ತಮ್ಮ ಭರತ ಅಲ್ಲಿ ನಾರು ಮಡಿಯುಟ್ಟು, ಜಟೆ ಕಟ್ಟಿಕೊಂಡು, ನನ್ನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ನನಗಾಗಿಯೇ ಕಾಯುತ್ತಿದ್ದಾನೆ. ಅವನಿಗೆ ಮುಂಚೆ ನಾನು ರೇಷ್ಮೆಪಂಚೆಯುಡುವುದಿಲ್ಲ. ನನಗೆ ಬೇಗ ಅವನನ್ನು ನೋಡಬೇಕೆಂದಿದೆ.”
ವಿಭೀಷಣ ತಕ್ಷಣ ಪುಷ್ಪಕ ವಿಮಾನದ ಏರ್ಪಾಟು ಮಾಡಿದ. ವಿಮಾನವನ್ನು ಹತ್ತಿ ರಾಮ, “ನೀವೆಲ್ಲ ನನಗಾಗಿ ತುಂಬಾ ದಣಿದ್ದೀರ. ವಿಶ್ರಾಂತಿ ಪಡಿಯಿರಿ. ನಾನು ಹೊರಡುತ್ತೇನೆ” ಎಂದಾಗ ವಾನರರೆಲ್ಲ, “ನಿಮ್ಮನ್ನು ಬಿಟ್ಟು ಇರಲಾಗುವುದಿಲ್ಲ. ನಾವೂ ನಿಮ್ಮ ಜೊತೆಯೇ ಅಯೋಧ್ಯೆಗೆ ಬರುತ್ತೇವೆ. ಅಲ್ಲಿ ಜಾಸ್ತಿ ದಿನವಿದ್ದು ನಿಮಗೆ ತೊಂದರೆ ಕೊಡುವುದಿಲ್ಲ. ನಿಮ್ಮ ತಾಯಿ ಕೌಸಲ್ಯೆಯನ್ನು ನೋಡಬೇಕೆಂದಿದೆ. ನೀವು ಪಟ್ಟಾಭಿಷಿಕ್ತರಾಗಿ ಸಿಂಹಾಸನದ ಮೇಲೆ ಕೂತದ್ದನ್ನು ನೋಡಿ ವಾಪಸ್ಸು ಬಂದು ಬಿಡುತ್ತೇವೆ” ಎಂದರು.
ರಾಮ ಸರಿ ಎಂದ ತಕ್ಷಣ ಎಲ್ಲರೂ ಪುಷ್ಪಕ ವಿಮಾನವನ್ನು ಹತ್ತಿದರು. ವಿಮಾನ ಆಕಾಶಕ್ಕೆ ಹಾರಿತು. ರಾಮ ಸೀತೆಗೆ ಮೇಲಿನಿಂದಲೇ ತಾನು ನಡೆದ ಮಾರ್ಗವನ್ನು ತೋರಿಸಿದ. “ಸೀತಾ, ಅಲ್ಲಿ ನೋಡು. ಅದೇ ನಾನು ರಾವಣನನ್ನು ಕೊಂದ ಪ್ರದೇಶ. ಅದು ಕುಂಭಕರ್ಣ ಬಿದ್ದ ಪ್ರದೇಶ. ಅದು ನರಾಂತಕ ಬಿದದ್ದು. ಅದು ಹನುಮ ವಿರೂಪಾಕ್ಷನನ್ನು ಕೊಂದ ಪ್ರದೇಶ. ಆ ಸಮುದ್ರವನ್ನು ನೋಡು. ನಾನು ವಾನರರ ಸಹಾಯದಿಂದ ಆ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿದೆ. ಇಲ್ಲೇ ನಾವು ಕೂತು ಸಮುದ್ರವನ್ನು ಹೇಗೆ ದಾಟಬೇಕೆಂದು ಯೋಚಿಸುತ್ತಿದ್ದೆವು. ಅಲ್ಲಿ ನೋಡು ಕಿಷ್ಕಿಂಧೆ. ಇಲ್ಲಿಂದಲೇ ವಾನರರು ನಿನ್ನನ್ನು ಹುಡುಕಲು ಹೊರಟದ್ದು….” ಎಂದು ಹೇಳುತ್ತಿದ್ದಾಗ ಸುಗ್ರೀವ ಓಡಿಬಂದು, “ರಾಮ ನಾವು ಕಿಷ್ಕಿಂಧೆಯಲ್ಲಿ ಇಳಿದು, ರುಮೆ, ತಾರೆಯರನ್ನು ಹತ್ತಿಸಿಕೊಂಡು ಹೋಗೋಣ” ಎಂದು ಕೇಳಿದ.
ವಿಮಾನವನ್ನು ಕಿಷ್ಕಿಂಧೆಯಲ್ಲಿ ಇಳಿಸಿದರು. ಸುಗ್ರೀವ ತಾರೆ ರುಮೆಯರನ್ನು ಕರೆದ. ತಾರೆ ಅಲ್ಲಿನ ಸ್ತ್ರೀಯರನ್ನು, "ಸುಗ್ರೀವ ಜಯ ಸಾಧಿಸಿ ಬಂದಿದ್ದಾನೆ. ನೀವೆಲ್ಲ ಒಳ್ಳೆಯ ಬಟ್ಟೆಗಳನ್ನು ಧರಿಸಿ ಬನ್ನಿ" ಎಂದಳು. ಎಲ್ಲರೂ ಮಾನವ ಸ್ತ್ರೀಯರಂತೆ ಕಾಮರೂಪವನ್ನು ಪಡೆದು, ಪುಷ್ಪಕ ವಿಮಾನಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಒಳಗೆ ಬಂದರು. ಸೀತೆಯನ್ನು ನೋಡಿ ಅವಳಿಗೆ ನಮಸ್ಕಾರ ಮಾಡಿದರು. ಸೀತೆ ಅವರನ್ನೆಲ್ಲ ಸಂತೋಷದಿಂದ ತಬ್ಬಿಕೊಂಡಳು.
ರಾಮ ಸೀತೆಗೆ ಋಷ್ಯಮೂಕ ಪರ್ವತ, ಸುಗ್ರೀವನನ್ನು ಭೇಟಿ ಮಾಡಿದ ಜಾಗ, ಶಬರಿಯ ಆಶ್ರಮ, ಕಬಂಧನನ್ನು ಕೊಂದ ಜಾಗ, ಪಂಚವಟಿ, ಅಗಸ್ತ್ಯ, ಸುತೀಕ್ಷ್ಣರ ಆಶ್ರಮ ಎಲ್ಲವನ್ನೂ ತೋರಿಸಿದ. ಇನ್ನೂ ಮುಂದೆ ಹೋದ ಮೇಲೆ ಅವರಿಗೆ ಭರದ್ವಾಜರ ಆಶ್ರಮ ಸಿಕ್ಕಿತು. ಅಲ್ಲಿ ವಿಮಾನವನ್ನು ಇಳಿಸಿ ಭಾರದ್ವಾಜರಿಗೆ ನಮಸ್ಕರಿಸಿದರು. ಭರದ್ವಾಜರು ಅವರನ್ನು ಆದರದಿಂದ ಬರ ಮಾಡಿಕೊಂಡು, "ರಾಮ ನಾನು ನನ್ನ ತಪಃಶಕ್ತಿಯಿಂದ ಎಲ್ಲವನ್ನೂ ತಿಳಿದಿದ್ದೇನೆ. ಈ ರಾತ್ರಿ ನನ್ನ ಆತಿಥ್ಯವನ್ನು ಸ್ವೀಕರಿಸಿ ನಾಳೆ ಹೊರಡಿ" ಎಂದರು.
ರಾಮ ಹನುಮನನ್ನು ಕರೆದು, "ಹನುಮ ನೀನು ಇಲ್ಲಿಂದ ಹೊರಟು ಗಂಗಾ ತೀರದ ಶೃಂಗಬೇರಿಪುರವನ್ನು ಸೇರು. ಅಲ್ಲಿ ನನ್ನ ಸ್ನೇಹಿತ ಗುಹನಿರುತ್ತಾನೆ. ಅವನಿಗೆ ನನ್ನ ಕ್ಷೇಮವನ್ನು ತಿಳಿಸಿ ಪಟ್ಟಾಭಿಷೇಕಕ್ಕೆ ಬರಲು ಹೇಳು. ನಂತರ ಅಲ್ಲಿಂದ ಹೊರಟು ಅಯೋಧ್ಯೆಗೆ ಹೋಗಿ ಎಲ್ಲರಿಗೂ ಕ್ಷೇಮವನ್ನು ತಿಳಿಸಿ ನಂದಿಗ್ರಾಮದಲ್ಲಿರುವ ಭರತನಿಗೆ ನಾನು ಬರುತ್ತಿರುವ ವಿಷಯ ತಿಳಿಸು. ನೀನು ಮಾತಾಡುವಾಗ ಅವನ ಮುಖಚರ್ಯೆಯನ್ನು ಗಮನಿಸು. ಅವನ ಮುಖದಲ್ಲೇನಾದರೂ ಭಯ, ಗಾಬರಿಗಳು ಕಾಣಿಸಿದರೆ ಹಿಂದೆ ಬಂದುಬಿಡು. ನಾನು ಅಯೋಧ್ಯೆಗೆ ಹೋಗುವುದಿಲ್ಲ. ಅದನ್ನು ಭರತನೇ ಆಳಲಿ. ಈ ವಿಷಯವನ್ನು ಹುಷಾರಾಗಿ ತಿಳಿದುಕೊಂಡು ಬಾ" ಎಂದು ಹೇಳಿ ಕಳಿಸಿದ.
ಹನುಮ ತಕ್ಷಣ ಹೊರಟು ಗುಹನನ್ನು ಭೇಟಿಯಾಗಿ, ಅವನಿಗೆ ವಿಷಯ ತಿಳಿಸಿ ಅಯೋಧ್ಯೆಗೆ ಹೋದ. ಭರತನಿಗೆ ಸೀತಾಪಹರಣ, ರಾವಣ ವಧೆ ಎಲ್ಲವನ್ನೂ ತಿಳಿಸಿದ. ರಾಮ ಬರುತ್ತಿರುವ ವಿಷಯ ತಿಳಿದು ಭರತನಿಗೆ ತುಂಬಾ ಸಂತೋಷವಾಯಿತು.
ಮರುದಿನ ರಾಮ ಹೊರಡುವ ಮುನ್ನ ಭರದ್ವಾಜರು, "ರಾಮ ನಿನ್ನ ಧಾರ್ಮಿಕತೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಏನಾದರೂ ವರ ಕೇಳು" ಎಂದರು.
"ವಾನರರು ಎಲ್ಲೆಲ್ಲಿ ಇರುತ್ತಾರೋ ಅಲ್ಲಿ ಫಲಸಮೃದ್ಧಿಯಿರಬೇಕು. ಇಲ್ಲಿಂದ ನಾವು ಅಯೋಧ್ಯೆಗೆ ಹೊರಡುತ್ತೇವೆ. ದಾರಿಯಲ್ಲಿ ಮರಗಳು ಫಲ, ಜೇನುಗಳ ಸಮೃದ್ಧಿಯಿಂದ ಇರಲಿ."
ಭರದ್ವಾಜರು ತಥಾಸ್ತು ಎಂದರು.
ರಾಮ ಹೊರಟು ಮರುದಿನ ನಂದಿಗ್ರಾಮವನ್ನು ಸೇರಿದ. ಭರತ ತನ್ನ ಸೈನ್ಯಕ್ಕೆ, "ರಾಮ ಬರುತ್ತಿದ್ದಾನೆ. ರಾಜ್ಯದ ಸುಮಂಗಲಿಯರು, ರಥಗಳು, ಹಿರಿಯರು ಎಲ್ಲರೂ ಅಯೋಧ್ಯೆಗೆ ಬರಬೇಕು. ಅಯೋಧ್ಯೆಯ ಬೀದಿಗಳಲ್ಲೆಲ್ಲ ಗಂಧದ ನೀರನ್ನು ಚೆಲ್ಲಿ. ದಿವ್ಯವಾದ ಧೂಪಗಳನ್ನು ಹಾಕಿ. ರಾಮ ಬಂದಮೇಲೆ ಪಟ್ಟಾಭಿಷೇಕಕ್ಕಾಗಿ ಇಲ್ಲಿಂದ ಅಯೋಧ್ಯೆಗೆ ಕರೆದುಕೊಂಡು ಹೋಗೋಣ" ಎಂದು ಆಜ್ಞಾಪಿಸಿದ. ರಾಮ ಬರುತ್ತಿರುವ ವಿಷಯ ತಿಳಿದು ಅಯೋಧ್ಯೆಯ ಪ್ರಜೆಗಳು ನಂದಿ ಗ್ರಾಮಕ್ಕೆ ಹಿಂಡು ಹಿಂಡಾಗಿ ಬಂದರು.
ರಾಮ ಪುಷ್ಪಕ ವಿಮಾನದಿಂದ ಕೆಳಗಿಳಿದ ತಕ್ಷಣ ಭರತ ರಾಮನ ಪಾದವನ್ನು ಪರಿಮಳದ ನೀರಿನಿಂದ ತೊಳೆದ. ಅದನ್ನು ನೋಡಿದ ಸುಗ್ರೀವ, ವಿಭೀಷಣರ ಕಣ್ಣಲ್ಲಿ ನೀರು ಬಂತು. ಭರತ ಸುಗ್ರೀವನನ್ನು ತಬ್ಬಿ, "ಇಷ್ಟು ದಿನ ನಾವು ನಾಲ್ಕು ಜನ ಅಣ್ಣತಮ್ಮಂದಿರು. ಇಂದಿನಿಂದ ನಾವು ಐವರಾದೆವು" ಎಂದ. ನಂತರ ಭರತನಿಗೆ ಗಂಧಮಾದನ, ಜಾಂಬವಂತ, ನೀಲ, ಮೈಂದ-ದ್ವಿವಿದ ಮೊದಲಾದ ನಾಯಕರ ಪರಿಚಯ ಮಾಡಿದರು. ತನ್ನ ಅಣ್ಣನಿಗೆ ಸಹಾಯ ಮಾಡಿದ ಎಲ್ಲರನ್ನೂ ಭರತ ಆದರದಿಂದ ತಬ್ಬಿಕೊಂಡ. ವಾನರ ಸ್ತ್ರೀಯರು ಅಯೋಧ್ಯೆಯ ಜನರ ಪ್ರೀತಿ, ಆದರಗಳನ್ನು, ಅವರ ವೇಷಭೂಷಣಗಳನ್ನು ನೋಡಿ ಆಶ್ಚರ್ಯಗೊಂಡರು. ಕೌಸಲ್ಯೆ, ಕೈಕೆ, ಸುಮಿತ್ರೆಯರು, "ಈ ವಾನರ ಸ್ತ್ರೀಯರಿಗೆ ನಾವೇ ಅಲಂಕಾರ ಮಾಡುತ್ತೇವೆ" ಎಂದು ಹೇಳಿ ಕರೆದುಕೊಂಡು ಹೋದರು.
ರಾಮ ಪುಷ್ಪಕ ವಿಮಾನವನ್ನು ಮತ್ತೆ ಕುಬೇರನ ಬಳಿಗೆ ಕಳಿಸಿದ.
Comments
Post a Comment