೧೦೦. ಪಟ್ಟಾಭಿಷೇಕ

ಭರತ ರಾಮನ ಪಾದಕ್ಕೆ ನಮಸ್ಕಾರ ಮಾಡಿ, "ಅಣ್ಣ, ಅಂದು ನನ್ನ ಅಮ್ಮ ಕೇಳಿದ ವರಗಳಿಗೆ ಅನುಸಾರವಾಗಿ ನೀನು ಕಾಡಿಗೆ ಹೋದೆ. ನಿನ್ನ ಪಾದುಕೆಗಳನ್ನು ಕೊಟ್ಟು ರಾಜ್ಯಭಾರ ಮಾಡಲು ಹೇಳಿದೆ. ನಿನ್ನದನ್ನು ನನಗೆ ಕೊಟ್ಟು ಸಂತೋಷಪಟ್ಟೆ. ಈಗ ನಾನು ನಿನ್ನದನ್ನು ನಿನಗೆ ವಾಪಸ್ಸು ಕೊಡುತ್ತಿದ್ದೇನೆ ಸ್ವೀಕರಿಸು" ಎಂದ. ರಾಮ ಸಂತೋಷವಾಗಿ ಸ್ವೀಕರಿಸಲು ಒಪ್ಪಿದ.
ಶತ್ರುಘ್ನ, "ಅಣ್ಣಾ, ಕ್ಷೌರಿಕ ಬಂದಿದ್ದಾನೆ" ಎಂದ.
"ತಂದೆಯ ಮಾತಿನಂತೆ ನಾನು ಅರಣ್ಯವಾಸಕ್ಕೆ ಹೋದೆ. ಆದರೆ ಯಾವುದೇ ಕಾರಣವಿಲ್ಲದೆ, ಕೇವಲ ನನ್ನ ಮೇಲಿನ ಪ್ರೀತಿಯಿಂದ, ನನ್ನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ೧೪ ವರ್ಷಗಳಿಂದ ದೀಕ್ಷೆ ತೆಗೆದುಕೊಂಡಿರುವ ಭರತ ಮೊದಲು ದೀಕ್ಷೆಯನ್ನು ಬಿಟ್ಟು ಸ್ನಾನ ಮಾಡಲಿ" ಎಂದ.

ಭರತ, ಶತ್ರುಘ್ನ, ಲಕ್ಷ್ಮಣ, ಸುಗ್ರೀವ, ವಿಭೀಷಣರ ಮಂಗಳಸ್ನಾನವಾದ ಮೇಲೆ ರಾಮ ಕ್ಷೌರ ಮಾಡಿಸಿಕೊಂಡು ಮಂಗಳ ಸ್ನಾನ ಮಾಡಿದ. ರೇಷ್ಮೆ ಧೋತ್ರವನ್ನುಟ್ಟು, ಸುವಾಸಿತ ದ್ರವ್ಯಗಳನ್ನು ಮೈಗೆ ಬಳೆದುಕೊಂಡು, ಹೆಗಲಿಗೆ ಶಲ್ಯವನ್ನು ಹಾಕಿಕೊಂಡು, ದಿವ್ಯಾಭರಣಗಳನ್ನು ಧರಿಸಿದ. ಕೌಸಲ್ಯೆ ಸೀತೆಗೆ ಮಂಗಳಸ್ನಾನ ಮಾಡಿಸಿದಳು. ವಾನರ ಸ್ತ್ರೀಯರಿಗೂ ಮಂಗಳ ಸ್ನಾನ ಮಾಡಿಸಿ ೯೦೦೦ ಆನೆಗಳ ಮೇಲೆ ಕೂರಿಸಿದರು. ಕೋಟ್ಯಾಂತರ ವಾನರರು ಅಯೋಧ್ಯೆ ಸೇರಿದರು. ದಶರಥನ ಶತ್ರುಂಜಯವೆಂಬ ಆನೆಯ ಮೇಲೆ ಸುಗ್ರೀವ ಕುಳಿತ. ಸೂರ್ಯಮಂಡಲ ಸಮೇತವಾದ ದಿವ್ಯ ರಥದ ಮೇಲೆ ರಾಮ ಸೀತೆಯ ಜೊತೆ ವಿರಾಜಮಾನನಾದ. ಭರತ ರಥದ ಸಾರಥ್ಯವನ್ನು ವಹಿಸಿದ. ಲಕ್ಷ್ಮಣ ಶೇತಚ್ಛತ್ರವನ್ನು ಹಿಡಿದ. ಶತ್ರುಘ್ನ ವಿಭೀಷಣರು ಎರೆಡೂ ಕಡೆಯಲ್ಲಿ ನಿಂತು ಚಾಮರ ಬೀಸಿದರು. ನಂದಿಗ್ರಾಮದಿಂದ ಅಯೋಧ್ಯೆಗೆ ಮೆರವಣಿಗೆ ಹೊರಟಿತು.

ದಾರಿಯಲ್ಲಿ ಕಂಡವರನ್ನೆಲ್ಲ ರಾಮ ಆದರಿಸಿದ. ಮನೆಗಳ ಮೇಲೆ ಪತಾಕೆಗಳು ಹಾರಿದವು. ಪ್ರತಿ ಮನೆಯ ಮುಂದೆಯೂ ಸಾರಿಸಿ ರಂಗವಲ್ಲಿ ಹಾಕಿದ್ದರು. ಮೆರವಣಿಗೆಯ ಆದಿಭಾಗದಲ್ಲಿ ಮಂಗಳ ವಾದ್ಯಗಳನ್ನು ನುಡಿಸುವವರು ನಡೆದರು. ಅವರ ಹಿಂದೆ ವೇದ ಪಂಡಿತರು ವೇದಘೋಷಮಾಡುತ್ತ ಹೊರಟರು. ಅವರ ಹಿಂದೆ ಹಿರಿಯರು, ನಂತರ ಮಕ್ಕಳು. ಮಾರ್ಗಮಧ್ಯದಲ್ಲಿ ಗಂಧದ ನೀರನ್ನು ಚೆಲ್ಲುತ್ತಿದ್ದರು. ಸುವಾಸಿನಿಯರು ಹೂ, ಅರಿಶಿನ, ಕುಂಕುಮಗಳನ್ನು ಹಿಡಿದು ಹೊರಟರು. ರಥದ ಮುಂದೆ ವಸಿಷ್ಠ, ಜಾಬಾಲಿ, ಕಶ್ಯಪ, ಗೌತಮ ಮೊದಲಾದ ಋಷಿಗಳು ನಡೆದರು. ಕೆಲವು ಕಾಲ ನಡೆದ ಮೇಲೆ ಎಲ್ಲರೂ ಅಯೋಧ್ಯೆಗೆ ಸೇರಿ ರಾತ್ರಿಯನ್ನು ಕಳೆದರು

ವಾನರರು ನಾಲ್ಕು ಸಮುದ್ರ, ೫೦೦ ನದಿಗಳಿಂದ ಜಲಗಳನ್ನು ತಂದರು. ನೀರಿನಿಂದ ರಾಮನಿಗೆ ಪಟ್ಟಾಭಿಷೇಕವಾಯಿತು. ರಾಮನ ತಲೆಯ ಮೇಲೆ ದಿವ್ಯ ಕಿರೀಟವನ್ನಿಟ್ಟರು. ರಾಮ ಕೆಲವು ಕೋಟಿ ಬಂಗಾರದ ನಾಣ್ಯಗಳನ್ನು, ಲಕ್ಷ ಗೋವುಗಳನ್ನು, ಸಾವಿರ ಎತ್ತುಗಳನ್ನು ದಾನಮಾಡಿದ
ಪಟ್ಟಾಭಿಷೇಕದ ನಂತರ ರಾಮ ಲಕ್ಷ್ಮಣನಿಗೆ, ಲಕ್ಷ್ಮಣ, ನೀನು ಯುವರಾಜನಾಗಿ ಪಟ್ಟಾಭಿಷೇಕ ಮಾಡಿಕೊ" ಎಂದ.
"ಅಣ್ಣ, ನನಗಿಂತಲೂ ದೊಡ್ಡವನಾದ ಭರತನಿದ್ದಾನೆ. ಅವನೇ ಯುವರಾಜನಾಗಲಿ."
ಭರತನಿಗೆ ಯುವರಾಜ ಪಟ್ಟಾಭಿಷೇಕವಾಯಿತು. ಸುಗ್ರೀವ, ವಿಭೀಷಣ, ಅಂಗದ ಮೊದಲಾದವರಿಗೆ ಬಹುಮಾನಗಳನ್ನು ಕೊಟ್ಟರು. ಹನುಮನಿಗೆ ಶ್ವೇತ ವಸ್ತ್ರದ್ವಯ, ಹಾರಗಳನ್ನು ಕೊಟ್ಟರು.

ಸೀತೆ ತನ್ನ ಕತ್ತಿನಿಂದ ಒಂದು ಹಾರವನ್ನು ತೆಗೆದು ಕೈಲಿಟ್ಟುಕೊಂಡಿದ್ದಳು. ಮುಗುಳ್ನಗೆಯಿಂದ ರಾಮ ಸೀತೆಯ ಕಡೆ ನೋಡಿ, "ಪೌರುಷ, ಬುದ್ದಿ, ತೇಜಸ್ಸು, ವೀರ್ಯ, ಧೈರ್ಯ, ಧೃಢತೆ, ಪಾಂಡಿತ್ಯ ಇವೆಲ್ಲವೂ ಯಾರ ಬಳಿಯಿದೆಯೋ ಅವರಿಗೆ ಹಾರವನ್ನು ಕೊಡು. ಅವನು ನಿನ್ನ ಮುತ್ತೈದೆತನವನ್ನು ಕಾಪಾಡಿದವನಾಗಿರಬೇಕು" ಎಂದ. ಸೀತೆ ಹಾರವನ್ನು ಹನುಮನಿಗೆ ಕೊಟ್ಟಳು. ಹನುಮ ಹಾರವನ್ನು ಕಣ್ಣಿಗೆ ಒತ್ತಿಕೊಂಡು ಕತ್ತಿನಲ್ಲಿ ಹಾಕಿಕೊಂಡ. ಅವನ ಕಣ್ಣಲ್ಲಿ ನೀರು ಜಿನುಗಿತ್ತು!

ಧರ್ಮಾತ್ಮನಾದ ರಾಮ ಸಿಂಹಾಸನದ ಮೇಲೆ ಕೂತ ಮೇಲೆ ಎಲ್ಲರೂ, 'ಜೈ ರಾಮ, ಜೈ ರಾಮ' ಎಂದು ಜೈಕಾರ ಹಾಕಿದರು. ರಾಮರಾಜ್ಯದಲ್ಲಿ ಕಳ್ಳರ ಕಾಟವಿಲ್ಲ. ಶತ್ರುಗಳ ಭಯವಿಲ್ಲ. ತಿಂಗಳಿಗೆ ಮೂರು ಬಾರಿ ಮಳೆ ಬಂದು ಸಮೃದ್ಧಿಯಾದ ಬೆಳೆಯಾಗುತ್ತದೆ. ಭೂಮಿ ಸಸ್ಯಶ್ಯಾಮಲವಾಗಿ, ಮರಗಳೆಲ್ಲ ಫಲಪುಷ್ಪಗಳಿಂದ ತುಂಬಿತ್ತು. ನಾಲ್ಕೂ ವರ್ಣದ ಪ್ರಜೆಗಳು ತಮ್ಮ ತಮ್ಮ ಧರ್ಮದಲ್ಲಿ ಅನುರಕ್ತರಾಗಿದ್ದರು. ಎಲ್ಲಿಯೂ ಅಕಾರಣ ಮರಣವಿರಲಿಲ್ಲ. ಚಿಕ್ಕವರಿಗೆ ದೊಡ್ಡವರು ಪ್ರೇತಕಾರ್ಯ ಮಾಡುವುದು ರಾಮರಾಜ್ಯದಲ್ಲಿ ಎಲ್ಲಿಯೂ ಇಲ್ಲ. ರಾಮನ ಪರಿಪಾಲನೆಯಲ್ಲಿ ಎಲ್ಲರೂ ಸಂತೋಷವಾಗಿದ್ದರು.

ರಾಮಾಯಣ ಸಂಪೂರ್ಣವಾಯಿತು.

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ