೨೩. ಪಟ್ಟಾಭಿಷೇಕಕ್ಕೆ ಸಿದ್ಧತೆ
ಚೈತ್ರ ಮಾಸ ಪುಷ್ಯಮಿ ನಕ್ಷತ್ರದಲ್ಲಿ ಚಂದ್ರನಿದ್ದಾಗ ರಾಮನ ಪಟ್ಟಾಭಿಷೇಕವೆಂದು ದಶರಥ ಘೋಷಿಸಿದ. ಸುಮಂತ್ರನನ್ನು ಕರೆದು ರಾಮನನ್ನು ಕರೆತರಲು ಹೇಳಿ, ವಸಿಷ್ಠರಿಗೆ ಪಟ್ಟಾಭಿಷಕಕ್ಕೆ ಏರ್ಪಾಡು ಮಾಡಲು ತಿಳಿಸಿದ.
ಪಟ್ಟಾಭಿಷಕದ ಏರ್ಪಾಡುಗಳು ಆರಂಭವಾದವು. ವಸಿಷ್ಠರು ಅಧಿಕಾರಿಗಳನ್ನು ಕರೆದು,
“ನೀವು ರತ್ನಗಳನ್ನು, ಶ್ವೇತ ವಸ್ತ್ರಗಳನ್ನು, ಧಾನ್ಯಗಳನ್ನು, ಚದುರಂಗ ಬಲಗಳನ್ನು, ಒಳ್ಳೆಯ ಆನೆಯನ್ನು, ಶ್ವೇತಾಶ್ವವನ್ನು, ಚಾಮರವನ್ನು, ನೂರು ಕುಂಭಗಳನ್ನು, ಸ್ವರ್ಣ ಕೊಂಬುಗಳಿಂದ ಅಲಂಕೃತವಾದ ಎತ್ತನ್ನು, ಪೂರ್ತಿಯಾದ ಹುಲಿ ಚರ್ಮವನ್ನು ಸಿದ್ಧಪಡಿಸಿ ದಶರಥ ಮಹಾರಾಜರ ಅಗ್ನಿ ಗೃಹದಲ್ಲಿಡಿ. ದ್ವಾರಗಳನ್ನು ತೋರಣಗಳಿಂದ ಅಲಂಕರಿಸಿ. ಗಂಧ ಬೆರಸಿದ ನೀರಿನಿಂದ ಹೊಸ್ತಿಲುಗಳನ್ನು ತೊಳಿಯಿರಿ. ಧೂಪವನ್ನು ಹಾಕಿ. ಹಾಲು-ಮೊಸರುಗಳಿಂದ ಕಲಿಸಿದ ಅನ್ನವನ್ನು ಬ್ರಾಹ್ಮಣರಿಗೆ ಸಂತರ್ಪಣೆ ಮಾಡಿ. ಪ್ರತಿ ಮನೆಯ ಮುಂದೆ ಪತಾಕೆಗಳನ್ನು ಹಾರಿಸಿ. ನಾಟಕಕಾರರನ್ನು, ಹಾಡುಗಾರರನ್ನು ಕರೆಸಿ. ವೇಶ್ಯೆಯರು ಅಲಂಕರಿಸಿಕೊಂಡು ಬರಲಿ. ಅವರು ಅರಮನೆಯ ಎರಡೆನೆಯ ಪ್ರಾಂಗಣದವರೆಗೆ ಮಾತ್ರ ಬಂದು ಕಾಯಬೇಕು. ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳನ್ನು ನೆರವೇರಿಸಿ. ಉದ್ದವಾದ ಕತ್ತಿ ಹಿಡಿದ ವೀರರನ್ನು ತಯಾರಿಸಿ”, ಎಂದು ಆದೇಶಿಸಿದರು.
ಸುಮಂತ್ರನು ರಾಮನನ್ನು ಸಭೆಗೆ ಕರೆದುಕೊಂಡು ಬಂದ. ರಾಮ, ತಾನು ರಾಮವರ್ಮನು ಬಂದೆನೆಂದು ಅಭಿವಾದವನ್ನು ಹೆಳಿ, ದಶರಥನ ಪಾದಗಳಿಗೆ ತನ್ನ ತಲೆ ತಾಗುವಂತೆ ನಮಸ್ಕಾರ ಮಾಡಿದ. ದಶರಥನಿಗೆ ರಾಮನ ಗುಣಗಳನ್ನು ನೋಡಿ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡಂತಾಗುತ್ತದೆ. ರಾಮನನ್ನು ಕುರಿತು ಹೇಳುತ್ತಾನೆ -
“ರಾಮಾ! ನನ್ನ ಶೀಲವನ್ನು ತಿಳಿದ, ಧರ್ಮವನ್ನು ಪಾಲಿಸುವ, ನಿರಂತರ ನನ್ನನ್ನೇ ಅನುಸರಿಸುವ ನನ್ನ ಮೊದಲ ಪತ್ನಿ ಕೌಸಲ್ಯೆಯ ಮಗನಾದ್ದರಿಂದ, ನಿನಗೆ ಒಳ್ಳೆಯ ಗುಣಗಳಿರುವುದರಿಂದ, ನಿನಗೆ ಪಟ್ಟಾಭಿಷೇಕ ಮಾಡಬೇಕೆಂದುಕೊಂಡಿದ್ದೇನೆ. ನಿನಗೆ ಗೊತ್ತಿರದ ವಿಷಯಗಳೇನಲ್ಲ ಇವು - ಆದರೂ ಕೇಳು - ರಾಜನಾದವನಿಗೆ ಎರೆಡು ವ್ಯಸನಗಳು ಬರುತ್ತವೆ. ಅವು, ಕಾಮ-ಕ್ರೋಧಗಳು (ಕಾಮದಿಂದ ನಿಷ್ಕಾರಣವಾಗಿ ಬೇಟೆಯಾಡುವ ಬುದ್ಧಿ ಬರುತ್ತದೆ. ಜೂಜಾಡಬೇಕೆನಿಸುತ್ತದೆ. ಹಗಲು ನಿದ್ರಿಸಬೇಕೆನಿಸುತ್ತದೆ. ಪರರ ದೋಷಗಳನ್ನು ಬೇರೆಯವರ ಬಳಿ ಕುಳಿತು ಕೇಳಬೇಕೆನಿಸುತ್ತದೆ. ಹಗಲೆಂದು ನೋಡದೆ ಸ್ತ್ರೀ ಸಹವಾಸ ಮಾಡಬೇಕೆನಿಸುತ್ತದೆ. ಮದ್ಯಪಾನ ಮಾಡಬೇಕೆನಿಸುತ್ತದೆ. ಹಗಲಲ್ಲಿ ನೃತ್ಯ, ಗೀತಗಳನ್ನು ನೊಡಬೇಕೆನಿಸುತ್ತದೆ. ಹಾಗೆಯೇ ಕ್ರೋಧದಿಂದ ಚಾಡಿ ಹೇಳಬೇಕೆನಿಸುತ್ತದೆ. ಸತ್ಪುರುಷರನ್ನು ನಿರ್ಬಂಧಿಸಬೇಕೆನಿಸುತ್ತದೆ. ಕಪಟದಿಂದ ಬೇರೆಯವರನ್ನು ಕೊಲ್ಲಬೇಕೆನಿಸುತ್ತದೆ. ಇತರರ ಏಳಿಗೆಯನ್ನು ಸಹಿಸದ ಬುದ್ದಿಬರುತ್ತದೆ. ಇತರರ ಗುಣಗಳಲ್ಲಿ ದೋಷವೆಣಿಸಬೇಕೆನಿಸುತ್ತದೆ. ಧನವನ್ನು ಅಪಹರಿಸಬೇಕೆನಿಸುತ್ತದೆ. ನೋವಾಗುವಂತೆ ಮಾತನಾಡಿಸಬೇಕೆನಿಸುತ್ತದೆ. ಕೈಯಲ್ಲಿ ಆಯುಧವಿಟ್ಟುಕೊಂಡು ನಿಷ್ಕಾರಣವಾಗಿ ಕೊಲ್ಲಬೇಕೆನಿಸುತ್ತದೆ). ಅವು ನಿನಗಿರಬಾರದು. ನಿನಗೆ ಪುಷ್ಯಮಿ ನಕ್ಷತ್ರದಲ್ಲಿ ಪಟ್ಟಾಭಿಷೇಕ ಮಾಡಬೇಕೆಂದುಕೊಂಡಿದ್ದೇನೆ. ಈ ರಾತ್ರಿ ಉಪವಾಸ ವ್ರತ ಮಾಡು.”
ಎಲ್ಲರೂ ಸಭೆಯಿಂದ ನಿರ್ಗಮಿಸಿದ ಮೇಲೆ ದಶರಥ ಮಹಾರಾಜ ತನ್ನ ಅಂತಃಪುರದಲ್ಲಿ ರಾಮನಿಗೆ ಏಕಾಂತವಾಗಿ ಹೇಳಿದ: "ನಾನು ನನ್ನ ಜೀವನದಲ್ಲಿ ಅನುಭವಿಸದ ಸುಖವಿಲ್ಲ. ಈ ಶರೀರಕ್ಕೆ ವೃದ್ದಾಪ್ಯ ಬಂದಿದೆ. ಎಷ್ಟೋ ಯಜ್ಞಗಳನ್ನು ಮಾಡಿದ್ದೇನೆ. ದೇವ ಋಣ, ಋಷಿ ಋಣ, ಪೈರು ಋಣ ಹೀಗೆ ಎಲ್ಲಾ ಋಣಗಳನ್ನು ತೀರಿಸಿಕೊಂಡಿದ್ದೇನೆ. ನಾನು ಮಾಡಬೇಕಾದ ಯಾವುದಾದರೂ ಕೆಲಸವಿದ್ದರೆ ಅದು ನಿನ್ನ ಪಟ್ಟಾಭಿಷೇಕ. ‘ನೀವು ಇದಕ್ಕೆ ಇಷ್ಟು ಆತುರ ಪಡುತ್ತಿದ್ದೀರ’ ಎಂದು ನೀನು ಕೇಳಬಹುದು. ನನಗೆ ಕೆಟ್ಟ ಕನಸುಗಳು ಬೀಳುತ್ತಿವೆ. ಆಕಾಶದಿಂದ ಉಲ್ಕೆಗಳು ಬೀಳುತ್ತಿವೆ. ಈ ಶರೀರ ಬಿದ್ದುಹೋಗುತ್ತದೆಂದು ನಾನು ಚಿಂತಿಸುತ್ತಿಲ್ಲ. ಆದರೆ ಪ್ರಜೆಗಳು ದಿಕ್ಕಿಲ್ಲದವರಾಗಬಾರದು. ಆದ್ದರಿಂದ ನಿನಗೆ ಬೇಗ ಪಟ್ಟಾಭಿಷೇಕ ಮಾಡಿಬಿಡುತ್ತೇನೆ. ಈಗ ಪಟ್ಟಾಭಿಷೇಕ ಮಾಡಬೇಕೆಂಬುವ ಆಸೆ ಬಂದಿದೆ. ಈ ಆಸೆ ಮಾಯವಾಗುವುದರೊಳಗೆ ಅಭಿಷೇಕ ಮಾಡಿಬಿಡಬೇಕು. ಭರತನು ತುಂಬಾ ಒಳ್ಳೆಯವನು. ಈಗ ಅವನು ತನ್ನ ಸೋದರಮಾವನಾದ ಯಥಾಜಿತನ ಬಳಿಯಿದ್ದಾನೆ. ಅವನು ಬರುವುದರೊಳಗಾಗಿ ನಿನ್ನ ಪಟ್ಟಾಭಿಷೇಕವನ್ನು ಮುಗಿಸುತ್ತೇನೆ. ಒಳ್ಳೆಯ ಕೆಲಸ ಮಾಡಲು ಶುರು ಮಾಡುತ್ತಿದ್ದಂತೆಯೇ ವಿಘ್ನಗಳು ಆರಂಭವಾಗುತ್ತವೆ. ಆದ್ದರಿಂದ ನಿನ್ನ ಸ್ನೇಹಿತರನ್ನು ಎಚ್ಚರವಾಗಿರುವಂತೆ ಹೇಳು. ಇಂದು ಸೀತೆಯ ಜೊತೆ ದೇವತೆಗಳನ್ನು ಪ್ರಾರ್ಥಿಸಿ ದರ್ಭಾಶಯ್ಯೇಯ ಮೇಲೆ ಮಲಗು".
ದಶರಥನಿಗೆ ಸುಮಿತ್ರೆಯನ್ನು ಮದುವೆಯಾದ ಮೇಲೆ ಮಕ್ಕಳಾಗದ ಕಾರಣ, ಯುವತಿಯಾದ, ಸುಂದರಿಯಾದ, ಎಲ್ಲ ವಿದ್ಯೆಗಳನ್ನು ಕಲಿತವಳಾದ ಕೈಕೇಯಿಯನ್ನು ವಿವಾಹವಾದ. ಆ ಸಮಯದಲ್ಲಿ ಕೈಕೆಯ ರಾಜ, ತನ್ನ ಮಗಳಿಂದ ಮಕ್ಕಳಾದರೆ, ಅವರಿಗೆ ಪಟ್ಟಾಭಿಷೇಕ ಮಾಡಬೇಕೆಂದು ಕೇಳಿದ್ದ. ಅದಕ್ಕೆ ಒಪ್ಪಿಕೊಂಡಿದ್ದ ಕಾರಣ ಇಂದು ದಶರಥ ಮಹಾರಾಜ ಕೈಕೆಯ ರಾಜನನ್ನು ಆಹ್ವಾನಿಸದೇ ಪಟ್ಟಾಭಿಷೇಕ ಮಾಡಬೇಕೆಂದುಕೊಂಡ.
ರಾಮ ಅಂತಃಪುರಕ್ಕೆ ಹೋಗಿ ತನ್ನ ತಾಯಿ ಕೌಸಲ್ಯೆಗೆ ಪಟ್ಟಾಭಿಷೇಕದ ಕುರಿತು ತಿಳಿಸಿದಾಗ ಅವಳು ತುಂಬಾ ಸಂತೋಷಪಟ್ಟಳು. ಸೀತೆ, ಲಕ್ಷ್ಮಣರೂ ಆನಂದ ಪಟ್ಟರು. ನಂತರ ರಾಮ ತನ್ನ ಸ್ನೇಹಿತರಿಗೂ ತಿಳಿಸಿದ. ರಾತ್ರಿ ದೇವತೆಗಳಿಗೆ ಹವಿಸ್ಸು ಕೊಟ್ಟು ಮಿಕ್ಕಿದ ಹವಿಸ್ಸನ್ನು ತಿಂದ (ಉಪವಾಸ ಎಂದರೆ - ಹೊಟ್ಟೆ ತುಂಬಾ ತಿಂದರೆ ತೊಂದರೆ. ತೊಂದರೆಯಾಗದಂತಹ ಸತ್ವಿಕ ಆಹಾರವನ್ನು ಶರೀರಕ್ಕೆ ಬೇಕಾದಷ್ಟು ಮಾತ್ರ ತಿಂದು, ಸಹನೆಯಿಂದ ದೇವತಾರಾಧನೆ ಮಾಡುವುದೇ ಉಪವಾಸ. ಊಟ ಮಾಡುವುದನ್ನು ಬಿಡುವುದು ಉಪವಾಸವಲ್ಲ.)
ಅಯೋಧ್ಯಾ ನಗರದಲ್ಲಿ ಪ್ರಜೆಗಳೆಲ್ಲರೂ ರಾಮನ ಪಟ್ಟಾಭಿಷೇಕದ ವಿಷಯ ತಿಳಿದು ಆನಂದಿಂದಿದ್ದರು. ಎಲ್ಲರೂ ತಮ್ಮ ತಮ್ಮ ಮನೆಯಂಗಳವನ್ನು ಸಾರಿಸಿ, ರಂಗೋಲಿಗಳಿಂದ ಸಿಂಗರಿಸಿದ್ದರು. ಪ್ರತಿ ಮನೆಯೂ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಪಟ್ಟಾಭಿಷೇಕವು ನಡೆಯುವಾಗ ಕತ್ತಲಾಗಬಾರದೆಂದು ಮರ-ಗಿಡಗಳನ್ನು ದೀಪಗಳಿಂದ ಸಿಂಗರಿಸಿದ್ದರು. ನಟರು, ಗಾಯಕರು, ಹಾಡುತ್ತಾ, ನಾಟ್ಯ ಮಾಡುತ್ತಾ ಸಂಭ್ರಮವನ್ನು ಆಚರಿಸುತ್ತಿದ್ದರು. ಪ್ರಜೆಗಳೆಲ್ಲರೂ ನವ ವಸ್ತ್ರಗಳನ್ನು ಧರಿಸಿದ್ದರು.
ಕೌಸಲ್ಯೆಯ ಆನಂದಕ್ಕೆ ಮಿತಿಯಿಲ್ಲ, ಆಕೆ ದೊಡ್ದ-ದೊಡ್ಡ ದಾನಗಳನ್ನು ಮಾಡಿ, ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡುತ್ತಿದ್ದಳು. ಪಟ್ಟಾಭಿಷೇಕದ ಹಿಂದಿನ ದಿನ ರಾಮ ಉಪವಾಸ ಮಾಡಿ ದರ್ಭೆಯ ಮೇಲೆ ನಿದ್ರಿಸಿದ. ಮರುದಿನ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ, ಸಭೆಗೆ ಹೊರಡಲು ಅನುವಾದ. ರಾಮ ರಥದಲ್ಲಿ ಹೋಗುವುದನ್ನು ನೋಡಿ ಕಣ್ತುಂಬಿ ಕೊಳ್ಳಲು ಅಂತಃಪುರದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಕಾತರದಿಂದ ಎದುರು ನೋಡುತ್ತಿದ್ದರು. ಹದಿನೈದರ ಪಕ್ಕ ಹದಿನೈದು ಸೊನ್ನೆಗಳನ್ನು ಹಾಕಿದರೆ ಎಷ್ಟೋ ಅಷ್ಟು ಜನಸಮೂಹ ಅರಮನೆ ಆವರಣದಲ್ಲಿ ಸೇರಿತ್ತು. ಅಲ್ಲಿಗಾಗಲೇ ಬಂದ ವಸಿಷ್ಠರು ಜನಸಮೂಹ ನೋಡಿ ಆಶ್ಚರ್ಯಪಟ್ಟರು. ಸಮುದ್ರದಲ್ಲಿ ಹಡಗು ನೀರನ್ನು ಭೇದಿಸಿ ನಡೆದಂತೆ ವಸಿಷ್ಠರು ಜನ ಸಮೂಹದ ಮಧ್ಯೆ ನುಸುಳಿಕೊಂಡು ಅರಮನೆ ಸೇರಿದರು.
Comments
Post a Comment