೭೭. ಮರಳಿ ಕಿಷ್ಕಿಂಧೆಗೆ

ಅತ್ತ ಕೆಲವು ರಾಕ್ಷಸರು ಸೀತೆಯ ಬಳಿಗೆ ಓಡಿಹೋಗಿ, "ನಿನ್ನ ಜೊತೆ ಮಾತಾಡಿದ ಕೆಂಪು ಮೂತಿಯ ಕೋತಿಯ ಬಾಲಕ್ಕೆ ರಾವಣ ಬೆಂಕಿ ಹಚ್ಚಿಸಿದ್ದಾನೆ" ಎಂದು ಹೇಳಿದರು. ಸೀತೆ ತಕ್ಷಣ ಅಗ್ನಿದೇವನನ್ನು ಪ್ರಾರ್ಥಿಸಿ, "ನಾನು ರಾಮನ ಸೇವೆ ಮಾಡಿದವಳೇ ಆದರೆ, ಯಾವಾಗಲೂ ನನ್ನ ಮನಸ್ಸು ರಾಮನ ಮೇಲೇ ಇರುವುದು ನಿಜವೇ ಆದರೆ, ರಾಮನ ಮೇಲಿನ ನನ್ನ ಪ್ರೀತಿ ನಿಜವೇ ಆದರೆ, ಸುಗ್ರೀವನ ನನ್ನನ್ನು ರಾಮನ ಜೊತೆ ಸೇರಿಸುವುದು ನಿಜವೇ ಆದರೆ, ಹನುಮನ ಬಾಲಕ್ಕೆ ಹಚ್ಚಿದ ಬೆಂಕಿ ಶಾಂತವಾಗಲಿ" ಎಂದು ಬೇಡಿಕೊಂಡಳು. ತಕ್ಷಣವೇ ಹನುಮನ ಬಾಲಕ್ಕೆ ಹಚ್ಚಿದ ಬೆಂಕಿ ನಂದಿತು!

ಹನುಮ, ‘ನಾನು ಬರುತ್ತಿದ್ದಾಗ ಮೈನಾಕ ಅತಿಥ್ಯ ಕೊಟ್ಟ. ಸಮುದ್ರ ನಮಸ್ಕಾರ ಮಾಡಿದ. ರಾಮ, ಸೀತೆಯರ ಹೆಸರು ಹೇಳಿದರೆ ಪಕೃತಿಯಲ್ಲಿ ಉಪಕರಿಸದಿರುವ ವಸ್ತು ಏನಿದೆ? ನನ್ನ ತಂದೆ ಅಗ್ನಿಯ ಸ್ನೇಹಿತ. ಆದ್ದರಿಂದಲೇ ನನಗೆ ಉಪಕಾರ ಮಾಡಿದ್ದಾನೆ. ಈ ಲಂಕಾಪಟ್ಟಣವನ್ನು ಸುಟ್ಟು ನನಗೆ ಉಪಕಾರ ಮಾಡಿದ ಅಗ್ನಿದೇವನಿಗೆ ಸಂತರ್ಪಣ ಮಾಡಿ ಹೋಗುತ್ತೇನೆ’ ಎಂದುಕೊಂಡ. ಮೊದಲು ಪ್ರಹಸ್ತನ ಮನೆಗೆ ಬೆಂಕಿಬಿತ್ತು. ನೋಡನೋಡುತ್ತಲೇ ಲಂಕೆಯ ಮನೆ ಮನೆಗೂ ಬೆಂಕಿ ಹರಡಿತು. ರಾವಣ ಪ್ರವರ್ತನೆಯಿಂದ ಅಷ್ಟುದಿನ ಬೇಸತ್ತಿದ್ದ ಅಷ್ಟದಿಕ್ಪಾಲಕರು ಸಂತೋಷಪಟ್ಟರು. ಹನುಮ ಬೆಂಕಿಯಿಡುವುದೇ ತಡ, ಅಗ್ನಿ ಸುಟ್ಟುಬಿಡುತ್ತಿದ್ದ. ವಾಯು ಜೋರಾಗಿ ಬೀಸಿ ಅಗ್ನಿಯನ್ನು ಹರಡುತ್ತಿದ್ದ. ಕೆಲವು ಕಡೆ ಹರಿಸಿನ ಬಣ್ಣದಲ್ಲಿ, ಕೆಲವು ಕಡೆ ಕೆಂಪು ಬಣ್ಣದಲ್ಲಿ ಲಂಕೆ ಸುಡುತ್ತಿತ್ತು. ಎಲ್ಲರೂ, ‘ಅಪ್ಪಾ! ಅಮ್ಮಾ! ಕಾಪಾಡಿ’ ಎಂದು ದಿಕ್ಕಾಪಾಲಾಗಿ ಇಡುತ್ತಿದ್ದರು. ಹನುಮ ಸಂತೋಷವಾಗಿ ತ್ರಿಕೂಟಾಚಲ ಪರ್ವತದ ಮೇಲೆ ನಿಂತು ನೋಡಿದಾಗ ಲಂಕೆಯೆಲ್ಲ ಹತ್ತಿ ಉರಿಯುತ್ತಿತ್ತು. 

‘ಅಯ್ಯೋ ಎಂತಹ ಕೆಲಸ ಮಾಡಿದೆ. ಅಗ್ನಿಯಲ್ಲಿ ನೀರನ್ನು ಬಿಟ್ಟಂತೆ ಕೋಪವನ್ನು ಬಿಟ್ಟುಬಿಡಬೇಕು. ಅವನೇ ಧನ್ಯ. ಕೋಪವನ್ನು ಬಿಟ್ಟುಬಿಡುವುದನ್ನು ಬಿಟ್ಟು ಲಂಕೆಯನ್ನೆಲ್ಲ ಸುಟ್ಟುಬಿಟ್ಟೆ. ಇದರಲ್ಲಿ ಸೀತೆಯೂ ಸುಟ್ಟಿದ್ದರೆ! ಇಲ್ಲ. ಸೀತೆಯ ತೇಜಸ್ಸಿನಿಂದಲೇ ನನ್ನ ಬಾಲವನ್ನು ಅಗ್ನಿ ಸುಡಲಿಲ್ಲ. ಸೀತೆಯೇ ಅಗ್ನಿ. ಅಗ್ನಿಯನ್ನು ಅಗ್ನಿಯೇ ಸುಡುತ್ತದೆಯೇ?’ ಎಂದುಕೊಳ್ಳುತ್ತಿದ್ದಾಗ ಹನುಮನಿಗೆ ಚಾರಣರು ಮಾತಾಡಿಕೊಳ್ಳುತ್ತಿದ್ದದ್ದು ಕೇಳಿಸಿತು. “ಇದೇನು ಆಶ್ಚರ್ಯ! ವಾನರನಾದ ಹನುಮ ಸಮುದ್ರವನ್ನು ದಾಟಿ ಲಂಕೆಯನ್ನು ಅಗ್ನಿಗೆ ಆಹುತಿ ಕೊಟ್ಟಿದ್ದಾನೆ. ಲಂಕೆಯೆಲ್ಲಾ ಸುಡುತ್ತಿದೆ. ಆದರೆ ಶಿಂಶುವಾ ವೃಕ್ಷಕ್ಕೆ, ಅದರ ಕೆಳಗೆ ಕೂತಿರುವ ಸೀತೆಗೆ ಏನು ಆಗಿಲ್ಲ.”

ಅವರ ಮಾತು ಕೇಳಿ ಹನುಮ ಸೀತೆಯ ಬಳಿಬಂದು, “ಅಮ್ಮಾ ಲಂಕೆಯನ್ನೆಲ್ಲಾ ಸುಟ್ಟುಬಿಟ್ಟಿದ್ದೇನೆ. ರಾವಣನಿಗೆ ಹೇಳಬೇಕಾದದ್ದನ್ನು ಹೇಳಿದ್ದೇನೆ. ನೀನೇನು ಭಯಪಡಬೇಡ. ಅವನು ಈಗಾಗಲೇ ಅರ್ಧ ಸತ್ತಿದ್ದಾನೆ. ರಾಮನಿಗಾಗಿ ಅವನನ್ನು ಬಿಟ್ಟಿದ್ದೇನೆ. ಇಲ್ಲದಿದ್ದರೆ ಅವನ ತಲೆ ಒಡೆಯುತ್ತಿದ್ದೆ. ಅಮ್ಮ!, ನಾನಿನ್ನು ಹೊರಡುತ್ತೇನೆ. ಶೀಘ್ರದಲ್ಲೇ ನಿನಗೆ ಪಟ್ಟಾಭಿಷೇಕ ನಡೆಯುತ್ತದೆ. ದುಃಖ ಪಡಬೇಡ” ಎಂದು ಹೇಳಿ ವನದಿಂದ ಹೊರಟ. ಕಪ್ಪು ವನಗಳು, ಕೆಂಪು ಮಚ್ಚೆಗಳ ಆನೆಗಳಿರುವ ಅರಿಷ್ಟವೆಂಬ ಪರ್ವತದ ಮೇಲಿನಿಂದ ಹಿಂತಿರುಗಿ ಪ್ರಯಾಣ ಆರಂಭಿಸಿದ. ಹನುಮ ಪರ್ವತದ ಮೇಲಿಂದ ಎಗರಿದಾಗ ಅದು ಭೂಮಿಯಲ್ಲಿ ಹುದುಗಿಹೋಯಿತು.

ಹನುಮ ಆಕಾಶದಲ್ಲಿನ ಮೋಡಗಳನ್ನು ತಾಕುತ್ತಿದ್ದಾನೋ ಎಂಬಷ್ಟು ಎತ್ತರದಲ್ಲಿ ಹಾರಿ, ಉತ್ತರ ದಿಕ್ಕಿನಲ್ಲಿ ತನಗಾಗಿ ಕಾಯುತ್ತಿದ್ದ ವಾನರರ ಬಳಿ ಬಂದು ಜೋರಾದ ಶಬ್ದ ಮಾಡಿದ. ವಾನರರು, ‘ಆಕಾಶವೇನಾದರೂ ಸಿಡಿಯಿತೋ’ ಎಂದುಕೊಂಡು ಜಾಂಬವಂತನ ಬಳಿ ಬಂದು, “ತಾತ ಜೋರಾದ ಶಬ್ದ ಕೇಳಿಸುತ್ತಿದೆ. ಅದು ಹನುಮನದೇ ಅಲ್ಲವೇ?” ಎಂದು ಕೇಳಿದರು. ಜಾಂಬವಂತ, “ಖಚಿತವಾಗಿ. ಅವನಿಗೆ ಕೆಲಸ ಒಪ್ಪಿಸಿದ ಮೇಲೆ ಅದು ಆಗುವುದರಲ್ಲಿ ಸಂದೇಹವಿಲ್ಲ. ಕೆಲಸವಾದ ಸಂತೋಷದಿಂದಲೇ ಅವನು ಮಹಾನಾದ ಮಾಡುತ್ತಿದ್ದಾನೆ” ಎಂದ. ಹನುಮನನ್ನು ದೂರದಿಂದಲೇ ನೋಡಿದ ವಾನರರು ಅವನ ಬಳಿ ಓಡಿದರು. ಹನುಮ, “ಸೀತೆಯನ್ನು ನೋಡಿದೆ” ಎಂದು ಜೋರಾಗಿ ಕೂಗಿ ಮಹೇಂದ್ರಗಿರಿ ಪರ್ವದ ಮೇಲೆ ಇಳಿದ. ಜಾಂಬವಂತ, ಅಂಗದ, ಗಂಧಮಾದನ ಮೊದಲಾದವರನ್ನು ಬಿಟ್ಟು ಮಿಕ್ಕ ವಾನನರು ತಮ್ಮ ಬಾಲಗಳನ್ನು ಕಟ್ಟಿಗಳಂತೆ ನಿಲ್ಲಿಸಿ, ಅದನ್ನು ತಮ್ಮ ಎರೆಡೂ ಕೈಗಳಿಂದ ಹಿಡಿದು ಹನುಮ ಇಳಿದ ಬೆಟ್ಟವನ್ನು ಹತ್ತಿ ಅವನನ್ನು ಮುಟ್ಟಿಕೊಂಡು ಹೊಗುತ್ತಿದ್ದರು. ಹನುಮ ಗುಹೆಯಲ್ಲಿದ್ದ ಅಂಗದ ಮೊದಲಾದವರಿಗೆ ತನ್ನ ಪ್ರಯಾಣದ ಕುರಿತು ವಿವರಿಸಿ, “ಆ ರಾವಣನ ತಪಃಶ್ಶಕ್ತಿ ತುಂಬಾ ಹೆಚ್ಚು. ಸೀತೆಯನ್ನು ತಾಕಿದರೂ ಅವನು ಬೂದಿಯಾಗಲಿಲ್ಲ. ಆದರೆ ಸೀತೆಯ ಪಾತಿವ್ರತ್ಯದಿಂದ ಅವನು ಎಂದೋ ಸತ್ತಿದ್ದಾನೆ. ರಾಮ ನಿಮಿತ್ತವಾಗಿ ಹೋಗಿ ಅವನನ್ನು ಕೊಲ್ಲುವುದಷ್ಟೇ ಬಾಕಿ” ಎಂದ. 
ಅಂಗದ, “ಎಲ್ಲ ತಿಳಿಯಿತಲ್ಲವೇ, ಇನ್ನು ರಾಮನಿಗೆ ಹೇಳುವುದೇಕೆ? ಹೀಗೇ ಹೋಗಿ ಆ ರಾವಣನ್ನು ಕೊಂದು ಸೀತೆಯನ್ನು ತಂದು ರಾಮನಿಗೆ ಒಪ್ಪಿಸೋಣ” ಎಂದ.
ಆದರೆ ಜಾಂಬವಂತ, “ಹಾಗೆ ಮಾಡುವುದು ತಪ್ಪು. ದೊಡ್ಡವರು ಹೇಳಿದಂತೆ ಮಾಡಬೇಕು. ಈ ವಿಷಯವನ್ನು ರಾಮನಿಗೆ ಹೇಳೊಣ. ಅವನು ಹೇಳಿದಂತೆ ಮಾಡೋಣ” ಎಂದ.  

ಎಲ್ಲರೂ ಕಿಷ್ಕಿಂಧೆಯ ಕಡೆ ಹೊರಟರು. ದಾರಿಯಲ್ಲಿ ಅವರಿಗೆ ಮಧುವನ ಸಿಕ್ಕಿತು. ಅದನ್ನು ದಧಿಮುಖನೆಂಬ ವಾನರ ರಕ್ಷಿಸುತ್ತಿದ್ದ. ಮಧುವನದಲ್ಲಿದ್ದ ಮರಗಳಲ್ಲೆಲ್ಲ ಜೇನು ಹಿಂಡು ಹಿಂಡಾಗಿತ್ತು. ಹೂಗಳಿಂದ, ಹಣ್ಣುಗಳಿಂದ ತೆಗೆದ ವಿಧವಿಧವಾದ ಮಧುಗಳು ಪಾತ್ರೆಗಳಲ್ಲಿದ್ದವು. ವಾನರರೆಲ್ಲ ಅಂಗದನ ಬಳಿ ಬಂದು, “ಇಲ್ಲಿ ಜೇನು ಕುಡಿಯೋಣ” ಎಂದು ಕೇಳಿದರು. ಅಂಗದ ಒಪ್ಪಿಕೊಂಡಾಗ ಎಲ್ಲರೂ ಒಳಗೆ ಹೋಗಿ ಅಲ್ಲಿದ್ದ ಜೇನನ್ನೆಲ್ಲ ಹಿಂಡಿ ಕುಡಿದುಬಿಟ್ಟರು. ಪಾತ್ರೆಗಳಲ್ಲಿದ್ದ ಜೇನನ್ನು ಖಾಲಿ ಮಾಡಿದರು. ಮರಗಳನ್ನು ಹತ್ತಿ ಅಲ್ಲಿದ್ದ ಹಣ್ಣುಗಳನ್ನು ತಿಂದುಬಿಟ್ಟರು. ವಿಪರೀತವಾಗಿ ಜೇನು ಕುಡಿದ್ದರಿಂದ ಅವರಿಗೆ ಮತ್ತು ಬಂದಂತಾಗಿ ಮರಗಳ ಕೆಳಗೆ ಕೂತು ಹಾಡುಗಳನ್ನು ಹಾಡಲು ಶುರುಮಾಡಿದರು. ಕೆಲವರು ನಾಟ್ಯಮಾಡಿದರು. ಕೆಲವರು ಕಂಡು ಕಂಡವರಿಗೆ ನಮಸ್ಕಾರ ಮಾಡುತ್ತಿದ್ದರು. ಇನ್ನೂ ಕೆಲವರು ಹಲ್ಲುಕಿರಿಯುತ್ತಿದ್ದರು. ಕೆಲವಾನರರು ವಿನಾಕಾರಣ ಅಳುತ್ತಿದ್ದರು. 

ವಾನರರ ಕೀಟಲೆ ತಡೆಯಲು ಬಂದ ದಧಿಮುಖನ ಸೈನ್ಯವನ್ನು, ನಂತರ ಬಂದ ದಧಿಮುಖನನ್ನೂ ಹೊಡೆದುಬಿಟ್ಟರು. ಅವನು ಅಳುತ್ತಾ ಹೋಗಿ ಸುಗ್ರೀವನಿಗೆ ವಾನರ ಭಾಷೆಯಲ್ಲಿ ನಡೆದದ್ದನ್ನೆಲ್ಲ ವಿವರಿಸಿದ. ಮಧ್ಯೆ, ಮಧ್ಯೆ ಹನುಮ ಎಂಬ ಮಾತು ಕೇಳಿಸುತ್ತಿತ್ತು. ದಧಿಮುಖನ ಮಾತು ಕೇಳುತ್ತಿದ್ದ ಸುಗ್ರೀವನ ಬಾಲ ಮೆಲಕ್ಕೇಳುತ್ತಿತ್ತು (ವಾನರರಿಗೆ ಸಂತೋಷವಾದರೆ ಬಾಲವನ್ನು ಮೆಲಕ್ಕೆತ್ತುತ್ತಾರೆ). ಅದನ್ನು ನೋಡಿದ ಲಕ್ಷ್ಮಣ ಏನಾಯಿತೆಂದು ವಿಚಾರಿಸಿದ. 
“ಏನೂ ಇಲ್ಲ ದಕ್ಷಿಣಕ್ಕೆ ಹೋದ ವಾನರರು ಮಧುವನವನ್ನು ನಾಶಮಾಡಿದರು. ಹನುಮ ಖಂಡಿತವಾಗಿ ಸೀತೆಯ ದರ್ಶನ ಮಾಡಿರುತ್ತಾನೆ” ಎಂದು ಲಕ್ಷ್ಮಣನಿಗೆ ಹೇಳಿ ಸುಗ್ರೀವ ದಧಿಮುಖನಿಗೆ, “ಅವರನ್ನು ತಕ್ಷಣ ಇಲ್ಲಿಗೆ ಬರಲು ಹೇಳು” ಎಂದ. 

ದಧಿಮುಖ ಮಧುವನದಲ್ಲಿದ್ದ ವಾನರರಿಗೆ ಸುಗ್ರೀವ ಕರೆಯುತ್ತಿದ್ದಾನೆ ಎಂದು ಹೇಳಿದ ತಕ್ಷಣ ಅವರೆಲ್ಲರೂ ಅಲ್ಲಿಂದ ಎಗರಿ ಕಿಷ್ಕಿಂಧೆಗೆ ಹೋದರು. ಎಲ್ಲರೂ ರಾಮನ ಬಳಿ ಬಂದು, “ಲಂಕೆಯಲ್ಲಿ ರಾವಣ ಸೀತೆಯನ್ನು ಶಂಶುವಾ ವೃಕ್ಷದ ಕೆಳಗೆ ಇಟ್ಟಿದ್ದಾನೆ. ಸೀತೆ ತುಂಬಾ ದುಃಖ ಪಡುತ್ತಿದ್ದಾಳೆ. ನಾವು ಬೇಗ ಹೋಗಿ ಅವಳನ್ನು ಕರೆದುಕೊಂಡು ಬರಬೇಕು” ಎಂದರು.
ರಾಮ, “ಸೀತೆ ನನ್ನನ್ನು ಕುರಿತು ಏನು ಯೋಚಿಸುತ್ತಿದ್ದಾಳೆ?” ಎಂದು ಕೇಳಿದ.
ಆ ಪ್ರಶ್ನೆಗೆ ಕೇವಲ ಹನುಮ ಮಾತ್ರ ಉತ್ತರಿಸಬಹುದೆಂದು ರಾಮನ ಸುತ್ತ ನಿಂತಿದ್ದ ವಾನರರು ಹನುಮನಿಗೆ ದಾರಿಬಿಟ್ಟರು. ಹನುಮ ದಕ್ಷಿಣಕ್ಕೆ ನಮಸ್ಕರಿಸಿ, “ಸೀತೆ ತಪಸ್ಸು ಮಾಡುತ್ತಿದ್ದಾಳೆ. ನಿನ್ನ ಮೇಲೆ ಪೂರ್ಣ ಪ್ರೀತಿಯಿಟ್ಟಿದ್ದಾಳೆ” ಎಂದು ಹೇಳಿ ಅವಳು ಕೊಟ್ಟ ಚೂಡಾಮಣಿಯನ್ನು ತೋರಿಸಿ, “ಸೀತೆ ಕೇವಲ ಒಂದು ತಿಂಗಳ ಕಾಲ ಮಾತ್ರ ಬದುಕಿರುತ್ತೇನೆಂದಳು. ನಾವು ಬೇಗ ಹೋಗಿ ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಬರಬೇಕು” ಎಂದ.
“ಸೀತೆಯ ಕುರಿತು ತಿಳಿದ ಮೇಲೆ ನಾನು ಒಂದು ಕ್ಷಣವೂ ಇಲ್ಲಿ ಇರುವುದಿಲ್ಲ” ಎಂದು ರಾಮ ಅಳುತ್ತಾ ಸೀತೆ ಹೇಗಿದ್ದಾಳೆಂದು ಕೇಳಿದ.
ಹನುಮ ಸೀತೆಯ ಶೀಲ, ಪಾತಿವ್ರತ್ಯಗಳನ್ನು ವಿವರಿಸಿ, “ನಿನಗೂ ಸುಗ್ರೀವನಗೂ ಸ್ನೇಹವಾಗಿದೆಯೆಂದು ಕೇಳಿ ಸೀತೆ ತುಂಬಾ ಸಂತೋಷಪಟ್ಟಳು. ಎಲ್ಲರ ಕ್ಷೇಮವನ್ನು ಕುರಿತು ಕೇಳಿದಳು. ತುಂಬಾ ದುಃಖಿಸುತ್ತಿದ್ದ ಸೀತೆಯನ್ನು ನಾನು ಸಮಾಧಾನ ಮಾಡಿದೆ. ಈಗ ಅವಳಿಗೆ ನೀನು ದುಃಖಪಡುತ್ತಿದ್ದೀಯ ಎಂಬ ದುಃಖವನ್ನು ಬಿಟ್ಟು ಬೇರೇನು ದುಃಖವಿಲ್ಲ” ಎಂದು ಹನುಮ ತನ್ನ ಮಾತಿನಿಂದ ರಾಮನನ್ನು ಸಮಾಧಾನ ಮಾಡಿದ. 

ಅವನ ಮಾತಿನಿಂದ ಸಂತೋಷಪಟ್ಟ ರಾಮ, “ಹನುಮ ನೀನು ಮಾಡಿದ ಕೆಲಸ ಅಸಾಮಾನ್ಯವಾದುದು. ಸಮುದ್ರವನ್ನು ದಾಟಿ, ರಾಕ್ಷಸರಿಂದ ರಕ್ಷಿಸಲ್ಪಡುತ್ತಿದ್ದ ಲಂಕೆಯನ್ನು ಪ್ರವೇಶಿಸಿ, ಸೀತೆಯ ದರ್ಶನ ಮಾಡಿ, ಪ್ರಭು ಹೇಳಿದಕ್ಕಿಂತ ಹೆಚ್ಚದ್ದನ್ನೇ ಮಾಡಿ, ಅವಮಾನ ಪಡೆಯದೆ ವಾಪಸ್ಸು ಬರುವುದು ಸಾಮಾನ್ಯ ವಿಷಯವಲ್ಲ.

ಸೇವಕರು ಮೂರು ರೀತಿಯಲ್ಲಿರುತ್ತಾರೆ. ತಮ್ಮ ಸಾಮರ್ಥ್ಯದಿಂದ ಪ್ರಭು ಹೇಳಿದ ಕೆಲಸಕ್ಕಿಂತ ಹೆಚ್ಚದ್ದನ್ನು ಮಾಡುವವನು ಉತ್ತಮವಾದ ಸೇವಕ. ಸಾಮರ್ಥ್ಯವಿದ್ದರೂ ಪ್ರಭು ಹೇಳಲಿಲ್ಲವಿಲ್ಲವೆಂದು ಮಾಡದಿರುವವನು ಮಧ್ಯಮ ಸೇವಕ. ಪ್ರಭು ಹೇಳಿದ್ದನ್ನು ನಾನೇಕೆ ಮಾಡಬೇಕೆಂದುಕೊಂಡು ಕೆಲಸ ಮಾಡದಿರುವವನು ಅಧಮ ಸೇವಕ. ಇಂದು ನೀನು ಉತ್ತಮ ಸೇವಕನೆಂದು ನಿರೂಪಿಸಿಕೊಂಡಿದ್ದೀಯ. ಸೀತೆಯ ಕ್ಷೇಮವಾರ್ತೆಯನ್ನು ನನಗೆ ಹೇಳಿ, ಅವಳ ಮನಸ್ಸಿನಲ್ಲಿದ್ದ ದೈನ್ಯವನ್ನು, ದುಃಖವನ್ನು ತೊಲಗಿಸಿ ಸಂತೋಷಗೊಳಿಸಿದ್ದೀಯ. ಸೀತೆಯ ಕುರಿತು ತಿಳಿಯದ ನನಗೆ ಅವಳ ಬಗ್ಗೆ ಹೇಳಿ ನನ್ನನ್ನೂ ಸಂತೋಷಗೊಳಿಸಿದ್ದೀಯ. ಏನು ಕೊಟ್ಟು ನಿನ್ನ ಋಣ ತೀರಿಸಿಕೊಳ್ಳಬೇಕು? ಈಗ ನನ್ನ ಬಳಿ ಕೊಡಲು ಏನೂ ಇಲ್ಲ. ನನ್ನ ಹತ್ತಿರ ಇರುವುದು ಈ ದೇಹ ಮಾತ್ರ. ಆದ್ದರಿಂದ ಇದರಿಂದ ನಿನ್ನನ್ನು ಆಲಂಗಿಸಿಕೊಳ್ಳುತ್ತೇನೆ” ಎಂದು ಹೇಳಿ ಹನುಮನನ್ನು ಗಟ್ಟಿಯಾಗಿ ತಬ್ಬಿಕೊಂಡ. 

Comments

Popular posts from this blog

೪೮. ಖರದೂಷಣ ವಧೆ

೫೩. ಸೀತಾಪಹರಣ

೫. ಪುತ್ರಕಾಮೇಷ್ಠಿ