೮೨. ಗೂಢಚರ್ಯ
ನಲ ಸೇತು ನಿರ್ಮಾಣವನ್ನು ಪ್ರಾರಂಭಿಸಿದ. ಸಂತೋಷದಿಂದ ವಾನರರು ಹತ್ತಿರವಿದ್ದ ಬೆಟ್ಟ ಗುಡ್ಡಗಳನ್ನು ಹತ್ತಿ ಕಲ್ಲುಗಳನ್ನು, ವಿವಿಧ ಮರಗಳನ್ನು ತೆಗೆದು 'ರಾಮನಿಗೆ ಜೈ' ಎನ್ನುತ್ತಾ ಸಮುದ್ರದಲ್ಲಿ ಹಾಕತೊಡಗಿದರು. ಮೊದಲ ದಿನ ೧೪ ಯೋಜನಗಳಷ್ಟು ಸೇತುವೆ ನಿರ್ಮಾಣವಾಯಿತು. ಮುಂದಿನ ದಿನಗಳಲ್ಲಿ ಅದು ೨೦, ೨೧, ೨೨, ೨೩ಕ್ಕೆ ಏರಿತು. ಒಟ್ಟು ಐದು ದಿನಗಳಲ್ಲಿ ಸೇತುವಿನ ನಿರ್ಮಾಣ ಮುಗಿಯಿತು. ರಾಮ ಎಲ್ಲರಿಗೂ ಸಮುದ್ರ ದಾಟುವಂತೆ ಆದೇಶಿಸಿದ.
ಕೆಲವರು ಸೇತುವಿನ ಅಂಚಿನಲ್ಲಿ, ಕೆಲವರು ಸಮುದ್ರದಲ್ಲಿ ಧುಮುಕಿ ಮತ್ತೆ ಮೇಲೆದ್ದು, ಇನ್ನೂ ಕೆಲವರು ಈಜುತ್ತಾ ಹೊರಟರು. ಕೆಲವರು ದೊಡ್ಡ ದೊಡ್ಡ ಮರಗಳನ್ನು ಸಮುದ್ರಕ್ಕೆ ಎಸೆದು ಅದರ ಮೇಲೆ ಕೂತು ಹೋದರು. ಸಮುದ್ರದ ಶಬ್ದ ಹೆಚ್ಚೋ, ವಾನರರ ಕೂಗು ಹೆಚ್ಚೋ ಎಂಬಂತೆ ಜೋರಾಗಿ ಕೂಗುತ್ತಿದ್ದರು. ಕೊಟ್ಯಾಂತರ ಮಂದಿಯ ವಾನರ ಸೈನ್ಯ ಲಂಕೆಯನ್ನು ಸೇರಿತು.
ರಾಮ ವಿಭೀಷಣನನ್ನು, ಸುಗ್ರೀವನನ್ನು ಕರೆದು, "ರಾವಣನ ರಾಯಭಾರಿಯಾಗಿ ಶುಕನೆಂಬುವವನು ಬಂದಿದ್ದನಲ್ಲವೇ? ಅವನನ್ನು ಕರೆದುಕೊಂಡು ಬನ್ನಿ" ಎಂದ. ಅವನನ್ನು ರಾಮನ ಮುಂದೆ ಕರೆತಂದರು. ರಾಮ ಅವನು ಬಂದ ಕಾರಣ ಕೇಳಿದ. ಶುಕ, "ಬುದ್ಧಿಹೀನನಾದ ರಾವಣ ನಿಮ್ಮ ಬಲವನ್ನು ನೋಡಿ ಬರಲು ಹೇಳಿದ. ಇದರಲ್ಲಿ ನನ್ನ ತಪ್ಪೇನು ಇಲ್ಲ. ನಿಮ್ಮಂತಹ ಪ್ರಾಜ್ಞರಾದರೆ ಗೂಢಾಚಾರಿಯನ್ನು ಕಳಿಸುವುದಿಲ್ಲ" ಎಂದ.
ರಾಮ ಮುಗುಳ್ನಗೆಯಿಂದ "ಎಲ್ಲವನ್ನು ನೋಡಿದೆಯಾ?" ಎಂದು ಕೇಳಿದ.
"ಇನ್ನೂ ಇಲ್ಲ ಸ್ವಾಮಿ” ಎಂಬ ಉತ್ತರ ಬಂತು.
ರಾಮ ವಿಭೀಷಣನನ್ನು ಕರೆದು, "ಹತ್ತಿರವಿದ್ದು ಇವನಿಗೆ ನಮ್ಮ ಸೈನ್ಯವನ್ನು ತೋರಿಸಿ. ನಂತರ ಇವನನ್ನು ಬಿಟ್ಟುಬಿಡಿ. ಹೋಗಲಿ" ಎಂದ.
ಶುಕ ವಾನರ ಸೈನ್ಯವನ್ನು ನೋಡಿ ರಾವಣನ ಬಳಿ ಹೋದಾಗ ರಾವಣ ಅವನ ರೆಕ್ಕೆ ಇಲ್ಲವೆಂದು ಹಾಸ್ಯ ಮಾಡಿದ. "ರಾಮ ನಿನ್ನಂತಹ ದುರಾತ್ಮನಲ್ಲ. ಅವನು ನನ್ನನ್ನು ಸಜೀವವಾಗಿ ಬಿಟ್ಟ. ನಾನು ಅವರ ಸೈನ್ಯವನ್ನು ನೋಡಿದೆ. ಅದು ಸಾಮಾನ್ಯವಾದ ಸೈನ್ಯವಲ್ಲ. ಭಯಂಕರವಾದ ವಾನರರಿದ್ದಾರೆ. ಸಮುದ್ರವನ್ನು ದಾಟಿ ಬಂದಿದ್ದಾರೆ. ಅವರು ನಿನ್ನನ್ನು ಮುತ್ತುವ ಮುಂಚೆ ಸೀತೆಯನ್ನು ಬಿಟ್ಟುಬಿಡು. ವಾನರರು ಗರುಡ ವ್ಯೂಹವನ್ನು ರಚಿಸಿದ್ದಾರೆ. ಅದರ ಶಿರಸ್ಥಾನದಲ್ಲಿ ರಾಮ, ಲಕ್ಷ್ಮಣರಿದ್ದಾರೆ. ಹೃದಯ ಸ್ಥಾನದಲ್ಲಿ ಅಂಗದ, ಬಲಭಾಗದಲ್ಲಿ ಋಷಭ, ಎಡ ಭಾಗದಲ್ಲಿ ಗಂಧಮಾದನ, ಹಿಂದೆ ಸುಗ್ರೀವನಿದ್ದಾನೆ" ಎಂದ.
ರಾವಣ ಶುಕ, ಸಾರಣರೆಂಬ ಮತ್ತಿಬ್ಬರು ರಾಕ್ಷಸರನ್ನು ಗೂಢಾಚಾರರಾಗಿ ಕಳಿಸಿದ. ಅವರೂ ಪಕ್ಷಿ ರೂಪದಲ್ಲಿ ಸೈನ್ಯದ ಲೆಕ್ಕ ಮಾಡುತ್ತಿದ್ದಾಗ ವಿಭೀಷಣ ಅವರನ್ನು ಹಿಡಿದು ರಾಮನ ಬಳಿ ತಂದ. ಆದರೆ ರಾಮ ಹಿಂದಿನಂತೆಯೇ ಅವರಿಗೂ ಸೈನ್ಯವನ್ನು ತೋರಿಸಿ ಬಿಟ್ಟುಬಿಡಲು ಹೇಳಿದ. ಶುಕ, ಸಾರಣರು ಸೈನ್ಯವನ್ನು ನೋಡಿ ರಾವಣನ ಬಳಿ ಬಂದು ಅವನಿಗೆ ಸೈನ್ಯದ ಕುರಿತು ವಿವರಿಸಿದರು. ರಾವಣ ತನಗೂ ಆ ಸಾನಿಯವನ್ನು ತೋರಿಸಲು ಹೇಳಿದ.
ಶುಕ, ಸಾರಣರು ರಾವಣನ ಜೊತೆ ಒಂದು ಪ್ರಾಸಾದವನ್ನು ಹತ್ತಿದರು. ಸಾರಣ ವಿವರಿಸಿದ. "ರಾವಣ, ಅಲ್ಲಿ ನೋಡು, ಅಲ್ಲಿರುವವನು ಧೂಮ್ರ. ಅವನ ತಮ್ಮನೇ ಜಾಂಬವಂತ. ಅವನು ಪರಾಕ್ರಮಿ. ಕೊಟ್ಯಾಂತರ ವಾನರರ ಜೊತೆ ಯುದ್ಧಕ್ಕೆ ಬಂದಿದ್ದಾನೆ. ಅವನು ಗಟ್ಟಿಯಾಗಿ ಕೂಗು ಹಾಕಿದರೆ ಬಾಯಿಂದ ರಕ್ತ ಬಂದು ಸಾಯುತ್ತಾರೆ. ಅವರಿಗೆ ಉಗುರು, ಹಲ್ಲುಗಳೇ ಆಯುಧಗಳು. ಅವರು ಮರಗಳನ್ನು ಕಲ್ಲುಗಳನ್ನು ಕಿತ್ತು ಎಸೆಯುತ್ತಾರೆ. ಕೆಲವರಿಗೆ ೧೦ ಆನೆಯ ಬಲ, ಕೆಲವರಿಗೆ ೧೦೦ ಆನೆಯ ಬಲ, ಕೆಲವರಿಗೆ ಸಾವಿರ ಆನೆಯ ಬಲ, ಕೆಲವರಿಗೆ ಲಕ್ಷ ಆನೆಯ ಬಲವಿದೆ. ಕೆಲವರ ಬಲವನ್ನು ಊಹಿಸಲೂ ಸಾಧ್ಯವಿಲ್ಲ. ಇವರಲ್ಲಿ ಒಬನಿದ್ದಾನೆ. ಅವನ ಒಂದು ಹೆಜ್ಜೆಯೇ ಒಂದು ಯೋಜನ. ಅವನಷ್ಟು ವಿಶಾಲವಾದ ಶರೀರವುಳ್ಳವನು ಯಾರೂ ಇಲ್ಲ. ಅಲ್ಲಿ ಕಾಣುತ್ತಿದ್ದಾನೆ ನೋಡು. ಅವನೇ ಪನಸ. ಅವನ ಪಕ್ಕ ಕಾಣಿಸುತ್ತಿರುವವನು ಸುಗ್ರೀವ. ಅವನ ಸುತ್ತ ಯಾವಾಗಲೂ ೩೬ ಕೋಟಿ ವಾನರರು ಇರುತ್ತಾರೆ. ಗದೆಯೆತ್ತಿ 'ಬಾ ರಾವಣ' ಎಂದರೆ ಇಲ್ಲಿರುವ ಪ್ರಾಸಾದಗಳು ಕದಲುತ್ತವೆ. ಅವನ ಆಜ್ಞೆಗೆ ಎದುರಿಲ್ಲ. ಅವನು ಕಿಷ್ಕಿಂಧೆಯ ರಾಜ. ಅವನಿಗಿಂತಲೂ ಬಲವಂತನಾದ ವಾಲಿ ಕಿಷ್ಕಿಂಧೆಯ ರಾಜನಾಗಿದ್ದ. ರಾಮ ಅವನನ್ನು ಒಂದೇ ಒಂದು ಬಾಣದಿಂದ ಕೊಂದ. ವಾಲಿಯ ಕತ್ತಿನಲ್ಲಿದ್ದ ಮಹೇಂದ್ರ ಮಾಲೆ ಈಗ ಸುಗ್ರೀವನ ಕತ್ತಿನಲ್ಲಿದೆ. ಅಲ್ಲಿ ನೋಡು ಹನುಮನ ತಂದೆ ಕೇಸರಿ ಕಾಣಿಸುತ್ತಿದ್ದಾನೆ. ಅವನು ಮೇರು ಪರ್ವತದ ಮೇಲಿರುತ್ತಾನೆ. ಕೆಲವು ಲಕ್ಷ ವಾನರರ ಜೊತೆ ಬಂದಿದ್ದಾನೆ. ಅವನ ಪಕ್ಕದಲ್ಲಿರುವ ಗಂಧಮಾದನನ ಶಕ್ತಿ ಇಷ್ಟೇ ಎಂದು ಹೇಳಲು ಬರುವುದಿಲ್ಲ. ಅಲ್ಲಿರುವ ವಾನರರು ಬಂಗಾರದ ಬಣ್ಣದಿಂದ ಹೊಳೆಯುತ್ತಿದ್ದಾರೆ. ಕೆಲವರು ಬೆಟ್ಟಗಳಂತಿದ್ದಾರೆ. ಕೆಲವರ ಹಲ್ಲುಗಳು ಭಯಂಕರವಾಗಿವೆ. ಕೆಲವರ ಬಾಲಗಳು ಉದ್ದವಾಗಿದ್ದರೆ, ಕೆಲವರದು ಕೆಂಪಾಗಿ, ಕೆಲವರದು ಹಸಿರಾಗಿ ಇದೆ. ಲಂಕೆಯ ಸುತ್ತವಿರುವ ಗುಹೆ, ಬೆಟ್ಟ, ಸಮುದ್ರ, ನದಿಗಳಲೆಲ್ಲ ವಾನರರೇ ತುಂಬಿದ್ದಾರೆ. ಲಂಕೆಯ ಸುತ್ತವಿರುವ ಕಾಡುಗಳಲ್ಲಿ ಭಲ್ಲೂಕಗಳೇ ತುಂಬಿವೆ. ಅವರ ನಾಯಕ ಜಾಂಬವಂತ. ಇನ್ನು ಗವಾಕ್ಷ, ಗವಯ, ಗಯ ಇವರೆಲ್ಲ ಕೋಟಿ ಆನೆಗಳ ಬಲವುಳ್ಳವರೇ. ಅಲ್ಲಿ ಮಧ್ಯ ನಿಂತವನು ಹನುಮ. ಬಂಗಾರದ ಶರೀರದಿಂದ ಹೊಳೆಯುತ್ತಿರುವ ಅವನಿಗೆ ಅಸ್ತ್ರಶಸ್ತ್ರಗಳು ಏನೂ ಮಾಡವೆಂಬ ಬ್ರಹ್ಮದೇವರ ವರವಿದೆ. ಅವನ ಪಕ್ಕದಲ್ಲಿ ನೀಲ ಶರೀರದಿಂದ, ಪದ್ಮದಂತಹ ಕಣ್ಣುಗಳಿಂದ, ಎಡಗೈಯಲ್ಲಿ ಬಿಲ್ಲು ಹಿಡಿದು, ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವಷ್ಟು ಸೌಂದರ್ಯದಿಂದ ಇರುವವನು ರಾಮ. ಧರ್ಮಾತ್ಮ. ಪಿತೃವಾಕ್ಯ ಪರಿಪಾಲಕ. ಅವನ ಪಕ್ಕದಲ್ಲಿ ಯಾವಾಗಲೂ ಅವನ ಬಹಿರ್ಪ್ರಾಣದಂತೆ, ಕಣ್ಣನ್ನು ರೆಪ್ಪೆ ಕಾಪಾಡುವಂತೆ ಕಾಪಾಡುತ್ತಾ ಲಕ್ಷ್ಮಣ ಇರುತ್ತಾನೆ. ಅವನಿಗೆ ರಾಮನಿಗೆ ಗೊತ್ತಿರುವ ಅಸ್ತ್ರಶಸ್ತ್ರಗಳೆಲ್ಲ ತಿಳಿದಿವೆ.
ಇನ್ನು ಸೈನ್ಯದ ಸಂಖ್ಯೆಯನ್ನು ಹೇಳುತ್ತೇನೆ ಕೇಳು. ಹತ್ತು ಹತ್ತು ಸಾವಿರಗಳು ಒಂದು ಲಕ್ಷ. ಹತ್ತು ಹತ್ತು ಲಕ್ಷಗಳು ಒಂದು ಕೋಟಿ, ಲಕ್ಷ ಕೋಟಿಗಳು ಒಂದು ಸಂಕು, ಸಾವಿರ ಸಂಕುಗಳು ಒಂದು ಮಹಾಸಂಕು, ಸಾವಿರ ಮಹಾಸಂಕುಗಳು ಒಂದು ವೃಂದ, ಸಾವಿರ ವೃಂದಗಳು ಒಂದು ಮಹಾವೃಂದ, ಸಾವಿರ ಮಹಾವೃಂದಗಳು ಒಂದು ಪದ್ಮ, ಸಾವಿರ ಪದ್ಮಗಳು ಒಂದು ಮಹಾಪದ್ಮ, ಸಾವಿರ ಮಹಾಪದ್ಮಗಳು ಒಂದು ಖರ್ವ, ಸಾವಿರ ಖರ್ವಗಳು ಒಂದು ಮಹಾಖರ್ವ, ಸಾವಿರ ಮಹಾಖರ್ವಗಳು ಒಂದು ಸಮುದ್ರ, ಸಾವಿರ ಸಮುದ್ರಗಳು ಒಂದು ಓಧ, ಸಾವಿರ ಓಧಗಳು ಒಂದು ಮಹಾಓಧ. ಅಂತಹಾ ಮಹಾಓಧಗಳು ಇಲ್ಲಿ ಅನೇಕ ಇವೆ...."
ರಾವಣ ಸಾರಣನನ್ನು ಮಧ್ಯದಲ್ಲೇ ತಡೆದು, “ಅವರ ಕುರಿತು ಹೇಳಲು ನಿನಗೆ ಅದೆಷ್ಟು ಸಂತೋಷವಾಗಿದೆ! ನನ್ನ ಅನ್ನ ತಿಂದು ಅವರನ್ನು ಹೊಗಳುತ್ತೀಯಾ? ಇಲ್ಲೇ ನಿನ್ನ ಕಣ್ಣನ್ನು ತೆಗೆಯಬೇಕು. ಆದರೆ ಹಿಂದೆ ನನಗೆ ಸಹಾಯ ಮಾಡಿದ್ದೀಯ. ಆದ್ದರಿಂದ ನಿನ್ನನ್ನು ಬಿಟ್ಟುಬಿಡುತ್ತೇನೆ. ಇನ್ನು ನನ್ನ ಕಣ್ಣಿಗೆ ಕಾಣಿಸಬೇಡ. ಹೊರಟುಹೋಗು" ಎಂದ.
ರಾವಣ ಶಾರ್ದೂಲನೆಂಬುವನನ್ನು ಕರೆದು, “ಈ ಬಾರಿ ನೀನು ಗೂಢಾಚಾರನಾಗಿ ಹೋಗು. ಅವರ ಸೈನ್ಯದಲ್ಲಿ ಯಾರು ಯಾವ ವಂಶಕ್ಕೆ ಸೇರಿದವನು, ರಾಮ ಎಲ್ಲಿ ಆಹಾರ ತಿನ್ನು ತ್ತಾನೆ, ಎಲ್ಲಿ ಮಲಗುತ್ತಾನೆ, ಅವನ ಪಕ್ಕ ಯಾರಿರುತ್ತಾರೆ, ಅವನನ್ನು ಯಾರು ರಕ್ಷಿಸುತ್ತಿರುತ್ತಾರೆ ಮೊದಲಾದವುಗಳನ್ನು ತಿಳಿದುಕೊಂಡು ಬಾ” ಎಂದು ಹೇಳಿ ಕಳಿಸಿದ. ನಂತರ ವಿದ್ಯುಜಿಹ್ವನನ್ನು ಕರೆದು, “ನೀನು ನನಗೊಂದು ಉಪಕಾರ ಮಾಡಬೇಕು. ನೀನು ಮಾಯಾವಿ. ರಾಮನ ಶರೀರದಿಂದ ಅವನ ತಲೆ ಬಿದ್ದುಹೋದರೆ ಅದು ಹೇಗೆ ಕಾಣುತ್ತದೆಯೋ ಅದೇ ರೀತಿಯಾದ ತಲೆಯನ್ನು ಸಿದ್ಧಪಡಿಸು. ರಾಮನ ಬಿಲ್ಲಿನಂತಿರುವ ಬಿಲ್ಲನ್ನು, ಬಾಣಗಳನ್ನು, ಅಕ್ಷಯತೂಣೀರಗಳನ್ನೂ ತಯಾರಿಸು” ಎಂದು ಹೇಳಿ ಅಶೋಕವನದ ಕಡೆ ಹೋದ.
Comments
Post a Comment