೮೪. ಯುದ್ಧಾರಂಭ
ಯುದ್ಧ ಆರಂಭವಾಯಿತು.
ವಾನರರು ಪ್ರಾಸಾದಗಳನ್ನು ಕೆಡವಿದರು. ಪರ್ವತಗಳನ್ನು ತಂದು ಎಸೆದರು. ಮರಗಳಿಂದ ಹೊಡೆದರು. ಲಂಕೆಯ ದ್ವಾರಗಳು ಮುಚ್ಚಿದ್ದವು. ಹೊರಗೆ ಯುದ್ಧ ನಡೆಯುತ್ತಿತ್ತು. ಮೊದಲ ದಿನದ ಯುದ್ಧದಲ್ಲಿ ವಾನರರು ವಿಶೇಷವಾದ ಬಲವನ್ನು ಪ್ರದರ್ಶಿಸಿದರು. ರಾಕ್ಷಸರು ಮುದ್ಗರ, ಶೂಲ, ತ್ರಿಶೂಲ, ಕತ್ತಿ, ಪರಿಘಗಳನ್ನು ವಾನರರ ಮೇಲೆ ಎಸೆದು, ಸತ್ತವರನ್ನು ತಿಂದುಬಿಡುತ್ತಿದ್ದರು. ಭಲ್ಲೂಕಗಳೂ ಸಿಕ್ಕ ಸಿಕ್ಕ ರಾಕ್ಷಸರನ್ನು ಹಿಡಿದು ತಿಂದುಬಿಡುತ್ತಿದ್ದವು. ಯುದ್ಧರಂಗದಲ್ಲಿ ಎಲ್ಲಿ ನೋಡಿದರೂ ಹಿಡಿ, ಹೊಡಿ, ಕೊಲ್ಲು ಎಂಬ ಮಾತುಗಳೇ ಕೇಳಿಸುತ್ತಿದ್ದವು. ರಾತ್ರಿಯೆಲ್ಲ ಭಯಂಕರವಾದ ಯುದ್ಧ ನಡೆಯಿತು. ತಲೆಗಳು ಚಂಡಿನಂತೆ ಆಕಾಶಕ್ಕೆ ಹಾರುತ್ತಿದ್ದವು. ಎಲ್ಲಿ ನೋಡಿದರೂ ಎದೆ, ಕಾಲು, ಕೈಗಳೇ ಕಾಣುತ್ತಿದ್ದವು. ಆ ಪ್ರದೇಶವೆಲ್ಲ ರಕ್ತದಿಂದ ತುಂಬಿ ನಡೆಯುತ್ತಿದ್ದವರ ಕಾಲುಗಳು ಜಾರುತ್ತಿದ್ದವು. ಆನೆಗಳ ಸೊಂಡಿಲುಗಳು, ಕಾಲುಗಳು, ಕುದುರೆಗಳ ಶರೀರ ಭಾಗಗಳು ಯುದ್ಧ ಭೂಮಿಯಲ್ಲಿ ಬಿದ್ದಿದ್ದವು.
ಇಂತಹ ಸಮಯದಲ್ಲಿ ಇಂದ್ರಜಿತ್ತ ಯುದ್ಧಕ್ಕೆ ಬಂದ. ಅವನನ್ನು ನೋಡಿದ ಅಂಗದ ಉತ್ಸಾಹದಿಂದ ಒಂದು ಪರ್ವತ ಶಿಖರವನ್ನು ಅವನ ಮೇಲೆ ಎಸೆದ. ಆ ಏಟಿಗೆ ಇಂದ್ರಜಿತ್ತನ ರಥ, ಕುದುರೆ, ಧ್ವಜಗಳು ಮುರಿದವು. ಯಾರೂ ಊಹಿಸದ ದೃಶ್ಯವನ್ನು ನೋಡಿದ ರಾಮಲಕ್ಶ್ಮಣರು, ದೇವತೆಗಳೂ ಆಶ್ಚರ್ಯಗೊಂಡರು. ಇಂದ್ರಜಿತ್ತನ ರಥ ಮುರಿದುದು ಅದೇ ಮೊದಲ ಬಾರಿ! ಕೋಪಗೊಂಡ ಇಂದ್ರಜಿತ್ತ ಆಕಾಶಕ್ಕೆ ಎಗರಿ ಮಾಯವಾಗಿ ಕತ್ತಲನ್ನು ಸೃಷ್ಟಿಸಿದ. ಮಾಯೆಯಿಂದ ಸೃಷ್ಟಿಸಿದ ರಥವನ್ನು ಹತ್ತಿ, ಯಾರಿಗೂ ಕಾಣದಂತೆ ರಾಮ, ಲಕ್ಶ್ಮಣರ ಮೇಲೆ ಬಾಣಗಳ ಮಳೆಗರೆದ. ಕದ್ರುವ ಕುಮಾರರಾದ ಸರ್ಪಗಳನ್ನು ಬಾಣವಾಗಿ ಬಿಟ್ಟ. ಅವು ಹೊಕ್ಕವರ ಮರ್ಮಸ್ಥಾನಗಳನ್ನು ಕಚ್ಚುತ್ತವೆ. ಇಂದ್ರಜಿತ್ತ ಬಿಟ್ಟ ಬಾಣಗಳು ರಾಮಲಕ್ಷ್ಮಣರನ್ನು ನಾಗಾಸ್ತ್ರ ಬಂಧನಗಳಾಗಿ ಕಟ್ಟಿಬಿಟ್ಟವು. ಆಗ ರಾಮ ಲಕ್ಷ್ಮಣನಿಗೆ, "ಲಕ್ಷ್ಮಣಾ ನಾವು ಈಗ ಇಂದ್ರಜಿತ್ತನನ್ನು ಏನೂ ಮಾಡಲಾರೆವು. ಕಾಡೆಮ್ಮೆ ಮಳೆಯನ್ನು ಎದುರಿಸಿದಂತೆ ನಾವೂ ಇದನ್ನು ಎದುರಿಸಬೇಕು" ಎಂದ. ಸ್ವಲ್ಪ ಹೊತ್ತಿನಲ್ಲಿ ರಾಮ ಮೂರ್ಛೆ ಹೋದ. ಕೆಳಗೆ ಬಿದ್ದ ರಾಮನನ್ನು ನೋಡಿದ ಲಕ್ಷ್ಮಣ, 'ಯಾವ ಮಹಾನುಭಾವನನ್ನು ಯುದ್ಧದಲ್ಲಿ ಯಾರೂ ನಿಗ್ರಹಿಸಲಾರರೋ, ಯಾರು ವಿಶ್ವಾಮಿತ್ರರಿಂದ ಧನುರ್ವಿದ್ಯೆಯನ್ನು ಕಲಿತನೋ ಅವನು ಈಗ ನಾಗಾಸ್ತ್ರ ಬಂಧನದಿಂದ ಭೂಮಿಯ ಮೇಲೆ ಬಿದ್ದಿದ್ದಾನೆ' ಎಂದುಕೊಂಡ. ಆದರೆ ನಂತರವೇ ಲಕ್ಶ್ಮಣನೂ ಮೂರ್ಛೆಹೋದ. ರಾಮನ ಬಿಲ್ಲು ದೂರ ಹೋಗಿ ಬಿತ್ತು. ಇಂದ್ರಜಿತ್ತ ರಾಮಲಕ್ಷ್ಮಣರ ಬೆರಳುಗಳನ್ನೂ ಬಿಡದೆ ಬಾಣಗಳಿಂದ ಮುಳುಗಿಸಿಬಿಟ್ಟು, "ನಿಮ್ಮಿಂದ ನನ್ನ ತಂದೆ ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದರು. ಯಾವ ರಾಮಲಕ್ಷ್ಮಣರಿಂದ ನನ್ನ ತಂದೆ ಪೀಡಿಸಲ್ಪಟ್ಟರೋ ಅವರನ್ನು ಸಾಯುವವರೆಗೂ ಹೊಡೆದು ನನ್ನ ತಂದೆಯ ಋಣ ತೀರಿಸುತ್ತೇನೆ" ಎಂದು ಅವರ ಮರ್ಮಸ್ಥಾನಗಳಿಗೆ ಗುರಿಯಿಟ್ಟು ಬಾಣ ಹೊಡೆದ. ಆಗ ರಾಮ ಲಕ್ಷ್ಮಣರು ಬಾಹ್ಯಪ್ರಜ್ಞೆಯನ್ನೂ ಕಳೆದುಕೊಂಡರು.
ರಾಮಲಕ್ಷ್ಮಣರು ಕೆಳಗಿ ಬಿದ್ದದ್ದನ್ನು ನೋಡಿ ಸುತ್ತ ಇದ್ದ ವಾನರ ನಾಯಕರು ಅಲ್ಲಿಗೆ ಬಂದರು. ಇಂದ್ರಜಿತ್ತ ಅಲ್ಲಿಗೆ ಬಂದ ಹನುಮ, ಋಷಭ, ವೇಗದರ್ಶಿ, ವಿಭೀಷಣ, ಸುಷೇಣ, ಗಂಧಮಾದನರನ್ನೂ ಬಾಣಗಳಿಂದ ಹೊಡೆದು ಘಾಸಿಗೊಳಿಸಿ ವಾನರರನ್ನು ಚದುರಿಸಿದ. ವಾನರರು ಎಲ್ಲಿ ಹೋಗುತ್ತಿದ್ದಾರೋ ತಮಗೇ ತಿಳಿಯದಂತೆ ದಿಕ್ಕೆಟ್ಟು ಓಡುತ್ತಿದ್ದರು.
ರಾಮಲಕ್ಷ್ಮಣರು ಸತ್ತರು ಎಂದುಕೊಂಡು ಸುಗ್ರೀವ ದುಃಖಿಸುತ್ತಿದ್ದ. ವಿಭೀಷಣ ಅವನ ಬಳಿ ಬಂದು, “ಸುಗ್ರೀವ, ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಯುದ್ಧದಲ್ಲಿ ಜಯ ಸಿಗುತ್ತದೆ ಎಂದುಕೊಳ್ಳುವು ತಪ್ಪು. ಎಂತಹವರಿಗಾದರೂ ತೊಂದರೆ ಬಂದೇ ಬರುತ್ತದೆ. ನೀನು ಈ ಸಂದರ್ಭದಲ್ಲಿ ತಾಳ್ಮೆಗೆಡಬಾರದು. ಅಲ್ಲಿ ಅವರಿಬ್ಬರೂ ತೊಂದರೆಯಲ್ಲಿದ್ದಾರೆ. ಅವರಿಗೆ ಪ್ರಜ್ಞೆಬಂದರೆ ನಾವು ಬದುಕುತ್ತೇವೆ. ಇಲ್ಲದಿದ್ದರೆ ನಮ್ಮ ನಾಶ ಖಂಡಿತ. ರಾಮಲಕ್ಷ್ಮಣರ ಮುಖಕಾಂತಿ ತಗ್ಗಿಲ್ಲ. ಬಾಣಗಳಿಂದ ಮುಚ್ಚಿಬಿಟ್ಟಿದ್ದರೂ ಅದನ್ನು ತಟ್ಟುಕೊಳ್ಳುವ ವೀರ್ಯ, ಶಕ್ತಿ, ಮನೋಧೈರ್ಯ ಅವರಿಗೆ ಇದೆ” ಎಂದು ಹೇಳಿ ಸುಗ್ರೀವನನ್ನು ಸಮಾಧಾನ ಮಾಡಿ, ಓಡುತ್ತಿದ್ದ ವಾನರರನ್ನು ಮತ್ತೆ ವಾಪಸ್ಸು ಕರೆತರಲು ಹೋದ.
ಸ್ವಲ್ಪ ಸಮಯದ ನಂತರ ವಿಭೀಷಣ ವಾಪಸ್ಸು ಬಂದ. ಇನ್ನೂ ರಾಮಲಕ್ಷ್ಮಣರು ಬಿದ್ದೇ ಇದ್ದರು. ಇಂದ್ರಜಿತ್ತ ಬಿಟ್ಟ ಬಾಣಗಳಿಂದ ಅವರ ಪ್ರತಿಯೊಂದು ಭಾಗಗಳಿಂದಲೂ ರಕ್ತ ಸುರಿಸುತ್ತಿತ್ತು. ಅವರ ಶರೀರಗಳು ನೀರಸವಾಗುತ್ತಿದ್ದವು. ಅಲ್ಲಿಯವರೆಗೂ ಸುಗ್ರೀವನಿಗೆ ಧೈರ್ಯ ಹೇಳುತ್ತಿದ್ದ ವಿಭೀಷಣ ಜೋರಾಗಿ ಅಳುತ್ತಾ, “ನಾನು ರಾಮಲಕ್ಷ್ಮಣರ ಮೇಲೆಯೇ ಆಸೆಯಿಟ್ಟುಕೊಂಡಿದ್ದೆ. ಇವರನ್ನು ಆಶ್ರಯಿಸಿದರೆ ರಾಜ್ಯ ಸಿಕ್ಕುತ್ತದೆಂದುಕೊಂಡಿದ್ದೆ. ಆದರೆ ಈಗ ಇವರೇ ಹೀಗೆ ಬಿದ್ದಿದ್ದಾರೆ. ಇನ್ನು ನನಗೆ ದಿಕ್ಕಾರು? ರಾವಣ ನನ್ನನ್ನು ಬಿಡುವುದಿಲ್ಲ. ನಾನು ದುರದೃಷ್ಟವಂತ” ಎಂದ. ವಿಭೀಷಣನೇ ಹಾಗೆ ಮಾತಾಡಿದ ಮೇಲೆ ವಾನರ ಸೈನ್ಯ ಮತ್ತೆ ಓಡಲು ಶುರು ಮಾಡಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಅಂಗದ, “ನಾಚಿಕೆಯಿಲ್ಲದೆ, ಇಷ್ಟು ಅಸಹ್ಯವಾಗಿ ನಮ್ಮ ಸೈನ್ಯ ಏಕೆ ಓಡುತ್ತಿದೆ?” ಎಂದು ಕೇಳಿದ. ಅವರು, “ನಾವು ರಾಮಲಕ್ಷ್ಮಣರು ಬಿದ್ದರೆಂದು ಓಡಿಹೋಗುತ್ತಿಲ್ಲ. ಇಂದ್ರಜಿತ್ತನ ಭಯದಿಂದ ಓಡುತ್ತಿದ್ದೇವೆ” ಎಂದರು. ಓಡಿಹೋಗುವುದು ತುಂಬಾ ಹೇಸಿಗೆಯ ವಿಷಯ, ವಾಪಸ್ಸು ಬನ್ನಿ ಎಂದು ಹುರಿದುಂಬಿಸಿ ವಾನರರನ್ನು ಮತ್ತೆ ವಾಪಸ್ಸು ಕರೆದುಕೊಂಡು ಬಂದರು.
ಇಂದ್ರಜಿತ್ತ ಲಂಕೆಗೆ ಬಂದು ರಾವಣನಿಗೆ, "ಅಪ್ಪ, ಇನ್ನು ನೀನು ಭಯಪಡುವ ಅವಶ್ಯಕತೆಯಿಲ್ಲ. ರಾಮಲಕ್ಷ್ಮಣರನ್ನು ಸಂಹರಿಸಿದ್ದೇನೆ. ನಾನು ನಿರ್ಮಿಸಿದ ನಾಗಾಸ್ತ್ರ ಬಂಧನದಿಂದ ಅವರಿಬ್ಬರೂ ಭೂಮಿಯ ಮೇಲೆ ಬಿದ್ದಿದ್ದಾರೆ. ಶರೀರರಿಂದ ರಕ್ತ ಕಾರಿ ಸತ್ತಿದ್ದಾರೆ" ಎಂದ. ಮಗನ ಮಾತು ಕೇಳಿ ರಾವಣ ತುಂಬಾ ಸಂತೋಷಗೊಂಡು ತನ್ನ ಭಟರನ್ನು ಕರೆದು, "ಯುದ್ಧಕ್ಕೆ ಬಂದ ರಾಮಲಕ್ಷ್ಮಣರು ಇಂದ್ರಜಿತ್ತನಿಂದ ಹತರಾಗಿದ್ದಾರೆ. ಈ ವಿಷಯವನ್ನು ಲಂಕೆಯಲ್ಲ ಸಾರಿ ಎಲ್ಲ ಕಡೆಯೂ ತೋರಣಗಳನ್ನು ಕಟ್ಟಿ ಭೇರಿಗಳನ್ನು ಮೊಳಗಿಸಿ. ಎಲ್ಲರೂ ಸಂತೋಷದಿಂದ ಉತ್ಸವವನ್ನು ಮಾಡೋಣ" ಎಂದ. ನಂತರ ರಾಕ್ಷಸ ಸ್ತ್ರೀಯರನ್ನು ಕರೆದು, "ನೀವು ಅಶೋಕ ವನಕ್ಕೆ ಹೋಗಿ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಹೋಗಿ. ಸತ್ತಿರುವ ರಾಮಲಕ್ಷ್ಮಣರನ್ನು ಅವಳು ನೋಡಲಿ. 'ಹೇಗೂ ನನ್ನ ಗಂಡ ಸತ್ತಿದ್ದಾನೆ' ಎಂದುಕೊಂಡು ನನ್ನ ಬಳಿ ಬರುತ್ತಾಳೆ. ನೀವು ಬೇಗ ಹೊರಡಿ" ಎಂದು ಆಜ್ಞೆ ಮಾಡಿದ.
ಯುದ್ಧ ಭೂಮಿಯಲ್ಲಿ ರಾಕ್ಷಸರು ಕೇಕೆ ಹಾಕುತ್ತಾ ಆನಂದದಿಂದಿದ್ದರು. ವಾನರರು ನಿರುತ್ಸಾಹದಿಂದ ದೀನರಾಗಿ ನಿಂತಿದ್ದರು. ರಾಕ್ಷಸ ಸ್ತ್ರೀಯರು ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕೂರಿಸಿಕೊಂಡು ಕೆಳಗೆ ಬಿದ್ದಿದ್ದ ರಾಮಲಕ್ಷ್ಮಣರನ್ನು ತೋರಿಸಿದರು. ಸೀತೆ ಕೆಳಗೆ ನೋಡಿದಾಗ ಮೈಯೆಲ್ಲಾ ಮುಳ್ಳು ಚುಚ್ಚಿದಂತೆ ರಾಮಲಕ್ಷ್ಮಣರು ಬಾಣಗಳಿಂದ ಆವೃತವಾಗಿದ್ದರು. ಅವರು ಸತ್ತಿದ್ದಾರೆಂದುಕೊಂಡು ಸೀತೆ ಜೋರಾಗಿ ಅಳುತ್ತಾ, "ನಾನು ಹುಟ್ಟಿದಾಗ ಜ್ಯೋತಿಷಿಗಳು ನನ್ನ ಪಾದದಲ್ಲಿ ಪದ್ಮವಿರುವುದನ್ನು ಕಂಡು ನಾನು ಸಿಂಹಾಸನದ ಮೇಲೆ ಕುಳಿತು ಪಟ್ಟಾಭಿಷೇಕ ಮಾಡಿಕೊಳ್ಳುತ್ತೇನೆಂದು ಭವಿಷ್ಯ ಹೇಳಿದ್ದರು. ಚಿಕ್ಕವಳಿದ್ದಾದ ನನ್ನ ತಂದೆಯ ಬಳಿ ಕೂತಿದ್ದರೆ ಬಂದವರೆಲ್ಲ ನನ್ನನ್ನು ನೋಡಿ ಸಾಮುದ್ರಿಕ ಲಕ್ಷಣಗಳಿರುವ ನಾನು ಸೌಭಾಗ್ಯವತಿಯಾಗುತ್ತೇನೆಂದು, ಮಹಾನುಭಾವನನ್ನು ಗಂಡನನ್ನಾಗಿ ಪಡೆಯುತ್ತೇನೆಂದು ಆಶೀರ್ವದಿಸುತ್ತಿದ್ದರು. ಆದರೆ ಈಗ ಅದೆಲ್ಲ ಅಸತ್ಯವಾಗಿದೆ. ರಾಮ, ರಾವಣ ನನ್ನನ್ನು ಅಪಹರಿಸಿದ ಮೇಲೆ ದಂಡಾಕಾರಣ್ಯವನ್ನೆಲ್ಲ ಹುಡುಕಿದೆ, ಹನುಮನನ್ನು ಕಳಿಸಿದೆ, ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಅದನ್ನು ದಾಟಿದೆ. ಆದರೆ ಕೊನೆಗೆ ಇಂದ್ರಜಿತ್ತನ ಮಾಯೆಯಿಂದ ಮರಣಿಸಿರುವೆ. ನಿನಗೆ ಬ್ರಹ್ಮಾಸ್ತ್ರ, ಬ್ರಹ್ಮಶಿರಸ್ಸು, ವರುಣ, ಆಗ್ನೇಯ ಎಲ್ಲ ಅಸ್ತ್ರಗಳು ತಿಳಿದಿವೆ. ಆದರೂ ಕೇವಲ ಒಬ್ಬನ ಮಾಯೆ ನಿನ್ನನ್ನು ಕೊಂದಿತೆಂದರೆ ನನಗೆ ಆಶ್ಚರ್ಯವಾಗುತ್ತಿದೆ. ನೀನು ಸತ್ತ ವಿಷಯವನ್ನು ಕೇಳಿ ಕೌಸಲ್ಯೆ ಮೊದಲಾದವರು ಬದುಕುತ್ತಾರೆಯೇ? ಅಯೋಧ್ಯೆ ಅಯೋಧ್ಯೆಯಂತೆಯೇ ಇರುತ್ತದೆಯೇ? ನೀನು ಇಷ್ಟು ಕಷ್ಟ ಪಡಲು ನನ್ನನ್ನು ಮದುವೆಯಾದೆಯಾ? ನನ್ನನ್ನು ಮದುವೆಯಾಗದಿದ್ದರೆ ಚೆನ್ನಾಗಿರುತ್ತಿತ್ತು" ಎಂದಳು. ಸೀತೆಯನ್ನು ಕರೆತಂದ ತ್ರಿಜಟೆ ಅವಳ ಗೋಳನ್ನು ನೋಡಲಾಗದೆ, "ಸೀತೆ ಅಳಬೇಡ. ರಾಮಲಕ್ಷ್ಮಣರು ಸತ್ತಿಲ್ಲ. ನಿನ್ನನ್ನು ಸಮಾಧಾನ ಮಾಡಲು ನಿನಗೆ ಈ ಮಾತುಗಳನ್ನು ಹೇಳುತ್ತಿಲ್ಲ. ಪತಿ ಮರಣಿಸಿದ ಸ್ತ್ರೀ ಈ ಪುಷ್ಪಕ ವಿಮಾನವನ್ನು ಹತ್ತಿದರೆ ಇದು ಮೇಲೆ ಹಾರುವುದಿಲ್ಲ. ಆದ್ದರಿಂದ ನೀನು ಸೌಭಾಗ್ಯವತಿಯೇ. ಯೋಧ ಸತ್ತಿದ್ದರೆ ಇಷ್ಟೊಂದು ಸೈನ್ಯ ಹೀಗೆ ನಿಲ್ಲುವುದಿಲ್ಲ. ಓಡಿಹೋಗುತ್ತಾರೆ. ರಾಮಲಕ್ಷ್ಮಣರ ಮುಖದಲ್ಲಿ ಕಾಂತಿಯಿದೆ. ಅವರು ಮೂರ್ಛೆಹೋಗಿರಬಹುದು ಅಷ್ಟೇ. ನೀನು ಮತ್ತೆ ಈ ಪುಷ್ಪಕ ವಿಮಾನದಲ್ಲೇ ಅಯೋಧ್ಯೆಗೆ ಹಿಂತಿರುಗುತ್ತೀಯ. ನಿನ್ನ ಮೇಲೆ ಯಾವ ರಾಕ್ಷಸ ಸ್ತ್ರೀಯರಿಗೂ ಇರದ ವಾತ್ಸಲ್ಯ ನನಗೆ ಮಾತ್ರ ಏಕಿದೆ ಎಂದು ನೀನು ಕೇಳಬಹುದು. ನಿನ್ನನ್ನು ಬಂದಾಗಿನಿಂದ ನಾನು ನೋಡುತ್ತಿದ್ದೇನೆ. ನಿನಗೆ ನಿನ್ನ ಗಂಡನ ಮೇಲಿರುವ ಪ್ರೀತಿ ನನ್ನನ್ನು ಆಶ್ಚರ್ಯಗೊಳಿಸಿದೆ. ನೀನು ಭಯಪಡಬೇಡ. ನಾನು ಸುಳ್ಳು ಹೇಳುತ್ತಿಲ್ಲ. ಅವರು ಬದುಕಿದ್ದಾರೆ" ಎಂದಳು. ಸೀತೆಯನ್ನು ಮತ್ತೆ ಅಶೋಕವನದಲ್ಲಿ ಬಿಟ್ಟುಬಿಟ್ಟರು.
Comments
Post a Comment