೨೩. ಪಟ್ಟಾಭಿಷೇಕಕ್ಕೆ ಸಿದ್ಧತೆ
ಚೈತ್ರ ಮಾಸ ಪುಷ್ಯಮಿ ನಕ್ಷತ್ರದಲ್ಲಿ ಚಂದ್ರನಿದ್ದಾಗ ರಾಮನ ಪಟ್ಟಾಭಿಷೇಕವೆಂದು ದಶರಥ ಘೋಷಿಸಿದ. ಸುಮಂತ್ರನನ್ನು ಕರೆದು ರಾಮನನ್ನು ಕರೆತರಲು ಹೇಳಿ, ವಸಿಷ್ಠರಿಗೆ ಪಟ್ಟಾಭಿಷಕಕ್ಕೆ ಏರ್ಪಾಡು ಮಾಡಲು ತಿಳಿಸಿದ. ಪಟ್ಟಾಭಿಷಕದ ಏರ್ಪಾಡುಗಳು ಆರಂಭವಾದವು. ವಸಿಷ್ಠರು ಅಧಿಕಾರಿಗಳನ್ನು ಕರೆದು, “ನೀವು ರತ್ನಗಳನ್ನು, ಶ್ವೇತ ವಸ್ತ್ರಗಳನ್ನು, ಧಾನ್ಯಗಳನ್ನು, ಚದುರಂಗ ಬಲಗಳನ್ನು, ಒಳ್ಳೆಯ ಆನೆಯನ್ನು, ಶ್ವೇತಾಶ್ವವನ್ನು, ಚಾಮರವನ್ನು, ನೂರು ಕುಂಭಗಳನ್ನು, ಸ್ವರ್ಣ ಕೊಂಬುಗಳಿಂದ ಅಲಂಕೃತವಾದ ಎತ್ತನ್ನು, ಪೂರ್ತಿಯಾದ ಹುಲಿ ಚರ್ಮವನ್ನು ಸಿದ್ಧಪಡಿಸಿ ದಶರಥ ಮಹಾರಾಜರ ಅಗ್ನಿ ಗೃಹದಲ್ಲಿಡಿ. ದ್ವಾರಗಳನ್ನು ತೋರಣಗಳಿಂದ ಅಲಂಕರಿಸಿ. ಗಂಧ ಬೆರಸಿದ ನೀರಿನಿಂದ ಹೊಸ್ತಿಲುಗಳನ್ನು ತೊಳಿಯಿರಿ. ಧೂಪವನ್ನು ಹಾಕಿ. ಹಾಲು-ಮೊಸರುಗಳಿಂದ ಕಲಿಸಿದ ಅನ್ನವನ್ನು ಬ್ರಾಹ್ಮಣರಿಗೆ ಸಂತರ್ಪಣೆ ಮಾಡಿ. ಪ್ರತಿ ಮನೆಯ ಮುಂದೆ ಪತಾಕೆಗಳನ್ನು ಹಾರಿಸಿ. ನಾಟಕಕಾರರನ್ನು, ಹಾಡುಗಾರರನ್ನು ಕರೆಸಿ. ವೇಶ್ಯೆಯರು ಅಲಂಕರಿಸಿಕೊಂಡು ಬರಲಿ. ಅವರು ಅರಮನೆಯ ಎರಡೆನೆಯ ಪ್ರಾಂಗಣದವರೆಗೆ ಮಾತ್ರ ಬಂದು ಕಾಯಬೇಕು. ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳನ್ನು ನೆರವೇರಿಸಿ. ಉದ್ದವಾದ ಕತ್ತಿ ಹಿಡಿದ ವೀರರನ್ನು ತಯಾರಿಸಿ”, ಎಂದು ಆದೇಶಿಸಿದರು. ಸುಮಂತ್ರನು ರಾಮನನ್ನು ಸಭೆಗೆ ಕರೆದುಕೊಂಡು ಬಂದ. ರಾಮ, ತಾನು ರಾಮವರ್ಮನು ಬಂದೆನೆಂದು ಅಭಿವಾದವನ್ನು ಹೆಳಿ, ದಶರಥನ ಪಾದ...