೮೪. ಯುದ್ಧಾರಂಭ
ಯುದ್ಧ ಆರಂಭವಾಯಿತು. ವಾನರರು ಪ್ರಾಸಾದಗಳನ್ನು ಕೆಡವಿದರು. ಪರ್ವತಗಳನ್ನು ತಂದು ಎಸೆದರು. ಮರಗಳಿಂದ ಹೊಡೆದರು. ಲಂಕೆಯ ದ್ವಾರಗಳು ಮುಚ್ಚಿದ್ದವು. ಹೊರಗೆ ಯುದ್ಧ ನಡೆಯುತ್ತಿತ್ತು. ಮೊದಲ ದಿನದ ಯುದ್ಧದಲ್ಲಿ ವಾನರರು ವಿಶೇಷವಾದ ಬಲವನ್ನು ಪ್ರದರ್ಶಿಸಿದರು. ರಾಕ್ಷಸರು ಮುದ್ಗರ, ಶೂಲ, ತ್ರಿಶೂಲ, ಕತ್ತಿ, ಪರಿಘಗಳನ್ನು ವಾನರರ ಮೇಲೆ ಎಸೆದು, ಸತ್ತವರನ್ನು ತಿಂದುಬಿಡುತ್ತಿದ್ದರು. ಭಲ್ಲೂಕಗಳೂ ಸಿಕ್ಕ ಸಿಕ್ಕ ರಾಕ್ಷಸರನ್ನು ಹಿಡಿದು ತಿಂದುಬಿಡುತ್ತಿದ್ದವು. ಯುದ್ಧರಂಗದಲ್ಲಿ ಎಲ್ಲಿ ನೋಡಿದರೂ ಹಿಡಿ, ಹೊಡಿ, ಕೊಲ್ಲು ಎಂಬ ಮಾತುಗಳೇ ಕೇಳಿಸುತ್ತಿದ್ದವು. ರಾತ್ರಿಯೆಲ್ಲ ಭಯಂಕರವಾದ ಯುದ್ಧ ನಡೆಯಿತು. ತಲೆಗಳು ಚಂಡಿನಂತೆ ಆಕಾಶಕ್ಕೆ ಹಾರುತ್ತಿದ್ದವು. ಎಲ್ಲಿ ನೋಡಿದರೂ ಎದೆ, ಕಾಲು, ಕೈಗಳೇ ಕಾಣುತ್ತಿದ್ದವು. ಆ ಪ್ರದೇಶವೆಲ್ಲ ರಕ್ತದಿಂದ ತುಂಬಿ ನಡೆಯುತ್ತಿದ್ದವರ ಕಾಲುಗಳು ಜಾರುತ್ತಿದ್ದವು. ಆನೆಗಳ ಸೊಂಡಿಲುಗಳು, ಕಾಲುಗಳು, ಕುದುರೆಗಳ ಶರೀರ ಭಾಗಗಳು ಯುದ್ಧ ಭೂಮಿಯಲ್ಲಿ ಬಿದ್ದಿದ್ದವು. ಇಂತಹ ಸಮಯದಲ್ಲಿ ಇಂದ್ರಜಿತ್ತ ಯುದ್ಧಕ್ಕೆ ಬಂದ. ಅವನನ್ನು ನೋಡಿದ ಅಂಗದ ಉತ್ಸಾಹದಿಂದ ಒಂದು ಪರ್ವತ ಶಿಖರವನ್ನು ಅವನ ಮೇಲೆ ಎಸೆದ. ಆ ಏಟಿಗೆ ಇಂದ್ರಜಿತ್ತನ ರಥ, ಕುದುರೆ, ಧ್ವಜಗಳು ಮುರಿದವು. ಯಾರೂ ಊಹಿಸದ ದೃಶ್ಯವನ್ನು ನೋಡಿದ ರಾಮಲಕ್ಶ್ಮಣರು, ದೇವತೆಗಳೂ ಆಶ್ಚರ್ಯಗೊಂಡರು. ಇಂದ್ರಜಿತ್ತನ ರಥ ಮುರಿದುದು ಅದೇ ಮೊದಲ ಬಾರಿ! ಕೋಪಗೊಂಡ ಇಂದ್ರಜಿತ್ತ ಆಕ...